Gururaj Gantihole Column: ಸಿಕ್ಕಿಂಗೆ 50ರ ಸಂಭ್ರಮ: Act ಈಸ್ಟ್ ನಿಂದ Act ಫಾಸ್ಟ್ ನತ್ತ
ಪೂರ್ವ ಹಿಮಾಲಯಗಳ ಮಡಿಲಲ್ಲಿ ಅಲಂಕರಿಸಲ್ಪಟ್ಟಿರುವ ಸಿಕ್ಕಿಂ, ಭಾರತದಲ್ಲಿನ ಎರಡನೇ ಅತಿ ಸಣ್ಣ ಮತ್ತು ವೈವಿಧ್ಯಮಯ ಪರಿಸರ ಹೊಂದಿರುವ ರಾಜ್ಯ. ಅದ್ಭುತ ನೈಸರ್ಗಿಕ ಸೌಂದರ್ಯ, ಸಂಸ್ಕೃತಿಯ ವೈವಿಧ್ಯತೆ ಹಾಗೂ ಪ್ರಗತಿಪರ ನೀತಿಗಳಿಂದ ಸಿಕ್ಕಿಂ ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.


ಗಂಟಾಘೋಷ
ಪೂರ್ವ ಹಿಮಾಲಯದ ಮನಮೋಹಕ ಮೋಡಿಗಾರ ಈ ಸಿಕ್ಕಿಂ. ಭಾರತ-ಚೀನಾದ ನಡುವೆ ರಕ್ಷಣಾತ್ಮಕ ವಲಯವಾಗಿ ನಿಂತಿದ್ದು, 333 ವರ್ಷಗಳ ಕಾಲ ರಾಜರ ಆಡಳಿತದ ನಂತರ, ಜನಮತದ ಮೂಲಕ 1975ರಲ್ಲಿ 22ನೇ ರಾಜ್ಯವಾಗಿ ಭಾರತದೊಳಗೆ ವಿಲೀನಗೊಂಡಿತು. ಈ ಬೆಸುಗೆಗೆ ಈಗ ೫೦ರ ಸಂಭ್ರಮ! ಸಿಕ್ಕಿಂ ಮತ್ತು ಇಡೀ ಈಶಾನ್ಯ ಭಾಗವು, ಭಾರತದ ಪ್ರಗತಿ ಯಲ್ಲಿ ಉಜ್ವಲ ಅಧ್ಯಾಯವಾಗಿ ಹೊರಹೊಮ್ಮುತ್ತಿದೆ.
ಪೂರ್ವ ಹಿಮಾಲಯಗಳ ಮಡಿಲಲ್ಲಿ ಅಲಂಕರಿಸಲ್ಪಟ್ಟಿರುವ ಸಿಕ್ಕಿಂ, ಭಾರತದಲ್ಲಿನ ಎರಡನೇ ಅತಿ ಸಣ್ಣ ಮತ್ತು ವೈವಿಧ್ಯಮಯ ಪರಿಸರ ಹೊಂದಿರುವ ರಾಜ್ಯ. ಅದ್ಭುತ ನೈಸರ್ಗಿಕ ಸೌಂದರ್ಯ, ಸಂಸ್ಕೃತಿಯ ವೈವಿಧ್ಯತೆ ಹಾಗೂ ಪ್ರಗತಿಪರ ನೀತಿಗಳಿಂದ ಸಿಕ್ಕಿಂ ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.
