ಕಾರು ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ್ದ ಮೊದಲ ಪ್ರಶ್ನೆ ಏನು?
ಪಂತ್ ಅವರಲ್ಲಿ ಆಡುವ ದೃಢ ಸಂಕಲ್ಪವಿತ್ತು. ಛಲ ಬಿಡದ ಅವರು 635 ದಿನಗಳ ನಿರಂತರ ಹೋರಾಟ, ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಪುನಶ್ಚೇತನದ ಬಳಿಕ ಸಂಪೂರ್ಣವಾಗಿ ಗಾಯಮುಕ್ತಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರು. ಈ ಭಯಾನಕ ಅಪಘಾತದಿಂದ ಪಾರಾಗಿದ್ದು ಪಂತ್ ಅವರ ಅದೃಷ್ಟವೇ ಸರಿ ಎಂದಿದ್ದಾರೆ.


ನವದೆಹಲಿ: 2022 ರಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಪಂತ್ ಗಂಭೀರ ಗಾಯಗೊಂಡಿದ್ದರು. ರೂರ್ಕಿಯಲ್ಲಿರುವ ತನ್ನ ಮನೆಗೆ ಪಂತ್ ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದಿದ್ದು. ಇದೀಗ ಅಪಘಾತದ ಬಳಿಕ ವೈದ್ಯರಿಗೆ ಪಂತ್ ಕೇಳಿದ ಮೊದಲ ಪ್ರಶ್ನೆ ಏನಾಗಿತ್ತು ಎಂಬುದನ್ನು ಅಂದು ಪಂತ್ಗೆ ಚಿಕಿತ್ಸೆ ನೀಡಿರುವ ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ(Dr Dinshaw Pardiwala) ಬಹಿರಂಗಪಡಿಸಿದ್ದಾರೆ.
'ದಿ ಟೆಲಿಗ್ರಾಫ್'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಡಾ. ದಿನ್ಶಾ ಪರ್ದಿವಾಲಾ, "ಪಂತ್ ಅವರ ತಲೆ, ಬೆನ್ನು, ಕಾಲಿಗೆ ಗಾಯಗಳಾಗಿದ್ದವು. ಬಲಿಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಗಾಯಕ್ಕೆ ತುತ್ತಾಗಿತ್ತು. ಆದರೆ ಪಂತ್ ಆಸ್ಪತ್ರೆಗೆ ಕರೆತಂದಾಗ ವೈದ್ಯರಲ್ಲಿ ಕೇಳಿದ ಮೊದಲ ಪ್ರಶ್ನೆ 'ಮತ್ತೆ ಆಡಲು ಸಾಧ್ಯವೇ' ಎಂದಾಗಿತ್ತು" ಎಂದು ಅಂದಿನ ಘಟನೆಗಳ ಕುರಿತು ಮೆಲುಕು ಹಾಕಿದರು.
ಪಂತ್ ಅವರಲ್ಲಿ ಆಡುವ ದೃಢ ಸಂಕಲ್ಪವಿತ್ತು. ಛಲ ಬಿಡದ ಅವರು 635 ದಿನಗಳ ನಿರಂತರ ಹೋರಾಟ, ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ ಹಾಗೂ ಪುನಶ್ಚೇತನದ ಬಳಿಕ ಸಂಪೂರ್ಣವಾಗಿ ಗಾಯಮುಕ್ತಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರು. ಈ ಭಯಾನಕ ಅಪಘಾತದಿಂದ ಪಾರಾಗಿದ್ದು ಪಂತ್ ಅವರ ಅದೃಷ್ಟವೇ ಸರಿ ಎಂದಿದ್ದಾರೆ.
ಸದ್ಯ ಪಂತ್ ಅವರು ಭಾರತ ತಂಡದ ಪರ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ವಾರ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ನಲ್ಲಿ ಶತಕ ಬಾರಿಸ ಹಲವು ದಾಖಲೆಗಳನ್ನು ಬರೆದಿದ್ದರು.
ಭಾರತದ ಮಹಾಗೋಡೆ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಮೂರು ಶತಕ ಸಿಡಿಸಿದ ಏಕೈಕ ಭಾರತದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಸರಿಗಟ್ಟುವ ಸನಿಹದಲ್ಲಿ ರಿಷಭ್ ಪಂತ್ ಇದ್ದಾರೆ. ನ್ಯೂಜಿಲೆಂಡ್ನ ಡ್ಯಾರಿಲ್ ಮಿಚೆಲ್ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ (2022) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ.
1000 ರನ್ಗಳ ಹೊಸ್ತಿಲಲ್ಲಿ ಪಂತ್
ಆಂಗ್ಲರ ನಾಡಿನಲ್ಲಿ 27ರ ಹರೆಯದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಡಿರುವ 19 ಇನಿಂಗ್ಸ್ಗಳಿಂದ 45.52ರ ಸರಾಸರಿಯಲ್ಲಿ 808 ರನ್ ಗಳಿಸಿದ್ದು, ಇದರಲ್ಲಿ 4 ಶತಕ ಹಾಗೂ 2 ಅರ್ಧಶತಕಗಳಿದ್ದು, 1000 ರನ್ಗಳಿಸುವ ಹೊಸ್ತಿಲಲ್ಲಿ ಪಂತ್ ನಿಂತಿದ್ದಾರೆ.