ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

ಭಾರತೀಯ ರೈಲ್ವೆಯ ಅತಿ ವೇಗದ ರೈಲು ‘ವಂದೇ ಭಾರತ್’ ಜಮ್ಮು-ಕಾಶ್ಮೀರವನ್ನು ದೇಶದ ಹಲವು ಪ್ರಮುಖ ನಗರಗಳ ಜತೆಗೆ ಜೋಡಿಸುತ್ತಿದೆ. ಭಾರತದ ಪದತಳದ ನಗರಿ ತಮಿಳುನಾಡಿನ ಕನ್ಯಾಕುಮಾರಿ ಯಿಂದ ಕಾಶ್ಮೀರದ ಶ್ರೀನಗರಕ್ಕೆ ನೇರ ರೈಲು ಸಂಪರ್ಕ ಈಗ ಸಾಧ್ಯವಾಗಿದೆ. ಶುಕ್ರವಾರ ಜಮ್ಮು-ಕಾಶ್ಮೀರದ ಕತ್ರಾ ರೈಲು ನಿಲ್ದಾಣದಿಂದ ಶ್ರೀನಗರಕ್ಕೆ ಮೊದಲ ಸಂಚಾರ ನಡೆಸಿದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

ವಂದೇ ಭಾರತ್‌ ಎಂದ ಪ್ರೇಮ ಕಾಶ್ಮೀರ !

Profile Ashok Nayak Jun 7, 2025 1:01 PM

ಬಿ.ವಿ.ಮಹೇಶ್ ಚಂದ್ರ

1947ರಲ್ಲಿ ದೇಶ ವಿಭಜನೆ ಆದಾಗಿನಿಂದಲೂ ಜಮ್ಮು - ಕಾಶ್ಮೀರ ಭಾರತದ ಉಳಿದ ಭಾಗಗಳ ಜತೆ ನಿರಂತರವಾಗಿ ಜೋಡಿಸಿಕೊಂಡಿದ್ದೇ ಇಲ್ಲ. ಸಂವಿಧಾನದ ವಿಧಿ 370ರ ಅನ್ವಯ ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದು ಕೂಡಾ ಸೇಬು ಹಣ್ಣು, ಕೇಸರಿ ಬೆಳೆಗೆ, ಪಸ್ಮಿನಾ ಶಾಲ್‌ಗೆ, ಪ್ರವಾ ಸೋದ್ಯಕ್ಕೆ, ಚಲನ ಚಿತ್ರಗಳ ಚಿತ್ರೀಕರಣಕ್ಕೆ ಪ್ರಖ್ಯಾತವಾದ ಈ ನೆಲ, ಹಿಂದೂಸ್ಥಾನದ ಜತೆಗೆ ಸೇರಿಕೊಂಡಿದ್ದಕ್ಕಿಂತಲೂ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದೇ ಅಧಿಕ.

ಈಗ ‘ಚೆನಾಬ್ ಉಕ್ಕಿನ ಸೇತುವೆ’ ನಿರ್ಮಾಣ ಆಗಿರುವುದರಿಂದ ದೇಶದ ದಕ್ಷಿಣದ ತುದಿಯ ಕನ್ಯಾ ಕುಮಾರಿಯಿಂದ ಉತ್ತರದ ತುದಿಯ ಕಾಶ್ಮೀರದವರೆಗೂ ನೇರ ರೈಲು ಸಂಚಾರಕ್ಕೆ ಅವಕಾಶವಾಗಿದೆ. ಅಲ್ಲದೇ, ಪೂರ್ವದ ಬಂಗಾಳ ಕೊಲ್ಲಿ ಸಮೀಪದ ನಗರದಿಂದ, ಪಶ್ಚಿಮದ ಗುಜರಾತ್‌ನ ಬಂದರು ನಗರದಿಂದಲೂ ಹಿಮಾಲಯದ ತಪ್ಪಲಿನ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಸೇರಿದಂತೆ ವಿವಿಧ ನಗರಗಳಿಗೆ ನೇರ ರೈಲು ಸಂಪರ್ಕ ಸಾಧ್ಯವಾಗಿದೆ.