ಸಂಭಾವ್ಯ ಬೆದರಿಕೆಗಳ ವಿರುದ್ಧ ಭಾರತದ ರಕ್ಷಣೆಯಲ್ಲಿ, ಭಾರತ ಮತ್ತು ಚೀನಾದ ನಡುವೆ ‘ಬಫರ್ ಏರಿಯಾ’ ರಾಜ್ಯವಾಗಿಯೂ ಪರಿಗಣಿಸಲ್ಪಟ್ಟಿದೆ. ವೈವಿಧ್ಯಮಯ ಪರಿಸರ ವ್ಯವಸ್ಥೆಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕೃಷಿ ಮತ್ತು ಪರಿಸರ ಪ್ರವಾಸೋದ್ಯಮದಲ್ಲಿ ಹೆಸರುವಾಸಿಯಾಗಿದೆ. ಚೀನಾ-ಟಿಬೆಟ್ ಸಂಪರ್ಕಿಸುವ ನಾಥುಲಾ ಪಾಸ್, ವ್ಯಾಪಾರ ಮತ್ತು ಭದ್ರತೆಯ ಜತೆಗೆ ಕಾರ್ಯ ತಂತ್ರದ ಭಾಗವಾಗಿದ್ದು, ಸಿಕ್ಕಿಂ ಪ್ರಮುಖ ಮಿಲಿಟರಿ ಸ್ಥಾಪನೆಗಳಿಗೆ ನೆಲೆಯಾಗಿದೆ.
ಉತ್ತರ ಮತ್ತು ಈಶಾನ್ಯಕ್ಕೆ ಟಿಬೆಟ್ (ಚೀನಾ)ವನ್ನು, ಪೂರ್ವಕ್ಕೆ ಭೂತಾನ್, ಪಶ್ಚಿಮಕ್ಕೆ ನೇಪಾಳ ದೇಶದೊಂದಿಗೆ ಗಡಿ ಪ್ರದೇಶ ಹಂಚಿಕೊಂಡಿದೆ. ಸುಮಾರು 7096 ಚದರ ಕಿಮೀ ವಿಸ್ತೀರ್ಣ ಹೊಂದಿದ ಈ ರಾಜ್ಯ ಹಸಿರು ತುಂಬಿದ ಹಳ್ಳಿಗಳನ್ನು ಹೊಂದಿದ್ದು, ಇದಕ್ಕೆ ಬೆಟ್ಟಗಳು ಮತ್ತು ಹಿಮ ಆವರಿಸಿದ ಗಿರಿಪರ್ವತಗಳು ಮತ್ತಷ್ಟು ಸೊಬಗು ತುಂಬಿವೆ.

ಇಂತಹ ಒಂದು ಸೊಬಗಿನ ರಾಜ್ಯಕ್ಕೆ ಕರ್ನಾಟಕದಿಂದ ಬಂದ ಅಧ್ಯಯನ ತಂಡದಲ್ಲಿ ನಾನೂ ಒಬ್ಬ ಪ್ರತಿನಿಧಿಯಾಗಿ ಭೇಟಿಕೊಟ್ಟಿದ್ದು, ಈ ಭಾಗದ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದು ಕೊಳ್ಳಲು ಅವಕಾಶವಾಯಿತು. ನಾವು ರಾತ್ರಿ ಉಳಿದುಕೊಂಡಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬೆಳಕಿನ ನಕ್ಷತ್ರಗಳಂತೆ ಕಾಣುತ್ತಿದ್ದ ಬಗ್ಗೆ ಕೇಳಿದಾಗ, ಅವುಗಳೆಲ್ಲ ಬೆಟ್ಟ ಗುಡ್ಡಗಳ ಮೇಲಿರುವ ನಮ್ಮ ಮನೆಗಳು ಎಂದರು ಸ್ಥಳೀಯರು!
ನಮ್ಮ ರಾಜ್ಯದಲ್ಲಿ, ಕರಾವಳಿ ಭಾಗವನ್ನು ಉತ್ತರ ಕರ್ನಾಟಕ, ಬಯಲುಸೀಮೆಗೆ ಹೋಲಿಸಿ ನೋಡಿ ದಂತೆ, ಇಲ್ಲಿ ಬಂದಾಗ ನಮ್ಮ ರಾಜ್ಯಕ್ಕೆ, ಸಿಕ್ಕಿಂ ಸೊಬಗನ್ನು ಹೋಲಿಕೆ ಮಾಡಿದಾಗ ಬಹಳಷ್ಟು ವೈವಿಧ್ಯಮಯ ವಿಚಾರಗಳು ಕಂಡವು. ಗಡಿರಾಜ್ಯವಾಗಿ ಆಯಕಟ್ಟಿನ ಪ್ರದೇಶ ದಲ್ಲಿರುವುದರಿಂದ ಪ್ರತಿನಿತ್ಯ ಸೈನಿಕರ ಚಲನವಲನ ಇತರೆ ಪ್ರದೇಶಕ್ಕಿಂತ ಹೆಚ್ಚು!
ಕೆಲವೊಮ್ಮೆ ಸೈನಿಕ ಕಾರ್ಯಾಚರಣೆಗಳು ನಡೆಯುವುದುಂಟು. ಸೈನ್ಯಕ್ಕೆ ಮಾತ್ರ ಅನುಮತಿ ಇರುವ No Mans Land ಎಂಬಂತಹ ಜಾಗಗಳು, ಚೀನಾದ ಸೈನಿಕರನ್ನು ಈ ಗಡಿಪ್ರದೇಶದಲ್ಲಿ ನಾವು ಹತ್ತಿರದಿಂದ ಸಹ ಕಾಣಬಹುದಾಗಿದೆ. ಇಲ್ಲಿನ ಜನಸಂಖ್ಯೆ ವಿಚಾರದಲ್ಲಿ ರಾಜ್ಯಾಡಳಿತ ಮತ್ತು ಜನರು ಆತಂಕದಲ್ಲಿದ್ದಾರೆಂಬುದು ನಮಗೆ ಕಂಡುಬಂದ ಮಾಹಿತಿ.
ಇದನ್ನೂ ಓದಿ: Gururaj Gantihole Column: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಎಣ್ಣೆ: ಇದ್ಯಾವ ಸೀಮೆ ನ್ಯಾಯ ?!
2011ಕ್ಕೆ ಹೋಲಿಸಿದಲ್ಲಿ, 2024-25ಕ್ಕೆ ಶೇ.2ರಷ್ಟು ಏರಿಕೆಯಾದ ಸಮಾಧಾನವಿದ್ದರೂ, ಒಟ್ಟು 6 ಲಕ್ಷವಿರುವುದು ಇವರ ಆತಂಕಕ್ಕೆ ಮುಖ್ಯ ಕಾರಣ. ಜನಸಂಖ್ಯೆ ದ್ವಿಗುಣಗೊಳಿಸಲು ಯೋಜನೆ ಗಳನ್ನು ಹಮ್ಮಿಕೊಂಡಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸರಕಾರಿ ನೌಕರರಿಗೆ ಹೆಚ್ಚುವರಿ ಬಡ್ತಿ, ಮಹಿಳಾ ಸರಕಾರಿ ನೌಕರರಿಗೆ ಒಂದರಿಂದ ಎರಡು ವರ್ಷಗಳವರೆಗೆ ಹೆರಿಗೆ ರಜೆ, ನೌಕರಿ ಮಾಡದ ತಾಯಂದಿರಿಗೆ ಆರ್ಥಿಕ ಅನುದಾನ, ಶಿಶು ಸಮೃದ್ಧಿ ಯೋಜನಾ ಮೂಲಕ ನವಜಾತ ಶಿಶುಗಳ ಹೆಸರಿಗೆ 10800 ರು.ಗಳನ್ನು ಠೇವಣಿ ಇಟ್ಟು 18ರ ವಯಸ್ಸಿಗೆ ಬಂದ ಮೇಲೆ ಪಡೆಯುವಂತಹ ಯೋಜನೆಗಳು ಜಾರಿಯಲ್ಲಿವೆ. ಭಾರತದೊಂದಿಗೆ ವಿಲೀನಗೊಂಡ ಬಳಿಕ, ಶಾಲೆಗೆ ಬಾರದ ಮಕ್ಕಳನ್ನು ಶಾಲೆಗೆ ಆಕರ್ಷಿಸಲು, ಶಾಲೆಯಲ್ಲಿ 5 ಕೆಜಿ ಅಕ್ಕಿ ಕೊಡಲು ಮೊಟ್ಟಮೊದಲು ಆರಂಭಿಸಿದ್ದೇ ಸಿಕ್ಕಿಂ ರಾಜ್ಯ!
