ಕೆನಡಾದಲ್ಲಿ ಕಾರು ಹರಿದು 9 ಮಂದಿ ಸಾವು: ಭಯೋತ್ಪಾದಕ ಕೃತ್ಯವಲ್ಲ ಎಂದ ಪೊಲೀಸರು
Vancouver Car Rampage: ಕೆನಡಾದ ವ್ಯಾಂಕೋವರ್ ನಗರದಲ್ಲಿ ಬೀದಿ ಉತ್ಸವ ನಡೆಯುತ್ತಿದ್ದ ವೇಳೆ ಅಡ್ಡಾದಿಡ್ಡಿ ಕಾರು ಓಡಿಸಿ ಸುಮಾರು 9 ಜನರ ಸಾವಿಗೆ ಕಾರಣವಾದ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದು ಭಯೋತ್ಪಾದಕ ದಾಳಿಯಲ್ಲ ಎಂದು ಪೊಲೀಸರು ಇದೀಗ ಸ್ಪಷ್ಟಪಡಿಸಿದ್ದಾರೆ.


ಒಟ್ಟಾವ: ಕೆನಡಾದ ವ್ಯಾಂಕೋವರ್ (Vancouver) ನಗರದಲ್ಲಿ ಬೀದಿ ಉತ್ಸವ ನಡೆಯುತ್ತಿದ್ದ ವೇಳೆ ಅಡ್ಡಾದಿಡ್ಡಿ ಕಾರು ಓಡಿಸಿ ಸುಮಾರು 9 ಜನರ ಸಾವಿಗೆ ಕಾರಣವಾದ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದು ಭಯೋತ್ಪಾದಕ ದಾಳಿಯಲ್ಲ ಎಂದು ಪೊಲೀಸರು ಇದೀಗ ಸ್ಪಷ್ಟಪಡಿಸಿದ್ದಾರೆ. ಶನಿವಾರ (ಏ. 26) ಈ ಘಟನೆ ನಡೆದಿದ್ದು, ಇದು ಉಗ್ರ ಕೃತ್ಯ ಎನ್ನಲಾಗಿತ್ತು. ಇದೀಗ ಪೊಲೀಸರು ಈ ವದಂತಿಯನ್ನು ನಿರಾಕರಿಸಿದ್ದಾರೆ. ಲಾಪು ಲಾಪು ದಿನದ ಅಂಗವಾಗಿ ಆಯೋಜಿಸಿದ್ದ ಬೀದಿ ಉತ್ಸವದ (Lapu Lapu Day Celebrations) ವೇಳೆ ವ್ಯಕ್ತಿಯೊಬ್ಬ ವೇಗವಾಗಿ ಕಾರು ಚಲಾಯಿಸಿ 9 ಮಂದಿಯನ್ನು ಬಲಿ ಪಡೆದುಕೊಂಡಿದ್ದ.
16ನೇ ಶತಮಾನದ ಫಿಲಿಪಿನೋ ವಸಾಹತುಶಾಹಿ ವಿರೋಧಿ ನಾಯಕನನ್ನು ಸ್ಮರಿಸುವ ಹಬ್ಬವಾದ ಲಾಪು ಲಾಪು ದಿನವನ್ನು ಆಚರಿಸಲು ಫಿಲಿಪಿನೋ ಸಮುದಾಯದ ಸದಸ್ಯರು ಒಟ್ಟುಗೂಡಿದಾಗ ಶನಿವಾರ ರಾತ್ರಿ 8 ಗಂಟೆಯ ವೇಳೆಗೆ (ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 3 ಗಂಟೆ) ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾ ದುರಂತದ ಎಕ್ಸ್ ಪೋಸ್ಟ್:
Vehicle hitting crowd in Vancouver 'not an act of terrorism,' police say.
— Boar News (@PhamDuyHien9) April 27, 2025
Festival killer suspect looks dazed. pic.twitter.com/GslawbdSRo
ಎಕ್ಸ್ ಖಾತೆಯಲ್ಲಿ ಮಾಹಿತಿ
"ಕಳೆದ ರಾತ್ರಿ ನಡೆದ ಲಾಪು ಲಾಪು ಉತ್ಸವದ ವೇಳೆ ವ್ಯಕ್ತಿಯೊಬ್ಬ ಜನಸಮೂಹದ ನಡುವೆ ವಾಹನ ಚಲಾಯಿಸಿದ ನಂತರ 9 ಜನರು ಮೃತಪಟ್ಟಿದ್ದಾರೆʼʼ ಎಂದು ಎಂದು ಪೊಲೀಸರು ಎಕ್ಸ್ನಲ್ಲಿ ದೃಢಪಡಿಸಿದ್ದಾರೆ. ಘಟನಾ ಸ್ಥಳದಿಂದ 30 ವರ್ಷದ ಸ್ಥಳೀಯ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವ್ಯಾಂಕೋವರ್ ಪೊಲೀಸರು ವಿವರಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಎಸ್ಯುವಿಯನ್ನು ಜನರಿಂದ ತುಂಬಿದ ಮತ್ತು ಆಹಾರ ಟ್ರಕ್ಗಳಿಂದ ಸಾಲುಗಟ್ಟಿದ ಬೀದಿಯಲ್ಲಿ ಓಡಿಸಿ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಚಾಲಕ ಏಷ್ಯಾ ಮೂಲದ ವ್ಯಕ್ತಿ ಎನ್ನಲಾಗಿದ್ದು, ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Flood alert: ಏಕಾಏಕಿ ಝೇಲಂ ನದಿ ನೀರು ಬಿಟ್ಟ ಭಾರತ ; ನೀರಿಗಾಗಿ ಅಂಗಲಾಚುತ್ತಿದ್ದ ಪಾಕಿಸ್ತಾನದಲ್ಲಿ ಪ್ರವಾಹ
ಶಂಕಿತ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಶಂಕಿತನನ್ನು ಸಾರ್ವಜನಿಕರು ಸೆರೆ ಹಿಡಿದಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಹೊರ ಬಂದಿರುವ ವಿಡಿಯೊದಲ್ಲಿ ಹಾನಿಗೊಳಗಾದ ಕಪ್ಪು ಎಸ್ಯುವಿ ಅವಶೇಷಗಳಿಂದ ತುಂಬಿದ ಬೀದಿಯಲ್ಲಿ ನಿಂತಿರುವುದು ಕಾಣಬಹುದು. ಜತೆಗೆ ಮೃತದೇಹಗಳು ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಘಟನೆಯ ಭೀಕರತೆಗೆ ಸಾಕ್ಷಿ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.
ಸಂತಾಪ ಸೂಚಿಸಿದ ಪ್ರಧಾನಿ
ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.