ಭಾರತೀಯ ರೈಲ್ವೆಯ ಅತಿ ವೇಗದ ರೈಲು ‘ವಂದೇ ಭಾರತ್’ ಜಮ್ಮು-ಕಾಶ್ಮೀರವನ್ನು ದೇಶದ ಹಲವು ಪ್ರಮುಖ ನಗರಗಳ ಜತೆಗೆ ಜೋಡಿಸುತ್ತಿದೆ. ಭಾರತದ ಪದತಳದ ನಗರಿ ತಮಿಳುನಾಡಿನ ಕನ್ಯಾ ಕುಮಾರಿಯಿಂದ ಕಾಶ್ಮೀರದ ಶ್ರೀನಗರಕ್ಕೆ ನೇರ ರೈಲು ಸಂಪರ್ಕ ಈಗ ಸಾಧ್ಯವಾಗಿದೆ. ಶುಕ್ರವಾರ ಜಮ್ಮು-ಕಾಶ್ಮೀರದ ಕತ್ರಾ ರೈಲು ನಿಲ್ದಾಣದಿಂದ ಶ್ರೀನಗರಕ್ಕೆ ಮೊದಲ ಸಂಚಾರ ನಡೆಸಿದ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಈ ಸಂದರ್ಭ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಜರಿದ್ದರು.

ಇದನ್ನೂ ಓದಿ:IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್‌ ಸ್ಟಾರ್ಕ್‌!

2022ರ ಆಗಸ್ಟ್‌ನಲ್ಲಿ ಚೆನಾಬ್ ಲೋಹದ ಸೇತುವೆಯ ಕಾಮಗಾರಿ ಪೂರ್ಣಗೊಂಡಿತು. ನಂತರದಲ್ಲಿ ರೈಲು ಮಾರ್ಗದ ನಿರ್ಮಾಣ ನಡೆಯಿತು. 2025ರ ಏಪ್ರಿಲ್ 19ರಂದು ಚೆನಾಬ್ ರೈಲ್ವೆ ಸೇತುವೆ ಪೂರ್ಣ ಪ್ರಮಾಣದ ಬಳಕೆಗೆ ಸಜ್ಜುಗೊಂಡಿತು. ಇದೀಗ ಜೂನ್ 6ರಂದು ವಂದೇ ಭಾರತ್ ಶರವೇಗದ ರೈಲು ಸಂಚಾರವೂ ಆರಂಭಗೊಂಡಿದೆ. ಭಾರತದ ಉಳಿದ ನಗರಗಳು ಜಮ್ಮು-ಕಾಶ್ಮೀರಕ್ಕೆ ಭಾರತೀಯ ರೈಲ್ವೆಯ ವಿವಿಧ ರೈಲುಗಾಡಿಗಳ ಮೂಲಕ ಕಡಿಮೆ ವೆಚ್ಚದಲ್ಲಿ ಸರಾಗ ಸಂಚಾರ ಮಾಡಬಹುದಾಗಿದೆ.