ಈ ರಾಜ್ಯವು ಲೆಪ್ಚಾ, ಭುಟಿಯಾ ಮತ್ತು ನೇಪಾಳಿ ಎಂಬ ಮೂರು ಪ್ರಮುಖ ಸಮುದಾಯಗಳನ್ನು ಹೊಂದಿದ್ದು, ಪ್ರಮುಖ ಭಾಷೆಗಳಾಗಿ ನೇಪಾಳಿ, ಭುಟಿಯಾ, ಲೆಪ್ಚಾ ಮತ್ತು ಸರಕಾರಿ ಭಾಷೆಯಾಗಿ ಇಂಗ್ಲಿಷ್ ಇದ್ದು, ಭುಟಿಯಾ ಭಾಷೆಯು ಸಿಕ್ಕಿಮೀಸ್ ಎಂದು ಗುರುತಿಸಿಕೊಂಡಿದೆ.
ಲೋಸಾರ್, ಸಗಾ ದವಾ, ಮಾಘೇ ಸಂಕ್ರಾಂತಿ, ಪಾಂಗ್ ಲಾಬ್ಸೋಲ, ದಶೈನ್ ನಂತಹ ಅನೇಕ ಮತ್ತು ವಿಶಿಷ್ಟ ಹಬ್ಬಗಳನ್ನು ಈ ರಾಜ್ಯ ಹೊಂದಿದೆ. ಉತ್ಸವ, ಭಾಷೆ, ಆಹಾರ ಮತ್ತು ವಸ್ತ್ರಗಳಲ್ಲಿ ತಮ್ಮ ಸಂಸ್ಕೃತಿಯನ್ನು ವ್ಯಕ್ತಪಡಿಸುವ ಇವರು, ನೆಲ-ಜಲ-ಭಾಷೆಯ ಅಭಿಮಾನದ ಜತೆಗೆ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾದವರು. ಸಿಕ್ಕಿಂ ಒಂದು ಕನಸಿನ ರಾಜ್ಯವೆಂದು ಹೇಳಬಹುದು.
ಭಾರತದಲ್ಲಿ ಸಹಜ ಕೃಷಿ, ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಸಾಧಿಸಿದ ಮೊದಲ ಸಂಪೂರ್ಣ ರಾಜ್ಯವಾಗಿ ಹೊರಹೊಮ್ಮಿದೆ. ಇಲ್ಲಿ ಬೆಳೆ ವಿಧಾನವು, ಮುಖ್ಯ ಆಹಾರ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳ ಸಮ್ಮಿಶ್ರವಾಗಿದ್ದು, ಪ್ರಧಾನ ಬೆಳೆಗಳಲ್ಲಿ ಅಕ್ಕಿ, ಜೋಳ, ಗೋಧಿ ಮತ್ತು ಆಲೂಗಡ್ಡೆಗಳು ಸೇರಿವೆ.
ದೊಡ್ಡ ಏಲಕ್ಕಿ, ಶುಂಠಿ ಮತ್ತು ಆಫ್ -ಸೀಸನ್ ತರಕಾರಿಗಳಂತಹ ವಾಣಿಜ್ಯ ಬೆಳೆಗಳು ಮುಖ್ಯ ವಾಗಿವೆ. ಸಿಕ್ಕಿಂ, ಭಾರತದಲ್ಲಿ ದೊಡ್ಡ ಏಲಕ್ಕಿಯನ್ನು ಉತ್ಪಾದಿಸುವ ಅಗ್ರಸ್ಥಾನದಲ್ಲಿದ್ದು, ಇದು ದೇಶದ ಒಟ್ಟು ಉತ್ಪಾದನೆಯ ಶೇ.80ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಇಷ್ಟೆಲ್ಲ ವಿಶೇಷತೆಗಳ ನಡುವೆ ಜೈವಿಕ ವೈವಿಧ್ಯತೆಗೂ ತನ್ನ ಕೊಡುಗೆ ನೀಡುತ್ತಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಹೂವಿನ ಸಸ್ಯಗಳು, 600ಕ್ಕೂ ಹೆಚ್ಚು ಹಕ್ಕಿಗಳ ಪ್ರಭೇದಗಳು ಮತ್ತು ಅಪರೂಪದ ಕೆಂಪು ಕರಡಿ ( Red Panda)ಯು ಸಿಕ್ಕಿಂ ರಾಜ್ಯದ ರಾಜ್ಯಪ್ರಾಣಿ ಎಂದು ಪರಿಗಣಿತವಾಗಿದೆ.
ಸ್ವಚ್ಚತೆ, ಪರಿಸರ ರಕ್ಷಣೆಗೆ ಹೆಚ್ಚು ಮಹತ್ವ ಕೊಡುವ ಇಲ್ಲಿನ ಜನತೆ, ಪ್ಲಾಸ್ಟಿಕ್ ಬ್ಯಾಗ್ ನಿಷೇಧ, ಕೃಷಿ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹೆಚ್ಚು ಅನುಸರಿಸುತ್ತಿದ್ದು, ಹಸಿರುಶಕ್ತಿ ಮತ್ತು ಪರಿಸರಸ್ನೇಹಿ ನೀತಿಗಳನ್ನು ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿವೆ. ಇದರ ನಡುವೆ, ನಮಗೆ ಮತ್ತೊಂದು ಪ್ರಮುಖವಾಗಿ ಕಂಡಿದ್ದು, ಸಿಕ್ಕಿಂ ರಾಜ್ಯದ ನಮ್ಗ್ಯಾಲ್ ರಾಜಮನೆತನ. ಇದು 17ನೇ ಶತಮಾನದಲ್ಲಿ ಸ್ಥಾಪನೆಯಾಗಿ, 1975ರವರೆಗೆ ಸುಮಾರು 333 ವರ್ಷಗಳ ಕಾಲ ಈ ಪುಟ್ಟ ರಾಜ್ಯ ವನ್ನು ಆಳಿತು. ಈ ವಂಶದ ಸದಸ್ಯರನ್ನು ಚೋಗ್ಯಾಲ್ಗಳು (Chogyal ) ಅಂದರೆ, ಬೌದ್ಧಧರ್ಮದ ಧರ್ಮರಾಜರು ಎಂದು ಕರೆಯಲಾಗುತ್ತಿತ್ತು.
ಫುಂಟ್ಸಾಗ್ ನಮ್ಗ್ಯಾಲ್:(1642-1670)- ಮೊದಲ ಚೋಗ್ಯಾಲ, ಇವರು ನಮ್ಗ್ಯಾಲ್ ರಾಜವಂಶ( Namgyal dynasty ) ಸ್ಥಾಪಿಸಿ, ಯುಕ್ಸೋಮ್ ಅನ್ನು ರಾಜಧಾನಿಯನ್ನಾಗಿ ಮಾಡಿದರು. ಟೆನ್ಸುಂಗ್ ನಮ್ಗ್ಯಾಲ್:(1670-1700)- ಯುಕ್ಸೋಮ್ ನಿಂದ ರಾಬ್ಡೆನ್ಸೆಗೆ ರಾಜಧಾನಿಯನ್ನು ಸ್ಥಳಾಂತರಿಸಿ ದರು.
ನಂತರದಲ್ಲಿ ಬಂದ ತ್ಸುಗುಡ್ ನಾಮ್ಗ್ಯಾಲ್:(1793-1863)-ರಾಜಧಾನಿಯನ್ನು ತುಮ್ಲಾಂಗೆ ವರ್ಗಾ ಯಿಸಿದ ಮತ್ತು ಬ್ರಿಟಿಷ್ ಇಂಡಿಯಾದೊಂದಿಗೆ ಟಿಟಾಲಿಯಾ ಒಪ್ಪಂದಕ್ಕೆ ಸಹಿ ಹಾಕಿದ ದೀರ್ಘಾ ವಧಿಯ ಆಳ್ವಿಕೆಯ ಚೋಗ್ಯಾಲ. ಮತ್ತು ಪಾಲ್ಡೆನ್ ತೊಂಡುಪ್ ನಮ್ಗ್ಯಾಲ್:(1963-1975)- ಸಿಕ್ಕಿಂನ ಕೊನೆಯಚೋಗ್ಯಾಲ್ ಆಗಿದ್ದು, ಇವರ ಆಳ್ವಿಕೆಯಲ್ಲಿ ಸಿಕ್ಕಿಂ, ಭಾರತದ 22ನೇ ರಾಜ್ಯವಾಗಿ ವಿಲೀನ ಗೊಳ್ಳುವುದರೊಂದಿಗೆ ಈ ಮನೆತನದ ಆಳ್ವಿಕೆ ಕೊನೆಗೊಂಡಿತು.
ಹೊಟೆಲ್ ಒಂದರಲ್ಲಿ ಚಹಾ ಕುಡಿಯುತ್ತಿದ್ದ ಸಮಯದಲ್ಲಿ ಅದರ ಮಾಲೀಕ, ‘ರಾಜರ ಕಾಲದಲ್ಲಿ, ಮುಕ್ಕಾಲು ಜನಕ್ಕೆ ದುಡಿಮೆ ಇರುತ್ತಿರಲಿಲ್ಲ, ಕಾಲಭಾಗ ರಾಜರ ಕುಟುಂಬಕ್ಕೆ ಸೇರಿದ ಇವರಿಗೆ ದುಡಿಮೆಯ ಅಗತ್ಯವಿರಲಿಲ್ಲ. ಹೀಗಾಗಿ, ಬಹುತೇಕ ಕಡಗಣಿಸಿದಂತಾಗಿದ್ದ ಈ ಪ್ರದೇಶವು ಭಾರತ ದೊಂದಿಗೆ ಸೇರಿದ ಬಳಿಕ ತನ್ನ ಮಹತ್ವ ಪಡೆಯಲು ಆರಂಭಿಸಿತು. ಮೋದಿಯವರು ಪ್ರಧಾನಿಯಾಗಿ ಬಂದ ಬಳಿಕ, ನಮ್ಮ ರಾಜ್ಯಕ್ಕೆ ಇನ್ನಿಲ್ಲದ ಮಹತ್ವ ಕೊಟ್ಟಿದ್ದಾರೆ.
ಪ್ರವಾಸೋದ್ಯಮಕ್ಕೆ, ಅಭಿವೃದ್ಧಿಕಾರ್ಯಗಳಿಗೆ ಕೋಟಿ ಕೋಟಿ ಸುರಿದಿದ್ದಾರೆ. ಇಂದಿನ ಯುವಕರು ಬದುಕಿನ ಭದ್ರತೆಯಲ್ಲಿ ನೆಮ್ಮದಿ ಜೀವನ ಮಾಡುವಂತಾಗಿದೆ’ ಎಂದಿದ್ದು ಈಗಲೂ ಮನತಾಕುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಿಕ್ಕಿಂ50’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ‘ಸಿಕ್ಕಿಂ ದೇಶದ ಹೆಮ್ಮೆ. ಕಳೆದ ದಶಕದಲ್ಲಿ, ನಮ್ಮ ಸರಕಾರವು ಈಶಾನ್ಯವನ್ನು ಭಾರತದ ಅಭಿವೃದ್ಧಿ ಪಯಣದ ಕೇಂದ್ರಭಾಗದಲ್ಲಿ ಇರಿಸಿದೆ.
ನಾವು ’ಆಕ್ಟ್ ಈ’ ನೀತಿಯನ್ನು ’ಆಕ್ಟ್ -’ಎಂಬ ಮನೋಭಾವದಿಂದ ಮುನ್ನಡೆಸುತ್ತಿದ್ದೇವೆ. ಸಿಕ್ಕಿಂ ಮತ್ತು ಇಡೀ ಈಶಾನ್ಯ ಭಾಗವು, ಭಾರತದ ಪ್ರಗತಿಯಲ್ಲಿ ಉಜ್ವಲ ಅಧ್ಯಾಯವಾಗಿ ಹೊರ ಹೊಮ್ಮುತ್ತಿದೆ. ಸಿಕ್ಕಿಂ ಅನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ, ಭಾರತವು ಜಾಗತಿಕ ಕ್ರೀಡಾ ಸೂಪರ್ ಪರ್ವ ಆಗಿ ಹೊರಹೊಮ್ಮಲು ಸಿದ್ಧವಾಗಿದೆ.
