Kite string: ಘೋರ ದುರಂತ! ಸ್ಕೂಟರ್ ಸವಾರನ ಕತ್ತು ಸೀಳಿದ ಗಾಳಿಪಟ ದಾರ
ಚೀನೀ ಮಾಂಜಾ ಎಂದೇ ಕರೆಯಲ್ಪಡುವ ನಿಷೇಧಿತ ಗಾಳಿಪಟ ದಾರದಿಂದಾಗಿ (kite strings) ಉತ್ತರ ದೆಹಲಿಯ (north Delhi) ರಾಣಿ ಝಾನ್ಸಿ ಫ್ಲೈಓವರ್ನಲ್ಲಿ ( Rani Jhansi flyover) ಸ್ಕೂಟರ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉದ್ಯಮಿ ಯಶ್ ಗೋಸ್ವಾಮಿ (22) ಗಾಳಿಪಟ ದಾರದಿಂದ ಪ್ರಾಣ ಕಳೆದುಕೊಂಡವರು.


ನವದೆಹಲಿ: ನಿಷೇಧಿತ ಗಾಳಿಪಟ ದಾರ (Chinese Manjha) ಮತ್ತೊಂದು ಬಲಿ ಪಡೆದಿದೆ. ಚೀನೀ ಮಾಂಜಾ ಎಂದೇ ಕರೆಯಲ್ಪಡುವ ನಿಷೇಧಿತ ಗಾಳಿಪಟ ದಾರದಿಂದಾಗಿ (kite strings) ಉತ್ತರ ದೆಹಲಿಯ (north Delhi) ರಾಣಿ ಝಾನ್ಸಿ ಫ್ಲೈಓವರ್ನಲ್ಲಿ ( Rani Jhansi flyover) ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉದ್ಯಮಿ ಯಶ್ ಗೋಸ್ವಾಮಿ (22) ಗಾಳಿಪಟ ದಾರದಿಂದ ಪ್ರಾಣ ಕಳೆದುಕೊಂಡವರು. ಅವರು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟ ದಾರ ಅವರ ಕುತ್ತಿಗೆಯನ್ನು ಕತ್ತರಿಸಿದೆ. ಇದರಿಂದ ಅವರು ಸ್ಕೂಟರ್ ಸಮೇತ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಕರೋಲ್ ಬಾಗ್ನಲ್ಲಿ ಇ-ರಿಕ್ಷಾ ಬಿಡಿಭಾಗಗಳ ಅಂಗಡಿಯನ್ನು ನಡೆಸುತ್ತಿದ್ದ ಯಶ್ ಅವರು ಶುಕ್ರವಾರ ಸಂಜೆ ಸ್ಕೂಟರ್ ನಲ್ಲಿ ಉತ್ತರ ದೆಹಲಿಯ ರಾಣಿ ಝಾನ್ಸಿ ಫ್ಲೈಓವರ್ ಮೂಲಕ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಗಾಳಿಪಟದ ಮಾಂಜಾವು ಯಶ್ ಅವರ ಕುತ್ತಿಗೆಯನ್ನು ಕತ್ತರಿಸಿದೆ. ಅವರು ಸ್ಕೂಟರ್ನಿಂದ ಬಿದ್ದರು. ತಕ್ಷಣ ಸ್ಥಳೀಯರು ಸೇರಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅವರು ದಾರಿಯಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಗಾಳಿಪಟವನ್ನು ಹಾರಿಸುತ್ತಿದ್ದವರು ಯಾರು ಎಂಬುದನ್ನುಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಯಶ್ ಅವರ ಸಾವಿನಿಂದ ದುಃಖತಪ್ತರಾಗಿರುವ ಅವರ ಸಹೋದರ ಅಮಿತ್ ಗೋಸ್ವಾಮಿ ಚೀನೀ ಮಾಂಜಾವನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೀವಗಳಿಗೆ ಅಪಾಯವನ್ನು ಉಂಟು ಮಾಡುವ ಯಾವುದಾದರೂ ಒಂದು ಘಟನೆ ನಡೆಯಬೇಕು ಎಂದು ಯಾಕೆ ಕಾಯಬೇಕು. ಗಾಳಿಪಟ ದಾರದಿಂದ ಪ್ರತಿ ವರ್ಷ ಜನರು ಸಾಯುತ್ತಿದ್ದಾರೆ. ಆದರೆ ಸರ್ಕಾರ ಇದನ್ನು ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಸಹೋದರ ನನ್ನ ಮಗನಂತಿದ್ದನು. ಅವನು ಈಗ ಇಲ್ಲ ಎಂದು ಊಹಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದರು.
ಚೈನೀಸ್ ಮಾಂಜಾದಿಂದ 2022ರಲ್ಲಿ, ಹೈದರ್ಪುರ್ ಫ್ಲೈಓವರ್ನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಒಬ್ಬರು ಸಾವನ್ನಪ್ಪಿದ್ದರು. ಇದಾದ ಒಂದು ತಿಂಗಳ ಅನಂತರ ಶಾಸ್ತ್ರಿ ಪಾರ್ಕ್ ಫ್ಲೈಓವರ್ನಲ್ಲಿ ಮತ್ತೊಬ್ಬ ಬೈಕ್ ಸವಾರ ಸಾವನ್ನಪ್ಪಿದ್ದರು. ಇದೇ ರೀತಿ ಬಳಿಕ ನಾಥು ಕಾಲೋನಿ ಫ್ಲೈಓವರ್ನಲ್ಲಿ ಘಟನೆ ಸಂಭವಿಸಿತು.
2023 ರಲ್ಲಿ ಪಶ್ಚಿಮ ವಿಹಾರ್ನಲ್ಲಿ ಏಳು ವರ್ಷದ ಮಗು ಇದರಿಂದ ಸಾವನ್ನಪ್ಪಿದ್ದು, ಕಳೆದ ವರ್ಷ ಆಗಸ್ಟ್ನಲ್ಲಿ ಗಾಯಗೊಂಡ ಇಬ್ಬರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ. ಚೈನೀಸ್ ಮಾಂಜಾ ತಯಾರಿ ಮತ್ತು ಮಾರಾಟಗಾರರ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದು, ಶನಿವಾರ 1,000 ಕ್ಕೂ ಹೆಚ್ಚು ಚೈನೀಸ್ ಮಾಂಜಾ ರೋಲ್ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.