ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು
ಪ್ರಶಸ್ತಿ ಘೋಷಣೆಯಾಗುವವರೆಗೂ ದೀಪಾಭಾಸ್ತಿಯ ಬಗ್ಗೆ ತಿಳಿದಿದ್ದವರು ಕಡಿಮೆ. ಬಹುತೇಕರಿಗೆ ಆಕೆ ಮಡಿಕೇರಿ ಮೂಲದವರು ಎಂದೇ ಗೊತ್ತಿರಲಿಲ್ಲ. ದೀಪಾ ಭಾಸ್ತಿ ಎಂಬ 42 ವರ್ಷದ ಲೇಖಕಿ ಪಾಲಿಗೆ ತವರಿನ ಮಡಿಕೇರಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಾನುಮುಷ್ತಾಕ್ ಅವರ 6 ಕಥಾ ಸಂಕಲನಗಳಿಂದ 12 ಕತೆಗಳನ್ನು ಆರಿಸಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.


ಅನಿಲ್ ಹೆಚ್ ಟಿ., ಮಡಿಕೇರಿ
ದೀಪಾ ಮನೆ ಮಂದೆ ಓದುಗರ ಜಂಗುಳಿ
ಅಭಿಮಾನಿಗಳ ಅಭಿನಂದನೆ ಮಹಾಪೂರ
‘ಮಿನುಗು ತಾರೆ; ಎಂಬ ಹೆಸರಿನ ಮಡಿಕೇರಿಯ ಗುಡ್ಡದ ಮೇಲಿನ ಆ ಮನೆಯಲ್ಲಿ ನಿಜಕ್ಕೂ ಈಗ ತಾರಾ ಮೆರುಗಿದೆ. ಮಂಜಿನ ನಗರಿ ಮಡಿಕೇರಿ ಯಲ್ಲಿ ಸಾಹಿತ್ಯದ ಹೊಳಪು ಹೊಳೆಯುತ್ತಿದೆ. ದೀಪಾ ಭಾಸ್ತಿ ಎಂಬ ಮಡಿಕೇರಿ ಲೇಖಕಿಯ ಇಂಗ್ಲೀಷ್ ಭಾಷಾಂತರದ ಕೃತಿ ‘ಹಾರ್ಟ್ ಲ್ಯಾಂಪ್’ಗಾಗಿ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಇಂಗ್ಲಿಷ್ ಅನುವಾದಕ್ಕಾಗಿ ಸಲ್ಲುವ ‘ಬುಕರ್ ಪ್ರಶಸ್ತಿ’ ಲಭಿಸಿದಾಕ್ಷಣ ವಿಶ್ವವ್ಯಾಪಿ ಮಡಿಕೇರಿಯ ಹೆಸರೂ ಪ್ರಶಸ್ತಿಯೊಂದಿಗೆ ತಳುಕು ಹಾಕಿಕೊಂಡಿತ್ತು.
ಪ್ರಶಸ್ತಿ ಘೋಷಣೆಯಾಗುವವರೆಗೂ ದೀಪಾಭಾಸ್ತಿಯ ಬಗ್ಗೆ ತಿಳಿದಿದ್ದವರು ಕಡಿಮೆ. ಬಹುತೇಕರಿಗೆ ಆಕೆ ಮಡಿಕೇರಿ ಮೂಲದವರು ಎಂದೇ ಗೊತ್ತಿರಲಿಲ್ಲ. ದೀಪಾ ಭಾಸ್ತಿ ಎಂಬ 42 ವರ್ಷದ ಲೇಖಕಿ ಪಾಲಿಗೆ ತವರಿನ ಮಡಿಕೇರಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಾನು ಮುಷ್ತಾಕ್ ಅವರ 6 ಕಥಾ ಸಂಕಲನಗಳಿಂದ 12 ಕತೆಗಳನ್ನು ಆರಿಸಿ ಇಂಗ್ಲಿಷ್ಗೆ ಅನುವಾ ದಿಸಿದ್ದಾರೆ.