ಜೊತೆಗೆ, ಸಿಕ್ಕಿಂ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹಸಿರು ಮಾದರಿ ರಾಜ್ಯವಾಗಬೇಕು ಎಂಬುದು ನಮ್ಮ ಕನಸು, ಅದನ್ನು ಈಡೇರಿಸಿ ತೋರಿಸುತ್ತೇವೆ’ ಎಂದು ತಮ್ಮ ದೂರದೃಷ್ಟಿ ಬಿಚ್ಚಿಟ್ಟರು. ನಮ್ಮ ಪ್ರವಾಸದ ವೇಳೆ, ಸ್ಥಳೀಯರು ಹೆಚ್ಚು ಮಾತನಾಡಿದ್ದು ನಾಥುಲಾ ಪಾಸ್ ಎಂಬ ಪರ್ವತದ್ವಾರದ ಬಗ್ಗೆ!
ನಾಥುಲಾ ಪಾಸ್ ಸಿಕ್ಕಿಂ ರಾಜ್ಯದಲ್ಲಿ ಸಮುದ್ರಮಟ್ಟದಿಂದ ಸುಮಾರು 14140 ಅಡಿ (4310 ಮೀಟರ್) ಎತ್ತರದಲ್ಲಿ ಇದೆ. ಪ್ರಾಚೀನ ಕಾಲದಲ್ಲಿ ಸಿಲ್ಕ್ ರೋಡ್ ( Silk Route ) ಎಂಬ ಐತಿಹಾಸಿಕ ವ್ಯಾಪಾರ ಮಾರ್ಗದ ಭಾಗವಾಗಿತ್ತು ಎಂದು ತಿಳಿದು ಬರುತ್ತದೆ. ನಾಥುಲಾ ಪಾಸ್ನಲ್ಲಿ ಹವಾಮಾನ ಅತ್ಯಂತ ತೀವ್ರತರವಾಗಿದ್ದು, ಇದರ ತಾಪಮಾನ ಚಳಿಗಾಲದಲ್ಲಿ -20 ಡಿಗ್ರಿ ಸೆಲ್ಸಿಯಸ್ವರೆಗೆ ಇಳಿಯುತ್ತದೆ.
ವರ್ಷದ ಬಹುಪಾಲು ಸಮಯ ಹಿಮಪಾತವಾಗುತ್ತದೆ. ಈ ಪ್ರದೇಶದಲ್ಲಿರುವ ಪರ್ವತಗಳು, ಹಿಮಪಾತ, ಮತ್ತು ವಿಶಿಷ್ಟವಾದ ಹೈ ಆಲ್ಟಿಟ್ಯೂಡ್ ಜೈವಿಕ ವೈವಿಧ್ಯತೆ ಪ್ರವಾಸಿಗರಿಗೆ ಆಕರ್ಷಣೆ ಯಾಗಿದೆ. ಸಿಕ್ಕಿಂ ರಾಜ್ಯದ ವಿಧಾನಸಭಾ ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ಜೊತೆಗೆ ರಾಜ್ಯದ ಪ್ರಧಾನ ಕಾರ್ಯದರ್ಶಿಯವರು ತಮ್ಮಸಮಯ ಮೀಸಲಿಟ್ಟು, ನಮ್ಮ ಅಧ್ಯಯನ ತಂಡದ ಜೊತೆ 2-3 ಗಂಟೆಗಳ ಕಾಲ ವಿಷಯಾಧಾರಿತ ಚರ್ಚೆಗಳನ್ನು ನಡೆಸಿದ್ದು ಬಹುಕಾಲ ನೆನಪಿನಲ್ಲಿ ಉಳಿಯು ವಂಥಾದ್ದು!
ಇಲ್ಲಿನ ಬಹುತೇಕರಿಗೆ ಕರ್ನಾಟಕ ಪರಿಚಿತವಾಗಿದ್ದು, ಅದರಲ್ಲೂ ಬೆಂಗಳೂರು ಅತ್ಯಂತ ಆಪ್ತ ನಗರವಾಗಿದೆ ಎಂದು ತಿಳಿದು ಸೋಜಿಗವಾಯಿತು. ಇರುವ ಅಷ್ಟೂ ಜನಸಂಖ್ಯೆ ಪರಿಗಣಿಸಿದಾಗ, ಹತ್ತು ಜನರಲ್ಲಿ ಆರು ಜನರು ದುಡಿಮೆ, ಓದೋಕೆ ಮತ್ತು ಇತರೆ ಕಾರಣದಿಂದ ಬೆಂಗಳೂರಿಗೆ ಹೋಗಿ ಬಂದಿರುತ್ತಾರೆ. ಇನ್ನಿಬ್ಬರು ಹೋಗುವ ತಯಾರಿಯಲ್ಲಿರುತ್ತಾರೆ ಎಂಬುದು ಇಲ್ಲಿನವರಿಗೆ ಬೆಂಗಳೂರು ನಗರದ ಜೊತೆಗಿರುವ ಒಡನಾಟ ತೋರಿಸುತ್ತದೆ.
ಯುನೆಸ್ಕೋ ವಿಶ್ವ ಹೇರಿಟೇಜ್ ತಾಣ ಕಾಂಚೆಂಜಂಗಾ ರಾಷ್ಟ್ರೀಯ ಉದ್ಯಾನವನವಿದೆ. ಫಾಂಬಾಂಗ್ ಲೋ, ಶಿಂಗ್ಬಾ ರೋಡೋಡೆಂಡ್ರಾನ್ ನಂತಹ ಧಾರ್ಮಿಕ ಸ್ಥಳಗಳು, ಪ್ರಮುಖ ಪ್ರವಾಸಿ ಆಕರ್ಷಣಾ ತಾಣಗಳಾದ ಹಿಮಪಾತದಿಂದ ನಿರ್ಮಿತವಾದ ಚಾಂಗು ಲೇಕ್ ( Tsomgo) ಸರೋವರ, ತಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ಕೇಂದ್ರ ರಂಟೆಕ್ ಬೌದ್ಧ ಮಠ, ಹೂಗಳ ಕಣಿವೆ ಎಂದೇ ಪ್ರಸಿದ್ಧವಾದ ಯುಮ್ಥಾಂಗ್ ಕಣಿವೆ, ಇಚ್ಛೆಗಳನ್ನು ಪೂರೈಸುವ ಪವಿತ್ರ ತಾಣ ಖೆಚೊಪಾಲ್ರಿ ಸರೋವರ ಸೇರಿದಂತೆ ಹಲವು ಜೀವವೈವಿಧ್ಯಮಯ ಸ್ಥಳಗಳು ನಮ್ಮನ್ನು ಮಂತ್ರಮುಗ್ಧ ಗೊಳಿಸುತ್ತವೆ.
ಶಿಕ್ಷಣದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ, ಸಂಪೂರ್ಣ ಪ್ಲಾಸ್ಟಿಕ್ ನಿಷೇಧ, ಪರಿಸರದ ಬಗ್ಗೆ ಇವರಿ ಗಿರುವ ಕಾಳಜಿ ಇವರನ್ನು ದೇಶದಲ್ಲಿಯೇ ವಿಶಿಷ್ಟವಾಗಿ ಗುರುತಿಸುವಂತೆ ಮಾಡಿದೆ ಎನ್ನಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಿಕ್ಕಿಂನ ಆಯಕಟ್ಟಿನ ಸ್ಥಳವಾಗಿದ್ದು, ವೈವಿಧ್ಯಮಯ ಪರಿಸರ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭಾರತಕ್ಕೆ ಅಮೂಲ್ಯಆಸ್ತಿಯಾಗಿದೆ, ಅದರ ಭದ್ರತೆ, ಆರ್ಥಿಕತೆ ಮತ್ತು ಪರಿಸರ ಸುಸ್ಥಿರತೆಗೆ ನಿರಂತರ ಕೊಡುಗೆ ನೀಡುತ್ತಿರುವ ಹೆಮ್ಮೆಯ ರಾಜ್ಯವಾಗಿದೆ.