Roopa Gururaj Column: ದೊಡ್ಡವರ ಮಾತನ್ನು ನಿರ್ಲಕ್ಷಿಸಬೇಡಿ
ಯೋಚಿಸಿ ನೋಡಿ ನಮಗಿಂತ ನಮ್ಮ ಸ್ನೇಹಿತರ ಗುಣಅವಗುಣಗಳ ಬಗ್ಗೆ ನಮ್ಮ ತಂದೆ ತಾಯಿಗಳಿಗೆ ಬಹಳ ಚೆನ್ನಾಗಿ ಗೊತ್ತಾಗುತ್ತದೆ. ಯಾರಾದರೂ ಸ್ನೇಹಿತರನ್ನು ದೊಡ್ಡವರಿಗೆ ಪರಿಚಯ ಮಾಡಿಕೊಟ್ಟರೆ ಕಣ್ಣಿನಲ್ಲೇ ಅವರನ್ನು ಅಳೆದುಬಿಡುತ್ತಾರೆ. ಅಲ್ಲಲ್ಲೇ ಅವರ ಅನುಭವದಿಂದ ಎಚ್ಚರಿಕೆಯನ್ನೂ ನೀಡುತ್ತಾರೆ.


ಒಂದೊಳ್ಳೆ ಮಾತು
rgururaj628@gmail.com
ಒಂದು ನದಿ ತೀರದಲ್ಲಿ ನೂರಾರು ಉಡಗಳು ಬಿಲಗಳನ್ನು ಮಾಡಿಕೊಂಡು ಸುಖವಾಗಿ, ಸಂತೋಷ ದಿಂದ ಜೀವಿಸುತ್ತಿದ್ದವು. ನದೀ ತೀರದಲ್ಲಿ ವಾಸಿಸುತ್ತಿದ್ದ ಉಡಗಳಿಗೆ ಒಬ್ಬ ರಾಜನಿದ್ದ. ಆ ರಾಜನಿಗೆ ಒಬ್ಬ ಮಗ. ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಮಗನನ್ನು ಪ್ರೀತಿಸುತ್ತಿದ್ದ. ತಂದೆಯ ಪ್ರೀತಿ ಮಗನ ಮೇಲೆ ಹೆಚ್ಚಾದಷ್ಟೂ, ಮಗನ ಹಠದ ಸ್ವಭಾವ ಹೆಚ್ಚಾಗುತ್ತಿತ್ತು. ಏನಾದರೂ ಮಾಡಬೇಡವೆಂದು ತಂದೆ ಹೇಳಿದರೆ, ಬೇಕೆಂದೇ ಹಠದಿಂದ ಅದನ್ನೇ ಮಾಡುತ್ತಿತ್ತು, ಈ ಉಡದ ಮರಿ.
ಈ ರಾಜನ ಮಗ ಮರಿ ಉಡಕ್ಕೆ ಅದು ಹೇಗೋ ಒಂದು ಗೋಸುಂಬೆಯೊಂದಿಗೆ ಸ್ನೇಹವಾಯಿತು. ಗೋಸುಂಬೆ ಬಹಳ ಚಾಣಾಕ್ಷ ಪ್ರಾಣಿ, ಅಂಜು ಬುರುಕ , ಸಮಯಕ್ಕೆ ಸರಿಯಾಗಿ ತನ್ನ ಬಣ್ಣವನ್ನು ಬದಲಿಸುವುದು ಅದಕ್ಕೆ ಬಹಳ ಸುಲಭ. ಈ ಗೋಸುಂಬೆ ಉಡದ ಜೊತೆ ಕಾಲ ಕಳೆಯಲು ಕಾಯುತ್ತಾ ಯಾವಾಗಲೂ ಉಡದ ಬಿಲದ ಹತ್ತಿರವೇ ಇರುತ್ತಿತ್ತು.
