Ram Gopal Varma: ಕನ್ನಡ ಪರ ಸಂಘಟನೆಗಳ ಹೋರಾಟ ಗೂಂಡಾಗಿರಿಗೆ ಹೋಲಿಸಿದ ರಾಮ್ ಗೋಪಾಲ್ ವರ್ಮಾ; ಕಮಲ್ ಹಾಸನ್ಗೆ ಬೆಂಬಲ
Kamal Haasan: ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿ ಕಾಲಿವುಡ್ ನಟ ಕಮಲ್ ಹಾಸನ್ ವಿವಾದದ ಕಿಡಿ ಹೊತ್ತಿಸಿದ್ದು, ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕಮಲ್ ಹಾಸನ್ಗೆ ಬೆಂಬಲ ಸೂಚಿಸುವ ಎಕ್ಸ್ ಪೋಸ್ಟ್ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ.

ಬೆಂಗಳೂರು: ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿ ಕಾಲಿವುಡ್ ನಟ ಕಮಲ್ ಹಾಸನ್ (Kamal Haasan) ವಿವಾದದ ಕಿಡಿ ಹೊತ್ತಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರ ಈ ಹೇಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ಆರಂಭಿಸಿವೆ. ಕಮಲ್ ಹಾಸನ್ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದಿರುವ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಇಲ್ಲದಿದ್ದರೆ ಅವರ ʼಥಗ್ ಲೈಫ್ʼ (Thug Life) ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಕೆಲವರು ಕಮಲ್ ಹಾಸನ್ ಬೆಂಬಲಕ್ಕೆ ಧಾವಿಸಿದ್ದಾರೆ. ಇವರ ಪೈಕಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ಒಬ್ಬರು. ಕಮಲ್ ಹಾಸನ್ ನಡೆಯನ್ನು ಸಮರ್ಥಿಸಿಕೊಂಡ ಅವರು ಕನ್ನಡ ಪರ ಸಂಘಟನೆಗಳ ಹೋರಾಟವನ್ನು ಗೂಂಡಾಗಿರಿಗೆ ಹೋಲಿಸಿ ಎಕ್ಸ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಬಳಿಕ ಈ ಪೋಸ್ಟ್ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸದ್ಯ ರಾಮ್ ಗೋಪಾಲ್ ವರ್ಮಾ ನಡೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
"ಪ್ರಜಾಪ್ರಭುತ್ವದ ಹೊಸ ಹೆಸರು ಅಸಹಿಷ್ಣುತೆ...ವಾಸ್ತವಿಕ ಸತ್ಯವನ್ನು ಲೆಕ್ಕಿಸದೆ ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಕರ್ನಾಟಕದಲ್ಲಿ ʼಥಗ್ ಲೈಫ್ʼ ಸಿನಿಮಾವನ್ನು ನಿಷೇಧಿಸುವ ಬಗ್ಗೆ ಬೆದರಿಕೆ ಹಾಕಲಾಗುತ್ತಿದೆ. ಇದು ಹೊಸ ರೀತಿಯ ಗೂಂಡಾಗಿರಿʼʼ ಎಂದು ರಾಮ್ ಗೋಪಾಲ್ ವರ್ಮಾ ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಅ ಬಳಿಕ ಈ ಪೋಸ್ಟ್ ಡಿಲೀಟ್ ಮಾಡಿದ್ದರು.
ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡಿದ್ದು ಯಾಕೆನ್ನುವ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಬಹುದೆಂಬ ಭಯದಿಂದ ಅವರು ರೀತಿ ಮಾಡಿದ್ದಿರಬಹುದು ಎನ್ನುವ ಮಾತೂ ಕೇಳಿ ಬಂದಿದೆ.

ಈ ಸುದ್ದಿಯನ್ನೂ ಓದಿ: Kamal Hasaan: 300 ಕೋಟಿಯ ಥಗ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬ್ಯಾನ್; ಕೋರ್ಟ್ ಮೊರೆ ಹೋದ ಕಮಲ್ ಹಾಸನ್
ಏನಿದು ವಿವಾದ?
ಸುಮಾರು ಮೂರೂವರೆ ದಶಕಗಳ ಬಳಿಕ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಒಂದಾಗುತ್ತಿರುವ ಚಿತ್ರ ʼಥಗ್ ಲೈಫ್ʼ. ಇದೇ ಕಾರಣಕ್ಕೆ ಈ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತೀಚೆಗೆ ಸಿನಿಮಾದ ಅಡಿಯೊ ಲಾಂಚ್ ಚೆನ್ನೈಯಲ್ಲಿ ನೆರವೇರಿತ್ತು. ಇದರಲ್ಲಿ ಮುಖ್ಯ ಅತಿಥಿಯಾಗಿ ಶಿವ ರಾಜ್ಕುಮಾರ್ ಭಾಗವಹಿಸಿದ್ದರು. ಶಿವಣ್ಣ ಅವರನ್ನು ಸ್ವಾಗತಿಸುವ ಭರದಲ್ಲಿ ಕಮಲ್ ಹಾಸನ್ ಕನ್ನಡಕ್ಕೆ ಅವಮಾನ ಎಸಗುವ ಮಾತುಗಳನ್ನಾಡಿದ್ದರು.
ಶಿವ ರಾಜ್ಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ʼʼಇವರು ಆ ಊರಿನಲ್ಲಿರುವ ನನ್ನ ಕುಟುಂಬ ಸದಸ್ಯ. ಇದೇ ಕಾರಣಕ್ಕೆ ಅವರು ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ (ಕನ್ನಡ)ʼʼ ಎಂದು ಹೇಳಿದ್ದರು. ಅವರ ಹೇಳಿಕೆಗೆ ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತಮ್ಮ ಹೇಳಿಕೆಗೆ ಕ್ಷಮೆ ಕೋರಲು ನಿರಾಕರಿಸುವ ಮೂಲಕ ಕಮಲ್ ಉದ್ಧಟತನ ಮುಂದುವರಿಸಿದ್ದಾರೆ. ಜೂ. 5ರಂದು ʼಥಗ್ ಲೈಫ್ʼ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆ.