D K Shivakumar Column: ಭೂಮಿತಾಯಿಗೆ ನೀಡಬೇಕಿದೆ ಹಸಿರು ಗ್ಯಾರಂಟಿ!
ಬೆಂಗಳೂರು ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ಎಡವಿದ್ದೇವೆ. ಯಾವುದೇ ಸರಕಾರಗಳು ಬಂದರೂ, ಪರಿಸರ ಉಳಿಸುವ ಹಾಗೂ ಅಭಿವೃದ್ಧಿ ಕಾರ್ಯದ ನಡುವೆ ಸಮ ತೋಲನ ಕಾಪಾಡಬೇಕು. ಅರಣ್ಯ ನಾಶ, ಪ್ಲಾಸ್ಟಿಕ್ನ ಅತಿಯಾದ ಬಳಕೆ, ನಾಗಾಲೋಟದ ಅಭಿವೃದ್ಧಿ ಯಿಂದಾಗಿ ಕಾಂಕ್ರಿಟ್ ಕಾಡು ಸೃಷ್ಟಿಯಾಗಿರುವುದು, ಅತಿಯಾದ ವಾಹನಗಳಿಂದಾಗಿ ವಾಯುಮಾಲಿನ್ಯ, ಹೀಗೆ ಸಾಲುಸಾಲು ಬೆಳವಣಿಗೆಗಳು ಪರಿಸರವನ್ನು ವಿನಾಶದ ಅಂಚಿಗೆ ದೂಡುತ್ತಿವೆ.


ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಸರಕಾರ ಮಾತ್ರವಲ್ಲದೆ, ಜನರು ಕೂಡ ಪರಿಸರ ಸಂರಕ್ಷಣೆಯ ಕಡೆಗೆ ಹೊರಳಬೇಕಿದೆ
ಕಳೆದ ಬೇಸಿಗೆಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಈ ಬಾರಿಯ ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹ ಉಂಟಾಗಿತ್ತು. ಈ ಎರಡೂ ಸಂದರ್ಭಗಳಲ್ಲಿ, ನಮ್ಮ ಸರಕಾರ ಪರಿಹಾರ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಕೈಗೊಂಡಿದೆ. ಇಂತಹ ಪಾಕೃತಿಕ ವಿಕೋಪದ ಸನ್ನಿವೇಶಗಳು ಏಕೆ ಉಂಟಾಗುತ್ತವೆ? ಈ ದುರಂತ ಗಳನ್ನು ನಾವೇಕೆ ಎದುರಿಸಬೇಕು? ಇದನ್ನು ತಡೆಗಟ್ಟುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೂಡ ನಮಗೆ ನಾವೇ ಹಾಕಿಕೊಳ್ಳಬೇಕಿದೆ.
ಬೆಂಗಳೂರು ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ಎಡವಿದ್ದೇವೆ. ಯಾವುದೇ ಸರಕಾರಗಳು ಬಂದರೂ, ಪರಿಸರ ಉಳಿಸುವ ಹಾಗೂ ಅಭಿವೃದ್ಧಿ ಕಾರ್ಯದ ನಡುವೆ ಸಮತೋಲನ ಕಾಪಾಡಬೇಕು. ಅರಣ್ಯ ನಾಶ, ಪ್ಲಾಸ್ಟಿಕ್ನ ಅತಿಯಾದ ಬಳಕೆ, ನಾಗಾಲೋಟದ ಅಭಿವೃದ್ಧಿಯಿಂದಾಗಿ ಕಾಂಕ್ರಿಟ್ ಕಾಡು ಸೃಷ್ಟಿಯಾಗಿರುವುದು, ಅತಿಯಾದ ವಾಹನಗಳಿಂದಾಗಿ ವಾಯುಮಾಲಿನ್ಯ, ಹೀಗೆ ಸಾಲುಸಾಲು ಬೆಳವಣಿಗೆಗಳು ಪರಿಸರವನ್ನು ವಿನಾಶದ ಅಂಚಿಗೆ ದೂಡುತ್ತಿವೆ.
ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಪರಿಸರ ಸಂರಕ್ಷಣೆ ಎಂಬ ಎರಡು ದೋಣಿಗಳ ನಡುವೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ಆದರೆ ನಮ್ಮ ಕಾಲು ಅಭಿವೃದ್ಧಿಯ ಕಡೆಗೆ ಹೆಚ್ಚಾಗಿ ಸಾಗುತ್ತಾ, ಪರಿಸರ ಸಂರಕ್ಷಣೆಯ ದೋಣಿಯಿಂದ ದೂರ ಸಾಗುವಂತಾಗಿದೆ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಇದನ್ನೂ ಓದಿ: Vishweshwar Bhat Column: ಜೀವನದಲ್ಲಿ ಹಿನ್ನಡೆಯಾದಾಗ ಕಿಂಚಿತ್ತೂ ಅಧೀರರಾಗಬಾರದು
ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಸರಿಯಾದ ಜಲಮೂಲ ಇರಲಿಲ್ಲ. ಅದಕ್ಕಾಗಿ 1300 ಕ್ಕೂ ಅಧಿಕ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕೃಷಿ ಹಾಗೂ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡಿದ್ದರು. ನಗರ ಬೆಳೆದಂತೆಲ್ಲ ಒತ್ತುವರಿ ಹೆಚ್ಚಾಗಿ ಕೆರೆಗಳು ಮಾಯವಾಗಿವೆ. ಸದಾ ಟ್ರಾಫಿಕ್ನಿಂದ ಕೂಡಿರುವ ಮೆಜೆಸ್ಟಿಕ್ ಪ್ರದೇಶ ಹಿಂದೊಮ್ಮೆ ಕೆರೆಯಾಗಿತ್ತು ಎಂದು ಈಗ ಊಹಿಸು ವುದೂ ಕಷ್ಟ. ಈ ಹಿಂದೆ ಬೆಂಗಳೂರು ಉತ್ತಮ ಅರಣ್ಯ ಪ್ರದೇಶವೂ ಆಗಿತ್ತು.
ಈಗಿನ ಬನ್ನೇರುಘಟ್ಟ ಅರಣ್ಯ, ಲಾಲ್ ಬಾಗ್, ಕಬ್ಬನ್ ಪಾರ್ಕ್ ಮೊದಲಾದ ವನ ಸಂಪತ್ತನ್ನು ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವುದು ಈಗಿನ ಪೀಳಿಗೆಯ ಅದೃಷ್ಟ. ಇದನ್ನು ಹೀಗೆಯೇ ಕಾಪಾಡಿಕೊಂಡು ಮುಂದುವರಿಯಬೇಕಾಗಿದೆ. ಇದು ಒಂದು ರಾಜಧಾನಿಯ ಕಥೆ ಅಷ್ಟೆ. ಇಡೀ ದೇಶದಲ್ಲಿ ಇಂತಹ ಅವೆಷ್ಟೋ ನಗರ, ಪಟ್ಟಣಗಳು ಬೆಳೆದು, ಅರಣ್ಯ ನಾಶವಾಗಿದೆ, ಕೆರೆಗಳು ಮಾಯವಾಗಿವೆ, ವನ್ಯಜೀವಿಗಳು ನಶಿಸುತ್ತಿವೆ. ವಿಶ್ವ ಪರಿಸರ ದಿನದ ಆಚರಣೆಯು ಇಂತಹ ಚಿಂತೆ, ಚಿಂತನೆಗಳಿಗೆ ಎಡೆ ಮಾಡಿಕೊಡುತ್ತದೆ.
ಪರಿಸರಕ್ಕೆ ಒತ್ತು: ಕರ್ನಾಟಕ ಸಾವಿರಾರು ವರ್ಷಗಳಿಂದಲೂ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತಿನ ಕೇಂದ್ರ. ಇಲ್ಲಿನ ನೈಸರ್ಗಿಕ ಸಂಪನ್ಮೂಲ ಯಾವುದೇ ರಾಜ್ಯಗಳಿಗೂ ಕಡಿಮೆ ಇಲ್ಲ. ಪಶ್ಚಿಮ ಘಟ್ಟದ ಸಾಲು ಇಂದಿಗೂ ಅಪರೂಪದ ವನ್ಯಜೀವಿಗಳಿಗೆ ಆಶ್ರಯತಾಣವಾಗಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಸುಮಾರು ಶೇ.22 ರಷ್ಟು ಅರಣ್ಯವಾಗಿದೆ.
