ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mangalore plane crash: ಮಂಗಳೂರಲ್ಲೂ ನಡೆದಿತ್ತು ಭೀಕರ ವಿಮಾನ ದುರಂತ; ಅಂದು ಜೀವ ಕಳೆದುಕೊಂಡವರೆಷ್ಟು?

Mangalore Plane Crash: 2010 ಮೇ 22ರ ಮುಂಜಾನೆ ದುಬೈನಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನ ಇನ್ನೇನು ಲ್ಯಾಂಡಿಂಗ್ ಆಗಲಿದೆ ಅನ್ನುವಷ್ಟರಲ್ಲಿ ರನ್‌ವೇಯಿಂದ ನಿಯಂತ್ರಣ ತಪ್ಪಿ ಆಳ ಪ್ರದೇಶಕ್ಕೆ ಉರುಳಿ ಬಿದ್ದಿತ್ತು. ಈ ದುರಂತದಲ್ಲಿ 158 ಮಂದಿ ಮೃತಪಟ್ಟಿದ್ದರು.

15 ವರ್ಷದ ಹಿಂದೆ ಮಂಗಳೂರಲ್ಲೂ ನಡೆದಿತ್ತು ಭೀಕರ ವಿಮಾನ ದುರಂತ!

Profile Prabhakara R Jun 12, 2025 6:18 PM

ಮಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಭಾರಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 133 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ನಡುವೆ ಈ ಹಿಂದೆ ಕರ್ನಾಟಕದ ಮಂಗಳೂರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ವಿಮಾನ ದುರಂತ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಮಾನ ದುರಂತ (Mangalore Plane Crash) ನಡೆದು 15 ವರ್ಷವಾಗಿದೆ. 2010ರ ಮೇ 22ರಂದು ಭೀಕರ ಅವಘಡ ಸಂಭವಿಸಿದ್ದು, ವಿಮಾನದಲ್ಲಿದ್ದ 158 ಮಂದಿ ಮೃತಪಟ್ಟು ಕೇವಲ 8 ಮಂದಿ ಮಾತ್ರ ಬದುಕಿ ಉಳಿದಿದ್ದರು.

ಅಪಘಾತದ ನಂತರದ ದೃಶ್ಯಗಳು ಹೃದಯವಿದ್ರಾವಕವಾಗಿತ್ತು. ಹಲವು ಮೃತದೇಹಗಳು ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿದ್ದವು. ಅಂತಹ 12 ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗದೆ, ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಒಂದೇ ಕಡೆ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಸ್ಮರಣಾರ್ಥವಾಗಿ ದೊಡ್ಡ ಪಾರ್ಕ್ ನಿರ್ಮಿಸಲಾಗಿದೆ. ಈ ದುರ್ಘಟನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಮೇ 22ರಂದು ಜಿಲ್ಲಾಡಳಿತ ವತಿಯಿಂದ ಉದ್ಯಾನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಕಳೆದುಕೊಂಡು ಕೇರಳ ಮತ್ತು ಕರ್ನಾಟಕದ ಸಂತ್ರಸ್ತ ಕುಟುಂಬಗಳ ಸದಸ್ಯರು ಬಂದು ಭಾಗವಹಿಸುತ್ತಾರೆ.

ಹೇಗೆ ನಡೆದಿತ್ತು ವಿಮಾನ ದುರಂತ?

2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬೈನಿಂದ ಮಂಗಳೂರು ಬಜ್ಪೆ ಏರ್‌ಪೋರ್ಟ್‌ಗೆ ಆಗಮಿಸಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (Air India Express Flight 812) ಲ್ಯಾಂಡಿಂಗ್‌ ವೇಳೆ ನಿಯಂತ್ರಣಕ್ಕೆ ಸಿಗದೆ ಕೆಂಜಾರಿನ ಗುಡ್ಡದಿಂದ ಕೆಳಜಾರಿ ಆಳ ಪ್ರದೇಶಕ್ಕೆ ಬಿದ್ದಿತ್ತು. ತಕ್ಷಣವೇ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡು, ಅದರಲ್ಲಿದ್ದ 158 ಮಂದಿ ಸಜೀವ ದಹನವಾಗಿದ್ದರು. ವಿಮಾನದಲ್ಲಿ 6 ಶಿಶುಗಳು, 19 ಮಕ್ಕಳು, 6 ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಜನರು ಪ್ರಯಾಣಿಸುತ್ತಿದ್ದರು. ಭೀಕರ ಅವಘಡದಲ್ಲಿ ಅದೃಷ್ಟವಶಾತ್ ಕೇವಲ 8 ಮಂದಿ ಬದುಕುಳಿದಿದ್ದರು.

ಮಂಗಳೂರಿನಲ್ಲಿರುವುದು 'ಟೇಬಲ್-ಟಾಪ್' ರನ್‌ವೇ. ಏರ್‌ಪೋರ್ಟ್‌ನ ಎರಡೂ ಬದಿಗಳಲ್ಲಿ ಆಳವಾದ ಕಣಿವೆ ಇದೆ. ಪೈಲಟ್ ವಿಮಾನವನ್ನು ರನ್‌ವೇ ಮೇಲೆ ನಿಲ್ಲಿಸಲು ಪ್ರಯತ್ನಿಸಿದರೂ, ಅದು ನಿಯಂತ್ರಣಕ್ಕೆ ಸಿಕ್ಕಿರಲಿಲ್ಲ. ರನ್‌ವೇಯನ್ನು ದಾಟಿ ಮುಂದೆ ಸಾಗಿದ ವಿಮಾನ, ಅಲ್ಲಿದ್ದ ಕಾಂಕ್ರೀಟ್ ಗೋಪುರಕ್ಕೆ ಡಿಕ್ಕಿಯಾಗಿ ಕಣಿವೆಯೊಳಗೆ ಬಿದ್ದು ಪತನಗೊಂಡಿತ್ತು. ಕ್ಷಣಾರ್ಧದಲ್ಲಿ ವಿಮಾನವು ಬೆಂಕಿಗಾಹುತಿಯಾಗಿತ್ತು.

ಪರಿಹಾರಕ್ಕಾಗಿ ಇನ್ನೂ ಹೋರಾಟ

ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕಂಪನಿಯು ಮುಂಬೈನ ಕಾನೂನು ತಜ್ಞ ಎಚ್‌.ಡಿ. ನಾನಾವತಿ ನೇತೃತ್ವದ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರೂ. ಪಡೆದವರೂ ಇದ್ದರು. ಆದರೆ ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಸುಮಾರು 45 ಕುಟುಂಬದವರು ಇನ್ನೂ ಕಾನೂನು ಹೋರಾಟವನ್ನು ಮುಂದುವರಿಸಿದ್ದರೆ, ಈ ನಡುವೆ ಏರ್‌ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಖರೀದಿಸಿತ್ತು.

ಈ ಸುದ್ದಿಯನ್ನೂ ಓದಿ | Ahmedabad Plane Crash: ಗುಜರಾತ್‌ ವಿಮಾನ ಪತನ; ಟೇಕ್‌ಆಫ್‌ ವೇಳೆ ಆಪಘಾತವಾಗಿದ್ದೇಕೆ?

ಬೆಂಗಳೂರು ವಿಮಾನ ದುರಂತದಲ್ಲಿ 92 ಮಂದಿ ಸಾವು

1990ರ ಫೆಬ್ರವರಿ 14ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಅಪಘಾತಕ್ಕೀಡಾಗಿ 92 ಮಂದಿ ಮೃತಪಟ್ಟಿದ್ದರು. ಇಂಡಿಯನ್ ಏರ್‌ಲೈನ್ಸ್‌ ಫ್ಲೈಟ್ 605 ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಇಳಿಯುವ ಸಮಯದಲ್ಲಿ ಭೀಕರ ಅಪಘಾತಕ್ಕೀಡಾಗಿತ್ತು. ವಿಮಾನವು ಏರ್‌ಬಸ್ A320 ಮಾದರಿಯದ್ದು. ಲ್ಯಾಂಡಿಂಗ್ ಸಮಯದಲ್ಲಿ ಪೈಲಟ್‌ರಿಂದ ತೊಂದರೆ ಉಂಟಾಗಿ ವಿಮಾನವು ರನ್‌ವೇ ಮೀರಿ, ನೇರವಾಗಿ ಆವರಣದ ಹೊರಗೆ ಹೋಗಿ ಪತನಗೊಂಡಿತ್ತು. ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಯರು ಇದ್ದರು. ಈ ಪೈಕಿ 92 ಜನ ಮೃತಪಟ್ಟಿದ್ದರು. ತನಿಖೆಯಲ್ಲಿ ಈ ಅಪಘಾತಕ್ಕೆ ಪೈಲಟ್ ದೋಷ ಹಾಗೂ ಕಾಕ್‌ಪಿಟ್ ವಿನ್ಯಾಸದ ಜಟಿಲತೆಗಳು ಕಾರಣವೆಂದು ತಿಳಿದುಬಂದಿತ್ತು. ಈ ಘಟನೆ ನಂತರ, A320 ವಿಮಾನದ ಕಾಕ್‌ಪಿಟ್ ವಿನ್ಯಾಸ, ಪೈಲಟ್ ತರಬೇತಿ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತಾಗಿ ಗಂಭೀರವಾಗಿ ಪರಿಗಣಿಸಲಾಯಿತು. ಬಲಪಡಿಸಲು ಪ್ರೇರಣೆಯಾಯಿತು.