House collapse: ಮಳೆ ಅವಾಂತರ; ಕಲಬುರಗಿಯಲ್ಲಿ ಮನೆ ಕುಸಿದು 10 ವರ್ಷದ ಬಾಲಕ ಸಾವು
House collapse: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಗ್ರಾಮದಲ್ಲಿ ದುರಂತ ನಡೆದಿದೆ. ಕಲ್ಲು, ಮಣ್ಣಿನಿಂದ ನಿರ್ಮಿಸಿದ್ದ ಮನೆ ಶಿಥಿಲಗೊಂಡಿತ್ತು, ಮಳೆಯಿಂದಾಗಿ ಚಾವಣಿ ಕುಸಿದು ದುರಂತ ಸಂಭವಿಸಿದೆ. ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.


ಕಲಬುರಗಿ: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಮಣ್ಣಿನ ಮನೆ ಚಾವಣಿ ಕುಸಿದು ಬಾಲಕ ಮೃತಪಟ್ಟಿರುವ ಘಟನೆ (House collapse) ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಗ್ರಾಮದಲ್ಲಿ ನಡೆದಿದೆ. ಚಂದ್ರು ಹವಾಲ್ದಾರ್ (10) ಮೃತ ಬಾಲಕ. ಘಟನೆಯಲ್ಲಿ ಭಾಗಮ್ಮ ಎಂಬ ಮಹಿಳೆಗೆ ಗಾಯವಾಗಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲು, ಮಣ್ಣಿನಿಂದ ನಿರ್ಮಿಸಿದ್ದ ಮನೆ ಶಿಥಿಲಗೊಂಡಿದ್ದು, ಮಳೆಯಿಂದಾಗಿ ಚಾವಣಿ ಕುಸಿದು ದುರಂತ ಸಂಭವಿಸಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಮಳೆಗೆ ಮೂರು ಬಲಿ, ಹಲವೆಡೆ ಭೂಕುಸಿತ, ಸಾರಿಗೆ ಅಸ್ತವ್ಯಸ್ತ
ಬೆಂಗಳೂರು : ರಾಜ್ಯದಲ್ಲಿ ಮೃಗಶಿರಾ ಮಳೆಯ (Karnataka rain news) ಅಬ್ಬರಕ್ಕೆ ಮತ್ತೆ ಮೂವರು ಬಲಿ (death) ಆಗಿದ್ದಾರೆ. ಹಲವಡೆ ಭೂಕುಸಿತ (Landslide) ಉಂಟಾಗಿ ಜನರು ಪರದಾಟ ನಡೆಸುವಂತಾಗಿದೆ. ಶಿವಮೊಗ್ಗದಲ್ಲಿ ಭಾರೀ ಮಳೆಗೆ ಆಡಗಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಸಿದ್ದಮ್ಮ (100) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಎಲೆಕಲ್ಲು ಘಾಟಿ ಬಳಿ ಮರದ ಕೊಂಬೆ ಬಿದ್ದು, ಬೈಕ್ ಸವಾರ ಕಡಬಗೆರೆಯ ಅನಿಲ್ ರೋಜಾರಿಯೋ (50) ಮೃತಪಟ್ಟಿದ್ದಾರೆ.
ಸಕಲೇಶಪುರ ಬಳಿ ಶಿರಾಡಿ ಘಾಟ್, ಶೃಂಗೇರಿಯ ಸಾಲ್ಮರ, ಮಂಗಳೂರಿನ ಕದ್ರಿ ಸೇರಿ ಕೆಲವೆಡೆ ಭೂಕುಸಿತ ಉಂಟಾಗಿದ್ದು, ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನ ಕೆತ್ತಿಕಲ್ನಲ್ಲಿ ಭೂಕುಸಿತವಾಗಿದೆ. ದೇವಿಮನೆ ಘಾಟ್ನಲ್ಲಿ ಭೂಕುಸಿತ ಉಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರ ಹ್ಮಣ್ಯದ ಸ್ನಾನಘಟ್ಟ, ಬೈಂದೂರಿನ ಕಂಬಳಗದ್ದೆ, ಹಳಗೇರಿ, ಮಂಗಳೂರಿನ ಮೊಗೂರು ಗ್ರಾಮಗಳು ಜಲಾವೃತಗೊಂಡಿವೆ.
ಇನ್ನು ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ 8 ತಾಲೂಕು ಹಾಗೂ ಉಡುಪಿ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್ ನೀಡಲಾಗಿದೆ. ಸತತ ಮಳೆಯಾದ ಸ್ಥಳಗಳಲ್ಲಿ ಭೂಕುಸಿತ ಸಾಧ್ಯತೆ ಹೆಚ್ಚಿದ್ದು, ಬಿರುಗಾಳಿ 50-60 ಕಿ.ಮೀ. ವೇಗ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜೂ. 18ರಂದು ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಿಗೆ ಮಾತ್ರ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಉಳಿದ ಜಿಲ್ಲೆಗಳಿಗೆ ಯಾವುದೇ ಅಲರ್ಟ್ ಇಲ್ಲ.
ಇದನ್ನೂ ಓದಿ: Karnataka Weather: ಇಂದೂ ಮುಂದುವರಿಯಲಿದೆ ಮಳೆಯ ಆರ್ಭಟ; ಕರಾವಳಿ ಸೇರಿ 6 ಜಿಲ್ಲೆಗಳಿಗೆ ರೆಡ್ ಅಲರ್ಟ್