43 ಸಾವಿರ ಕೋಟಿ ರು. ವೆಚ್ಚ

ವಿಶ್ವದ ಅತ್ಯಂತ ಎತ್ತರ ಪ್ರದೇಶದ ರೈಲು ಮಾರ್ಗದ ಸೇತುವೆ ಎನಿಸಿಕೊಂಡಿರುವ ಚೆನಾಬ್ ಸೇತುವೆ ಒಳಗೊಂಡಂತೆ ‘ಯುಎಸ್‌ಬಿಆರ್‌ಎಲ್’ನ ಈ ರೈಲು ಮಾರ್ಗದ ನಿರ್ಮಾಣಕ್ಕೆ 43 ಸಾವಿರ ಕೋಟಿ ರು.ಗೂ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ. ಈ ರೈಲು ಮಾರ್ಗದಲ್ಲಿ ಅತ್ಯಂತ ಎತ್ತರದ ಚೆನಾಬ್ ಸೇತುವೆಯಷ್ಟೇ ಅಲ್ಲ, ಆಳವಾದ ಸುರಂಗಗಳು, ಮೇಲು ಸೇತುವೆಗಳೂ ನಿರ್ಮಾಣಗೊಂಡಿವೆ. ಈ ರೈಲು ಮಾರ್ಗದಲ್ಲಿನ ಶೇ.90 ಭಾಗ 943 ಸೇತುವೆಗಳ ಮೇಲೆಯೇ ಸಾಗುತ್ತದೆ. 36 ಸುರಂಗಗಳ ಒಳಗೇ ಸಾಗುತ್ತದೆ. ಈ ರೈಲು ಮಾರ್ಗದಲ್ಲಿನ ಅತ್ಯಂತ ದೊಡ್ಡದಾದ ‘ಟಿ-50’ ಸುರಂಗದ ಉದ್ದವೇ 12.7 ಕಿಮೀಗಳಷ್ಟು ದೀರ್ಘವಾಗಿದೆ.

ಈ ರೈಲು ಮಾರ್ಗದಲ್ಲಿನ ಮತ್ತೊಂದು ವಿಶೇಷ ವೆಂದರೆ ಅಂಜಿ ಖಾದ್ ಸೇತುವೆ. 725 ಮೀಟರ್‌ಗಳಷ್ಟು ಉದ್ದವಾದ ಈ ತೂಗು ಸೇತುವೆಯು ನೆಲ ಮಟ್ಟದಿಂದ 331 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ತೂಗು ಸೇತುವೆಯನ್ನು 96 ಬಲಿಷ್ಠವಾದ ಕೇಬಲ್ ಗಳು ಎತ್ತಿ ಹಿಡಿದುಕೊಂಡಿವೆ.

ಅಸಾಧ್ಯವೆನಿಸಿದ್ದು ಸಾಧ್ಯವಾಗಿದೆ!

ರೈಲ್ವೆ ಸಂಪರ್ಕವೇ ಅಸಾಧ್ಯ ಎನ್ನುವಂತಹ ಭೂ ವಿನ್ಯಾಸವನ್ನು ಹೊಂದಿರುವ ಈ ಪ್ರದೇಶದಲ್ಲಿ ಎತ್ತರವಾದ ಪರ್ವತಗಳು, ಆಳವಾದ ಕಣಿವೆಗಳೇ ಎಲ್ಲೆಲ್ಲೂ ಇವೆ. ಹಾಗಾಗಿ ರಸ್ತೆ ಸಂಪರ್ಕ ಕಷ್ಟ ಸಾಧ್ಯವಾಗಿದೆ. ರೈಲ್ವೆ ಸಂಪರ್ಕವಂತೂ ವಿರಳವಾಗಿಯಷ್ಟೇ ಇದೆ. ಜಮ್ಮು-ಕಾಶ್ಮೀರಕ್ಕೆ ದೇಶದ ವಿವಿಧೆಡೆಯ ಜನರು ತೆರಳಬೇಕೆಂದರೆ ಒಂದೋ ವಾಯುಮಾರ್ಗ ಆಶ್ರಯಿಸಬೇಕು, ಇಲ್ಲವೇ ರಸ್ತೆ ಮಾರ್ಗದಲ್ಲೇ ಏರಿಳಿತ ಹಾದಿಗಳಲ್ಲಿ ದೀರ್ಘ ಪಯಣ ಮಾಡಬೇಕು. ನೇರವಾದ ರೈಲು ಸಂಚಾರಕ್ಕೆ ಬಹಳ ಕಡಿಮೆ ಅವಕಾಶ.

ಇತ್ತೀಚೆಗೆ ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿ ಉಕ್ಕಿನ ರೈಲ್ವೆ ಸೇತುವೆ ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣಗೊಂಡು ಜನಮೆಚ್ಚುಗೆ ಗಳಿಸಿದೆ. ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸವಾಲೆನಿಸುವಂತೆ ಇರುವ ‘ಚೆನಾಬ್ ಸೇತುವೆ’ ಮಾನವ ಶಕ್ತಿ ಮತ್ತು ಪ್ರಯತ್ನಕ್ಕೆ ಉತ್ತಮ ಉದಾಹರಣೆಯಾಗಿಯೂ ಇದೆ. ಈ ನೆಲದ ಮತ್ತೊಂದು ವಿಸ್ಮಯವೂ ಆಗಿದೆ.

ಚೆನಾಬ್ ಸೇತುವೆ ಆಯುಷ್ಯ 120 ವರ್ಷ !

ಜಮ್ಮು-ಕಾಶ್ಮೀರದಲ್ಲಿ ಆಳವಾದ ಕಣಿವೆಗಳಲ್ಲಿ ಹರಿಯುವ ಚೆನಾಬ್ ನದಿಯಿಂದ 359 ಮೀಟರ್ (1178 ಅಡಿ ಗಳು) ಎತ್ತರದಲ್ಲಿ ಚೆನಾಬ್ ಸೇತುವೆ ನಿರ್ಮಾಣವಾಗಿದೆ. ಉಕ್ಕು ಮತ್ತು ಕಾಂಕ್ರೀಟ್ ಬಳಸಿ ನಿರ್ಮಿಸಲಾಗಿರುವ ಚೆನಾಬ್ ಸೇತುವೆಯ ಆಕರ್ಷಣೆಯೆಂದರೆ ಸೇತುವೆ ನಡುಮಧ್ಯ ಭಾಗದಲ್ಲಿ ವಿನ್ಯಾಸಗೊಂಡಿರುವ ‘ಕಾಮನ ಬಿಲ್ಲಿನ’ ಆಕಾರದ ಉಕ್ಕಿನ ಜೋಡಣೆ. ಇದುವೇ ಭಾರತೀಯ ಇಂಜಿನಿಯರುಗಳ ಕೌಶಲ ಮತ್ತು ಚಾಣಾಕ್ಷತೆಗೆ ಸಾಕ್ಷಿಯಾಗಿದೆ. ಈ ಸೇತುವೆ ಒಟ್ಟಾರೆ 1315 ಮೀಟರ್(೪೩೧೪ ಅಡಿ)ಗಳಷ್ಟು ಉದ್ದವಿದೆ. 17 ಉಕ್ಕಿನ ಕಂಬಗಳ ಮೇಲೆ ಈ ಸೇತುವೆಯನ್ನು ಜೋಡಿಸಲಾಗಿದೆ. ಸೇತುವೆ ಅದೆಷ್ಟು ಬಲಿಷ್ಠವಾಗಿದೆ ಎಂದರೆ ಗಂಟೆಗೆ 266 ಕಿಮೀಗಳಷ್ಟು ವೇಗದಲ್ಲಿ ಬಿರುಗಾಳಿ ಬೀಸಿದರೂ ಸೇತುವೆ ಅಲುಗಾಡದು. ಅಲ್ಲದೇ, ರಿಕ್ಟರ್ ಮಾಪಕದಲ್ಲಿ 8 ಮ್ಯಾಗ್ನಿಟ್ಯೂಡ್‌ಗಳಷ್ಟು ತೀವ್ರ ಸ್ವರೂಪದ ಭೂಕಂಪನವಾದರೂ ಸೇತುವೆಗೆ ಯಾವುದೇ ಹಾನಿ ಯಾಗದು. ಯಾವುದೇ ಕಂಪನ, ಸೋಟಗಳಿಗೂ ಅಲುಗಾಡದಂತೆ ಬಲವಾಗಿ ಜೋಡಣೆ ಮಾಡಲಾಗಿದೆ. ಅಷ್ಟೊಂದು ಗರಿಷ್ಠ ಮಟ್ಟದ ಸಾಮರ್ಥ್ಯವನ್ನು ಈ ಉಕ್ಕಿನ ಸೇತುವೆಗೆ ನೀಡಲಾ ಗಿದೆ. ಹಾಗಾಗಿಯೇ ‘ಈ ಸೇತುವೆಯ ಆಯುಷ್ಯ 120 ವರ್ಷಗಳಷ್ಟು ಸುದೀರ್ಘ’ ಎಂದು ಇಂಜಿನಿ ಯರ್‌ಗಳು ಬಲು ವಿಶ್ವಾಸದಿಂದ ಹೇಳಿದ್ದಾರೆ.