ಶಾಸಕ ಅಭಿನಂದನೆ
ದೀಪಾ ಭಾಸ್ತಿ ಮನೆಗೆ ಮರಳಿದ್ದಾರೆ. ಮಡಿಕೇರಿಗೆ ಬಂದಿಳಿದಿದ್ದಾರೆ. ಮಂಜು, ಗಾಳಿಯ ಆಹ್ಲಾದಕರ ಸ್ವಾಗತ ದೊರಕಿದೆ. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಸರಕಾರದ ಪರವಾಗಿ ದೀಪಾರನ್ನು ಗೌರವಿಸಿ ಆಕೆ ಮನೆಗೆ ತೆರಳುವ ಮಣ್ಣಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿಸಿ ಕೊಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Naveen Sagar Column: ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ
ಮಾತಾಡದ ಮಹಾಮೌನಿ
ಹಾಗೆ ನೋಡಿದರೆ, ದೀಪಾಭಾಸ್ತಿ ಮಡಿಕೇರಿಯಲ್ಲಿಯೇ ಹುಟ್ಟಿ ಇಲ್ಲಿನ ಕೊಡಗು ವಿದ್ಯಾಲಯದಲ್ಲಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರೂ ಬಹುತೇಕರಿಗೆ ದೀಪಾಳ ಅಗಾಧ ಪ್ರತಿಭೆಯ ಅರಿವಿರಲಿಲ್ಲ. ತನ್ನ ಪಾಡಿಗೆ ತಾನಿದ್ದು ಬಿಡುವ ಜಾಯಮಾನದ ದೀಪಾ, ಹೊರಗೆ ಹೆಚ್ಚಾಗಿ ಕಾಣಿಸಿಕೊಂಡವಳಲ್ಲ. ಸಮಾರಂಭಗಳಿಗೆ ಬಂದರೂ ಮೌನವನ್ನೇ ಆಭರಣವಾಗಿಸಿ ಕೊಂಡು ಇದ್ದು ಬಿಡುತ್ತಿದ್ದರು. ಯಾವಾಗ ಬೂಕರ್ ಪ್ರಶಸ್ತಿ ಈ ಮಹಾ ಮೌನಿಗೆ ಪ್ರಕಟವಾಯಿತೋ ಮಡಿಕೇರಿಯ ದೀಪಾ ಎಲ್ಲ ಕಡೆ ಮಿನುಗಿದಳು.
‘ದೀಪಾ.. ಸಾರ್.. ಈಕೆ ನಮ್ ಶಾಪ್ಗೆ ಬರ್ತಾ ಇದ್ದರು. ದೀಪಾ ಇವರೇನಾ.. ಅಯ್ಯೋ ನಮ್ಮ ಏರಿಯಾದಲ್ಲಿಯೇ ಇದ್ದಾರಲ್ವ? ದೀಪಾ? ರೈಟರ್ ಅಂತಾನೇ ಗೊತ್ತಿರಲಿಲ್ಲ’ ಎಂಬ ಉದ್ಘಾರಗಳು ಕೇಳಿ ಬರತೊಡಗಿವೆ. ದೀಪಾ ಅತ್ಯುತ್ತಮ ಇಂಗ್ಲೀಷ್ ಲೇಖಕಿ ಎಂದು ಗೊತ್ತಾಗಲು ಆಕೆಗೆ ಬೂಕರ್ ಬರ ಬೇಕಾಯಿತು...!
ಪರಿಸರ ಸ್ನೇಹಿ ಕುಟೀರ
ಚೆಟ್ಟೀರ ನಾಣಯ್ಯ ಅವರ ಜತೆ ದಾಂಪತ್ಯ ಜೀವನ ನಡೆಸುತ್ತಿರುವ ದೀಪಾಳ ಮಡಿಕೇರಿಯ ಮನೆ ನೋಡುವುದೇ ಒಂದು ಚೆ ಂದ. ಗುಡ್ಡದ ಮೇಲೆ ಹಸಿರಿನ ಸುತ್ತ ಇಟ್ಟಿಗೆ ಬಳಸಿ ಪರಿಸರ ಸ್ನೇಹಿ ಕುಟೀರ ಕಟ್ಟಿಕೊಂಡು ಸಾಹಿತ್ಯದ ಬೆಚ್ಚನೆ ಸುಖ ಅನುಭವಿಸುತ್ತಿದ್ದಾರೆ. ಪುಟ್ಟ ಕೋಣೆಯಲ್ಲಿ ಕುಳಿತು ‘ಹಾರ್ಟ್ ಲ್ಯಾಂಪ್’ ಕೃತಿ ಅನುವಾದಿಸಿದ ದೀಪಾಳ ಶ್ರಮ ಸಾರ್ಥಕವಾಗಿದೆ. ಯಾರೂ ನಿರೀಕ್ಷಿಸಿ ರದ ರೀತಿ ದೀಪಾ ಭಾರತದ ಸಾಹಿತ್ಯ ಕೀರ್ತಿ ವಿಶ್ವವ್ಯಾಪಿ ಸಾರಿದ್ದಾರೆ. ಅನುದಾದಿತ ಕೃತಿಯ ನಿಜವಾದ ಶಕ್ತಿ ಏನೆಂಬುದನ್ನು ಜಗತ್ತಿನ ಮುಂದೆ ಬೆಳಗಿದ್ದಾರೆ.