ಆಕರ್ಷಣೀಯ ಜಲಪಾತಗಳು, ನಾಗರಹೊಳೆ, ಬಂಡೀಪುರ, ಭದ್ರಾ ಮೊದಲಾದ ಅರಣ್ಯಗಳು ನಮ್ಮ ವೈಶಿಷ್ಟ್ಯ. ಇತ್ತೀಚೆಗೆ ಬಿಡುಗಡೆಯಾದ ಹುಲಿಗಳ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 393 ಹುಲಿಗಳಿರುವುದು ಪತ್ತೆಯಾಗಿದೆ. 6395 ಆನೆಗಳಿರುವ ಮೂಲಕ ಕರ್ನಾಟಕ ಆನೆಗಳ ರಾಜ್ಯವಾಗಿದೆ. ಇಂತಹ ವನ್ಯಜೀವಿಗಳು ಇಷ್ಟು ಸಂಖ್ಯೆಯಲ್ಲಿ ನಮ್ಮ ಅರಣ್ಯ ಗಳಲ್ಲಿರುವುದೇ ನಮ್ಮ ಅರಣ್ಯ ಸಂರಕ್ಷಣೆಗೆ ಸಾಕ್ಷಿ. ಆದರೆ ಇಷ್ಟೇ ಸಾಕೆ? ಎಂದು ಪ್ರಶ್ನಿಸಿಕೊಂಡರೆ ಖಂಡಿತ ಇಲ್ಲ ಎಂದೇ ಹೇಳಬೇಕು.
ಈಗಾಗಲೇ ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷ ಅಧಿಕವಾಗಿದೆ. ಇದಕ್ಕೆ ಪೂರಕ ಕ್ರಮ ಗಳನ್ನು ಕೈಗೊಂಡರೂ, ಅರಣ್ಯ ಸಂರಕ್ಷಣೆಯ ಹೊರತಾಗಿ ಇದಕ್ಕೆ ಬೇರಾವುದೇ ಪರಿಹಾರವಿಲ್ಲ. ಮಾನವ ನಿರ್ಮಿತ ಮಾಲಿನ್ಯವನ್ನೇ ನೋಡಿ. ಜಗತ್ತಿನಲ್ಲಿ ಪ್ರತಿ ವರ್ಷ 400 ದಶಲಕ್ಷ ಟನ್ಗಳಷ್ಟು ಪ್ಲಾಸ್ಟಿಕ್ ಉತ್ಪತ್ತಿಯಾಗುತ್ತಿದೆ. ಸಾವಿರಾರು ಟನ್ ಗಳಷ್ಟು ಪ್ಲಾಸ್ಟಿಕ್, ಕೆರೆ ಮೊದಲಾದ ಜಲಮೂಲ ಗಳನ್ನು ಸೇರುತ್ತಿದೆ.
ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದ ಮೈಕ್ರೋಪ್ಲಾಸ್ಟಿಕ್ ಸಮಸ್ಯೆ ಹೆಚ್ಚಿದೆ. ಕಣ್ಣಿಗೆ ಕಾಣದಷ್ಟು ಸಣ್ಣದಾದ ಪ್ಲಾಸ್ಟಿಕ್ನ ತುಣುಕು ಜನರ ಹೊಟ್ಟೆ ಸೇರುತ್ತಿದೆ. ಪ್ರತಿ ವ್ಯಕ್ತಿಯ ದೇಹಕ್ಕೆ ಪ್ಲಾಸ್ಟಿಕ್ ತುಣುಕು ಸೇರುತ್ತಿದೆ ಎಂದು ಅಂದಾಜಿಸಲಾಗಿದೆ.
ವಾಹನಗಳಿಂದುಂಟಾಗುವ ವಾಯು ಮಾಲಿನ್ಯದಿಂದ ನಗರದಲ್ಲಿ ಶ್ವಾಸಕೋಶ ಸಂಬಂಧಿ ಸಮಸ್ಯೆ ಗಳು ಹೆಚ್ಚುತ್ತಿದೆ. ಬೆಂಗಳೂರು ನಗರವೊಂದರ ಪ್ರತಿ ವರ್ಷ ಲಕ್ಷಾಂತರ ವಾಹನಗಳ ನೋಂದಣಿ ಯಾಗುತ್ತಿದೆ. ನಗರದೊಳಗೆ ಲಕ್ಷಾಂತರ ವಾಹನಗಳು ಸಂಚರಿಸುತ್ತಿವೆ. ಇದಕ್ಕಾಗಿಯೇ ಮೆಟ್ರೊ ಹಾಗೂ ಬಿಎಂಟಿಸಿ ಬಸ್ಗಳ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಲಾಗುತ್ತಿದೆ.
