ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ನಲ್ಲಿ ತೂಗು ಹಾಕಿದ ಸೈಕೋ ಪತಿ; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral Video: ಉತ್ತರಾಖಂಡದ ವ್ಯಕ್ತಿಯೊಬ್ಬ ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ಗೆ ತೂಗು ಹಾಕಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಗಾಳಿಯಲ್ಲಿ ನೇತಾಡಿಕೊಂಡಿರುವ ಮಹಿಳೆ ತಮ್ಮನ್ನು ಕಾಪಾಡುವಂತೆ ಮೊರೆ ಇಡುತ್ತಿರುವುದು ಕೂಡ ಈ 31 ಸೆಕೆಂಡ್‌ಗಳ ವಿಡಿಯೊದಲ್ಲಿ ಸೆರೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ನಲ್ಲಿ ತೂಗು ಹಾಕಿದ ಸೈಕೋ ಪತಿ

Profile Ramesh B Jun 10, 2025 9:55 PM

ಡೆಹ್ರಾಡೂನ್‌: ಉತ್ತರಾಖಂಡದ ವ್ಯಕ್ತಿಯೊಬ್ಬ ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ಗೆ ತೂಗು ಹಾಕಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಆ ಮೂಲಕ ಕೌಟುಂಬಕ ಹಿಂಸೆಯ (Domestic Violence) ಮತ್ತೊಂದು ರೂಪ ಅನಾವಣಗೊಂಡಿದೆ. ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಗಾಳಿಯಲ್ಲಿ ನೇತಾಡಿಕೊಂಡಿರುವ ಮಹಿಳೆ ತಮ್ಮನ್ನು ಕಾಪಾಡುವಂತೆ ಮೊರೆ ಇಡುತ್ತಿರುವುದು ಕೂಡ ಈ 31 ಸೆಕೆಂಡ್‌ಗಳ ವಿಡಿಯೊದಲ್ಲಿ ಸೆರೆಯಾಗಿದ್ದು, ಕರುಳು ಹಿಂಡುವಂತಿದೆ. ಸದ್ಯ ಈ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೊದಲ್ಲಿ ಗಂಡ ತನ್ನ ಹೆಂಡತಿಯ ತೋಳನ್ನು ಹಿಡಿದು ಅಪಾರ್ಟ್‌ಮೆಂಟ್‌ನ ಬಾಲ್ಕನಿ ರೈಲಿಂಗ್‌ಗೆ ನೇತು ಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸುತ್ತಮುತ್ತಲಿನವರು ಆಕೆಯನ್ನು ಬಿಟ್ಟು ಬಿಡುವಂತೆ ಪರಿಪರಿಯಾಗಿ ಕೋರಿಕೊಂಡರೂ ಆತ ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಬಹು ಮಹಡಿ ಕಟ್ಟಡದ ರೈಲಿಂಗ್‌ ಹಿಡಿದು ಗಾಳಿಯಲ್ಲಿ ಕೆಲ ಹೊತ್ತು ನೇತಾಡಿಕೊಂಡು ರಕ್ಷಣೆಗಾಗಿ ಮೊರೆ ಇಟ್ಟಿರುವುದು ಕಂಡು ಬಂದಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಆತನನ್ನು ಜೈಲಿಗೆ ಅಟ್ಟಿ

ಈ ಆಘಾತಕಾರಿ ಹಿಂಸೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ರೋಷದ ಅಲೆಯನ್ನೇ ಎಬ್ಬಿಸಿದೆ. "ಯಾಕಾಗಿ ಈ ರೀತಿಯ ಹಿಂಸಾಚಾರ?" ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು "ಕೊಲೆ ಯತ್ನಕ್ಕಾಗಿ ಆತನನ್ನು ಜೈಲಿಗೆ ಅಟ್ಟಬೇಕುʼʼ ಎಂದು ಆಗ್ರಹಿಸಿದ್ದಾರೆ.

1 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ʼʼಶಾಕಿಂಗ್‌: ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ರೈಲಿಂಗ್‌ನಲ್ಲಿ ತೂಗು ಹಾಕಿದ್ದಾನೆʼʼ ಎಂದು ಕ್ಯಾಪ್ಶನ್‌ ನೀಡಲಾಗಿದೆ. ಈ ಘಟನೆಯು ವೈವಾಹಿಕ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಈ ಪರಿಸ್ಥಿತಿಯು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಕಳವಳವನ್ನು ಹುಟ್ಟುಹಾಕಿದೆ. ಯಾಕೆಂದರೆ ಇದು ಆ ವ್ಯಕ್ತಿಯ ನಡವಳಿಕೆಯಲ್ಲಿನ ಮಾನಸಿಕ ಸಮಸ್ಯೆಯನ್ನು ಬಹಿರಂಗಪಡಿಸಿದೆ.

ತಜ್ಞರು ಹೇಳೋದೇನು?

ʼʼಈ ಘಟನೆಯು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಉಳಿದಿರುವ ಕೌಟುಂಬಿಕ ಹಿಂಸಾಚಾರದ ಬಗ್ಗೆ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಈ ರೀತಿಯ ಘಟನೆಗಳು ನೈತಿಕ ಶಿಕ್ಷಣದ ಅನಿವಾರ್ಯತೆಯತ್ತ ಬೊಟ್ಟು ಮಾಡುತ್ತದೆʼʼ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕೌಟುಂಬಿಕ ಹಿಂಸಾಚಾರ ಇಂದಿಗೂ ಕಾಡುವ ಸಮಸ್ಯೆಯಾಗಿದ್ದು, ವೈರಲ್ ಆಗಿರುವ ಈ ವಿಡಿಯೊ ತುರ್ತು ಕ್ರಮದ ಅನಿವಾರ್ಯತೆಯನ್ನು ಸೂಚಿಸಿದೆ. ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರಿಗೆ ಅಗತ್ಯವಿರುವ ಬೆಂಬಲವನ್ನು ಪಡೆಯಲು ಸಮಾಜ ಒಟ್ಟಾಗಿ ಕೆಲಸ ಮಾಡಬೇಕು ಎಂಬುದನ್ನು ಇದು ನೆನಪಿಸುತ್ತದೆ. ಭವಿಷ್ಯದಲ್ಲಿ ಇಂತಹ ಭಯಾನಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಜಾಗೃತಿ, ಕಾನೂನು ಸುಧಾರಣೆ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವುದು ನಿರ್ಣಾಯಕ ಕ್ರಮ ಎನಿಸಿಕೊಳ್ಳಲಿದೆ. ಈ ಪ್ರಕರಣವು ತಕ್ಷಣ ಕ್ರಮದ ಮಹತ್ವ, ಬಲವಾದ ರಕ್ಷಣಾತ್ಮಕ ಕಾನೂನುಗಳ ಅಗತ್ಯವನ್ನು ಒತ್ತಿ ಹೇಳುತ್ತದೆ.