ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Hassan Controversy: 'ಶಿವಣ್ಣಗೆ ಆದ ಮುಜುಗರಕ್ಕೆ ವಿಷಾದʼ : ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ಪತ್ರ ಬರೆದ ಕಮಲ್; ಕ್ಷಮೆಯ ಸುಳಿವಿಲ್ಲ!

Kamal Hassan controversy: ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ಪತ್ರ ಬರೆದಿರುವ ನಟ ಕಮಲ್‌ ಹಾಸನ್‌, ಅದರಲ್ಲಿ ʼನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆʼ ಎಂದಿದ್ದಾರೆ. ʼಈ ಪ್ರಕರಣ ಶಿವಣ್ಣಗೆ ನೋವುಂಟು ಮಾಡಿದ್ದಕ್ಕಾಗಿ ವಿಷಾದವಿದೆʼ ಎಂದಿದ್ದಾರೆ. ಆದರೆ ಕನ್ನಡದ ಕುರಿತ ತಮ್ಮ ಹೇಳಿಕೆಗೆ ಅವರು ಯಾವುದೇ ಕ್ಷಮಾಯಾಚನೆ ಮಾಡಿಲ್ಲ.

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ಪತ್ರ ಬರೆದ ಕಮಲ್; ಕ್ಷಮೆಯ ಸುಳಿವಿಲ್ಲ!

ಹರೀಶ್‌ ಕೇರ ಹರೀಶ್‌ ಕೇರ Jun 3, 2025 1:17 PM

ಬೆಂಗಳೂರು: ಕನ್ನಡದ ಕುರಿತು ನೀಡಿದ ಹೇಳಿಕೆ ಕರ್ನಾಟಕ(Karnataka) ರಾಜ್ಯದಾದ್ಯಂತ ಆಕ್ರೋಶ ಮೂಡಿಸಿರುವ (Kamal Hassan Controversy) ಹಿನ್ನೆಲೆಯಲ್ಲಿ ಹಾಗೂ ತಮ್ಮ ಅಭಿನಯದ ಹೊಸ ಸಿನೆಮಾ ʼಥಗ್‌ ಲೈಫ್‌ʼ (Thug Life) ಬಿಡುಗಡೆಗೆ ಅಡ್ಡ ಉಂಟಾಗಿರುವ ಹಿನ್ನೆಲೆಯಲ್ಲಿ ನಟ ಕಮಲ್‌ ಹಾಸನ್‌ ಧ್ವನಿ ಸ್ವಲ್ಪ ತಗ್ಗಿದ್ದು, ಈ ಕುರಿತು ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ʼನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆʼ ಎಂದಿದ್ದಾರೆ. ʼಈ ಪ್ರಕರಣ ಶಿವಣ್ಣಗೆ (Shivaraj kumar) ನೋವುಂಟು ಮಾಡಿದ್ದಕ್ಕಾಗಿ ವಿಷಾದವಿದೆʼ ಎಂದಿದ್ದಾರೆ. ಆದರೆ ಕನ್ನಡದ ಕುರಿತ ತಮ್ಮ ಹೇಳಿಕೆಗೆ ಅವರು ಯಾವುದೇ ಕ್ಷಮಾಯಾಚನೆ ಮಾಡಿಲ್ಲ.

ಇಂದು ಕರ್ನಾಟಕ ಹೈಕೋರ್ಟ್‌ ಕೂಡ ʼಥಗ್‌ ಲೈಫ್‌ʼ ಸಿನಿಮಾ ರಿಲೀಸ್‌ಗೆ ಭದ್ರತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕಮಲ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ʼನಿಮ್ಮ ಸಿನಿಮಾ ಭದ್ರತೆಗಾಗಿ ಇಲ್ಲಿಗೆ ಬಂದಿದ್ದೀರಾ? ಇಂಥ ಪರಿಸ್ಥಿತಿ ಯಾಕೆ ತಂದುಕೊಳ್ಳಬೇಕಿತ್ತು? ಇನ್ನೊಬ್ಬರ ಭಾವನೆಗೆ ನೋವುಂಟು ಮಾಡಿದ್ದೀರಿʼ ಎಂದು ಕಮಲ್‌ ಅವರನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಕಮಲ್‌ ಬರೆದ ಪತ್ರದಲ್ಲಿ ಏನಿದೆ?

ʼಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ. ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ನೋವುಂಟುಮಾಡುತ್ತದೆ. ನನ್ನ ಮಾತುಗಳ ಅರ್ಥ, ನಾವೆಲ್ಲರೂ ಒಂದೇ ಕುಟುಂಬದವರು. ನಾನು ಯಾವುದೇ ರೀತಿಯಲ್ಲಿ ಕನ್ನಡವನ್ನು ಕುಗ್ಗಿಸಲು ಹೇಳಿದ್ದು ಅಲ್ಲ.ʼ

ʼಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ. ತಮಿಳಿನಂತೆಯೇ, ಕನ್ನಡವೂ ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿದ ಮಮತೆ ಮತ್ತು ವಾತ್ಸಲ್ಯವನ್ನು ನಾನು ಪಡೆದಿದ್ದೇನೆ.ʼ

ʼನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು. ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತ. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ. ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ.ʼ

ʼನನಗೆ ಸಿನಿಮಾ ಭಾಷೆ ಗೊತ್ತು ಮತ್ತು ಮಾತನಾಡುತ್ತೇನೆ. ಸಿನಿಮಾ ಪ್ರೀತಿ ಮತ್ತು ಬಾಂಧವ್ಯವನ್ನು ಮಾತ್ರ ತಿಳಿದಿರುವ ಸಾರ್ವತ್ರಿಕ ಭಾಷೆ. ನನ್ನ ಹೇಳಿಕೆಯು ನಮ್ಮೆಲ್ಲರ ನಡುವೆ ಆ ಬಂಧ ಮತ್ತು ಏಕತೆಯನ್ನು ಸ್ಥಾಪಿಸಲು ಮಾತ್ರ. ನನ್ನ ಹಿರಿಯರು ನನಗೆ ಕಲಿಸಿದ ಈ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ.ʼ

ʼಈ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದರಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು. ಇದು ನನಗೆ ನಿಜವಾಗಿಯೂ ವಿಷಾದವಿದೆ. ಸಿನಿಮಾ ಜನರ ನಡುವೆ ಸೇತುವೆಯಾಗಿ ಉಳಿಯಬೇಕು. ಅವರನ್ನು ವಿಭಜಿಸುವ ಗೋಡೆಯಾಗಿ ಉಳಿಯಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಪುನರುಚ್ಚರಿಸಲು ಒಂದು ಅವಕಾಶ. ಹೀಗೆಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.ʼ

ಇದನ್ನೂ ಓದಿ: Kamal Hassan Controversy: ʼನಿಮ್ಮ ಹೇಳಿಕೆಯಿಂದ ಶಿವರಾಜ್‌ ಕುಮಾರ್‌ಗೂ ಸಮಸ್ಯೆʼ ಎಂದ ಹೈಕೋರ್ಟ್;‌ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿಕೆ