ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಹೆಣ್ಣಿನ ಕಣ್ಣೀಗಷ್ಟೇ ಅಲ್ಲ ಕವಿಯ ಕಣ್ಣಿಗೂ ಕಾಡಿಗೆ ಚಂದ !

ಶ್ಲೋಕದಲ್ಲಿ ಬಳಕೆಯಾದ ಸಂಸ್ಕೃತ ಪದಗಳಲ್ಲಿ ವಿಶೇಷವಾದ ಕೆಲವನ್ನು ಒಮ್ಮೆ ಗಮನಿಸೋಣ: ಸಂಸ್ಕೃತದಲ್ಲಿ ಸಿತ ಅಂದರೆ ಬಿಳಿಯ ಬಣ್ಣ. ಅಸಿತ ಅಂದರೆ ಕಪ್ಪು ಬಣ್ಣ. ಅಸಿತಗಿರಿ ಅಂದರೆ ಕಪ್ಪು ಬಣ್ಣದ ಪರ್ವತ, ಕಾಡಿಗೆಯಿಂದಾದ ನೀಲಾಂಜನಪರ್ವತ. ಕಜ್ಜಲ ಅಂದರೆ ಕಾಡಿಗೆ ಅಥವಾ ಮಸಿ. ಸಿಂಧು ಅಂದರೆ ಸಮುದ್ರ. ಸುರತರು ಅಂದರೆ ಕಲ್ಪವೃಕ್ಷ ಅರ್ಥಾತ್ ತೆಂಗಿನಮರ.

ಹೆಣ್ಣಿನ ಕಣ್ಣೀಗಷ್ಟೇ ಅಲ್ಲ ಕವಿಯ ಕಣ್ಣಿಗೂ ಕಾಡಿಗೆ ಚಂದ !

ತಿಳಿರು ತೋರಣ

srivathsajoshi@yahoo.com

ಅಸಿತಗಿರಿಸಮಂ ಸ್ಯಾತ್ ಕಜ್ಜಲಂ ಸಿಂಧುಪಾತ್ರೇ|

ಸುರತರುವರಶಾಖಾ ಲೇಖನೀ ಪತ್ರಮುರ್ವೀ|

ಲಿಖಿತ ಯದಿ ಗೃಹೀತ್ವಾ ಶಾರದಾ ಸರ್ವಕಾಲಂ|

ತದಪಿ ತವ ಗುಣಾನಾಮೀಶ ಪಾರಂ ನ ಯಾತಿ||’ ಎಂಬೊಂದು ಚಂದದ ಸಂಸ್ಕೃತ ಶ್ಲೋಕವಿದೆ, ‘ಶಿವಮಹಿಮ್ನಃ ಸ್ತೋತ್ರ’ದಲ್ಲಿ ಬರುತ್ತದೆ. ಇದು ಪುಷ್ಪದಂತನೆಂಬ ಕವಿಯ ರಚನೆ. ಕುವೆಂಪು ಶಿವಮಹಿಮ್ನಃ ಸ್ತೋತ್ರವನ್ನು ಕನ್ನಡದಲ್ಲಿ ಪುನರ್ರಚಿಸಿದ್ದಾರೆ.

ಅದರಲ್ಲಿ ಈ ಶ್ಲೋಕಕ್ಕೆ ಸಂವಾದಿಯಾಗಿ ಕುವೆಂಪು ಬರೆದ ಕನ್ನಡ ಪದ್ಯ ಹೀಗೆ ಇದೆ: ‘ಸಿಂಧುಪಾತ್ರದೊಳಸಿತಗಿರಿ ಬರೆವ

ಮಸಿಯಾದೊಡಂ| ದೇವತರು ಶಾಖೆ ಲೇಖನಿಯಾದೊಡಂ| ಪತ್ರಮಿಳೆಯಾಗಿ ಶಾರದೆ ಬರೆಯೆ ಸರ್ವಕಾಲಂ| ಗೋಚರವೆ ನಿನ್ನ ಗುಣಗಣದ ಪಾರಂ?’ ಉತ್ಪ್ರೇಕ್ಷೆಗಳಿಂದ ತುಂಬಿ ತುಳುಕುವ ಈ ಶ್ಲೋಕದ(ಪದ್ಯದ) ಭಾವಾರ್ಥವನ್ನು ನಮ್ಮಂಥ ಜನಸಾಮಾನ್ಯರಿಗೆ ಅರ್ಥವಾಗುವ ಸರಳಗನ್ನಡ ದಲ್ಲಿ ಬರೆಯುವುದಾದರೆ- ಸಮುದ್ರವೆಂಬ ಮಸಿಕುಡಿಕೆಯಿಂದ, ನೀಲಾಂಜನ ಪರ್ವತದಷ್ಟು ಅಗಾಧ ಪ್ರಮಾಣದಲ್ಲಿರುವ ಮಸಿಯನ್ನು ಬಳಸಿ, ತೆಂಗಿನ ಮರದ ಸೋಗೆಯನ್ನೇ ಲೇಖನಿ ಯನ್ನಾಗಿಸಿ, ಇಡೀ ಭೂಮಿಯನ್ನೇ ಬರೆಯುವ ಹಾಳೆಯಾಗಿಸಿ, ಸಾಕ್ಷಾತ್ ಶಾರದೆಯೇ ನಿರಂತರ ವಾಗಿ ಬರೆಯುತ್ತಲೇ ಇದ್ದರೂ ಎಂದಿಗೂ ಮುಗಿಯಲಾರದಷ್ಟಿವೆ ಜಗದೀಶ್ವರನ ಗುಣಮಹಿಮೆಗಳು!

