MLA Pradeep Eshwar: ವಿರೋಧಿಗಳ ವಿರುದ್ಧ ಒಂದು ಗಂಟೆಗೂ ಹೆಚ್ಚುಕಾಲ ವಾಗ್ದಾಳಿ ನಡೆಸಿ ಅಬ್ಬರಿಸಿದ ಪ್ರದೀಪ್
ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಪಿತೂರಿ ಸಭೆಗಳನ್ನು ನಡೆಸಿರುವ ಮತ್ತು ಭಾಗವಹಿಸಿರುವ ಕಾಂಗ್ರೆಸ್ನ ಕೆಲವು ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರೂ ಅವರನ್ನು ನನ್ನ ಹತ್ತಿರಕ್ಕೂ ಸೇರಿಸುವುದಿಲ್ಲ ಎಂದು ತಮ್ಮ ವಿರೋಧಿಗಳ ವಿರುದ್ಧ ತೀವ್ರವಾಗಿ ಹರಿಹಾಯ್ದರು

ಚಿಕ್ಕಬಳ್ಳಾಪುರದ ಖಾಸಗಿ ಹೋಟೆಲ್ನಲ್ಲಿ ನಡೆದ ಆಪ್ತರ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದರು.

ಹೋಟೆಲ್ ಶ್ರೀಸಿಯೆರಾದಲ್ಲಿ ಬೆಂಬಲಿಗ ಕಾರ್ಯಕರ್ತರ ಸಭೆ ನಡೆಸಿದ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ನಗರ ಹೊರವಲಯದ ಶ್ರೀಸಿಯೇರಾ ಹೋಟೆಲ್ನಲ್ಲಿ ಭಾನುವಾರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣಾ ಪೂರ್ವಭಾವಿ ಸಭೆಯ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ತಮ್ಮ ಬೆಂಬಲಿಗರ ಸಭೆಯನ್ನು ಶಾಸಕ ಪ್ರದೀಪ್ ಈಶ್ವರ್ ನಡೆಸಿದರು.
ಈ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಪಿತೂರಿ ಸಭೆಗಳನ್ನು ನಡೆಸಿರುವ ಮತ್ತು ಭಾಗವಹಿಸಿರುವ ಕಾಂಗ್ರೆಸ್ನ ಕೆಲವು ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರೂ ಅವರನ್ನು ನನ್ನ ಹತ್ತಿರಕ್ಕೂ ಸೇರಿಸುವುದಿಲ್ಲ ಎಂದು ತಮ್ಮ ವಿರೋಧಿಗಳ ವಿರುದ್ಧ ತೀವ್ರವಾಗಿ ಹರಿಹಾಯ್ದರು.
ನಿಮ್ಮ ಮನೆಗಳಲ್ಲಿ ಯಾರಾದರು ಸತ್ತರೆ ಕನಿಷ್ಟ 50 ಜನರು ಬರುವುದಿಲ್ಲ. ಅದು ಹೇಗೆ ಐದು ಸಾವಿರ ಮತ ಹಾಕಿಸುತ್ತೀರಾ? 50 ರಿಂದ 200 ಮತ ಹಾಕಿಸಲಷ್ಟೇ ಇವರು ಶಕ್ತರು. 50 ಸಾವಿರ ಮತ ಹಾಕಿಸಲು ಸಾಧ್ಯವೇ? ರಾಜಕಾರಣದಲ್ಲಿ ವಾಸ್ತವ ಅರಿತುಕೊಳ್ಳಬೇಕು. ಆ ವಾಸ್ತವ ನನಗೆ ಚೆನ್ನಾಗಿ ಅರಿವಿದೆ ಎಂದು ವಿರೋಧಿಗಳಿಗೆ ತಿವಿದರು.
ಇದನ್ನೂ ಓದಿ: Chikkaballapur Crime: ಲಾಂಗ್ ಮೂಲಕ ಹುಟ್ಟು ಹಬ್ಬದ ಕೇಕ್ ಕಟ್: ಆಟೋ ಚಾಲಕ ಬಂಧನ
ಟಿಎಪಿಸಿಎಂಎಸ್ ಚುನಾವಣೆಯಲ್ಲಿ 1 ಕೋಟಿ ರೂಪಾಯಿಗಳನ್ನು ಕೇಳಿದರು. ಆದರೆ ಅವರು ಏನನ್ನೂ ಮಾಡಲಿಲ್ಲ. ಸುಮ್ಮನೆ ದಾರಿತಪ್ಪಿಸಿದರು. ನನ್ನ ಭಯಪಡಿಸಲು ಸಾಧ್ಯವಿಲ್ಲ. ನಾನು ಈ ಹಿಂದಿನ ಮೂರೂ ಚುನಾವಣೆಗಳನ್ನು ಮಾಡಿಲ್ಲ. ಮುಂದೆ ಬರುವ ನಗರಸಭೆ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಾನೇ ನಡೆಸುವೆ.ನನ್ನ ತಾಕತ್ತು ತೋರಿಸುವೆ ಎಂದರು.
ನಂದಿಯ ಲೀಡರ್ ನಂದಿಯಲ್ಲಿ ರಾಜಕೀಯ ಮಾಡಬೇಕು. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಮಾಡಲು ಬಿಡುವುದಿಲ್ಲ. ಈ ಹಿಂದಿನ ಶಾಸಕರು ಭಯ ಬೀಳುತ್ತಿದ್ದರೇನೊ ನಾನು ಭಯ ಬೀಳುವುದಿಲ್ಲ. ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ನಡುವೆ ಕಿತ್ತಾಡಬೇಕು. ಮಾಧ್ಯಮಗಳ ಮುಂದೆ ಹೋದರೆ ಸುಮ್ಮನೆ ಇರುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನನ್ನ ನೇತೃತ್ವದಲ್ಲಿ ನಡೆಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ರಾಜಕೀಯದಲ್ಲಿ ಸಿದ್ಧಾಂತವಿದೆ. ಬೂತ್ ಮಟ್ಟದಲ್ಲಿ ಐದು ಮಂದಿಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಲಾಗುವುದು. ನಿಮ್ಮ ಎಲ್ಲ ಕಷ್ಟಗಳಿಗೆ ಜೊತೆಯಲ್ಲಿರುವೆ. ಮುಂದಿನ ನಗರಸಭೆ ಚುನಾವಣೆಯಲ್ಲಿ ಯಾವುದೇ ಪ್ರಭಾವಿಗಳಿಗೆ ಮಣಿದು ಬಿ.ಫಾರಂ ನೀಡುವುದಿಲ್ಲ. ವಾರ್ಡ್ಗಳಿಗೆ ಭೇಟಿ ನೀಡಿದಾಗ ಅನುದಾನ ಕೇಳುತ್ತಾರೆ. ಆದ ಕಾರಣ ಎಲ್ಲ ವಾರ್ಡ್ಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ನಗರಸಭೆಯಲ್ಲಿ ಬೇರೆ ಪಕ್ಷದ ಸದಸ್ಯರು ಇದ್ದಾರೆ. ಮುಂದೆ ನಮ್ಮ ಪಕ್ಷದವರು ಅಧಿಕಾರಕ್ಕೆ ಬಂದಾಗ ಪ್ರತಿ ವಾರ್ಡ್ಗೆ 5 ಕೋಟಿ ರೂಗಳ ಅನುದಾನ ನೀಡುವೆ. ನಾನು ಶಾಸಕನಾದ ಮೇಲೆ ಪ್ರತಿ ಮನೆಗೂ ಭೇಟಿ ನೀಡಿ ಅವರಿಗೆ ಸೇವೆ ನೀಡಿದ್ದೇನೆ. ನಿಜವಾಗಿ ಪಕ್ಷಕ್ಕೆ ಕೆಲಸ ಮಾಡುವವರು ಎಲ್ಲೊ ಇದ್ದಾರೆ. ನನ್ನ ಹತ್ತಿರ ಬಂದು ಸುಮ್ಮನೆ ಬಿಲ್ಡಪ್ ಕೊಡಬಾರದು. ನಿಮ್ಮ ವಾರ್ಡ್ಗಳನ್ನು ನೋಡಿಕೊಳ್ಳಬೇಕು ಅಷ್ಟೇ ಎಂದು ಮುಖಂಡರಿಗೆ ಖಡಕ್ ಸೂಚನೆ ನೀಡಿದರು.
ಹೊಸದಾಗಿ ಸಂಘಟನೆ ಮಾಡೋಣ. ನನಗೆ ನೇರವಾಗಿ ಕರೆ ಮಾಡಿ. ನಿಮ್ಮನ್ನು ನಾನು ಕಾಪಾಡಿ ಕೊಳ್ಳುವೆ. ಪಕ್ಷವನ್ನು ಸಮರ್ಥಿಸಿಕೊಳ್ಳದವರು ನಾಯಕರಾಗುವುದಿಲ್ಲ. ಮುಂದಿನ ಚುನಾವಣೆ ಗಳಲ್ಲಿ ನಾನೇ ಟಿಕೆಟ್ ನೀಡುವೆ ಎಂದು ವಿರೋಧಿಗಳಿಗೆ ಟಾಂಟ್ ನೀಡಿದರು.
ಸಂಸದರ ಚುನಾವಣೆಯಲ್ಲಿ ವೀರಪ್ಪನೊಯ್ಲಿ ಅವರಿಗೆ ಟಿಕೆಟ್ ನೀಡಿದ್ದರೆ ಗೆಲ್ಲುತ್ತಿದ್ದರು. ರಕ್ಷಾ ರಾಮಯ್ಯ ಕೈಹಿಡಿದು ಕೇಳಿಕೊಂಡೆ ನೀವು 10 ಮಂದಿ ನಾಯಕರನ್ನು ನಂಬಿದರೆ ಒಳೇಟು ಹಾಕು ತ್ತಾರೆ. ನನಗೆ ಜವಾಬ್ದಾರಿ ನೀಡಿದ್ದರೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದೆ. ಬೆಂಗಳೂರು ಬಾಯ್ಸ್ ರಕ್ಷಾ ರಾಮಯ್ಯ ಅವರನ್ನು ಕರೆದುಕೊಂಡು ಬಂದು ಹಾಳು ಮಾಡಿದರು. ರಕ್ಷಾ ಅವರ ಬಳಿ ಹಣವಿತ್ತು. ಟಿಕೆಟ್ ನೀಡಿದರೂ ಗೆಲ್ಲಲಿಲ್ಲ. ಇವರ ಬದಲಿಗೆ ಮೊಯ್ಲಿ ಅವರಿಗೆ ನೀಡಿದ್ದರೆ ಗೆಲ್ಲುತ್ತಿದ್ದರು ಎಂದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮುಸ್ಲಿಂ ಪ್ರಾಬಲ್ಯವಿದೆ. ಮುಂಬರುವ ನಗರಸಭೆ ಚುನಾವಣೆಯಲ್ಲಿ ೨೮ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಕಾಣಲಿದ್ದು ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ನನ್ನ ಸಮುದಾಯ ನನಗೆ ಪೂರ್ಣಪ್ರಮಾಣದಲ್ಲಿ ಮತಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮುಸ್ಲಿಂ ಸಮುದಾಯ 100ಕ್ಕೆ 100ರಷ್ಟು ನನಗೇ ಮತಹಾಕಿದ್ದಾರೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಯಲುವಳ್ಳಿ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಮುಖಂಡರಾದ ಸು.ಧಾ ವೆಂಕಟೇಶ್, ಕೋಲಾಟ್ಲು ರಾಮಚಂದ್ರ, ಕೆ.ಎಲ್.ಶ್ರೀನಿವಾಸ್, ಡ್ಯಾನ್ಸ್ ಶ್ರೀನಿವಾಸ್, ವೆಂಕಟ್, ಪಕ್ಷದ ಪದಾಧಿಕಾರಿಗಳು, ಮುಖಂಡರು. ಬೆಂಬಲಿಗರು ಇದ್ದರು.