ಸ್ವಲ್ಪ ವಯಸ್ಸಾದ ಮುದಿ ಉಡವೊಂದು ರಾಜನಿಗೆ, ಈ ಗೋಸುಂಬೆಯ ಸ್ನೇಹದ ವಿಷಯವನ್ನು ತಿಳಿಸಿ ಎಚ್ಚರಿಕೆ ನೀಡಿತು. ಆಗ ರಾಜನಿಗೆ ಬಹಳ ಚಿಂತೆಯಾಯಿತು. ಅದು ಮಗನಿಗೆ, ‘ನೀನು ಗೋಸುಂಬೆಯ ಸ್ನೇಹವನ್ನು ಮಾಡುತ್ತಿದ್ದಿಯಂತೆ, ಅದು ನನಗೆ ಸರಿ ಕಾಣುತ್ತಿಲ್ಲ, ಯಾವಾಗಲೂ ನಾವು ನಮ್ಮ ಸ್ವಭಾವದ ಜನರೊಂದಿಗೆ ಸ್ನೇಹ ಬೆಳೆಸಬೇಕು.
ಇದನ್ನೂ ಓದಿ: Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿ ಮಾಂಡವ್ಯ ಋಷಿ
ಗೋಸುಂಬೆಯ ಸ್ವಭಾವ ಅಷ್ಟು ಸರಿ ಇಲ್ಲ, ಅದು ತನ್ನ ಅನುಕೂಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ಯಾರಿಗೆ ಬೇಕಾದರೂ ಮೋಸ ಮಾಡಲು ಹೇಸುವುದಿಲ್ಲ. ನೀನು ಅದರ ಸಹವಾಸವನ್ನು ಬಿಟ್ಟು ಬಿಡು ಅದರ ಬಗ್ಗೆ ಯಾವಾಗಲೂ ಸ್ವಲ್ಪ ಎಚ್ಚರಿಕೆಯಿಂದ ಇರು’ ಎಂದು ಹೇಳಿತು.
ಉಡದ ಮರಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ತಂದೆಗೆ ಎದುರು ಉತ್ತರ ಕೊಟ್ಟಿತು. ಒಂದಷ್ಟು ದಿನಗಳ ನಂತರ ಗೋಸುಂಬೆ ತನ್ನ ಬಣ್ಣ ಬದಲಾಯಿಸಿತು. ಅದಕ್ಕೆ ಉಡದ ಸ್ನೇಹ ಬೇಡವಾಯಿತು. ಯಾವಾಗಲಾದರೂ ಮಳೆ ಬಂದರೆ, ರೆಕ್ಕೆಯ ಹುಳಗಳು ಉಡದ ಬಿಲದ ಸುತ್ತಮುತ್ತ ಬಂದು ಕುಳಿತು ಕೊಳ್ಳುತ್ತಿದ್ದವು. ಅವುಗಳನ್ನು ತಿನ್ನಲೆಂದು ಉಡಗಳು ಬಿಲದಿಂದ ಹೊರಗೆ ಬರುತ್ತಿದ್ದವು.
ಉಡಗಳನ್ನು ಹಿಡಿಯಲೆಂದು ಒಬ್ಬ ಬೇಟೆಗಾರ ಹೊಂಚು ಹಾಕುತ್ತಿದ್ದ. ಈ ಗೋಸುಂಬೆ, ಬೇಟೆ ಗಾರನ ಬಳಿಗೆ ಹೋಗಿ ‘ನಾನು ನಿನಗೆ ನೂರಾರು ಉಡಗಳನ್ನು ಹಿಡಿದು ಕೊಡುತ್ತೇನೆ, ನೀನು ನನಗೆ ಈ ಉಡಗಳ ಬಿಲವನ್ನು, ಹಾಳು ಮಾಡದೇ ತೆರವು ಮಾಡಿ ಕೊಡಬೇಕು’ ಎಂದಿತು.
