ʻರೋಡ್ ಶೋ ಅಗತ್ಯವಿಲ್ಲʼ: ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ!
ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮೊದಲು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಪತ್ರಿಕಾಗೋಷ್ಠಿ ನಡೆಸಿದರು. ಆರ್ಸಿಬಿಯ ವಿಜಯೋತ್ಸವದ ವೇಳೆ ಕಾಲ್ತುಳಿತದ ಘಟನೆಯ ಬಗ್ಗೆ ಕೇಳಿದಾಗ ಗಂಭೀರ್ ದೊಡ್ಡ ಹೇಳಿಕೆ ನೀಡಿದ್ದಾರೆ. ರೋಡ್ ಶೋಗಳು ಅಗತ್ಯವಿಲ್ಲ, ಜನರ ಜೀವ ಮುಖ್ಯ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣ ಬಗ್ಗೆ ಗೌತಮ್ ಗಂಭೀರ್.

ಮುಂಬೈ: ಮುಂಬರುವ 5 ಪಂದ್ಯಗಳ ಟೆಸ್ಟ್ ಸರಣಿ (IND vs ENG) ಆಡಲು ಇಂಗ್ಲೆಂಡ್ಗೆ ತೆರಳುವ ಮುನ್ನ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮತ್ತು ನಾಯಕ ಶುಭಮನ್ ಗಿಲ್ ಮುಂಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದಿದ್ದ ಕಾಲ್ತುಳಿತ ಘಟನೆಯ (Bangalore ಬಗ್ಗೆ ಗೌತಮ್ ಗಂಭೀರ್ ಅವರನ್ನು ಪ್ರಶ್ನೆ ಮಾಡಲಾಯಿತು. ಅವರು ಇದರ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ನಾವು ರೋಡ್ ಶೋಗಳನ್ನು ಮಾಡಬಾರದು ಮತ್ತು ಜನರ ಜೀವ ಇದಕ್ಕಿಂತ ಮುಖ್ಯ ಎಂದು ಗೌತಮ್ ಗಂಭೀರ್ ಹೇಳಿದರು.
2025ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಅನ್ನು ಕೈ ಬಿಡಲಾಯಿತು ಹಾಗೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆರ್ಸಿಬಿ ತಂಡದ ಬಸ್ ಮೊದಲು ವಿಧಾನಸೌಧವನ್ನು ತಲುಪಿತು, ಅಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟಗಾರರನ್ನು ಸನ್ಮಾನಿಸಿದರು.
ಇದಾದ ನಂತರ ತಂಡದ ಆಟಗಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದರು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಕೂಡ ಜಮಾಯಿಸಿದ್ದರು. ಆರ್ಸಿಬಿ ಕಾರ್ಯಕ್ರಮ ಕ್ರೀಡಾಂಗಣದ ಒಳಗೆ ನಡೆಯುತ್ತಿರುವಾಗ, ಹೊರಗೆ ಕಾಲ್ತುಳಿತದಂತಹ ದುರಂತ ಘಟನೆ ಸಂಭವಿಸಿತು ಹಾಗೂ ಈ ದುರ್ಘಟನೆಯಿಂದ 11 ಮಂದಿ ಅಭಿಮಾನಿಗಳು ಸಾವಿಗೀಡಾದರು ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.
IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್ಸಿಬಿ ಪ್ರತಿಕ್ರಿಯೆ!
ಆರ್ಸಿಬಿಯ ವಿಜಯೋತ್ಸವದ ಬಗ್ಗೆ ಗಂಭೀರ್ ಹೇಳಿದ್ದೇನು?
"ನಮಗೆ ರೋಡ್ ಶೋ ಅಗತ್ಯವಿದೆ ಎಂದು ನಾನು ಎಂದಿಗೂ ನಂಬಿರಲಿಲ್ಲ. 2007ರ ವಿಶ್ವಕಪ್ ಗೆದ್ದ ನಂತರವೂ ನನಗೆ ಅದೇ ಅಭಿಪ್ರಾಯವಿತ್ತು. ಜನರ ಜೀವಗಳು ಹೆಚ್ಚು ಮುಖ್ಯ. ನಾನು ಯಾವಾಗಲೂ ಇದನ್ನೇ ಹೇಳುತ್ತಲೇ ಇರುತ್ತೇನೆ. ಭವಿಷ್ಯದಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಇಂತಹ ಕಾರ್ಯಕ್ರಮಗಳನ್ನು ಮುಚ್ಚಿದ ಸ್ಥಳದಲ್ಲಿ ಅಥವಾ ಕ್ರೀಡಾಂಗಣದ ಒಳಗೆ ನಡೆಸಬೇಕು. ನಡೆದದ್ದು ತುಂಬಾ ದುಃಖಕರ. ನಾವೆಲ್ಲರೂ ಜವಾಬ್ದಾರರು. ಭವಿಷ್ಯದಲ್ಲಿ ಈ ರೀತಿಯ ಏನೂ ಸಂಭವಿಸಬಾರದು ಎಂದು ನಾನು ಭಾವಿಸುತ್ತೇನೆ," ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಆರ್ಸಿಬಿ ತಂಡದ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತದ ಬಗ್ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, "ನಾವು ರೋಡ್ ಶೋಗಳನ್ನು ಮಾಡಬಾರದು, ಜನರ ಜೀವಗಳು ಹೆಚ್ಚು ಮುಖ್ಯ," ಎಂದು ತಿಳಿಸಿದ ಆವರು, "ನಾವು ರೋಡ್ ಶೋಗಳನ್ನು ಮಾಡಲು ಸಿದ್ಧರಿಲ್ಲದಿದ್ದರೆ, ನಾವು ಅದನ್ನು ಮಾಡಬಾರದು," ಎಂದಿದ್ದಾರೆ.
Narendra Modi: ಹೃದಯ ವಿದ್ರಾವಕ; ಬೆಂಗಳೂರು ಕಾಲ್ತುಳಿತಕ್ಕೆ ಪ್ರಧಾನಿ ಮೋದಿ ಆಘಾತ
18 ವರ್ಷಗಳ ಬಳಿಕ ಕಪ್ ಗೆದ್ದ ಆರ್ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಇದೇ ಮೊದಲ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಜೂನ್ 3 ರಂದು ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಸೋಲಿಸಿದ ಬಳಿಕ ಆರ್ಸಿಬಿ ಹೊಸ ಚಾಂಪಿಯನ್ ಆಯಿತು. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 191 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 184 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.