ಬುಕರ್ನ ಅಹಂ ಇಲ್ಲ
ಮಡಿಕೇರಿಯ ದೀಪಾಳ ಮನೆ ಮಂದೆ ಜಂಗುಳಿಯಿದೆ. ಗೊತ್ತಿದ್ದವರು, ಗೊತ್ತಿಲ್ಲದವರು ಎಲ್ಲರೂ ಶಾಲು, ಹಾರ ಹಿಡಿದು, ಹಣ್ಣಿನ ಬುಟ್ಟಿಯೊಂದಿಗೆ ತೆರಳಿ ದೀಪಾಳಿಗೆ ನೀಡಿ ಫೋಟೋ, ಸೆಲ್ಫಿ ತೆಗೆದು ಕೊಂಡು ಸಂಭ್ರಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮೊದಲು ಹೇಗಿದ್ದಳೋ ಹಾಗೇ, ಒಂದಿ ನಿತು ಬದಲಾಗದಂತೆ, ಬುಕರ್ ಬಂದದ್ದು ತನಗೆ ಅಲ್ಲವೇ ಅಲ್ಲ ಎಂಬಂತೆ ಸ್ಥಿತಪ್ರಜ್ಞೆ ಕಾಯ್ದು ಕೊಂಡಿದ್ದಾರೆ.
ಮತ್ತೆ ಲಂಡನ್ಗೆ
ಈ ತಿಂಗಳ ಎರಡನೇ ವಾರ ದೀಪಾ ಲಂಡನ್ಗೆ ಮತ್ತೆ ಹಾರಿ ಹೋಗಲಿದ್ದಾರೆ. ಕೃತಿ ಕುರಿತ ವಿಚಾರ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿಯ ಜ್ಞಾನದೀಪ ಬೆಳಗಲಿದ್ದಾರೆ. ಇನ್ನು ಅವರ ಮುಂದಿರುವ ಸಾಹಿತ್ಯದ ಸಾಹಸ ಗಳೇನು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದೆ. ಹೆಗ್ಗೋಡಿನ ಸಮುದ್ಯತಾ ವೆಂಕಟರಾಮು ಅವರ ‘ಇದೇ ಅಂದರೆ ಇದೆ, ಇಲ್ಲ ಅಂದರೆ ಇಲ್ಲ’ ಎಂಬ ಕೃತಿಯನ್ನು ಇಂಗ್ಲೀಷ್ಗೆ ಅನುವಾದ ಮಾಡುತ್ತಿದ್ದಾರೆ. ಜೊತೆಗೆ ತನ್ನದೇ ಇಂಗ್ಲೀಷ್ ಕೃತಿ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಬರೆದದ್ದನ್ನೂ ಓದಲಾಗದಷ್ಟು ಸಮಯ ವಿಲ್ಲದಂತೆ ಮನೆಗೆ ಆಗಮಿಸುವ ಸಾಹಿತ್ಯ ಪ್ರೇಮಿಗಳ, ಹಿತೈಷಿಗಳ ಅಭಿನಂದನೆಯ ಸಡಗರದಲ್ಲಿ ಮುಳುಗಿದ್ದಾರೆ.
ಮಿನುಗು ತಾರೆ ಮನೆ
ದೀಪಾ ಅವರ ಅಜ್ಜ ಅಂದಿನ ಕಾಲದಲ್ಲಿ ಮಡಿಕೇರಿಯ ಖ್ಯಾತ ವೈದ್ಯರಾಗಿದ್ದ ಡಾ. ನಂಜುಂಡೇಶ್ವರ ಅವರು 1963 ರಲ್ಲಿ ಗುಡ್ಡದ ಮೇಲೊಂದು ಮನೆ ಕಟ್ಟಿಸಿದ್ದರು. ಆಗಿನ ಕಾಲದಲ್ಲಿ ಒಂಟಿ ಮನೆಯದು. ಈಗಿನ ಆರ್ಮಿ ಕ್ಯಾಂಟಿನ್ ನಿಂದ ಬರುವಾಗಲೇ ಈ ಮನೆಯಲ್ಲಿ ದೀಪ ಬೆಳಗುವುದು ಕಾಣುತ್ತಿತ್ತಂತೆ. ಹೀಗಾಗಿ ಡಾ.ನಂಜುಂಡೇಶ್ವರ ತನ್ನ ಮನೆಗೆ ‘ಮಿನುಗು ತಾರೆ’ ಎಂದು ಹೆಸರಿಟ್ಟರು. ಯಾರಿಗೆ ಗೊತ್ತಿತ್ತು.. ಮಿನುಗು ತಾರೆಯಲ್ಲಿ ಬೆಳೆದ ಮಗುವೊಂದು ಭವಿಷ್ಯದಲ್ಲಿ ಜಗತ್ತಿನ ಸಾಹಿತ್ಯ ಲೋಕವನ್ನೇ ಬೆಳಗುವ ದೀಪ ವಾಗುತ್ತದೆ ಎಂದು..