15 ವರ್ಷಕ್ಕೊಮ್ಮೆ ಬಣ್ಣ!

ಈ ಸೇತುವೆಯ ಉಕ್ಕಿನ ಭಾಗಗಳಿಗೆ ಬಳಿಯಲಾಗಿರುವ ಬಣ್ಣಗಳು ಶ್ರೇಷ್ಠ ದರ್ಜೆಯವಾಗಿದ್ದು, 15 ವರ್ಷಗಳವರೆಗೂ ಬಾಳಿಕೆ ಬರುತ್ತವೆ. ಸೇತುವೆಯಲ್ಲಿನ ಉಕ್ಕಿನ ಜೋಡಣೆಗಳು, ನಟ್-ಬೋಲ್ಟ್‌ಗಳು 15 ವರ್ಷಗಳವರೆಗೂ ತುಕ್ಕು ಹಿಡಿಯದಂತೆ ಕಾಪಾಡುತ್ತವೆ. ಗಾಳಿ-ಮಳೆ-ಹಿಮದಿಂದ ಸೇತುವೆ ಹಾಳಾಗದಂತೆ ರಕ್ಷಿಸಬಲ್ಲವಾಗಿವೆ. ಹಿಮಾಲಯದ ತಪ್ಪಲಿನ ಹಿಮಪಾತ, ಶೀತಲ ಗಾಳಿ, ಮಳೆ, ನಿರಂತರ ತೇವಾಂಶದ ವಾತಾವರಣದಲ್ಲಿ ಸೇತುವೆಯ ಉಕ್ಕಿನ ಜೋಡಣೆಗಳು ಹಾನಿ ಗೀಡಾದಂತೆ ಕಾಪಾಡಲು ಪ್ರತಿ 15 ವರ್ಷಗಳಿಗೊಮ್ಮೆ ಬಣ್ಣ ಹೊಡೆಯಬೇಕಿದೆ. ಹಾಗೆ ಮಾಡುತ್ತಾ ಸರಿಯಾದ ರೀತಿ ಯಲ್ಲಿ ನಿರ್ವಹಣೆ ಮಾಡಿದರೆ ಒಂದೂ ಕಾಲು ಶತಮಾನ ದವರೆಗೂ ಚೆನಾಬ್ ಸೇತುವೆ ಬಾಳಿಕೆ ಬರಲಿದೆ ಎಂದು ನಿರ್ಮಾತೃಗಳು ಹೇಳಿದ್ದಾರೆ.

ಫ್ರಾನ್ ನ ಐಫೆಲ್ ಟವರ್‌ಗಿಂತಲೂ ಎತ್ತರ!

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿರುವ ‘ಐಫೆಲ್ ಟವರ್’ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 1887-89ರ ನಡುವೆ ನಿರ್ಮಾಣ ವಾಗಿರುವ, ಉಕ್ಕಿನ ತೊಲೆಗಳು, ಸರಳುಗಳು, ನಟ್- ಬೋಲ್ಟ್‌ಗಳಿಂದಷ್ಟೇ ಜೋಡಣೆಗೊಂಡಿರುವ ಈ ಲೋಹದ ಗೋಪುರ ನೆಲದಿಂದ ತುತ್ತ ತುದಿ (ಮೊನಚು ತುದಿ)ವರೆಗೆ 330 ಮೀಟರ್‌ಗಳಷ್ಟು ಎತ್ತರವಾಗಿದೆ. ಜಮ್ಮು-ಕಾಶ್ಮೀರದ ಚೆನಾಬ್ ನದಿಯ ಎರಡು ತುದಿಗಳನ್ನು ಜೋಡಿಸುವ ಚೆನಾಬ್ ಸೇತುವೆ ಪ್ಯಾರಿಸ್‌ನ ಐಫೆಲ್ ಟವರ್ ಗಿಂತಲೂ ಎತ್ತರವಾಗಿದೆ. ನದಿ ಮಟ್ಟದಿಂದ 359 ಮೀಟರ್‌ಗಳಷ್ಟು ಎತ್ತರದಲ್ಲಿ ಚೆನಾಬ್ ಸೇತುವೆ ನಿರ್ಮಾಣಗೊಂಡಿದೆ.

