IND vs ENG: ʻಶುಭಮನ್ ಗಿಲ್ಗೆ ಸಮಯ ಕೊಡಿ-ಟೀಕಾಕಾರರ ವಿರುದ್ಧ ಮೊಹಮ್ಮದ್ ಅಝರುದ್ದಿನ್ ಕಿಡಿ!
ಇಂಗ್ಲೆಂಡ್ ವಿರುದ್ಧ ಲೀಡ್ಸ್ನ ಹೆಡಿಂಗ್ಲೆಯಲ್ಲಿ ತಮ್ಮ ನಾಯಕತ್ವದ ಮೊದಲ ಟೆಸ್ಟ್ ಪಂದ್ಯದಲ್ಲೇ ಶುಭಮನ್ ಗಿಲ್ 5 ವಿಕೆಟ್ಗಳ ಸೋಲು ಅನುಭವಿಸಿದ್ದಾರೆ. ಈ ಪಂದ್ಯದ ನಂತರ ಗಿಲ್ ನಾಯಕತ್ವವನ್ನು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಆದರೆ, ಗಿಲ್ ನಾಯಕತ್ವವನ್ನು ಮಾಜಿ ನಾಯಕ ಮೊಹಮ್ಮದ್ ಅಝರುದ್ದಿನ್ ಸಮರ್ಥಿಸಿಕೊಂಡಿದ್ದಾರೆ.

ಶುಭಮನ್ ಗಿಲ್ ನಾಯಕತ್ವವನ್ನು ಬೆಂಬಲಿಸಿದ ಮೊಹಮ್ಮದ್ ಅಝರುದ್ದಿನ್.

ನವದೆಹಲಿ: ಶುಭಮನ್ ಗಿಲ್ (Shubman Gill) ತಮ್ಮ ನಾಯಕತ್ವದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಗಿಲ್ ನಾಯಕತ್ವದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಕಟುವಾಗಿ ಟೀಕಿಸಿದ್ದಾರೆ. ಆದರೆ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಝರುದ್ದಿನ್ (Mohammad Azharuddin), ಶುಭಮನ್ ಗಿಲ್ ಅವರ ನಾಯಕತ್ವದ ಬಗ್ಗೆ ಟೀಕಿಸುವ ಮೊದಲು ಅವರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಬೇಕೆಂದು ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ. ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit Sharma) ಟೆಸ್ಟ್ಗೆ ನಿವೃತ್ತಿ ಘೋಷಿಸಿದ ನಂತರ ಶುಭಮನ್ ಗಿಲ್ ಭಾರತ ತಂಡದ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಗಿಲ್ ಆಕರ್ಷಕ ಶತಕ ಸಿಡಿಸಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.
ಪಂದ್ಯದಲ್ಲಿ ಶುಭಮನ್ ಗಿಲ್ ತೆಗೆದುಕೊಂಡ ಸಾಕಷ್ಟು ನಿರ್ಣಯಗಳನ್ನು ಇಂಗ್ಲೆಂಡ್ನ ಮಾಜಿ ನಾಯಕ ನಾಸ್ರ್ ಹುಸೇನ್ ಕೂಡ ಪ್ರಶ್ನಿಸಿದ್ದಾರೆ. ಆದರೆ ಗಿಲ್ ನಾಯಕತ್ವವನ್ನು ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಕೂಡ ಬೆಂಬಲಿಸಿದ್ದು, ಇದೀಗ ಮೊಹಮ್ಮದ್ ಅಝರುದ್ದಿನ್ ಕೂಡ ಗಿಲ್ ನಾಯಕತ್ವದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IND vs ENG: ವಿರಾಟ್ ಕೊಹ್ಲಿಯ ಮಹತ್ವದ ದಾಖಲೆ ಮುರಿಯುವ ಸನಿಹದಲ್ಲಿ ರಿಷಭ್ ಪಂತ್!
ಶುಭಮನ್ ಗಿಲ್ಗೆ ಸೂಕ್ತ ಸಮಯ ನೀಡಬೇಕು: ಅಝರುದ್ದಿನ್
ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರ ನಾಯಕತ್ವವನ್ನು ಇಷ್ಟು ಬೇಗ ಟೀಕಿಸುವುದು ಸರಿಯಲ್ಲ, ಅವರನ್ನು ಬೆಂಬಲಿಸುವುದರ ಜೊತೆಗೆ ಸಾಕಷ್ಟು ಸಮಯ ನೀಡಬೇಕು ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಆಗ್ರಹಿಸಿದ್ದಾರೆ. "ನಾಯಕರಾಗಿ ಶುಭಮನ್ ಗಿಲ್ಗೆ ಇದು ಇನ್ನೂ ಮೊದಲ ಪಂದ್ಯವಾಗಿದೆ. ಆದ್ದರಿಂದ ಅವರ ನಾಯಕತ್ವದ ಕುರಿತು ಯಾರೂ ಮಾತನಾಡಬಾರದು. ಅವರ ನಾಯಕತ್ವದ ಬಗ್ಗೆ ಮಾತನಾಡುವುದಕ್ಕೆ ಇದು ಸೂಕ್ತ ಸಮಯವಲ್ಲ," ಎಂದು ಅಝರುದ್ದಿನ್ ಹೇಳಿದ್ದಾರೆ.
ಶುಭಮನ್ ಗಿಲ್ಗೆ ಬೆಂಬಲ ನೀಡಿ
"ಶುಭಮನ್ ಗಿಲ್ ಅವರು ಈಗ ತಾನೇ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಮೊದಲು ಅವರಿಗೆ ಉತ್ತಮ ಅವಕಾಶ ನೀಡಬೇಕು. ಆದ್ದರಿಂದ ಈಗ ನಾವು ಅವರಿಗೆ ಸಾಕಷ್ಟು ಸಮಯ ಹಾಗೂ ಬೆಂಬಲ ನೀಡಬೇಕು. ಬದಲಿಗೆ ಅವರ ವಿರುದ್ಧ ದೂರುವುದು ಅಥವಾ ಟೀಕಿಸುವ ಕೆಲಸ ಮಾಡಬಾರದು," ಎಂದು ಮಾಜಿ ನಾಯಕ ತಿಳಿಸಿದ್ದಾರೆ.
IND vs ENG: ಪೀಟರ್ಸನ್ ಸಲಹೆಯನ್ನು ಬಹಿರಂಗಪಡಿಸಿದ ಕುಲ್ದೀಪ್
ತಂಡದ ಆಯ್ಕೆಗೆ ಪ್ರಾಮುಖ್ಯತೆ ನೀಡಬೇಕು
"ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಕುಸಿತಗೊಂಡಿದ್ದರಿಂದ ಇಂಗ್ಲೆಂಡ್ ವಿರುದ್ಧ ಸೋಲುವಂತಾಯಿತು. ಆದರೆ ಎಜ್ಬಾಸ್ಟನ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಪಂದ್ಯ ಗೆಲ್ಲಿಸಿ ಕೊಡುವ ಸಾಮರ್ಥ್ಯ ಇರುವ ಆಟಗಾರರು ಹಾಗೂ ಉತ್ತಮ ಬೌಲಿಂಗ್ ಸಂಯೋಜನೆ ಕಂಡುಕೊಳ್ಳಬೇಕು," ಎಂದು ಅವರು ಸಲಹೆ ನೀಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಮೇಲೆ ಹೆಚ್ಚಿನ ಅವಲಂಬನೆ
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಹೆಚ್ಚಾಗಿ ಜಸ್ಪ್ರೀತ್ ಬುಮ್ರಾ ಮೇಲೆಯೇ ಅವಲಂಬಿತವಾಗಿತ್ತು. ಈ ಕುರಿತು ಮೊಹಮ್ಮದ್ ಅಝರುದ್ದಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs ENG: 49 ವರ್ಷದ ಭಾರತೀಯ ದಾಖಲೆ ಮುರಿಯಲು ಸಜ್ಜಾದ ಜೈಸ್ವಾಲ್
"ಭಾರತ ತಂಡದ ಬೌಲಿಂಗ್ ವಿಭಾಗ ಜಸ್ಪ್ರೀತ್ ಬುಮ್ರಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಒಬ್ಬ ಬೌಲರ್ ಅನ್ನೇ ನೆಚ್ಚಿಕೊಳ್ಳದೆ ತಂಡದಲ್ಲಿ ಅನುಭವಿ ಬೌಲರ್ಗಳಿಗೆ ಸ್ಥಾನ ಕಲ್ಪಿಸಬೇಕು. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ಗೆ ತಂಡದಲ್ಲಿ ಸ್ಥಾನ ನೀಡಬೇಕು," ಎಂದು ಅಝರುದ್ದಿನ್ ತಿಳಿಸಿದ್ದಾರೆ.
ಜುಲೈ 2 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ಬರ್ಮಿಂಗ್ಹ್ಯಾಮ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಈ ಪಂದ್ಯ ಗೆದ್ದು ತಮ್ಮ ನಾಯಕತ್ವದಲ್ಲಿ ಮೊದಲ ಟೆಸ್ಟ್ ಗೆಲುವಿನ ಸಂಭ್ರಮ ಕಾಣಲು ಗಿಲ್ ಎದುರು ನೋಡುತ್ತಿದ್ದಾರೆ.