ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dowry Harassment: ವರದಕ್ಷಿಣೆಯಾಗಿ ಕಿಡ್ನಿ ನೀಡುವಂತೆ ಸೊಸೆಗೆ ಅತ್ತೆ-ಮಾವನ ಕಿರುಕುಳ

ಉತ್ತರ ಬಿಹಾರದ ಮುಜಫರ್‌ಪುರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂಡನ ಮನೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಅತ್ತೆ ಮಾವ ಸೇರಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ನೀಡುವಂತೆ ಬೇಡಿಕೆಯಿಟ್ಟಿದಾರೆ. ಈ ಕುರಿತು ಮುಜಫರ್‌ಪುರದ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ವರದಕ್ಷಿಣೆಯಾಗಿ ಕಿಡ್ನಿಯನ್ನೇ ಕೇಳಿದ ಅತ್ತೆ ಮಾವ: ಸೊಸೆಯಿಂದ ದೂರು

ಸಾಂದರ್ಭಿಕ ಚಿತ್ರ.

ಪಾಟ್ನಾ: ಬೈಕ್, ನಗದು, ಆಭರಣ ಸೇರಿದಂತೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಗಂಡನ ಮನೆಯವರು ಈಗ ಮಗನಿಗಾಗಿ ಕಿಡ್ನಿ ದಾನ (Kidney as dowry) ಮಾಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಬಿಹಾರದ (north bihar) ಮುಜಫರ್‌ಪುರದಲ್ಲಿ ನಡೆದಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗನಿಗೆ ಸೊಸೆ ವರದಕ್ಷಿಣೆ ಬದಲಿಗೆ ಕಿಡ್ನಿಯನ್ನು ನೀಡುವಂತೆ ಅತ್ತೆ ಮಾವ ಒತ್ತಡ ಹಾಕಿರುವುದು ಮಾತ್ರವಲ್ಲ ದೈಹಿಕವಾಗಿ ಹಿಂಸೆಯನ್ನು ನೀಡಿದ್ದಾರೆ. ಈ ಕುರಿತು ಮುಜಫರ್‌ಪುರದ (Muzaffarpur) ಮಹಿಳಾ ಪೊಲೀಸ್ ಠಾಣೆಗೆ (Women police station) ದೂರು ನೀಡಲಾಗಿದೆ.

ಉತ್ತರ ಬಿಹಾರದ ಮುಜಫರ್‌ಪುರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂಡನ ಮನೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಅತ್ತೆ ಮಾವ ಸೇರಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ನೀಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ನಡೆದಿದೆ.

ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಮಹಿಳೆ ದೀಪ್ತಿ, ʼʼ2021ರಲ್ಲಿ ನಮ್ಮ ವಿವಾಹವಾಗಿತ್ತು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಬಳಿಕ ಅತ್ತೆ ಮತ್ತು ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಮಾನಸಿಕ ಹಿಂಸೆಯ ಜತೆಗೆ ದೈಹಿಕವಾಗಿಯೂ ಹಲ್ಲೆ ನಡೆಸಿದ್ದಾರೆ. ತವರು ಮನೆಯಿಂದ ಬೈಕ್ ಮತ್ತು ಹಣ ತರುವಂತೆ ಒತ್ತಾಯಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.

ʼʼಅವರ ಬೇಡಿಕೆಗಳನ್ನು ನಾನು ಒಪ್ಪಿಕೊಳ್ಳದೇ ಇದ್ದಾಗ ಅನಾರೋಗ್ಯ ಪೀಡಿತ ನನ್ನ ಪತಿ ಅಂದರೆ ಅವರ ಮಗನಿಗೆ ತನ್ನ ಒಂದು ಕಿಡ್ನಿಯನ್ನು ದಾನ ಮಾಡುವಂತೆ ಒತ್ತಾಯಿಸಲು ಪ್ರಾರಂಭಿಸಿದರುʼʼ ಎಂದು ದೀಪ್ತಿ ಹೇಳಿದ್ದಾರೆ.

ʼʼಗಂಡನಿಗೆ ಮೂತ್ರ ಪಿಂಡದ ಸಮಸ್ಯೆ ಇರುವುದು ಮೊದಲು ನನಗೆ ತಿಳಿದಿರಲಿಲ್ಲ. ಮದುವೆಯಾದ ಎರಡು ವರ್ಷಗಳ ಅನಂತರ ತಿಳಿಯಿತುʼʼ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ʼʼಮೊದಲು ಅತ್ತೆ ಮತ್ತು ಮಾವ ನನ್ನ ಮೂತ್ರಪಿಂಡವನ್ನು ಗಂಡನಿಗೆ ದಾನವಾಗಿ ಕೇಳುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಅನಂತರ ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆಯನ್ನು ನಡೆಸಿ ಮನೆಯಿಂದ ಹೊರಹಾಕಿದ್ದಾರೆʼʼ ಎಂದು ದುಃಖ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Viral News: ಅಮೆರಿಕದ ಕೆಲಸ ಬಿಟ್ಟು ರಸ್ತೆಬದಿಯಲ್ಲಿ ಫುಡ್‌ಸ್ಟಾಲ್ ನಡೆಸುತ್ತಿರುವ ಐಟಿ ಉದ್ಯೋಗಿ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಬಳಿಕ ತಾನು ತವರು ಮನೆಗೆ ಹೋಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ವಿವರಿಸಿದ್ದಾರೆ. ಪೊಲೀಸರು ಎರಡು ಕುಟುಂಬಗಳ ನಡುವೆ ಸಂಬಂಧ ಸುಧಾರಿಸಲು ಅವಕಾಶ ನೀಡಿದರೂ ಅದು ಸಾಧ್ಯವಾಗಲಿಲ್ಲ. ಇದರಿಂದ ದೀಪ್ತಿ ತನ್ನ ಪತಿಯಿಂದ ವಿಚ್ಛೇದನ ಪಡೆಯಬಹುದು ಎನ್ನುವ ಸಲಹೆ ನೀಡಿದರು. ಆದರೆ ಅದಕ್ಕೆ ಆಕೆ ಒಪ್ಪಲಿಲ್ಲ. ಅನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ, ಅತ್ತೆ, ಮಾವ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ಆರಂಭಿಸಿರುವುದಾಗಿ ಗ್ರಾಮೀಣ ವಿಭಾಗದ ಎಸ್ಪಿ ವಿದ್ಯಾಸಾಗರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.