೨ ದಶಕಗಳ ಪರಿಶ್ರಮ

ಚೆನಾಬ್ ಸೇತುವೆಯ ನಿರ್ಮಾಣ 2004ರಲ್ಲಿ ಶುರುವಾಗಿದ್ದು, ಸುರಕ್ಷತೆಯ ಸಮಸ್ಯೆಗಳು ಎದುರಾಗಿ ದ್ದರಿಂದ ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ 2010ರಲ್ಲಿ ಕಾಮಗಾರಿ ಪುನಾರಂಭ ಗೊಂಡಿತು. 2021ರ ಏಪ್ರಿಲ್‌ನಲ್ಲಿ ಉಕ್ಕಿನ ಕಮಾನಿನ ಭಾಗಕ್ಕೆ ಡೆಕ್ ಭಾಗವನ್ನು ಯಶಸ್ವಿಯಾಗಿ ಜೋಡಿಸುವ ಕಾರ್ಯ ಆರಂಭಗೊಂಡು 2022ರ ಆಗಸ್ಟ್‌ನಲ್ಲಿ ಸಮಾಪನ ಗೊಂಡಿತು. ಒಟ್ಟಾರೆ ಸೇತುವೆಯ ನಿರ್ಮಾಣ ಕಾರ್ಯ 2024ರಲ್ಲಿ ಪೂರ್ಣಗೊಂಡಿತು.

*

ಜಮ್ಮು-ಕಾಶ್ಮೀರದಲ್ಲಿ ಭುವಿಯ ಮೇಲಿನ ಅತ್ಯಂತ ಎತ್ತರದ ಪ್ರದೇಶದಲ್ಲಿನ ಉಕ್ಕಿನ ರೈಲ್ವೆ ಸೇತುವೆಯನ್ನು ಉದ್ಘಾಟಿಸಲು, ರೈಲು ಸಂಚಾರಕ್ಕೆ ತೆರೆಯಲು ಬಹಳ ಸಂತೋಷವಾಗುತ್ತಿದೆ. ದಕ್ಷಿಣದ ತುದಿಯ ಕನ್ಯಾಕುಮಾರಿ-ಉತ್ತರದ ಕಾಶ್ಮೀರ ನಗರಗಳೆರಡೂ ಈಗ ಒಂದೇ ಸಂಪರ್ಕ ಕೊಂಡಿಯಲ್ಲಿ ಬೆಸೆದುಕೊಂಡಿವೆ. ತಾಯಿ ಭಾರತಿಯನ್ನು ಉದ್ದೇಶಿಸಿ ಹೇಳುವಾಗಲೆಲ್ಲಾ, ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ...’ ಎಂದು ಉದ್ದರಿಸುತ್ತಿದ್ದೆವು. ಈಗ ಚೆನಾಬ್ ಸೇತುವೆ ದೇಶದ ಉತ್ತರ-ದಕ್ಷಿಣದ ತುದಿಗಳನ್ನು ರೈಲ್ವೆ ಮಾರ್ಗದ ಮೂಲಕ ಜೋಡಿಸಿಬಿಟ್ಟಿದೆ. ಒಂದು ಕಾಲದಲ್ಲಿ ಕನಸು ಎನಿಸಿಕೊಂಡಿದ್ದ ಸಂಗತಿ ಈಗ ನನಸಾಗಿದೆ. ನಮ್ಮ ಭಾರತೀಯ ರೈಲ್ವೆ ಈ ಕನಸನ್ನು ನನಸಾಗಿಸಿದೆ. ಸಾರ್ಥಕತೆಗೆ ಕಾರಣವಾಗಿದೆ.