ಶ್ಲೋಕದಲ್ಲಿ ಬಳಕೆಯಾದ ಸಂಸ್ಕೃತ ಪದಗಳಲ್ಲಿ ವಿಶೇಷವಾದ ಕೆಲವನ್ನು ಒಮ್ಮೆ ಗಮನಿಸೋಣ: ಸಂಸ್ಕೃತದಲ್ಲಿ ಸಿತ ಅಂದರೆ ಬಿಳಿಯ ಬಣ್ಣ. ಅಸಿತ ಅಂದರೆ ಕಪ್ಪು ಬಣ್ಣ. ಅಸಿತಗಿರಿ ಅಂದರೆ ಕಪ್ಪು ಬಣ್ಣದ ಪರ್ವತ, ಕಾಡಿಗೆಯಿಂದಾದ ನೀಲಾಂಜನಪರ್ವತ. ಕಜ್ಜಲ ಅಂದರೆ ಕಾಡಿಗೆ ಅಥವಾ ಮಸಿ. ಸಿಂಧು ಅಂದರೆ ಸಮುದ್ರ. ಸುರತರು ಅಂದರೆ ಕಲ್ಪವೃಕ್ಷ ಅರ್ಥಾತ್ ತೆಂಗಿನಮರ.

ಇದನ್ನೂ ಓದಿ: Srivathsa Joshi Column: ಚಿತ್ರಕಾವ್ಯವೆಂಬ ಭಾಷಾ ಚಮತ್ಕಾರ ಇಂಗ್ಲಿಷ್‌ ನಲ್ಲೂ ಇದೆ !

ಅದರ ಶಾಖಾ ಅಂದರೆ ಸೋಗೆ ಅಥವಾ ಮಡಲು. ಉರ್ವೀ ಅಂದರೆ ಭೂಮಿ. ಎಂಥ ಕವಿಕಲ್ಪನೆ! ಭೂಮಿಯೇ ಪತ್ರ(ಕಾಗದ) ಅಂತೆ. ತೆಂಗಿನ ಮಡಲೇ ಲೇಖನಿ ಅಂತೆ. ಸಮುದ್ರವೇ ಮಸಿ ಕುಡಿಕೆ. ಅದರೊಳಗೆ ಕಾಡಿಗೆಯದೇ ಪರ್ವತ. ಇವೆಲ್ಲ ಪರಿಕರಗಳನ್ನು ಬಳಸಿ ಬರೆಯುತ್ತಿರುವುದು ಬೇರಾರೂ ಅಲ್ಲ ಸಾಕ್ಷಾತ್ ಸರಸ್ವತಿ. ಅದೂ ಒಂದೆರಡು ಗಂಟೆ ಕಾಲ ಅಲ್ಲ.

ನಿರಂತರವಾಗಿ, ಅನಂತಕಾಲದವರೆಗೂ. ಅಷ್ಟಾದರೂ ಶಿವಮಹಿಮೆಗಳನ್ನು ಬರೆದು ಮುಗಿಸಿದೆವು ಎನ್ನಲಾಗದು. ಅಗಾಧತೆ, ಅನಂತತೆಗಳನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ವರ್ಣಿಸಲಾದೀತೇ!? ನನಗಿದರಲ್ಲಿ ಕುತೂಹಲಕರವಾಗಿ ಕಾಣಿಸಿದ್ದು ‘ಕಜ್ಜಲ’ ಎಂಬ ಪದ. ಅದನ್ನೇ ಇಂದಿನ ಅಂಕಣಕ್ಕೆ ವಿಷಯವನ್ನಾಗಿಸಿಕೊಂಡಿದ್ದೇನೆ.

ಹಿಂದಿ ಭಾಷೆಯಲ್ಲಿ ‘ಕಾಜಲ್’ ಅಂತ ಇರುವುದರ ಮೂಲವೂ ಇದೇ. ಹಿಂದಿ ಚಿತ್ರನಟಿ ಕಾಜೋಲ್‌ಳ ತಂದೆ ಮೂಲತಃ ಬಂಗಾಳದ ಮುಖರ್ಜಿ ಮನೆತನದವರು, ಆದ್ದರಿಂದ ಬಂಗಾಲಿಯ ಕಾಜೋಲ್ ಸಹ ಸಂಸ್ಕೃತದ ಕಜ್ಜಲದ್ದೇ ರೂಪವೆಂದು ಸುಲಭವಾಗಿ ಊಹಿಸಬಹುದು. ನಾವು ಮಾತನಾಡುವ ಚಿತ್ಪಾವನಿ ಮರಾಠಿ ಭಾಷೆಯಲ್ಲೂ- ಹೆಣ್ಮಕ್ಕಳು ಕಣ್ಣಿಗೆ ಹಚ್ಚುವ ಕಪ್ಪು, ಚಿಕ್ಕ ಮಕ್ಕಳ ಹಣೆ ಮತ್ತು ಗಲ್ಲಕ್ಕೆ ಹಚ್ಚುವ ಬೊಟ್ಟು, ಮದುವೆಯಲ್ಲಿ ವಧೂವರರಿಗೆ ಅನುಕ್ರಮವಾಗಿ ಎಡ-ಬಲ ಗಲ್ಲಕ್ಕೆ ಹಚ್ಚುವ ದೃಷ್ಟಿಬೊಟ್ಟು, ಎಲ್ಲದಕ್ಕೂ ‘ಕಾಜ್ಜಳ’ ಎಂದೇ ಹೆಸರು.

ಈಗೀಗ ಮಾರುಕಟ್ಟೆಯಿಂದ ಕೊಂಡುಕೊಳ್ಳುವ ವಸ್ತುವಾದರೂ ಹಿಂದೆಲ್ಲ ಮನೆಯಲ್ಲೇ ತಯಾರಿಸು ತ್ತಿದ್ದದ್ದು. ತುಪ್ಪದ ದೀಪದ ಹಣತೆಗೆ ಮೇಲೆ ತಗಡಿನ ವರ್ತುಲಾಕಾರ ಫಲಕವನ್ನು ಜೋಡಿಸಿಟ್ಟು ಅದಕ್ಕೆ ಮೆತ್ತಿಕೊಂಡ ಮಸಿಯನ್ನು ಸಂಗ್ರಹಿಸಿ ನಿರ್ದಿಷ್ಟ ಪ್ರಮಾಣದ ಎಣ್ಣೆಯಲ್ಲಿ ಕಲಸಿ ಕರಂಡಕದಲ್ಲಿ ತುಂಬಿಡುವುದು. ನನ್ನ ಅಮ್ಮನೂ ಇದೇ ವಿಧಾನವನ್ನು ಅನುಸರಿಸುತ್ತಿದ್ದರು.

ಅವರೇನೂ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡವರಲ್ಲ; ಆದರೆ ಮನೆಯಲ್ಲಿ ಮಕ್ಕಳಿಗೆ ಹಚ್ಚಲಿಕ್ಕೆ ಒಂದು ಕರಂಡಕದಲ್ಲಿ ಯಾವಾಗಲೂ ಇರುತ್ತಿತ್ತು. ಸ್ವಾರಸ್ಯವೆಂದರೆ ಸಂಸ್ಕೃತದ ಕಜ್ಜಲವು ಕನ್ನಡದಲ್ಲೂ, ವಿಶೇಷವಾಗಿ ಸಾಹಿತ್ಯಿಕ ಕನ್ನಡದಲ್ಲಿ ‘ಕಜ್ಜಳ’ ಆಗಿ ಬಳಕೆಯಲ್ಲಿರುವುದು. ನನಗಿಲ್ಲಿ ತತ್‌ಕ್ಷಣಕ್ಕೆ ನೆನಪಾಗುತ್ತಿರುವುದೆಂದರೆ ನನ್ನೊಬ್ಬ ಹಿರಿಯ ಹಿತೈಷಿ ಓದುಗಮಿತ್ರ, ಕೆಲ ತಿಂಗಳ ಹಿಂದೆ ನಮ್ಮನ್ನಗಲಿದ, ಮೈಸೂರಿನ ರಾಘವೇಂದ್ರ ಭಟ್ಟರು ಕ್ಷೇಮಸಮಾಚಾರ ಸಂದೇಶವೊಂದರಲ್ಲಿ ಬರೆದಿದ್ದ ಒಂದು ಪ್ರಗಾಢ ವಾಕ್ಯ: “ಕಿರಿಮಗಳು ವೀಣಾ ತನ್ನಿಬ್ಬರು ಮಕ್ಕಳೊಡನೆ ನಾಳಿದ್ದು ಅಮೆರಿಕಕ್ಕೆ ಮರುಪಯಣಿಸುತ್ತಿದ್ದಾಳೆ.

ಮೊಮ್ಮಕ್ಕಳು ಬಂದು ಮೂರು ವಾರ ಇಲ್ಲಿ ನಮ್ಮೊಡನಿದ್ದು, ಆರುವ ನಮ್ಮೀ ದೀಪಗಳಿಗೆ ಬತ್ತಿಯ ಕಜ್ಜಳವನ್ನು ಕಳೆದರು. ಬದುಕೇ ಹೀಗೆ ತಾನೆ?" ಓದಿದಾಗೆಲ್ಲ ನನ್ನನ್ನು ಬಹಳವಾಗಿ ಕಾಡಿರುವ, ಚಿಂತನೆಗೆ ಹಚ್ಚಿರುವ ವಾಕ್ಯವಿದು. ಕನ್ನಡದಲ್ಲೂ ಕಜ್ಜಳ ಎನ್ನುತ್ತಾರೆಂದು ನನಗೆ ಗೊತ್ತಾದದ್ದೇ ಆವಾಗ. ಕುಮಾರವ್ಯಾಸನ ಗದುಗಿನಭಾರತದಲ್ಲಿ ಭೀಮಸೇನನು ದುರ್ಯೋಧನನನ್ನು ಕೊಂದ ಮೇಲೆ ಧೃತರಾಷ್ಟ್ರ, ಭಾನುಮತಿ ಮತ್ತು ರಾಣಿವಾಸದವರೆಲ್ಲರೂ ದುಃಖಭರಿತರಾಗಿ ಅಲ್ಲಿಂದ ಹೊರಟ ದೃಶ್ಯದ ಬಣ್ಣನೆ- ‘ಧರಣಿಪತಿ ಹೊರವಂಟನಂತಃ| ಪುರದ ಬಿಸುಟರು ಭಾನುಮತಿ ಸಹಿ| ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ| ಕರದ ಬಸುರಿನ ಹೊಯ್ಲ ಕಜ್ಜಳ| ಪರಿಲುಳಿತ ನಯನಾಂಬುಗಳ ಕಾ| ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ’ ಈ ಪದ್ಯದಲ್ಲೂ ಕಜ್ಜಳ ಬರುತ್ತದೆ.

ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸ ದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಧೃತರಾಷ್ಟ್ರ ಮತ್ತು ಭಾನುಮತಿಯನ್ನು ಹಿಂಬಾಲಿಸಿದರಂತೆ.

ಕಣ್ಣೀರಿನೊಡನೆ ಕಜ್ಜಳವೂ ಕರಗಿ ಹರಿಯಿತಂತೆ. ಇದಕ್ಕಿಂತ ಪರಿಣಾಮಕಾರಿಯಾಗಿ ಬಿಂಬಿಸ ಲಾದೀತೇ ದೇಹ-ಮನಸ್ಸುಗಳಿಗೆ ಕವಿದ ಕರಿನೆರಳನ್ನು? ಎಷ್ಟೆಂದರೂ ನಮ್ಮ ಕುಮಾರವ್ಯಾಸ ಅಸಾಮಾನ್ಯ. ಆತ ನೋವನ್ನು ಚಿತ್ರಿಸಿರುವ ಪರಿ ಅನನ್ಯ.

ಕುತೂಹಲಕ್ಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪುಟಗಳ ಪಿಡಿಎ- ತೆರೆದು ‘ಕಜ್ಜಳ’ ಪದವನ್ನು ಗಮನಿಸಿದೆ. ಕಣ್ಣಿಗೆ ಹಚ್ಚಿಕೊಳ್ಳುವ ಕಾಡಿಗೆ ಎಂಬ ಅರ್ಥದೊಡನೆ, ಹಳಗನ್ನಡದ ಸಾಹಿತ್ಯಕೃತಿಗಳಲ್ಲಿ ಕಜ್ಜಳ ಎಲ್ಲೆಲ್ಲಿ ಬಳಕೆಯಾಗಿದೆ ಎಂಬ ದೊಡ್ಡ ಪಟ್ಟಿಯೇ ಇದೆ! ‘ಪಾರಾವತ ಕಜ್ಜಲವರ್ಣಮಾದೊಡದರಿಂ ಕಜ್ಜಲಮಕ್ಕುಂ...’, ‘ತೊಡೆದು ಕಣ್ಗೆ ಕಜ್ಜಲವಿಲಾಸವಿನ್ನೇ ವುದೆಮಗೆ...’, ‘ವಿಲೋಚನಕ್ಕೆ ಕಜ್ಜಲವತಿಭಾರವೆಂಬ ತನುಲೇಖೆಗೆ ಚಂದನದಣ್ಪು ಬಿಣ್ಣಿತೆಂಬ...’, ‘ಕಜ್ಜಲಮಂ ತಿಲರಸದೊಳ್ ಕಲಸಿಗೆಯ್ದ ಬೊಂಬೆಗಳೆನೆ ದಲ್ ಸಲೆ ನುಣ್ಗೆಂಪಿನ ಬೇಡರ ಲಲನೆಯರಂ...’ ರೀತಿಯವು.

ಹಾಗೆಯೇ ಜನ್ನನ ‘ಅನಂತನಾಥಪುರಾಣ’ ಕೃತಿಯಲ್ಲಿ ಒಂದು ಕಡೆ ಮಿಂಚಿನ ವರ್ಣನೆಯ ಸುಂದರ ಪದ್ಯ, ಮತ್ತೇಭವಿಕ್ರೀಡಿತ ವೃತ್ತದಲ್ಲಿ- ‘ಗಗನೀ ಚಿತ್ರಕೆ ಬಾಲಭಾನುಕರಮಂ ಕಣ್ಬಿಟ್ಟು ತೊಯ್ದಿಟ್ಟ ಬ| ಟ್ಟಿಗೆಯಿಂ ಕಜ್ಜಳ ಸಜ್ಜಿತಾಬ್ಧಿ -ಳಕ ಪ್ರಾಗ್ಭಾಗದೊಳ್ ದಿಟ್ಟಿಗಂ| ಬಗೆಗಂ ಕೌತುಕಮಪ್ಪಿನಂ ಬರೆವವೊಲ್ ಚೆಲ್ವಾದುದಂ ನೋಡಿದಂ| ಜಗದೀಶಂ ನವನಾಗಬಂಧಘಟನಾ ಸೌಧಾಮಿಕಾ ಧಾಮಮಂ||’

ಕಜ್ಜಳ ಒಂದೇ ಅಲ್ಲ, ಕಾಡಿಗೆ ಎಂಬ ಪದವನ್ನೂ ಕನ್ನಡದ ಕವಿಗಳು ಧಾರಾಳವಾಗಿ ಬಳಸಿದ್ದಾರೆ. ಕಾಮಿನಿಯರ ಕಣ್ಗಳ ಚೆಲುವನ್ನಾಗಲೀ ಕಾಳರಾತ್ರಿಯ ಕರಾಳ ನೀರವತೆಯನ್ನಾಗಲೀ ವರ್ಣಿಸು ವಾಗ ಕವಿಯ ಕಣ್ಣಿಗೆ, ಅಲ್ಲ ಕಲ್ಪನೆಗೆ, ಕಾಡಿಗೆ ತಾಕದಿರಲು ಸಾಧ್ಯವೇ? ಅಜ್ಞಾತವಾಸದ ವೇಳೆ ವಿರಾಟನಗರದಲ್ಲಿ ರಾಣಿ ಸುದೇಷ್ಣೆಯ ಅಂತಃಪುರದಲ್ಲಿ ಸೈರಂಧಿಯಾಗಿ ದ್ರೌಪದಿ ಸೇರಿಕೊಂಡಿ ದ್ದಳಷ್ಟೆ? ಯಾವ್ಯಾವ ಕೆಲಸಗಳನ್ನು ಮಾಡಬಲ್ಲೆ ಎಂದು ಸುದೇಷ್ಣೆಯು ಅವಳ ಇಂಟರ್‌ವ್ಯೂ ತಗೊಂಡಾಗ ದ್ರೌಪದಿ ಹೇಳುತ್ತಾಳೆ: ‘ಏನ ಮಾಡಲು ಬಲ್ಲೆಯೆಂದರೆ| ಮಾನಿನಿಯ ಸಿರಿಮುಡಿಯ ಕಟ್ಟುವೆ| ಸೂನ ಮುಡಿಸುವೆ ವರಕಟಾಕ್ಷಕೆ ಕಾಡಿಗೆಯನಿಡುವೆ| ಏನ ಹೇಳಿದ ಮಾಡಬಲ್ಲೆನು| ಸಾನುರಾಗದೊಳೆಂದೆನಲು ವರ| ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ||’ ಮಹಾರಾಣಿಯವರ ಕೇಶವಿನ್ಯಾಸ ಮಾಡಬಲ್ಲೆ, ಅವರ ಮುಡಿಗೆ ಹೂವನ್ನು ಮುಡಿಸಬಲ್ಲೆ, ಅವರ ಕಣ್ಣಿಗೆ ಕಾಡಿಗೆಯನ್ನು ತೀಡಬಲ್ಲೆ, ಯಾವ ಕೆಲಸವನ್ನು ಹೇಳಿದರೂ ತಾನು ಪ್ರೀತಿಯಿಂದ ಮಾಡಬಲ್ಲೆ ಎಂದು.

ಆ ಕಾಲದ ಬ್ಯೂಟೀಷಿಯನ್ನಳ ಜಾಬ್ ಪ್ರೊಫೈಲ್ ಅದು! ಆ ಪದ್ಯದಲ್ಲಿ ಕಜ್ಜಳವನಿಡುವೆ ಎಂದು ಹೇಳಿದ್ದರೂ ಛಂದಸ್ಸಿಗೆ ಭಂಗವಾಗುತ್ತಿರಲಿಲ್ಲ, ಆದರೆ ಕುಮಾರವ್ಯಾಸ ಆ ಸಂದರ್ಭಕ್ಕೆ ಕಾಡಿಗೆ ಯನ್ನೇ ಆಯ್ದುಕೊಂಡಿದ್ದಾನೆ. “ಕಾಡಿಗೆ ಕಪ್ಪಾದರೂ ಅದು ಕೊಡುವ ಸೌಂದರ್ಯ ಅಪರೂಪ ವಾದದ್ದು. ಮೊದಲನೆಯದಾಗಿ ಕಾಡಿಗೆ ಹಚ್ಚಿಕೊಳ್ಳುವ ಹೆಣ್ಣಿನ ಭಂಗಿಯೇ ಹೃದಯಬಡಿತವನ್ನು ಹೆಚ್ಚಿಸುವಂಥದ್ದು.

ಪೌಡರ್ ಬಳಿದುಕೊಳ್ಳುವ ಹೆಣ್ಣು, ಕುಂಕುಮ ಹಚ್ಚಿಕೊಳ್ಳುವ ಹೆಣ್ಣು, ಕಿವಿಯೋಲೆ ಧರಿಸುತ್ತಿರುವ ಹೆಣ್ಣು... ಎಲ್ಲವುಗಳಲ್ಲಿಯೂ ಒಂದೊಂದು ತೆರನಾದ ಲಾವಣ್ಯ ಇದ್ದೇಇದೆ. ಆದರೆ ಕಾಡಿಗೆ ಹಚ್ಚಿಕೊಳ್ಳುವ ಹೆಣ್ಣು ನಿಜವಾಗಿ ಕಲಾವತಿಯಾಗಿದ್ದರೆ ಅದೊಂದು ದೇವದುರ್ಲಭ ನೋಟವೇ ಸೈ. ಎಳೆಎಳೆಯಾಗಿ ಆ ಲಾವಣ್ಯವನ್ನು ಬಣ್ಣಿಸುವುದಕ್ಕೂ ಆಗದು, ಕಂಡೇ ತಣಿಯತಕ್ಕದ್ದು ಅದು.

ಕಾಡಿಗೆಯನ್ನು ಹಚ್ಚಿಕೊಂಡ ಮೇಲೆ ಕಣ್ಣಿನ ಚೆಲುವಿಗೊಂದು ಒತ್ತು ಕೊಟ್ಟಂತಾಗುತ್ತದೆ. ಮೊದಲೇ ಚೂಪಾದ ಕಣ್ಣು ಕೊನೆಗಳು ಈಗ ಮುಳ್ಳಿನ ಮೊನೆಯಂತಾಗುತ್ತವೆ, ಮಾದಕತೆ ತಾನೇತಾನಾಗಿ ಬರುತ್ತದೆ... " ಎಂದು ಬರೆದವರು ಮತ್ತ್ಯಾರೂ ಅಲ್ಲ, ರಸಿಕತೆಗೇನೂ ಕಡಿಮೆಯಿಲ್ಲದ, ಆದರೆ ಅದನ್ನು ಶಿಷ್ಟ ಚೌಕಟ್ಟಿನೊಳಗೆ ಕೂರಿಸಬಲ್ಲ, ಪಾ.ವೆಂ ಆಚಾರ್ಯರು! ಕಾವ್ಯಗಳಲ್ಲಿ ಹೆಣ್ಣಿನ ಸೌಂದರ್ಯಕ್ಕಷ್ಟೇ ಅಲ್ಲದೆ ವಿಚಿತ್ರ ಸನ್ನಿವೇಶಗಳಲ್ಲಿ ಸಲಕರಣೆಯಾಗಿ ಕಾಡಿಗೆಯು ಒದಗಿಬಂದ ಎರಡು ಪ್ರಸಂಗಗಳನ್ನೂ ಅವರು ಸುಂದರವಾಗಿ ಬಣ್ಣಿಸಿದ್ದಾರೆ.

ಮೊದಲನೆಯದು ಚಂದ್ರಹಾಸ-ವಿಷಯೆಯರ ಕಥೆ, ನಮಗೆಲ್ಲ ಗೊತ್ತಿದ್ದದ್ದೇ. ಇನ್ನೊಂದು ನನಗಂತೂ ಇದುವರೆಗೆ ಗೊತ್ತಿರಲಿಲ್ಲ. ಪಾ.ವೆಂ ಆಚಾರ್ಯರ ಒಕ್ಕಣೆಯಲ್ಲೇ ಅವುಗಳನ್ನು ಸವಿಯಬೇಕು. “ಚಂದ್ರಹಾಸನ ಕೈಲಿ ಮಂತ್ರಿ ದುಷ್ಟಬುದ್ಧಿಯು ಮಗ ಮದನನಿಗೆ ಕೂಟಪತ್ರವನ್ನು ಬರೆದು ಕಳಿಸಿರುತ್ತಾನೆ. ಇವನು ಅಲ್ಲಿ ಬಂದೊಡನೆ ಎಳ್ಳಷ್ಟೂ ವಿಳಂಬಿಸದೆ ವಿಷ ಕೊಟ್ಟು ಮುಗಿಸಿಬಿಡು ಎಂದು. ಚಂದ್ರಹಾಸ ರಾಜಧಾನಿಗೆ ಬಂದಿದ್ದಾನೆ.

ಮಧ್ಯಾಹ್ನವಾಗಿದೆ. ವಿಪರೀತ ಆಯಾಸವಾಗಿದೆ. ಮಾರ್ಗಕ್ರಮಣದಿಂದ ಮಲಿನವಾದ ಮೈಯಲ್ಲೇ ಅರಮನೆಗೆ ಹೋಗುವುದು ಯುಕ್ತವಲ್ಲ. ರಾಜಧಾನಿಯ ಹೊರಗಿನ ಉದ್ಯಾನದ ಕೊಳದಲ್ಲಿ ಮಿಂದಿದ್ದಾನೆ. ಮರದ ಬುಡದಲ್ಲಿ ಕುಳಿತಿದ್ದಾನೆ. ಅಲ್ಲೇ ನಿದ್ದೆ ಬಂದುಬಿಟ್ಟಿದೆ. ದುಷ್ಟಬುದ್ಧಿಯ ಮಗಳು ವಿಷಯೆ ಅಲ್ಲಿಗೆ ಬಂದಿದ್ದಾಳೆ. ನಿದ್ರಾಮುದ್ರಿತನೇತ್ರನಾದ ಸುಂದರ ಯುವಕನನ್ನು ನೋಡಿ ದ್ದಾಳೆ. ಇವನು ತನಗಾಗಿಯೇ ಸೃಷ್ಟಿಯಾಗಿದ್ದಾನೆಂದು ಕುತೂಹಲದಿಂದ ದಿಟ್ಟಿಸುತ್ತ ನಿಂತಿದ್ದಾಳೆ.

ಒಮ್ಮೆಲೇ ಅವನ ಹತ್ತಿರ ತನ್ನ ತಂದೆಯ ಮುದ್ರೆಯೊತ್ತಿದ ಪತ್ರ ಕಾಣಿಸುತ್ತದೆ. ಹಾ! ತಂದೆ ತನಗಾಗಿ ಈತನನ್ನು ಕಳಿಸಿರಬಹುದೇ? ಮೆಲ್ಲನೆ ಆ ಪತ್ರವನ್ನು ಸೆಳೆದುಕೊಂಡು ತೆರೆದು ನೋಡುತ್ತಾಳೆ. ಅಣ್ಣನಿಗೆ ಬರೆದ ಕಾಗದವದು. ಒಳಗೇನಿದೆ? ಓದುತ್ತಾಳೆ. ಇವನಿಗೆ ವಿಷವನ್ನಿತ್ತು ಮುಗಿಸಿಬಿಡು! ಆಹಾ, ಎಂಥಾ ಕೈತಪ್ಪು. ಇದು ಹೀಗೆ ಉಳಿದರೆ ಅನಾಹುತವಾಗುತ್ತದೆ. ತಂದೆ ವಿಷಯೆಯನ್ನಿತ್ತು ಬಿಡು ಎಂದೇ ಬರೆಯಲು ಹೊರಟಿದ್ದಿರಬೇಕು, ಅಕ್ಷರ ತಪ್ಪಿರಬೇಕು.

ಇದನ್ನು ಈಗಲೇ ತಿದ್ದಬೇಕು ಎಂದುಕೊಳ್ಳುತ್ತಾಳೆ. ಆದರೆ ಉದ್ಯಾನವಿಹಾರಕ್ಕೆ ಬಂದ ಹೆಣ್ಣಿನ ಕೈಲಿ ಲೇಖನಿಯೇ? ಮಶಿದೌತಿಯೇ? ಅವಿಲ್ಲದಿದ್ದರೇನಂತೆ? ಹೆಣ್ಣಿನ ಬುದ್ಧಿ ಪ್ರಸಂಗಾವಧಾನಿ. ವಿಷಯೆಗೆ ತನ್ನದೇ ಕಣ್ಣುಗಳ ಕಾಡಿಗೆಯ ನೆನಪಾಗುತ್ತದೆ. ಮೊನೆಯಾದ ಕಿರುಬೆರಳ ಉಗುರಿನಿಂದ ಕಾಡಿಗೆ ಯನ್ನು ತುಸುವೆ ಕೆರೆದುಕೊಂಡು ಉಗುರ ಮೊನೆಯಿಂದ ಪತ್ರವನ್ನು ತನ್ನ ಮನಬಂದಂತೆ ತಿದ್ದುತ್ತಾಳೆ. ಆಮೇಲೆ ಪತ್ರ ತನ್ನ ಉದ್ದೇಶಿತ ಸ್ಥಾನವನ್ನು ತಲುಪುತ್ತಲೇ ಚಂದ್ರಹಾಸನಿಗೆ ಆಶ್ಚರ್ಯ ವಾಗುವಂತೆ ವಿಷಯೆ ಅವನ ಅಂಗೈಯರಗಿಣಿಯಾಗಿಬಿಡುತ್ತಾಳೆ.

ಒಂದು ನಿಮಿಷ ವಿಷಯೆಯ ಕಣ್ಣಲ್ಲಿ ಕಾಡಿಗೆ ಇರಲಿಲ್ಲ ಎಂದು ಕಲ್ಪಿಸಿಕೊಳ್ಳಿ. ಚಂದ್ರಹಾಸನ ಕಥೆಯೇ ಬೇರೆಯಾಗುತ್ತಿತ್ತು. ಚಂದ್ರಹಾಸನ ಕಥೆ ಓದಿದವರಾರೂ ಕಾಡಿಗೆಯನ್ನು ನಾರಿಯರ ಪ್ರಸಾಧನ ಕರಂಡಕದಿಂದ ಉಚ್ಚಾಟನೆ ಮಾಡಲು ಒಪ್ಪಲಾರರು. ಇದರಷ್ಟು ಮಂಗಲಕರವಾದ ಫೋರ್ಜರಿ, ವಿಶ್ವಸಾಹಿತ್ಯದಲ್ಲೇ ಇಲ್ಲ."

“ನೇಮಿಚಂದ್ರನ ಅರ್ಧನೇಮಿ ಪುರಾಣದಲ್ಲಿ ಕಾಡಿಗೆಯ ಇನ್ನೊಂದು ಕವಿ ಕಥೆ ಬರುತ್ತದೆ. ವಸುದೇವನನ್ನು ಒಲಿದು ಬಂದು ಮದುವೆಯಾದ ರಾಜಪುತ್ರಿ ಒಂದು ದಿನ ನೃತ್ಯಶ್ರಮದಿಂದ ಅವನ ತೋಳಾನಿಕೆಯಲ್ಲಿ ಮಲಗಿರುತ್ತಾಳೆ. ಈ ವಸುದೇವ ರಸಿಕತೆಯಲ್ಲಿ ಕೃಷ್ಣನ ಅಪ್ಪನೇ ಆದರೂ ಭಾಗವತ ಪುರಾಣದ ವಸುದೇವನ ಹಾಗೆ ಸಾಧುಪ್ರಾಣಿಯಲ್ಲ. ಅವನಿಗೆ ಗಂಟು ಬೀಳುವ ವನಿತೆಯ ರೆಷ್ಟೋ, ರಾಜಕುಮಾರಿಯರೆಷ್ಟೋ, ಆದರೆ ಅವನ ಲಂಬಾಣಿ ಮನಸ್ಸನ್ನು ಯಾವ ಹೆಣ್ಣೂ ಚಿರಕಾಲ ಕಟ್ಟಿಹಾಕಲು ಸಮರ್ಥಳಾಗಿರುವುದಿಲ್ಲ.

ತನಗೊರಗಿ ಅನುಪಮ ಸುಂದರಿ ಮಲಗಿದ್ದಂತೆಯೇ ಅವನಿಗೆ ಏಕಾಏಕಿ ಈ ಸ್ಥಳ ಬಿಡಬೇಕೆಂಬ ಅಭಿಲಾಷೆ ಬಂದುಬಿಡುತ್ತದೆ. ಆದರೂ ಅವಳಿಗೆ ಸುದ್ದಿ ಕೊಡದೇನೇ ಹೋಗಿಬಿಡುವಷ್ಟು ಕಟುಕನೂ ಅವನಲ್ಲ. ಆದರೆ ಅವನಿಗೆ ತ್ವರೆ. ಅವಳ ಕಣ್ಣ ಕಾಡಿಗೆ ಬೆವರಿನಲ್ಲಿ ನೆನೆದು ನಸುವೆ ನೀರಾಗಿದ್ದುದನ್ನು ಕಂಡ. ಉಗುರಿನಿಂದ ಅದನ್ನು ತೆಗೆದುಕೊಂಡು ‘ನಾನು ಹೋಗುತ್ತಿದ್ದೇನೆ. ಹೆದರಬೇಡ.

ಬೇಗ ಬಂದುಬಿಡುತ್ತೇನೆ’ ಎಂದು ಕರ್ಣಪತ್ರದ ಮೇಲೆ ಬರೆದುಬಿಟ್ಟು ಅವಳನ್ನು ಹಾಗೆಯೇ ನಿದ್ದೆಮಾಡಗೊಟ್ಟು ಹೋಗಿಬಿಡುತ್ತಾನೆ..." ಎನ್ನುವ ಪಾವೆಂ ಮುಂದುವರಿಸುತ್ತ “ನಾನಿನ್ನೂ ಅರ್ಧನೇಮಿ ಪುರಾಣ ಓದಿ ಮುಗಿಸಿಲ್ಲ. ಎಂದಾದರೂ ವಸುದೇವ ಅವಳ ಮಗ್ಗುಲಿಗೆ ಮರಳುತ್ತಾ ನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಕಾಡಿಗೆಯ ಈ ಉಪಯೋಗ ನನ್ನನ್ನು ಗಾಢ ವಿಷಣ್ಣನಾಗಿ ಮಾಡಿದೆ.

ಚಂದ್ರಹಾಸನ ಕಥೆಯಲ್ಲಿ ವಿಷಯೆ ಅದನ್ನು ಮಿಲನಕ್ಕೆ ಸಾಧನವಾಗಿ ಮಾಡಿಕೊಂಡಳು. ವಸುದೇವ ವಿರಹದ ಸಂದೇಶಕ್ಕೆ ಅದನ್ನು ಬಳಸಿಕೊಂಡ. ಪುರುಷರದು ಕಲ್ಲೆದೆ ಎನ್ನುವುದು ಸುಳ್ಳೇ?" ಎಂದು ಯೋಚಿಸುತ್ತಾರೆ. ಇಂತಿರುವ ಕಾಡಿಗೆಯನ್ನು ಹೆಣ್ಣಿನ ಪ್ರಸಾಧನ ಸಾಮಗ್ರಿಯಾಗಿ ಕಂಡಾಗ ಮಾತ್ರ ಅದನ್ನು ಶ್ರೇಷ್ಠವೆಂದು ಪರಿಗಣಿಸುತ್ತೇವೆ. ಬರೀ ದೀಪದ ಮಸಿ ಎಂದುಕೊಂಡರೆ ಅದು ನಿಕೃಷ್ಟವೇ.

