Basavaraj Bommai: ಪತ್ರಿಕೋದ್ಯಮ ಜನಪರ ಕೆಲಸ ಮಾಡುವುದು ಮುಖ್ಯ: ಬಸವರಾಜ ಬೊಮ್ಮಾಯಿ
Basavaraj Bommai: ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ. ರಾಜಕೀಯ ಸುದ್ದಿ ಇಲ್ಲದೆ ಇದ್ದರೆ ಪತ್ರಿಕೆ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೇ ಆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


ಬೆಂಗಳೂರು: ಪತ್ರಿಕೋದ್ಯಮ ಬಹಳ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನ ಸಮುದಾಯದ ಪರ ಕೆಲಸ ಮಾಡುವುದು ಅಷ್ಟೇ ಮುಖ್ಯ. ಅದನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಏರ್ಪಡಿಸಿದ್ದ ಡಾ. ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನ್ನ ಆತ್ಮೀಯ ಸ್ನೇಹಿತನಿಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಖಾದ್ರಿ ಶಾಮಣ್ಣ ಅವರು ಬಹಳ ಪ್ರಭಾವಶಾಲಿ ಆಗಿದ್ದರು. ಅವರು ಬದುಕಿದ್ದಾಗ ಮುಂದೆ ಬರುವ ಸರ್ಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದರು ಎಂದರು. ಪತ್ರಿಕೋದ್ಯಮ ಬಹಳ ಕ್ಲಿಷ್ಟವಾಗಿರುತ್ತದೆ. ಕೆಲವು ಸಾರಿ ಪರ ಮತ್ತು ವಿರೋಧ ಅಭಿಪ್ರಾಯಗಳು ಬಂದಾಗ ಸತ್ಯದ ಮೇಲೆ ನಿಲುವು ತೆಗೆದುಕೊಂಡಾಗ ಅದಕ್ಕೆ ಮಹತ್ವ ಬರುತ್ತದೆ. ಕೆಲವು ಸಾರಿ ತಾವು ತೆಗೆದುಕೊಂಡ ನಿಲುವಿನ ವಿರುದ್ಧ ತೆಗೆದುಕೊಳ್ಳುವ ಸಂದರ್ಭ ಬರಬಹುದು ಆಗ ಸ್ಪಷ್ಟವಾಗಿ ಗಟ್ಟಿಯಾಗಿ ನಿಲುವು ತೆಗೆದುಕೊಳ್ಳಬೇಕು. ಖಾದ್ರಿ ಶಾಮಣ್ಣ ಅಂತಹ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು. ಅಂತಹವರ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. 1998ರಲ್ಲಿ ನಾನು ಸ್ಥಳೀಯ ಸಂಸ್ಥೆಯಿಂದ ಚುನಾವಣೆ ನಿಂತಿದ್ದೆ, ನಮ್ಮ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿ ನಿಂತಿದ್ದರು. ಆಗ ಎಲ್ಲ ಪತ್ರಿಕೆಯವರು 24 ದಿನ ನನ್ನ ವಿರುದ್ದ ಬರೆದಿದ್ದರು. ಒಬ್ಬರು ಪತ್ರಕರ್ತೆ ಸನ್ ಆಸ್ ಸೆಟ್ ಅಂತ ಬರೆದಿದ್ದರು. ಆದರೆ, ನಾನು ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೆ ಎಂದು ನೆನಪಿಸಿಕೊಂಡರು.
ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ. ರಾಜಕೀಯ ಸುದ್ದಿ ಇಲ್ಲದೆ ಇದ್ದರೆ ಪತ್ರಿಕೆ ಆಕರ್ಷಣೆ ಇರುವುದಿಲ್ಲ. ಅದೇ ರೀತಿ ರಾಜಕಾರಣಿಯ ಸುದ್ದಿಗಳು ಪತ್ರಿಕೆಯಲ್ಲಿ ಬರದಿದ್ದರೇ ಆ ರಾಜಕಾರಣಿಗೆ ಅಸ್ತಿತ್ವವೇ ಇಲ್ಲ ಎಂದು ತಿಳಿಸಿದರು.
ಯೋಗ್ಯರಿಗೆ ಪ್ರಶಸ್ತಿ
ಗುರುರಾಜ್ ಅವರು ಉತ್ತರ ಕರ್ನಾಟಕದ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಯೋಗ್ಯ ಪ್ರಶಸ್ತಿ ದೊರೆತಿದೆ. ಅವರಿಗೆ ಅಭಿನಂದನೆ. ಅವರು ನನ್ನಿಂದ ಪ್ರಶಸ್ತಿ ಸ್ವೀಕರಿಸುವ ಆಸೆ ವ್ಯಕ್ತಪಡಿಸಿರುವುದು ನನ್ನ ಮನದಲ್ಲಿ ಯಾವಾಗಲೂ ಉಳಿಯುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Federal Bank Recruitment 2025: ಫೆಡರಲ್ ಬ್ಯಾಂಕ್ನಲ್ಲಿದೆ ವಿವಿಧ ಹುದ್ದೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಕಾರ್ಯಕ್ರಮದಲ್ಲಿ ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ. ಕೃಷ್ಣ, ಆಸ್ಸಾಂ ಕೇಂದ್ರಿಯ ವಿವಿ ನಿವೃತ್ತ ಸಮ ಕುಲಪತಿ ಪ್ರೊ. ಕೆ.ವಿ. ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಕೂಡ್ಲಿ ಗುರುರಾಜ್ ಹಾಗೂ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಎಚ್.ಆರ್. ಶ್ರೀಶ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಹಾಜರಿದ್ದರು.