ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಇದು ಅಮೆರಿಕನ್‌ ವೀರಶೈವ ಸಮಾಜದ ಬಗೆಗಿನ ಒಂದು ಇಣುಕುನೋಟ...!

ಭಾರತೀಯ ಮೂಲದ ಭಾಷೆ, ಧರ್ಮ, ಜಾತಿಯಾಧಾರಿತ ಅನೇಕ ಸಂಘಗಳು ಅಮೆರಿಕದಲ್ಲಿ ಇವೆ. ಇವುಗಳೆಲ್ಲವೂ ಭಾರತೀಯ ಭಂಜಕ ರಾಜಕಾರಣಕ್ಕೆ ಬಲಿಯೂ ಆಗಿವೆ. ತೆಲುಗರ ‘ಆಟ’, ‘ತಾನಾ’, ಕನ್ನಡದ ‘ಅಕ್ಕ’, ‘ನಾವಿಕ’ದಂತೆಯೇ ಗುಜರಾತಿ, ಬಿಹಾರಿ, ಪಂಜಾಬಿ ಸಂಘಗಳೂ ಹೋಳಾಗಿವೆ. ಕೆಲವು ಸಂಘಗಳ ಬ್ಯಾಂಕ್ ಖಾತೆಗಳನ್ನು ಐಆರ್‌ಎಸ್ ನಿರ್ಬಂಽಸಿದೆ. ಅಮೆರಿಕನ್ ವೀರಶೈವ ಸಮಾಜ ಸಹ ಭಾರತೀಯ ಮೂಲದ ಇನ್ನಿತರೆ ಸಂಸ್ಥೆಗಳಂತೆ ಗುಂಪುಗಾರಿಕೆ ಆರೋಪದಿಂದ ಮುಕ್ತವಾಗಿಲ್ಲ.

ಇದು ಅಮೆರಿಕನ್‌ ವೀರಶೈವ ಸಮಾಜದ ಬಗೆಗಿನ ಒಂದು ಇಣುಕುನೋಟ...!

Profile Ashok Nayak Jun 30, 2025 8:10 AM

ಬಸವ ಮಂಟಪ

ರವಿ ಹಂಜ್

ಮುಂದಿನ ಪೀಳಿಗೆಗೆ ತಮ್ಮ ಧಾರ್ಮಿಕ ಪರಂಪರೆ, ಸಂಸ್ಕೃತಿಗಳನ್ನು ಪರಿಚಯಿಸುವ ಘನ ಉದ್ದೇಶ ದಿಂದ ಅಮೆರಿಕದಲ್ಲಿ ನೆಲೆಯೂರಿದ ವೀರಶೈವರು ವೀರಶೈವ ಸಮಾಜವನ್ನು ಆರಂಭಿಸಿದರು. ತಮ್ಮ ತಮ್ಮ ಉದ್ಯೋಗಗಳಲ್ಲಿ ಪರಿಣತಿ ಹೊಂದಿದ್ದ ಇವರ‍್ಯಾರೂ ವೀರಶೈವ ತಾತ್ವಿಕತೆ ಯಾಗಲಿ ಆಧ್ಯಾತ್ಮಿಕತೆಯಗಲಿ ಪರಿಣತಿ ಹೊಂದಿದವರಲ್ಲ. ಹಾಗಾಗಿ ತಮ್ಮ ತಮ್ಮ ಮನೆಗಳಲ್ಲಿ ಆಚರಿಸು ತ್ತಿದ್ದ ಸಂಸ್ಕೃತಿ, ಪರಂಪರೆ ಮತ್ತು ಓದಿದ್ದ ಸಾಮಾಜಿಕ ವಚನ ಸಾಹಿತ್ಯವನ್ನು ತಮ್ಮ ಮಕ್ಕಳಿಗೆ ಹೇಳಿಕೊಡುತ್ತ ಸಂಸ್ಕೃತಿ ಸಂರಕ್ಷಕರಾಗಿ ಪೋಷಿಸುತ್ತಿದ್ದರು.

ಹೀಗೆ ಕೆಲವರ ಮನೆಗಳಲ್ಲಿ ಸೇರುತ್ತ ಆರಂಭವಾದ ಈ ಸಮಾಜವು ಸಾಕಷ್ಟು ಜನರು ತನು-ಮನ-ಧನವನ್ನು ಅರ್ಪಿಸಿದ ಕಾರಣ ಇಂದು ಸದೃಢ ಸಮಾಜವಾಗಿ ಬೆಳೆದಿದೆ ಮತ್ತು ಸದ್ಯದ ತನ್ನ 47ನೇ ಸಮ್ಮೇಳನವನ್ನು ಆಚರಿಸಲಿದೆ.

ಇದೇ ರೀತಿ ಭಾರತೀಯ ಮೂಲದ ಭಾಷೆ, ಧರ್ಮ, ಜಾತಿಯಾಧಾರಿತ ಅನೇಕ ಸಂಘಗಳು ಅಮೆರಿಕ ದಲ್ಲಿ ಇವೆ. ಇವುಗಳೆಲ್ಲವೂ ಭಾರತೀಯ ಭಂಜಕ ರಾಜಕಾರಣಕ್ಕೆ ಬಲಿಯೂ ಆಗಿವೆ. ತೆಲುಗರ ‘ಆಟ’, ‘ತಾನಾ’, ಕನ್ನಡದ ‘ಅಕ್ಕ’, ‘ನಾವಿಕ’ದಂತೆಯೇ ಗುಜರಾತಿ, ಬಿಹಾರಿ, ಪಂಜಾಬಿ ಸಂಘಗಳೂ ಎರಡಾಗಿ ನಾಲ್ಕಾಗಿ ಹೋಳಾಗಿವೆ. ಕೆಲವು ಸಂಘಗಳ ಬ್ಯಾಂಕ್ ಖಾತೆಗಳನ್ನು ಐ.ಆರ್. ಎಸ್ ನಿರ್ಬಂಧಿಸಿದೆ.

ಕೆಲವು ಸಂಘಗಳ ಮೇಲೆ ಎಫ್.ಬಿ.ಐ ತನಿಖೆಯನ್ನೂ ನಡೆಸುತ್ತಿದೆ. ಅಮೆರಿಕನ್ ವೀರಶೈವ ಸಮಾಜ ಸಹ‌ ಭಾರತೀಯ ಮೂಲದ ಇನ್ನಿತರೆ ಸಂಸ್ಥೆಗಳಂತೆ ಗುಂಪುಗಾರಿಕೆ, ಹಣ ದುರುಪಯೋಗಗಳಂಥ ಆರೋಪದಿಂದ ಮುಕ್ತವಾಗಿಲ್ಲ. ಈ ಬಗ್ಗೆ ಕೆಲವರು ಪರಸ್ಪರ ಮೊಕದ್ದಮೆಗಳನ್ನು ಹೂಡಿಕೊಂಡಿ ದ್ದುದು ಈ ಆರೋಪಕ್ಕೆ ಸಾರ್ವತ್ರಿಕ ಸಾಕ್ಷಿಯಾಗಿದೆ.

ಇದನ್ನೂ ಓದಿ: Ravi Hunj Column: ವೀರಶೈವದಿಂದ ನಿಸ್ತೇಜ ಶವವಾದ ಮಹಾಸಭಾ !

ವೀರಶೈವ ಸಮಾಜದಲ್ಲಿ ಧರ್ಮಭಂಜಕನೋರ್ವ ಅಧ್ಯಕ್ಷನಾಗಿ ರಂಜಾನ್ ದರ್ಗಾ, ಅನ್ನಪೂರ್ಣ ಎಂಬುವವರನ್ನು ಕರೆಸಿ ಅವರಿಂದ “ನಿಮ್ಮ ಸಂಘದ ಹೆಸರಿನಲ್ಲಿರುವ ‘ವೀರಶೈವ’ ಪದವನ್ನು ತೆಗೆದು ‘ಲಿಂಗಾಯತ’ ಮಾಡಿ" ಎಂಬ ಭಾಷಣವನ್ನೂ ಮಾಡಿಸಿದ್ದ. ಮುಂದೆ ಈತನ ಭಂಜಕತನ ದಿಂದ ರೋಸಿ ಸಮಾಜವು ಈತನನ್ನು ಹೊರಹಾಕಿತು.

ಭಾರತದಲ್ಲಿ ಆಗ ನಡೆಯುತ್ತಿದ್ದ ಧರ್ಮಭಂಜಕ ಕೃತ್ಯವನ್ನು ಖಂಡಿಸಿ ವೀರಶೈವ ಲಿಂಗಾಯತ ಬೇರೆಯಲ್ಲ , ಒಂದೇ ಎಂದು ಘೋಷಿಸಿ ತಾನು ಅಖಂಡ ವೀರಶೈವವೆಂದು ಸಮಗ್ರತೆಯನ್ನು ಎತ್ತಿ ಹಿಡಿಯಿತು. ಆದರೆ ಈ ಸಂಘವು ಕ್ರಮೇಣ ಪಟ್ಟಭದ್ರ ಹಿತಾಸಕ್ತಿಗಳ ಕೈವಶವಾಗಿ ತನ್ನ ಮೂಲೋ ದ್ದೇಶಗಳನ್ನೇ ತಲೆಕೆಳಗು ಮಾಡಿಕೊಂಡಿದೆ. ಯಾವ ಸರ್ವತಂತ್ರ ಸ್ವತಂತ್ರ ದೇಶದ ಭವ್ಯ ಪ್ರಜೆಗಳಾ ಗಿರುವರೋ ಅಂಥ ತಮ್ಮ ಮುಂದಿನ ಪೀಳಿಗೆಗೆ ಊಳಿಗಮಾನ್ಯ, ಸ್ವಜನ ಪಕ್ಷಪಾತ (ನೆಂಟೊಲುಮೆ), ಗುಲಾಮಿತನ, ಓಲೈಕೆ, ವಶೀಲಿಬಾಜಿಗಳನ್ನು ಪರಿಚಯಿಸುವ ಪರಿಪಾಠಗಳು ಈ ಸಮಾಜದ ಸಮ್ಮೇಳನಗಳಲ್ಲಿ ವಿಜೃಂಭಿಸುತ್ತಿವೆ.

ಹಿರಿಯರ ಆಶಯ ಮತ್ತು ಕಿರಿಯರ ನಿರೀಕ್ಷೆಗಳನ್ನು ಅರ್ಥೈಸಿಕೊಳ್ಳದ ಈ ಸಂಘದ ಪಟ್ಟಭದ್ರರು ಭಾರತದ ರಾಜಕಾರಣಿಗಳ ಶಿಷ್ಯರಾಗಿ ದೀನ ಓಲೈಕೆಯಲ್ಲಿ ತೊಡಗಿದ್ದಾರೆ. ಹಾಗಾಗಿಯೇ ಈ ಸಮಾಜದ ಸಮಾವೇಶದಲ್ಲಿ ರಾಜಕಾರಣಿಗಳು ಹೇರಳವಾಗಿ ಜಮಾಯಿಸುತ್ತಾರೆ!