ಕವಿಗಳು ಅದನ್ನೂ ಬಲ್ಲರು. ‘ದೀಪೋ ಭಕ್ಷಯತೇ ಧ್ವಾಂತಂ ಕಜ್ಜಲಂ ಚ ಪ್ರಸೂಯತೇ| ಯದನ್ನಂ ಭಕ್ಷಯೇನ್ನಿತ್ಯಂ ಜಾಯತೇ ತಾದೃಶೀ ಪ್ರಜಾ’ ಅಂತೊಂದು ಸುಭಾಷಿತವಿದೆ. ನಾವೇನು ತಿನ್ನುತ್ತೇವೋ ಅದರಂತೆಯೇ ಆಗುತ್ತೇವೆ ಎಂದು ತಾತ್ಪರ್ಯ. Uಛಿ Zಛಿ ಡಿeZಠಿ ಡಿಛಿ ಛಿZಠಿ ಎಂದು ಇಂಗ್ಲಿಷ್‌ನಲ್ಲೂ ಒಂದು ನುಡಿಗಟ್ಟು ಇದೆಯಷ್ಟೆ? ಇದನ್ನು ವಿವರಿಸಲಿಕ್ಕೆ ಸುಭಾಷಿತವು ಬಳಸಿರುವುದು ದೀಪದ ರೂಪಕವನ್ನೇ. ದೀಪವು ಕತ್ತಲೆಯನ್ನು ತಿನ್ನುತ್ತದೆ.

ಪ್ರತಿಯಾಗಿ ಕಪ್ಪು ಮಸಿಯನ್ನು ಉಂಟುಮಾಡುತ್ತದೆ. ಅಂದರೆ ಏನನ್ನು ತಿನ್ನುತ್ತದೆಯೋ ಅದನ್ನೇ ಉಗುಳುತ್ತದೆ. ಇನ್ನೊಂದು ಸುಭಾಷಿತವು ಕಿವಿಗಳ ಮತ್ತು ಕಣ್ಣುಗಳ ಭಾಗ್ಯ-ಅಭಾಗ್ಯಗಳನ್ನು ಬಣ್ಣಿಸುವ ಭರದಲ್ಲಿ ಕಾಡಿಗೆಯನ್ನು ಕೀಳಾಗಿಯೇ ಕಾಣುತ್ತದೆ. ‘ಸಚ್ಛಿದ್ರೋ ಮಧ್ಯಕುಟಿಲಃ ಕರ್ಣಃ ಸ್ವರ್ಣಸ್ಯ ಭಾಜನಮ್| ಧಿಗ್ದೆ ವನಿಹತಂ ನೇತ್ರಂ ಪಾತ್ರಂ ಕಜ್ಜಲಭಸ್ಮನಃ’ ಎಂಬ ಸುಭಾಷಿತ.

ಇದರ ಭಾವಾರ್ಥ: ರಂಧ್ರವಿದ್ದು ಡೊಂಕು ವಿಚಿತ್ರ ಆಕಾರದ ಕಿವಿಗಳದು ಅದೆಂಥ ಅದೃಷ್ಟ ಅಂತೀರಿ! ಅವುಗಳಿಗೆ ಬಂಗಾರದ ಒಡವೆಗಳಿಂದ ಅಲಂಕಾರ. ಆದರೆ ಇಷ್ಟೊಂದು ಚಂದವಿರುವ, ತೇಜಸ್ಸು ತುಂಬಿಕೊಂಡಿರುವ ಕಣ್ಣುಗಳು ಬರೀ ಮಸಿಯನ್ನು ಬಳಿದುಕೊಂಡು ತೃಪ್ತಿಪಡಬೇಕು. ಧಿಕ್ಕಾರವಿರಲಿ ಇಂಥ ತಾರತಮ್ಯ ನಡೆಸುವ ಭಾಗ್ಯದೇವತೆಗೆ. ಇದೊಂದು ಅನ್ಯೋಕ್ತಿ ರೀತಿಯ ಸುಭಾಷಿತ.

ಉಲ್ಲೇಖಿಸಿರುವುದು ಕಿವಿ ಮತ್ತು ಕಣ್ಣುಗಳನ್ನಾದರೂ ಮನುಷ್ಯರಲ್ಲೂ ಹಾಗೆಯೇ ಅಲ್ಲವೇ ಎಂದು ಕೇಳುವುದು ಉದ್ದೇಶ. ಎಷ್ಟೋ ಸಂದರ್ಭಗಳಲ್ಲಿ ಅನರ್ಹ ನಾಲಾಯಕ್ ಮಂದಿ ಪ್ರಶಸ್ತಿ ಪುರಸ್ಕಾರ ಗಳನ್ನು, ಮಂತ್ರಿಗಿರಿ ಅಥವಾ ಮಂಡಲಿ-ನಿಗಮಗಳ ಅಧ್ಯಕ್ಷಗಿರಿಯನ್ನು, ಆಯಕಟ್ಟಿನ ಅಧಿಕಾರ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಯೋಗ್ಯತೆಯುಳ್ಳವರನ್ನು ಕಡೆಗಣಿಸಲಾಗುತ್ತದೆ. ಅವರ ಪ್ರತಿಭೆಗೆ ಪುರಸ್ಕಾರ ಇಲ್ಲವೆಂದಾಗುತ್ತದೆ.

ಅದೇನೇ ಇರಲಿ. ಕಜ್ಜಳ ಪುರಾಣದ ಸಮಾರೋಪಕ್ಕೆ ಕನ್ನಡದ್ದೊಂದು ಹಳೆಯ ಸುಮಧುರ ಚಿತ್ರಗೀತೆ, ‘ತಂದೆ-ಮಕ್ಕಳು’ ಚಿತ್ರಕ್ಕೆಂದು ಆರ್.ಎನ್.ಜಯಗೋಪಾಲ್ ಬರೆದದ್ದಿದೆಯಲ್ಲ ನೆನಪಿಸಿ ಕೊಳ್ಳೋಣ: “ಕಣ್ಣಿಗೆ ಚಂದ ಕಾಡಿಗೆ ಚಂದ, ಹೆಣ್ಣಿಗೆ ಅಂದ ನಾಚಿಕೆ ಅಂದ... ನೀ ತೆರೆ ನಾಚಿಕೆಯ ತೆರೆ, ನಿನ್ನಂದ ಚೆಂದ ಯಾವನು ತಂದ!"...