ಗೋಸುಂಬೆಯ ಮಾತಿಗೆ ಬೇಟೆಗಾರ ಒಪ್ಪಿಕೊಂಡ. ಆಗ ಅದು ಅವನನ್ನು, ಉಡದ ರಾಜನ ಮನೆಯ ಸುತ್ತವಿದ್ದ ಬಿಲಗಳ ಬಳಿಗೆ ಕರೆದು ತಂದಿತು. ಆತ ಬಿಲಗಳ ಹೊರಗೆ ಒಣಗಿದ ಹುಲ್ಲು ಹಾಕಿ ಬೆಂಕಿ ಹಚ್ಚಿದ. ಬಿಲದೊಳಗೆ ಅಡಗಿದ್ದ ಎಲ್ಲಾ ಉಡಗಳೂ ಬಿಲದಿಂದ ಹೊರಗೆ ಓಡಿಬಂದವು. ಬೇಟೆಗಾರ ಅವುಗಳನ್ನು ಹೊಡೆದು ಹಾಕಿದ. ಅವನಿಂದ ಪಾರಾಗಿ ತಪ್ಪಿಸಿಕೊಂಡ ಉಡಗಳನ್ನು ಅವನ ನಾಯಿಗಳು ಹಿಡಿದವು. ಹೀಗೆ ಉಡಗಳ ವಂಶವೇ ನಾಶವಾಯಿತು.
ಯೋಚಿಸಿ ನೋಡಿ ನಮಗಿಂತ ನಮ್ಮ ಸ್ನೇಹಿತರ ಗುಣಅವಗುಣಗಳ ಬಗ್ಗೆ ನಮ್ಮ ತಂದೆ ತಾಯಿಗಳಿಗೆ ಬಹಳ ಚೆನ್ನಾಗಿ ಗೊತ್ತಾಗುತ್ತದೆ. ಯಾರಾದರೂ ಸ್ನೇಹಿತರನ್ನು ದೊಡ್ಡವರಿಗೆ ಪರಿಚಯ ಮಾಡಿ ಕೊಟ್ಟರೆ ಕಣ್ಣಿನಲ್ಲೇ ಅವರನ್ನು ಅಳೆದುಬಿಡುತ್ತಾರೆ. ಅಲ್ಲಲ್ಲೇ ಅವರ ಅನುಭವದಿಂದ ಎಚ್ಚರಿಕೆ ಯನ್ನೂ ನೀಡುತ್ತಾರೆ.
ಆದರೆ ಅದರ ಬಗ್ಗೆ ನಾವು ಅಷ್ಟು ಗಮನ ಹರಿಸುವುದಿಲ್ಲ. ಎಷ್ಟೋ ಬಾರಿ ದೊಡ್ಡವರು ಹೇಳಿದ ಮಾತುಗಳು ನಿಜವಾಗುತ್ತದೆ. ಅವರ ಜೀವನದ ಅನುಭವ ನಮ್ಮ ಊಹೆಗಿಂತಲೂ ದೊಡ್ಡದು. ಆದ್ದರಿಂದಲೇ ದೊಡ್ಡವರ ಮಾತುಗಳನ್ನು ಉಪಯೋಗಿಸಬೇಡಿ. ಅವರು ಯಾರನ್ನಾದರೂ ಅಥವಾ ಯಾವ ವಿಷಯವನ್ನಾದರೂ, ಕೂಲಂಕುಶವಾಗಿ ಎಲ್ಲಾ ದೃಷ್ಟಿಕೋನಗಳಿಂದ ನೋಡುತ್ತಾರೆ. ಅವರಿಗೆ ಸಿಕ್ಕಿರುವ ಬದುಕಿನ ಪಾಠಗಳು ನಮ್ಮ ವಯಸ್ಸಿಗೆ ಮೀರಿದ್ದು. ಆದ್ದರಿಂದಲೇ ನಮಗೆ ಗೋಚರಿಸದ ಸೂಕ್ಷ್ಮಗಳು ಅವರಿಗೆ ಬಹಳ ಬೇಗ ತಿಳಿದು ಬಿಡುತ್ತದೆ. ತಂದೆ ತಾಯಿಗಳ ಮಾತನ್ನು ಕೇಳಿ ಯಾರು ಜೀವನದಲ್ಲಿ ಸೋತಿಲ್ಲ ಎಂಬುದು ನೆನಪಿರಲಿ.