ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪ್ರೇಯಸಿ ಮನೆಗೆ ಹೋಗಿ ಹೆಣವಾದ ಯುವಕ; 4 ತಿಂಗಳ ಬಳಿಕ ಪ್ರಕರಣ ಭೇದಿಸಿದ ಕಲಬುರಗಿ ಪೊಲೀಸರು

Kalaburagi News: ಜನವರಿ 30 ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆನೂರು ಗ್ರಾಮದಲ್ಲಿ ಖಜೂರಿ ಗ್ರಾಮದ ರಾಹುಲ್ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಕಲಬುರಗಿ ಎಸ್​​ಪಿ ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದ್ದಾರೆ.

ಪ್ರೇಯಸಿ ಮನೆಗೆ ಹೋಗಿ ಹೆಣವಾದ ಯುವಕ; ಪ್ರಕರಣ ಭೇದಿಸಿದ ಪೊಲೀಸರು

Profile Prabhakara R Jun 14, 2025 3:51 PM

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಕಲಬುರಗಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದಾರೆ. ‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಹೋಗಿದ್ದ ಯುವಕ ವಾಪಸ್ ಬರಲೇ ಇಲ್ಲ. ಪ್ರೇಯಸಿಯ ಅಣ್ಣನೇ ಯುವಕನನ್ನು ಕೊಲೆ (Murder Case) ಮಾಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಜನವರಿ 30 ರಂದು ಆನೂರು ಗ್ರಾಮದಲ್ಲಿ ಖಜೂರಿ ಗ್ರಾಮದ ರಾಹುಲ್ ಎಂಬ ಯುವಕನ ಕೊಲೆಯಾಗಿತ್ತು. ರಾಹುಲ್ ಪ್ರೇಯಸಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆರೋಪಿಯಾಗಿದ್ದಾರೆ. ಎ 1 ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿ ಮತ್ತು ರಾಹುಲ್ ಖಜೂರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜನವರಿ 30 ರಂದು ರಾತ್ರಿ ಭಾಗ್ಯವಂತಿ ರಾಹುಲ್​​ಗೆ ಕರೆ ಮಾಡಿ, ʼಮನೆಯವರು ಊರಿಗೆ ಹೋಗಿದ್ದಾರೆ. ಯಾರೂ ಇಲ್ಲ ಬಾ’ ಎಂದು ಕರೆದಿದ್ದಾಳೆ. ಹೀಗಾಗಿ ಆನೂರು ಗ್ರಾಮಕ್ಕೆ ರಾಹುಲ್ ಹೋಗಿದ್ದಾನೆ. ಆ ಸಂದರ್ಭದಲ್ಲಿ ಏಕಾಏಕಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆಗಮಿಸಿದ್ದಾನೆ. ಭಾಗ್ಯವಂತಿ ಮತ್ತು ರಾಹುಲ್ ಒಟ್ಟಿಗೆ ಇರುವುದನ್ನು ಕಂಡು ರೊಚ್ಚಿಗೆದ್ದ ಪೃಥ್ವಿರಾಜ್ ತಂಗಿಗೆ ಬೈದು, ರಾಹುಲ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂದು ಸ್ನೇಹಿತನಿಗೆ ಕರೆ ಮಾಡಿ ಆತನ ಬೈಕ್​ನಲ್ಲಿಯೇ ರಾಹುಲ್ ಶವ ಇಟ್ಟುಕೊಂಡು ಹೋಗಿ, ಮಹಾರಾಷ್ಟ್ರದ ಸಾಂಗ್ವಿ ಬಳಿ ಬೆಣ್ಣೆತೋರಾ ಹಿನ್ನೀರಿನಲ್ಲಿ ಮೃತದೇಹಕ್ಕೆ ಕಲ್ಲುಕಟ್ಟಿ ಎಸೆದು ಹಾಕಿ ಪರಾರಿಯಾಗಿದ್ದ. ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು ತಂಗಿ ಮತ್ತು ತಾಯಿಯನ್ನು ಕರೆದುಕೊಂಡು ಸುತ್ತಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಯುವಕ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಸಂತ್ರಸ್ತನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿದ್ದಾರೆ. ಆಗ, ಕೊಲೆಯ ನಡೆದಿರುವ ವಿಚಾರ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Honeymoon Murder Case: ರಾಜಾ ರಘುವಂಶಿ ಹತ್ಯೆ ಮಾಡಿ ಬೇರೆ ಮಹಿಳೆಯ ಕೊಲೆಗೆ ಪ್ಲ್ಯಾನ್‌! ಶವವನ್ನು ಸೋನಂನದ್ದೆಂದು ಬಿಂಬಿಸಲು ಹಂತಕರ ಸಂಚು