-ನರೇಂದ ಮೋದಿ, ಪ್ರಧಾನ ಮಂತಿ

*

ನಾನು 7ನೇ ತರಗತಿಯಲ್ಲಿದ್ದಾಗ ಈ ವಿಶ್ವದ ಅತಿ ಎತ್ತರದ ಸ್ಥಳದಲ್ಲಿನ ರೈಲ್ವೆ ಸೇತುವೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿತು. ನನ್ನ ಮಕ್ಕಳು ಕಾಲೇಜು ಓದು ಪೂರ್ಣಗೊಳಿಸುವ ಸಂದರ್ಭದಲ್ಲಿ ಪೂರ್ಣಗೊಂಡಿದೆ. ನಾನು ಮುಖ್ಯಮಂತ್ರಿ ಆಗಿರುವ ಸಂದರ್ಭದಲ್ಲಿ ಲೋಕಾರ್ಪಣೆ ಗೊಳ್ಳುತ್ತಿದೆ. ಈಗ ನಮ್ಮ ಜಮ್ಮು-ಕಾಶ್ಮೀರ ಭಾರತ ದೇಶದ ಎಲ್ಲಾ ಭಾಗಗಳ ಜತೆಗೂ ಭಾರತೀಯ ರೈಲ್ವೆಯ ಮೂಲಕ ಸರಾಗವಾದ ಸಂಪರ್ಕ ಸಾಧ್ಯವಾಗುವಂತಾಗಿದೆ. ವಂದೇ ಭಾರತ್ ರೈಲು ದೇಶದ ಪ್ರಮುಖ ನಗರಗಳನ್ನು ಜಮ್ಮು- ಕಾಶ್ಮೀರದ ಜತೆಗೆ ಜೋಡಿಸಲಿದೆ. ಜನರು 15-20 ಸಾವಿರ ರು. ವೆಚ್ಚ ಮಾಡಿ ವಿಮಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ಬರುತ್ತಿದ್ದರು. ಈಗ ಕಡಿಮೆ ವೆಚ್ಚದಲ್ಲಿ ರೈಲಿನಲ್ಲಿ ಬರಬಹು ದಾಗಿದೆ. ಶ್ರೀನಗರದಿಂದ ಕತ್ರಾ ಪ್ರದೇಶಕ್ಕೆ ರೈಲಿನಲ್ಲಿ ಕೇವಲ 4 ಗಂಟೆಗಳಲ್ಲಿ ಪ್ರಯಾಣಿಸಬಹು ದಾಗಿದೆ. ಈ ರೈಲು ಮಾರ್ಗದ ಕಾರಣದಿಂದಾಗಿ ಅಮರನಾಥ ಯಾತ್ರೆಯೂ ಸರಾಗವಾಗಲಿದೆ. ಜಮ್ಮು-ಕಾಶ್ಮೀರದ ಪ್ರವಾಸೋದ್ಯಮಕ್ಕೆ ಈ ಚೆನಾಬ್ ಸೇತುವೆ ಮಹತ್ವದ ಕೊಡುಗೆ ನೀಡಲಿದೆ. ನಾನು ಇಂಥದೊಂದು ಸುದಿನ ಕ್ಕಾಗಿಯೇ ಎಷ್ಟೊಂದು ಸಮಯದಿಂದ ಕಾಯುತ್ತಿದ್ದೆ. ನನ್ನ ಕಾಯುವಿಕೆ ಕೊನೆಗೊಂಡಿದೆ. ಬಹಳ ಸಂತಸವಾಗುತ್ತಿದೆ.

-ಒಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಸಿಎಂ