Mangalore News: ಸೋಶಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದಕ ಸಂದೇಶ; 6 ಕಿಡಿಗೇಡಿಗಳ ಬಂಧನ
Mangalore News: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಾಕಿ, ಸಮಾಜದ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಆರೋಪದಲ್ಲಿ ಆರು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿವಿಧ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಮುಂದುವರಿದಿದೆ.


ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಾಕಿ, ಸಮಾಜದ ನೆಮ್ಮದಿಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ (Mangalore News) ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಹೆಜಮಾಡಿಯ ಮೊಹಮ್ಮದ್ ಅಸ್ಲಾಂ, ಸುರತ್ಕಲ್ ಕಾಟಿಪಳ್ಳದ ಚೇತನ್, ನಿತಿನ್ ಅಡಪ, ಫರಂಗಿಪೇಟೆಯ ರಿಯಾಜ್ ಇಬ್ರಾಹಿಂ, ಬೆಂಗ್ರೆಯ ಜಮಾಲ್ ಝಾಕೀರ್ ಮತ್ತು ಹಳೆಯಂಗಡಿಯ ಗುರುಪ್ರಸಾದ್ ಬಂಧಿತರು.
ಸೌದಿ ಅರೇಬಿಯಾದಿಂದ team_jokerzzz._ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಹೆಜಮಾಡಿ ನಿವಾಸಿ ಮೊಹಮ್ಮದ್ ಅಸ್ಲಾಂ ಎಂಬಾತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ, ಬಂಧಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮುಸ್ಲಿಂ ಹೆಸರಿನ ಸಿಮ್ ಕಾರ್ಡ್ ಬಳಸಿಕೊಂಡು team_karna_surathkal ಎಂಬ ಇನ್ಸ್ಟಾಗ್ರಾಂ ಪೇಜ್ ತೆರೆದಿದ್ದು, ಈ ಪೇಜ್ ನಲ್ಲಿ ಚೆನ್ನಪ್ಪ ಅಲಿಯಾಸ್ ಮುತ್ತು ಸುರತ್ಕಲ್ ಎಂಬಾತ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ ಆರೋಪದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸ್ನಲ್ಲಿ ಸುರತ್ಕಲ್ ಇಡ್ಯಾ ಗ್ರಾಮದ ಚೇತನ್ ಬಂಗೇರ(20) ಮತ್ತು ಹಳೆಯಂಗಡಿ ಚೇಳ್ಯಾರು ನಿವಾಸಿ ನಿತಿನ್ ಅಡಪ(23) ಎಂಬವರನ್ನು ಬಂಧಿಸಲಾಗಿದೆ.
ಸೌದಿ ಅರೇಬಿಯಾದಿಂದ Beary_royal-nawab ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ ಆರೋಪದಲ್ಲಿ ಬರ್ಕೆ ಪೊಲೀಸ್ ಠಾಣೆ ಮತ್ತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಫರಂಗಿಪೇಟೆಯ ರಿಯಾಜ್ ಇಬ್ರಾಹಿಂ ಎಂಬಾತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ, ಬಂಧಿಸಲಾಗಿದೆ.
Troll_bengare_ro_makka ಎಂಬ ಇನ್ಸ್ಟಾಗ್ರಾಂ ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕುಳೂರು ಕಸಬಾ ಬೆಂಗ್ರೆಯ ಜಮಾಲ್ ಝಾಕೀರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Murder Case: ಆನೇಕಲ್ನಲ್ಲಿ ಭೀಕರ ಕೃತ್ಯ, ಹೆಂಡತಿಯ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಗಂಡ!
ಫೇಸ್ಬುಕ್ ಖಾತೆಯ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಗುರು ಪ್ರಸಾದ್ ಹಳೆಯಂಗಡಿ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ವಿಶೇಷ ತಂಡಗಳಿಂದ ಮುಂದುವರಿಸಲಾಗಿದೆ.