ಹಸಿರು ಗ್ಯಾರಂಟಿ: ಈಗ ನಾವು ಪಂಚ ಗ್ಯಾರಂಟಿಗಳ ಜತೆಗೆ, ಭೂಮಿತಾಯಿಗೆ ಹಸಿರು ಗ್ಯಾರಂಟಿ ನೀಡಬೇಕಿದೆ. ಇದು ಕೇವಲ ಸರಕಾರ ಮಾತ್ರವಲ್ಲದೆ, ಜನರ ಕರ್ತವ್ಯ ಕೂಡ ಹೌದು. ಈ ನಿಟ್ಟಿನಲ್ಲಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅತ್ಯಂತ ಪರಿಣಾಮಕಾರಿಯಾದುದು. 72.66 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರತಿ ದಿನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಒಟ್ಟು 470 ಕೋಟಿ ಬಾರಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇದರ ಪರಿಣಾಮ, ಅನೇಕ ಮಹಿಳೆಯರು ದ್ವಿಚಕ್ರ ವಾಹನ, ಕಾರು, ಟ್ಯಾಕ್ಸಿ ಬಿಟ್ಟು ಬಸ್ಗೆ ಕಾಲಿಟ್ಟಿದ್ದಾರೆ. ಅವರ ಜತೆಗೆ ಪುರುಷರು ಕೂಡ ಬಸ್ ಹತ್ತಿದ್ದಾರೆ. ಶಕ್ತಿ ಯೋಜನೆ ಈ ಮೂಲಕ ಹಸಿರು ಗ್ಯಾರಂಟಿ ನೀಡಿದೆ ಒಟ್ಟು 11,848 ಕೋಟಿ ರುಪಾಯಿ ವೆಚ್ಚ ಮಾಡಿದೆ ನಮ್ಮ ಸರಕಾರ.
ಬೆಂಗಳೂರಿನಲ್ಲಿ ಹಸಿರು ಹೆಜ್ಜೆಗಳನ್ನಿರಿಸಲು ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರಕಾರದಿಂದ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದೇವೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ 650 ಕ್ಕೂ ಅಧಿಕ ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಹಸಿರು ಬೆಂಗಳೂರಿಗಾಗಿ ಹವಾಮಾನ ಕ್ರಿಯಾ ಯೋಜನೆ ರೂಪಿಸಲಾಗು ತ್ತದೆ.
ಶಾಲೆಗಳಲ್ಲಿ ಕ್ಲೈಮೇಟ್ ಆಕ್ಷನ್ ಕ್ಲಬ್ ರೂಪಿಸುವುದು ಈ ಕಾರ್ಯಕ್ರಮದ ಪ್ರಮುಖಾಂಶ. ಈ ಯೋಜನೆಗೆ ಈಗಾಗಲೇ 650 ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳು ಒಪ್ಪಿಗೆ ನೀಡಿದ್ದು, 18 ಕ್ಲಬ್ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಪ್ರತಿ ಕ್ಲಬ್ನಲ್ಲಿ ಒಬ್ಬ ಶಿಕ್ಷಕ ಮತ್ತು ಕನಿಷ್ಠ 25 ವಿದ್ಯಾರ್ಥಿ ಗಳು ಇರುತ್ತಾರೆ. ಜೂನ್ 6ರಂದು ನೋಂದಣಿ ಮತ್ತು ಮಾಹಿತಿಗಾಗಿ ವೆಬ್ ಸೈಟ್ ಆರಂಭವಾಗಲಿದೆ. ಇದೇ ದಿನ ಸ್ವಚ್ಛ ಬೆಂಗಳೂರು ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಬ್ಲೂ ಗ್ರೀನ್ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಕುರಿತ ಕಾರ್ಯಕ್ರಮ ಕೂಡ ಇದೇ ದಿನ ನೆಹರು ತಾರಾಲಯದಲ್ಲಿ ನಡೆಯಲಿದೆ. ನಗರವನ್ನು ಕಾಂಕ್ರೀಟ್ ಕಾಡಿನಿಂದ ಹಸಿರು ಕಾಡಿನ ಕಡೆಗೆ ಕರೆದೊಯ್ಯಲು, ಹಸಿರು ವಾರ್ಡ್ ರೂಪಿಸಲಾಗುತ್ತದೆ. ಇದಕ್ಕಾಗಿ 28 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಮಾಲಿನ್ಯ ಮುಕ್ತ ಮಾಡಲು ಈಗಾಗಲೇ ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್ಗಳ ಬಳಕೆಗೆ ಪ್ರೋತ್ಸಾಹ ನೀಡಲಾಗಿದೆ.