ಬಸವಣ್ಣನ ಹೆಸರಿನ ಕಮಿಟಿಯಡಿ ಸರಕಾರದಿಂದ ಬೆಂಗಳೂರಿನಲ್ಲಿ ನೂರಾರು ಎಕರೆ ಭೂಮಿ ಪಡೆದು ಅಲ್ಲಿ ತಮ್ಮ ಮಾತಾ ಪಿತೃಗಳ ಸಮಾಧಿ ಸ್ಥಾಪಿಸಿ ಆಸ್ತಿ ಹಕ್ಕೊತ್ತಾಯ ಮಂಡಿಸಿರುವ ಮಹನೀಯರು ಅಟ್ಲಾಂಟದ ಸಮಾವೇಶದಲ್ಲಿ ಆಧುನಿಕ ಬಸವಣ್ಣನಂತೆ ವಿಜೃಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಅಮೆರಿಕನ್ ವೀರಶೈವ ಸಮಾಜದ ಮಹನೀಯರು ಅಧುನಿಕ ಬಸವಣ್ಣನವರ ಬೆಂಗಳೂರು ಕಮಿಟಿಯಿಂದ ಭೂಷಣಪ್ರಾಯರಾಗಿ ಪುರಸ್ಕಾರ ಪಡೆದರು.

ಪುರಸ್ಕಾರ ಪಡೆದು, “ನಾನು ಅಮೆರಿಕೆಗೆ ಹೋದಾಗ ಅಲ್ಲಿನ ಸಂಸ್ಕೃತಿ ಕಂಡು ನಡುನಡುಗಿಹೋದೆ! ಇಂಥ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆಂದು ಚಿಂತಿತನಾದೆ. ಆಗ ನನಗೆ ಕಂಡ ದಾರಿದೀಪವೇ, ’ಅಮೆರಿಕನ್ ವೀರಶೈವ ಸಮಾಜ’!

ಈ ಸಮಾಜದ ಕಾರಣದಿಂದಲೇ ನನ್ನ ಮಕ್ಕಳು ನನಗಿಂತ ಹೆಚ್ಚಾಗಿ ಹಿರಿಯರಿಗೆ ಗೌರವ ಕೊಡುತ್ತಾರೆ, ನಮ್ಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸುತ್ತಿದ್ದಾರೆ" ಇತ್ಯಾದಿಯಾಗಿ ಭಾಷಣ ಮಾಡಿ, ತಾವು ಮತ್ತು ತಮ್ಮ ಮುಂದಿನ ಪೀಳಿಗೆಯು ಶಾಶ್ವತವಾಗಿ ನೆಲೆಯೂರಿದ ದೇಶದ ಸಂಸ್ಕೃತಿಯ ಮೌಲ್ಯವನ್ನು ಪರೋಕ್ಷವಾಗಿ ತುಚ್ಛೀಕರಿಸಿ ತಮ್ಮ ಸಮಾಜವನ್ನು ಓಲೈಸಿ, ಇವನಾರವ ಇವನಾರವನೆಂದೆನಿಸಿ, ಅನ್ಯರಿಗೆ ಅಸಹ್ಯಿಸಿ ಬಸವ ಭಕ್ತರಿಂದ ಅಮೋಘ ಕರತಾಡನ ಗಳಿಸಿದರು. ಸಭಿಕ ಬಸವಭಕ್ತರಲ್ಲಿ ಯಾರೂ ಅವರನ್ನು “ನಿಮ್ಮ ಸಮಾಜಕ್ಕೆ ಸೇರದ ಇತರೆ ಮಕ್ಕಳು ಸಂಸ್ಕೃತಿರಹಿತರಾಗಿ ಮದ್ಯ, ಮಾನಿನಿ, ಮಾದಕವಸ್ತುಗಳ ವ್ಯಸನಿಗಳಾಗಿ ನಿರ್ವಸಿತಗರಾಗಿ ಅಮೆರಿಕ ತುಂಬೆ ತುಂಬಿ ತುಳುಕುತ್ತಿದ್ದಾರೆಯೇ?" ಎಂದಾಗಲಿ, “ನೀವೇಕೆ ಇನ್ನೂ ಅಂಥ ಕೆಟ್ಟ ದೇಶದಲ್ಲಿ ಇರುವಿರಿ?" ಎಂದಾಗಲಿ ಕೇಳಲಿಲ್ಲ!

ಏಕೆಂದರೆ ಸೇರಿದವರೆಲ್ಲರೂ ತಮ್ಮ ಕಮಿಟಿಯ ಅಧ್ಯಕ್ಷರು ವಚನವನ್ನು ನಿರ್ವಚಿಸಿರುವಂತೆ ತರ್ಕಕ್ಕೆ ನಿಗಳನಿಕ್ಕಿರುವವರೇ ಆಗಿದ್ದರು. ಅಮೆರಿಕನ್ ವೀರಶೈವ ಸಮಾಜದ ಸಮ್ಮೇಳನಕ್ಕೆ ಅತಿಥಿಗಳಾಗಿ ಬರುವವರಲ್ಲಿ ಕೆಲವರು ಜಾತಿಯಿಂದ ವೀರಶೈವರಿರಬಹುದೇ ಹೊರತು ಇನ್ಯಾವ ಧಾರ್ಮಿಕ ಅರ್ಹತೆ ಹೊಂದಿದವರಲ್ಲ.

ಇವರಲ್ಲಿ ತಾವು ಲಿಂಗಾಯತ, ವೀರಶೈವರಲ್ಲ ಎನ್ನುವ ಧರ್ಮ ಭಂಜಕರೂ ಇದ್ದಾರೆ. ಎತ್ತಣಿಂದ ಎತ್ತ ನೋಡಿದರೂ ಇವರೆಲ್ಲರೂ ಊಳಿಗಮಾನ್ಯ, ಸ್ವಜನ ಪಕ್ಷಪಾತ (ನೆಂಟೊಲುಮೆ), ಗುಲಾಮಿತನ, ಓಲೈಕೆ, ವಶೀಲಿಬಾಜಿತನದ ಪ್ರತಿನಿಧಿಗಳೆನಿಸುತ್ತಾರೆಯೇ ಹೊರತು ಧಾರ್ಮಿಕವಾಗಿ ಆಧ್ಯಾತ್ಮಿಕ ವಾಗಿ ನಿರ್ವಾತವನ್ನೇ ಪ್ರತಿನಿಧಿಸುತ್ತಾರೆ.

ಇವರೆಲ್ಲ ಪ್ರಚಾರದ ತೆವಲಿಗೆ ಖುದ್ದು ಖರ್ಚು ಹಾಕಿಕೊಂಡು ಬರುತ್ತಾರೆ ಎಂದು ನಾನು ಅಂದು ಕೊಂಡಿದ್ದೆ. ಆದರೆ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು, “ಇವರಿಗೆ ವೀಸಾ, ಬಿಸಿನೆಸ್ ಕ್ಲಾಸ್ ಟಿಕೆಟ್ ಅಲ್ಲದೆ ಖರ್ಚಿಗೆ ಹಣ ಸಹ ಕೊಡುತ್ತಾರೆ. ಒಮ್ಮೆ ಖುದ್ದು ನಾನೇ ಸಂಘದ ಪರವಾಗಿ ಒಬ್ಬೊಬ್ಬರಿಗೆ ನಾಲ್ಕು ಸಾವಿರ ಡಾಲರಿನಂತೆ ಟ್ರಾವೆಲರ್ಸ್ ಚೆಕ್ಕುಗಳನ್ನು ತಂದುಕೊಟ್ಟಿದ್ದೆ" ಎಂದರು.

ಹಾಗಾಗಿ ಇಂಥವರನ್ನು ಕರೆಸಿ, ಮೆರೆಸಿ, ದೇಶದ ವಿವಿಧ ಆಕರ್ಷಕ ತಾಣಗಳನ್ನು ತೋರಿಸಿ ವೆಚ್ಚಕ್ಕೆ ಕೈ ಬೆಚ್ಚಿಸಿ ವ್ಯಯಿಸುವ ಖರ್ಚಿನ ಬಾಬತ್ತು ಹಣಕಾಸಿನ ವಿಷಯದಲ್ಲಿ ಜರ್ಜರಿತವಾಗಿರುವ ಸಂಘಕ್ಕೆ ಬೇಕೆ?? ಇರಲಿ, ಇವರಿಂದ ಮುಂದಿನ ಪೀಳಿಗೆಗೆ ಧಾರ್ಮಿಕವಾಗಿ, ಭೌತಿಕವಾಗಿ, ಬೌದ್ಧಿಕ ವಾಗಿ ಏನು ಉಪಯೋಗ? ಇಲ್ಲಿನ ಮುಂದಿನ ಪೀಳಿಗೆ ಈ ಸಮಾಜದ ಸಮಾವೇಶಗಳ ಬಗ್ಗೆ ಏನು ಹೇಳುತ್ತದೆ?

ಇಂಥ ಒಂದು ಸಮಾವೇಶದಲ್ಲಿ ಒಬ್ಬ ಮುಂದಿನ ಪೀಳಿಗೆಯ ಯುವಕ ನನ್ನನ್ನು Hey what the heck this Basava thing, man! ಕಾಳಬೇಡ ಕೋಲಬೇಡ.... It's bloody common sense that I and every kid around the world learn in our kindergarten class. Where is spirituality? Why do these bloody uncles and aunties flock to these Sharanas, Vachanas, Swamijis, politicians of that party in this party? Aren't any local achievers, scholars here? For God's sake, why can't they bring some inspirational folks and talk about real spirituality! One of the swamiji tells us not to go to the temple. But he himself built a temple in his math in India! ಎಂದು ಕೇಳಿದ.

ಅವನಿಗೆ ನಾನು ಕೊಟ್ಟ ಅಲ್ಪ ಐತಿಹಾಸಿಕ ವಿವರಣೆಯಿಂದ ಪ್ರೇರಿತನಾಗಿ ತನ್ನಂಥ ಹಲವಾರು ಆಸಕ್ತರನ್ನು ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸಲು ಒಗ್ಗೂಡಿಸಿ ನನ್ನ ಮಾತುಗಳನ್ನು ಕೇಳಿಸಿ ದ್ದನು. ಅವರೆಲ್ಲರೂ ಇಂಥ ಭವ್ಯ ಪರಂಪರೆಯನ್ನು ಇವರೆಲ್ಲ ನಮಗೆ ತಿಳಿಸದೆ, “ನಾವೆಲ್ಲರೂ ತುಳಿತಕ್ಕೊಳಗಾಗಿದ್ದೆವು. ಅಸ್ಪೃಶ್ಯರಾಗಿದ್ದೆವು.