ತೀರ್ಥಯಾತ್ರೆಯ ಮಧ್ಯೆ, ಜಾಮೀನು ಪಡೆಯುವುದಕ್ಕಾಗಿ ವಕೀಲರನ್ನು ಭೇಟಿಯಾಗಲೆಂದು ಆರೋಪಿಗಳು ಊರಿಗೆ ಬಂದಿದ್ದಾರೆ. ಇದೇ ವೇಳೆ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ರಾಹುಲ್ ಕೊಲೆ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಎಸ್​​ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಭೀಕರ ಸರಣಿ ಅಪಘಾತ: ಕಾಪಾಡಲು ಧಾವಿಸಿದವನೂ ಸೇರಿ ಮೂವರು ಸಾವು

ಬೆಳಗಾವಿ: ಭೀಕರ ಸರಣಿ ಅಪಘಾತ ಸಂಭವಿಸಿ (Road Accident) ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿಕ್ಕೋಡಿಯ (Chikkodi news)ಅಥಣಿ ಹೊರವಲಯದಲ್ಲಿ ವಿಜಯಪುರ ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ (death), ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕಾಪಾಡಲು ಮುನ್ನುಗ್ಗಿದ ಒಬ್ಬಾತನೇ ಇದರಲ್ಲಿ ಬಲಿಯಾಗಿದ್ದಾನೆ.

ಲಾರಿ, ಪಿಕಪ್ ವಾಹನ, ಸ್ಕಾರ್ಪಿಯೋ ಹಾಗೂ ಎರ್ಟಿಗಾ ಕಾರಿನ ನಡುವೆ ಅಪಘಾತವಾಗಿದೆ. ಭೀಕರ ಸರಣಿ ಅಪಘಾತದಲ್ಲಿ ಮಹೇಶ ಗಾತಾಡೆ (30), ಶಿವಮ್ ಚೌಹಾನ್ (24) ಹಾಗೂ ಸಚಿನ ಮಾಳಿ (40) ಎಂಬವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಇವರು ಮಹಾರಾಷ್ಟ್ರದ ಮಿರಜ್ ಹಾಗೂ ಕೊಲ್ಲಾಪುರ ಮೂಲದವರಾಗಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೊದಲಿಗೆ ಪಿಕಪ್ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ಹೊಡೆತಕ್ಕೆ ಪಿಕಪ್ ವಾಹನ ಪಲ್ಟಿಯಾಗಿದೆ. ಪಿಕಪ್ ವಾಹನದ ಚಾಲಕ ಹಾಗೂ ಕ್ಲೀನರ್​​ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದಾಗ ಇದನ್ನು ನೋಡಿದ ಸ್ಕಾರ್ಪಿಯೋ ಚಾಲಕರೊಬ್ಬರು ತಕ್ಷಣವೇ ಸ್ಕಾರ್ಪಿಯೋವನ್ನು ನಿಲ್ಲಿಸಿ ಸಹಾಯಕ್ಕೆ ಇಳಿದಿದ್ದಾರೆ. ಸ್ಕಾರ್ಪಿಯೋ ಚಾಲಕ ವಾಹನ ಪಕ್ಕಕ್ಕೆ ಹಾಕಿ ರಸ್ತೆ ದಾಟುವಾಗ ಹಿಂದಿನಿಂದ ಜೋರಾಗಿ ಬಂದ ಎರ್ಟಿಗಾ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ನಂತರ ಎರ್ಟಿಗಾ ಕಾರು ಲಾರಿಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಎರ್ಟಿಗಾ ಕಾರಿನಲ್ಲಿದ್ದ ಇಬ್ಬರು, ಸ್ಕಾರ್ಪಿಯೋ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿಯೇ ಪಾದಚಾರಿ ವ್ಯಕ್ತಿ ಸಾವು

ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಪೊಲೀಸರು ಈ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪ್ರಾಣ ಉಳಿಸಲು ಬಂದು ಪ್ರಾಣ ಕಳೆದುಕೊಂಡ ಸ್ಕಾರ್ಪಿಯೋ ಚಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.