ನಗರದ ಜನರಿಗೆ ಕಾವೇರಿಯೇ ಆಧಾರ. ಕಾವೇರಿ 5ನೇ ಹಂತದ ಯೋಜನೆಯಡಿ 110 ಹಳ್ಳಿಗಳಿಗೆ ಈಗಾಗಲೇ ನೀರು ಪೂರೈಸಿ, ಕಾವೇರಿಯ ಜಾಲವನ್ನು ಇನ್ನಷ್ಟು ಹಿಗ್ಗಿಸಿದ್ದೇವೆ. ಹಾಗೆಂದು ಈ ಅಮೂಲ್ಯ ನೀರನ್ನು ಮನಬಂದಂತೆ ಬಳಸುವಂತಿಲ್ಲ.
ಬೆಂಗಳೂರಿನಲ್ಲಿ ಸುರಿಯುವ ಮಳೆಯನ್ನು ಹಿಡಿದಿಟ್ಟರೆ ಕಾವೇರಿ ನೀರನ್ನು ಉಳಿಸಬಹುದು. ಅದಕ್ಕಾಗಿ ಸೌಲಭ್ಯ ಇರುವವರು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದು ಉತ್ತಮ.
ಮಕ್ಕಳಲ್ಲಿ ಹಸಿರು ಪ್ರಜ್ಞೆ: ಮಕ್ಕಳಲ್ಲಿ ಹಸಿರು ಪ್ರಜ್ಞೆ ಮೂಡಿಸುವುದು ಈಗ ಆಗಬೇಕಿರುವ ದೊಡ್ಡ ಕಾರ್ಯ. ಅದಕ್ಕಾಗಿ ಶಾಲೆಗಳಲ್ಲಿ ಒಂದು ಮಗು, ಒಂದು ಗಿಡ ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ಮಕ್ಕಳು ನಾನೊಂದು ಸಸಿ ನೆಡುತ್ತೇನೆ ಎಂಬ ಮನೋಭಾವ ಬೆಳೆಸಿ ಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಹಸಿರು ಪ್ರe ಬೆಳೆಸಿ ಬಿಟ್ಟರೆ, ಅದೇ ಪರಿಸರ ಸಂರಕ್ಷಣೆಯ ಅಡಿಪಾಯವಾಗಲಿದೆ.
ಇನ್ನು ಹಿರಿಯರ ಕರ್ತವ್ಯ ಕೂಡ ದೊಡ್ಡದಿದೆ. ಪೆಟ್ರೋಲ್-ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆ, ಸಾಮೂಹಿಕ ಅಥವಾ ಸಾರ್ವಜನಿಕ ಸಾರಿಗೆಯ ಬಳಕೆ, ಕಸವನ್ನು ಎಂದರಲ್ಲಿ ಬಿಸಾಡದೆ ಕಸದ ವಾಹನಗಳಿಗೆ ನೀಡುವುದು, ರಾಜಕಾಲುವೆಯಲ್ಲಿ ಕಸ ಹಾಕುವುದನ್ನು ತಡೆಗಟ್ಟುವುದು, ಕಾವೇರಿ ನೀರಿನ ಮಿತವಾದ ಬಳಕೆ, ಮನೆಯ ಸುತ್ತ ಗಿಡ ನೆಡುವುದು, ಕೆರೆ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು - ಹೀಗೆ ದೈನಂದಿನ ಬದುಕಿನ ಪರಿಸರದ ಸೇವೆ ಮಾಡ ಬಹುದು. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿದಷ್ಟೂ ಬೆಂಗಳೂರು ಸುಂದರವಾಗಲಿದೆ.
ಬ್ರ್ಯಾಂಡ್ ಬೆಂಗಳೂರು ಎಂದಾಕ್ಷಣ ಅದು ಸಾವಿರಾರು ಕಟ್ಟಡಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ಕೈಗಾರಿಕೆ ಬೆಳವಣಿಗೆ ಎಂದಷ್ಟೇ ಭಾವಿಸಬೇಕಿಲ್ಲ. ಪರಿಸರ ಸಂರಕ್ಷಣೆ ಕೂಡ ಬ್ರ್ಯಾಂಡ್ ಬೆಂಗಳೂರಿನ ಭಾಗ. ಬ್ರ್ಯಾಂಡ್ ಎಂಬುದು ಹಸಿರಿನ ಒಂದು ಭಾಗ.