ಬಸವಣ್ಣನು ನಮ್ಮನ್ನೆ ಎತ್ತಿದ ಎಂದು ಇಲ್ಲಿನ ಅಮೆರಿಕದ ಜನಾಂಗೀಯ ಭೇದದ ರೀತಿ ಕತೆ ಹೆಣೆದು ನಮ್ಮಲ್ಲಿ ಕೀಳರಿಮೆ ಮೂಡಿಸಿದ್ದರು. Now we feel elevated!'' ಎಂದರು ಎಂಬಲ್ಲಿಗೆ ಈ ಸಂಘ ಸಮಾಜದ ಧ್ಯೇಯೋದ್ದೇಶಗಳ ಫಲ ಸಾಕ್ಷಾತ್ಕಾರವಾಯಿತು.

ಹಾಗಾಗಿ ಇಂಥ ಸಂಘಗಳ ಘನ ಉದ್ದೇಶಗಳು ಕೇವಲ ಮೇಲ್ಕಾಣಿಸಿದ ಪಟ್ಟಭದ್ರ ಹಿತಾಸಕ್ತಿಗಳ ಕಾರಣವಾಗಿ ಭ್ರಷ್ಟಗೊಂಡಿವೆಯೇ ಹೊರತು ಇನ್ನೇನೂ ಅಲ್ಲ. ಉಳಿದಂತೆ ಅಮೆರಿಕನ್ ವೀರಶೈವ ಸಮಾಜದಲ್ಲಿ ಕಳಕಳಿ ಹೊಂದಿದ ಸದಸ್ಯರಿದ್ದಾರೆ, ದಾನಿಗಳಿದ್ದಾರೆ, ಬದ್ಧತೆಯ ವಿಚಾರವಂತ ರಿದ್ದಾರೆ, ಮಠಾಧೀಶರನ್ನೂ ಮೀರಿದ ತತ್ವಜ್ಞಾನಿಗಳಿದ್ದಾರೆ.

ಇವರೆಲ್ಲರೂ ಕೊಂಚ ಧಾರ್ಷ್ಟ್ಯ ಭಾವನೆಯಿಂದ ಪಟ್ಟಭದ್ರ ಹಿತಾಸಕ್ತಿಗಳನ್ನು ನಿಗ್ರಹಿಸಿದರೆ ಸಂಘ ದಿಂದ ಮುಂದಿನ ಪೀಳಿಗೆಗೆ ನೈಜ ಧಾರ್ಮಿಕ, ತಾತ್ವಿಕ ವೀರಶೈವ ಅನುಭೂತಿ ದಕ್ಕಬಹುದು. ಇಂಥ ಸಂಘಗಳಿಂದ ನಿಜಕ್ಕೂ ಆಗಬೇಕಿರುವ ಕೆಲವೇ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಸೂಚಿಗಳು ಇವೆ.

ಇವುಗಳನ್ನು ಅನುಷ್ಠಾನಗೊಳಿಸಿದರೆ ಸಂಘವು ನಿಜಕ್ಕೂ ಸಮಾಜಕ್ಕೆ ಮಾದರಿ ಸಂಸ್ಥೆಯಾಗ ಬಹುದು. ಅಲ್ಲದೇ ಈ ಸೇವೆಗಳಿಗೆ ಸೇವಾಶುಲ್ಕವನ್ನು ಪಡೆದು ಸಂಘವನ್ನು ಆರ್ಥಿಕವಾಗಿ ಸದೃಢ ವನ್ನಾಗಿಯೂ ಮಾಡಬಹುದು. ಅಂಥ ಸೇವೆಗಳನ್ನು ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳೆಂದು ವಿಂಗಡಿಸಿ ನೋಡೋಣ.

ಧಾರ್ಮಿಕವಾಗಿ ಹೇಳುವುದಾದರೆ,

  1. ಈ ಸಮ್ಮೇಳನದಲ್ಲಿ ಸಾಮಾನ್ಯವಾಗಿ ಸಾಮೂಹಿಕ ಲಿಂಗ ಪೂಜೆ ಆಚರಿಸುತ್ತಾರೆ. ಆದರೆ ಹೀಗೆ ಆಚರಿಸುವುದು ಡಾಂಭಿಕ ಎನಿಸುತ್ತದೆಯೇ ಹೊರತು ತ್ರಾಟಕ ಯೋಗದ ಅನುಭೂತಿ ಯನ್ನುಂಟು ಮಾಡದು. ಹಾಗಾಗಿ ಲಿಂಗಪೂಜೆಯನ್ನು ಸಾಮೂಹಿಕವಾಗಿ ಪ್ರದರ್ಶನಕ್ಕಾಗಿ ಆಚರಿಸುವುದು ಸಲ್ಲದು. ಅದು ಆಯಾಯ ವ್ಯಕ್ತಿಯ ವೈಯಕ್ತಿಕ ಆಚರಣೆಯಾಗಿರಬೇಕು. ಇದಕ್ಕೆ ಬದಲಾಗಿ ತಮ್ಮ ಮುಂದಿನ ಪೀಳಿಗೆಗೆ ಧಾರ್ಮಿಕ ಪ್ರe ಮೂಡಿಸುವ ಪ್ರಥಮ ಹಂತವಾಗಿ ಸಾಮೂಹಿಕ ಲಿಂಗದೀಕ್ಷೆ ಏರ್ಪಡಿಸು ವುದು ಸೂಕ್ತ. ಇದನ್ನು ದುರ್ಗದ ಶರಣರು ರಾಹುಲ್ ಗಾಂಧಿಗೆ ಊಟದ ಮೇಜಿನ ಮೇಲೆ ಕೂರಿಸಿ ಕೊಂಡು ಕವಳ ಹಾಕಿಕೊಳ್ಳುವ ಅಜ್ಜಿಯ ಬುಡ್ಡಿಚೀಲದಂಥ ತಾವೀಜಿನಂತಿರುವ ಚೀಲದಲ್ಲಿ ಲಿಂಗ ಇಟ್ಟು ಕಟ್ಟಿದಂತಲ್ಲ. ಅದನ್ನು ಪರಂಪರೆಗನುಗುಣವಾಗಿ ದೀಕ್ಷೆ ಕೊಡುವ ಸಂಪ್ರದಾಯವನ್ನು ಹಮ್ಮಿಕೊಳ್ಳಬೇಕು. ಆಗ ಮುಂದಿನ ಪೀಳಿಗೆಯನ್ನು ವಿಧಿವತ್ತಾಗಿ ಒಳಗೊಂಡಂತಾಗುತ್ತದೆ.
  2. ಕೇವಲ ಅವಧಿ ಮೀರಿದ ಸಾಮಾಜಿಕ ಹೋರಾಟದ ವಚನಗಳನ್ನೇ ತಿರುಗಮುರುಗ ಹಾಡಿದರೆ ಇಲ್ಲಿನ ಜಾಣ ಮಕ್ಕಳು ಮೇಲಿನ ಯುವಕನಂತೆ nonsense ಎಂದೇ ಪ್ರತಿಕ್ರಿಯಿಸುತ್ತಾರೆ. ಹಾಗಾಗಿ ಅಧ್ಯಾತ್ಮದ ಹಾದಿಯ ಷಟ್‌ಸ್ಥಲ ಉದ್ದೇಶಿತ ವಚನಗಳನ್ನು ಪರಿಚಯಿಸಿ, ಕರಣಹಸುಗೆ, ಮಂತ್ರಗೋಪ್ಯ, ಸಿದ್ಧಾಂತ ಶಿಖಾಮಣಿ ಎಂಬ ನಿಜ ವೀರಶೈವ ಧರ್ಮಗ್ರಂಥಗಳನ್ನು ಪರಿಚಯಿ ಸಬೇಕು. ಇದರಿಂದ ಪರಂಪರೆಯ ಮಹತ್ವದ ಅರಿವಾಗಿ ಯುವಜನರು ಹೆಚ್ಚಿನ ಆಸಕ್ತಿ ತೋರು ತ್ತಾರೆ. ಇಲ್ಲದಿದ್ದರೆ ಬಿಕ್ರಂ ಯೋಗ, ದೀಪಕ್ ಚೋಪ್ರಾರಿಗೆ ಶರಣೆನ್ನುತ್ತಾರೆ.

೩. ತಮ್ಮ ಪ್ರತಿಯೊಂದು ಸ್ಥಳೀಯ ಶಾಖೆಯಬ್ಬಿಬ್ಬರು ಸ್ವಯಂಸೇವಕ ಸದಸ್ಯರನ್ನು ವೀರಶೈವ ವಿಽವಿಧಾನದ ಗರ್ಭ ಸಂಸ್ಕಾರ, ಲಿಂಗದೀಕ್ಷೆ, ವ್ರತಾನುಷ್ಠಾನ, ಮದುವೆ ವಿಽವಿಧಾನಗಳ ತರಬೇತಿ ಕೊಡಿಸಿ ತಮ್ಮದೇ ಸಮಾಜದ ಛಾಪು ಮೂಡಿಸುವುದು ಸಮಾಜವನ್ನು ಬಾಂಧವ್ಯದಲ್ಲಿ ಹಿಡಿದಿಟ್ಟು ಕೊಳ್ಳುತ್ತದೆ. ಇದರಿಂದ ‘ಪರಸ್ಪರ ಒಂದು’ ಎಂಬ ಭಾವ ಮೂಡುತ್ತದೆ.

೪. ಇನ್ನು ತಮ್ಮದೇ ಸಮಾಜದ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನಡೆಸುವ ವ್ಯವಸ್ಥೆ ಯನ್ನು ರೂಪಿಸಿ ಪ್ರಮುಖ ನಗರಗಳಲ್ಲಿ ತಮ್ಮದೇ ಸಮಾಜದ ರುದ್ರಭೂಮಿಗಳನ್ನು ರೂಪಿಸುವ ವ್ಯವಸ್ಥೆಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು. ಇನ್ನು ಸಾಮಾಜಿಕವಾಗಿ ಹೇಳುವುದಾದರೆ,

  1. ಹಲವು ಬಾರಿ ಸಮಾಜದ ವೀಸಾ ಮೇಲಿರುವ ವಿದ್ಯಾರ್ಥಿಗಳು, ವೃತ್ತಿನಿರತರು ಅಪಘಾತಗಳಲ್ಲಿ ನಿಧನ ಹೊಂದಿದಾಗ ಅವರ ಮೃತದೇಹಗಳನ್ನು ತಾಯ್ನಾಡಿಗೆ ಕಳುಹಿಸುವ ಅಥವಾ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಿಸುವ ಒಂದು ಅಧಿಕೃತ ಸಂಸ್ಥೆಯಿಲ್ಲದೇ ಸಾಕಷ್ಟು ಅನಿವಾಸಿಗಳು ನೋವು ಅನುಭವಿಸುತ್ತಿzರೆ. ಅದೆಷ್ಟೋ ಅನಿವಾಸಿಗಳು ಪ್ರತಿ ತಿಂಗಳೂ ತಮ್ಮ ಅಗತ್ಯಕ್ಕೆಷ್ಟು ಬೇಕೋ ಅಷ್ಟು ಹಣವನ್ನಿಟ್ಟುಕೊಂಡು ಉಳಿದೆಲ್ಲಾ ಹಣವನ್ನು ಭಾರತದ ತಮ್ಮ ತಮ್ಮ ಬ್ಯಾಂಕುಗಳಲ್ಲಿ ಯೋ ಅಥವಾ ತಮ್ಮ ಅವಲಂಬಿತ ಕುಟುಂಬದ ಸದಸ್ಯರುಗಳ ಬಳಿಯೋ ಇರಿಸಿ ಜೀವನ ನಡೆಸುತ್ತಿರುತ್ತಾರೆ. ಹಾಗಿದ್ದವರು ದಿಢೀರನೆ ಇಲ್ಲಿ ಸತ್ತಾಗ ಅವರ ಅಂತಿಮಸಂಸ್ಕಾರಕ್ಕೂ ಹಣವಿಲ್ಲದೇ ‘ಗೋ-ಫಂಡ್-ಮಿ’ ವಂತಿಗೆ ಧರ್ಮಾರ್ಥವಾಗಿ ಅಂತಿಮ ಸಂಸ್ಕಾರಗೊಂಡ ಅನೇಕ ಪ್ರಸಂಗಗಳು ನಡೆದಿವೆ. ವೀರಯೋಧ ಮಡಿದಾಗ ದೊರಕುವ ಅಂತಿಮ ಸಂಸ್ಕಾರ ಭಾಗ್ಯದಂತೆಯೇ ಅನಿವಾಸಿಗಳಿಗೂ ಆ ಭಾಗ್ಯ ಬೇಕೆನಿಸುತ್ತದೆ. ಸಾಕಷ್ಟು ವಿದೇಶಿ ವಿನಿಮಯವನ್ನು ತಂದುಕೊಡುವುದಲ್ಲದೇ, ಒಂದು ಸಂಸಾರದ ಭಾರವನ್ನು ಹಗುರಾಗಿಸಿ ಭದ್ರತೆಯನ್ನೊದಗಿಸುವ, ತನ್ನ ಅನುಪಸ್ಥಿತಿಯಿಂದ ಇನ್ನೋರ್ವ ಒಳನಾಡಿಗ ನೊಂದಿಗಿನ ಸ್ಪರ್ಧೆಯನ್ನು ಇಲ್ಲವಾಗಿಸುವ, ಭಾರತದ ಕಾರ್ಬನ್ ಪ್ರಿಂಟ್ ಕಡಿಮೆ ಮಾಡುವ ಅನಿವಾಸಿಗೆ ತವರು ಸರಕಾರಗಳು ಕನಿಷ್ಠ ಆತನಿಗೆ ಒಂದು ಸಂಸ್ಕಾರಭಾಗ್ಯ ವನ್ನಾದರೂ ಒದಗಿಸಬೇಕು. ಅಂಥ ಯೋಜನೆಯ ಕುರಿತು ಈ ಸಮಾಜವು ಈವರೆಗೆ ತಾನು ಕರೆಸಿ ಮೆರೆಸಿದ ರಾಜಕಾರಣಿಗಳೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಅಂಥ ಒಂದು ಬದ್ಧತೆಗೆ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆ ರೂಪಿಸಲು ಒತ್ತಾಯ ಹೇರಬೇಕು. ಇದಕ್ಕೆ ಕನ್ನಡ ಸಂಘಗಳಲ್ಲದೆ ಇತರೆ ಜಾತಿ ಸಂಘಗಳ ಬೆಂಬಲ ಪಡೆದುಕೊಳ್ಳಬೇಕು.

2. ಇಲ್ಲಿ ಓದಲು ಬಂದ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಗಳಿಸುವ ಬಗೆ, ಪರಸ್ಪರ ಸಹಾಯಹಸ್ತ, ತರಬೇತಿಯಂಥ ಯೋಜನೆಗಳನ್ನು ಹಾಕಿಕೊಂಡರೆ ಸಂಘಕ್ಕೆ ಆ ಯುವಜನರು ಹೆಚ್ಚಾಗಿ ಸೇರಿ ಸಂಘದ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಆದರೆ ಸದ್ಯಕ್ಕೆ ಇವರಲ್ಲಿರುವುದು ಕೇವಲ ವಧೂವರರ ಸಮಾವೇಶ ಯೋಜನೆ ಮಾತ್ರ.

3 . ಅಮೆರಿಕೆಗೆ ಹೊಸದಾಗಿ ವಲಸೆ ಬಂದವರಿಗೆ ಇಲ್ಲಿನ ರೀತಿ ರಿವಾಜುಗಳ ಪರಿಚಯ ಮಾಡಿಸುವ ಕಾರ್ಪೊರೇಟ್ ವಲಯದಲ್ಲಿ buddy/mentor ರೀತಿಯ ಯೋಜನೆ ರೂಪಿಸುವುದು ಸಹ ಜನರನ್ನು ಆಕರ್ಷಿಸಿ, ಬಾಂಧವ್ಯ ಮೂಡಿಸಿ ಸಂಘದ ಸದಸ್ಯರ ಸಂಖ್ಯೆಯನ್ನು ಬೆಳೆಸುತ್ತದೆ.

4.ಅನೇಕ ಅನಿವಾಸಿಗಳು ತಾಯ್ನಾಡಿನ ಅನೇಕ ಉದ್ದಿಮೆ, ಕೃಷಿ, ರಿಯಲ್ ಎಸ್ಟೇಟ್‌ಗಳಲ್ಲಿ ಬಂಡವಾಳ ಹೂಡಿ ಮೋಸ ಹೋಗಿದ್ದಾರೆ. ಇಲ್ಲಿ ಮೋಸ ಹೋಗಿರುವುದು, ತಮಗೆ ಸಾಕಷ್ಟು ಕಾನೂನುಕ್ರಮ ಕೈಗೊಳ್ಳಲು ರಜೆ/ಸಮಯ ಮತ್ತು ಮಾರ್ಗದರ್ಶನಗಳ ಅಭಾವವೆಂಬ ಯಃಕಶ್ಚಿತ್ ಕಾರಣಗಳಿಗಾಗಿ ಎಂಬುದು ವಿಶೇಷ! ಅದಲ್ಲದೆ ತಮ್ಮ ಆಸ್ತಿಗಳು ಮೋಸದಿಂದ ಪರಭಾರೆಯಾಗಿ ಮನೆ-ಮಠ ಕಳೆದುಕೊಂಡು ಪರದೇಶವನ್ನೇ ತಮ್ಮದೆಂದು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾ ತಾಯ್ನಾಡನ್ನು ಪರದೇಶವೆಂದು ಪರಿಗಣಿಸಿದವರು ಸಾಕಷ್ಟಿದ್ದಾರೆ. ಒಟ್ಟಾರೆ ಒಳನಾಡಿನಲ್ಲಿ ಬಂಡವಾಳ ಹೂಡುವ ವ್ಯಕ್ತಿಗತ ‘ಅನಿವಾಸಿ’ಯನ್ನು ಬಕ್ರೀದ್ ಕುರಿಯಂತೆ ‘ನಿವಾಸಿ’ಗಳು ಕಾಣುತ್ತಾರೆಂಬ ಅಪನಂಬಿಕೆಯನ್ನು ಇಂಥ ಘಟನೆಗಳು ಸೃಷ್ಟಿಸಿವೆ. ಇದನ್ನು ಈ ರಾಜಕಾರಣಿಗಳ ಮುಂದಿಟ್ಟು ಯಾವುದೇ ಪರಿಹಾರೋಪಾಯವನ್ನು ರೂಪಿಸಿಲ್ಲ. ಆ ನಿಟ್ಟಿನಲ್ಲಿ ಸಮಾಜವು ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇಂಥ ಯೋಜನೆಗಳನ್ನು ಗುಜರಾತಿಗಳು, ತೆಲುಗರು ತಮ್ಮ ತಮ್ಮ ರಾಜ್ಯ ಸರಕಾರಗಳ ಮೂಲಕ ಅನುಷ್ಠಾನಗೊಳಿಸಿದ್ದಾರೆ ಎಂಬುದು ಗಮನಾರ್ಹ.

ಒಟ್ಟಾರೆ ಇಂಥ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ಸಮಾಜದ ಬಾಂಧವರನ್ನು ಒಗ್ಗೂಡಿಸುತ್ತದೆ. ಹೀಗೆ ಅನೇಕ ವೈಯಕ್ತಿಕ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಕಾನೂನಾತ್ಮಕ ಸಮಸ್ಯೆಗಳು ವೈಯಕ್ತಿಕ ಸಮಸ್ಯೆಗಳೇ ಹೊರತು ಸಾಮಾಜಿಕ ಸಮುದಾಯದ ಸಮಸ್ಯೆಯಲ್ಲ ಎಂಬಂತಾಗಿ ಈ ಸಮಾವೇಶ/ಸಮ್ಮೇಳನಗಳು ಬಂದು ಹೋಗುವ ಸ್ನೇಹದ ಸಮ್ಮಿಲನದ ಸಂಭ್ರಮ ಮೂಡಿಸು ತ್ತವೆಯೇ ಹೊರತು ಯಾವುದೇ ವಾಸ್ತವಿಕ ಸ್ಪಂದನವನ್ನಲ್ಲ!

ಎಲ್ಲಿಯವರೆಗೆ ಈ ಸಾಮಾಜಿಕ ಸಂಸ್ಥೆಗಳು ಸಮುದಾಯದ ಜನರ ಭಾವನೆಗಳಿಗೆ ಸ್ಪಂದನಾ ರಹಿತ ವಾಗಿ ಇರುವವೋ ಅಲ್ಲಿಯವರೆಗೆ ಇವು ಮುಂದಿನ ಪೀಳಿಗೆಗೆ ಕೇವಲ ಫ್ಯಾನ್ಸಿ ಡ್ರೆಸ್, ಇಂಡಿಯನ್ ಫುಡ್, ಇಂಡಿಯನ್ ಮ್ಯೂಸಿಕ್ ಆಂಡ್ ಸಮ್ ಫನ್ ವೀಕೆಂಡ್ ಅಷ್ಟೇ! ನೆರೆದ ಪೋಷಕರಿಗೆ ಸಹ.

ವಿ.ಸೂ: ನಾನು ಯಾವುದೇ ಜಾತಿ, ಧರ್ಮ, ಭಾಷೆ ಆಧಾರಿತ ಸಂಘಗಳ ಸದಸ್ಯನಲ್ಲ. ಆದರೆ ಸ್ನೇಹ ಸಮ್ಮಿಲನದ ಕಾರಣಕ್ಕಾಗಿ ಹಲವಾರು ಸಮ್ಮೇಳನಗಳಲ್ಲಿ ಹಾಜರಾಗಿದ್ದೇನೆ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)