CM Siddaramaiah: ಕರ್ನಾಟಕದ ತೋತಾಪುರಿ ಮಾವು ಆಂಧ್ರದಲ್ಲಿ ನಿಷೇಧ, ತೆರವುಗೊಳಿಸಲು ಚಂದ್ರಬಾಬು ನಾಯ್ಡುಗೆ ಸಿಎಂ ಸಿದ್ದರಾಮಯ್ಯ ಪತ್ರ
CM Siddaramaiah: ಕೋಲಾರದ ಶ್ರೀನಿವಾಸಪುರದ ತೋತಾಪುರಿ ಮಾವು ಖರೀದಿ ಮಾಡದಂತೆ ಆಂಧ್ರದ ಚಿತ್ತೂರು ಜಿಲ್ಲಾಡಳಿತ ಮೌಖಿಕ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಮಾವು ಬೆಲೆ ಕುಸಿತ ಉಂಟಾಗಿ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಆತಂಕಗೊಂಡ ರೈತರು ಮಾವುಗಳನ್ನು ರಸ್ತೆಗೆ ಸುರಿದು ಧರಣಿ ಮಾಡಿದ್ದಾರೆ.


ಬೆಂಗಳೂರು: ಕರ್ನಾಟಕದ (Karnataka) ತೋತಾಪುರಿ ಮಾವಿನ ಹಣ್ಣಿಗೆ (Totapuri Mango) ಆಂಧ್ರ ಪ್ರದೇಶದಲ್ಲಿ (Andhra Pradesh) ನಿರ್ಬಂಧ ವಿಧಿಸಲಾಗಿದೆ. ಇದರಿಂದ ರಾಜ್ಯದ ಮಾವು ಬೆಳೆಗಾರರು ಭಾರೀ ನಷ್ಟ ಅನುಭವಿಸುವ ಆತಂಕದಲ್ಲಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿರ್ಬಂಧವನ್ನು ವಾಪಸ್ ತೆಗೆಯುವಂತೆ ಮನವಿ ಮಾಡಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrabanu Naidu) ಅವರಿಗೆ ಪತ್ರ ಬರೆದಿದ್ದಾರೆ.
ಕೋಲಾರದ ಶ್ರೀನಿವಾಸಪುರದ ತೋತಾಪುರಿ ಮಾವು ಖರೀದಿ ಮಾಡದಂತೆ ಆಂಧ್ರದ ಚಿತ್ತೂರು ಜಿಲ್ಲಾಡಳಿತ ಮೌಖಿಕ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಮಾವು ಬೆಲೆ ಕುಸಿತ ಉಂಟಾಗಿ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಆತಂಕಗೊಂಡ ರೈತರು ಮಾವುಗಳನ್ನು ರಸ್ತೆಗೆ ಸುರಿದು ಧರಣಿ ಮಾಡಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಆಂಧ್ರ ಪ್ರದೇಶದ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿದ್ದರು. ಇದೀಗ ಸಿಎಂ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ‘2025ರ ಜೂನ್ 7ರಂದು ಚಿತ್ತೂರು ಜಿಲ್ಲೆಯ ಜಿಲ್ಲಾಧಿಕಾರಿ ಅವರು ಹೊರಡಿಸಿದ್ದ, ಇತರ ರಾಜ್ಯಗಳಿಂದ ಚಿತ್ತೂರು ಜಿಲ್ಲೆಗೆ ತೋತಾಪುರಿ ಮಾವುಗಳ ಪ್ರವೇಶವನ್ನು ನಿಷೇಧಿಸುವ ಆದೇಶದ ಕುರಿತು ನನ್ನ ಆಳವಾದ ಕಳವಳವನ್ನು ಇಲ್ಲಿ ವ್ಯಕ್ತಪಡಿಸುತ್ತೇನೆ. ಈ ಆದೇಶವನ್ನು ಜಾರಿಗೆ ತರಲು ತಮಿಳುನಾಡು ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಆದೇಶ ಕಾರ್ಯರೂಪಗೊಳಿಸಲು ಪೌರಾಡಳಿತ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳಿಂದ ಸಂಯುಕ್ತ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ದೊರಕಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಈ ತ್ವರಿತ ಮತ್ತು ಏಕಪಕ್ಷೀಯ ಕ್ರಮವು, ವಿಶೇಷವಾಗಿ ಗಡಿಭಾಗಗಳಲ್ಲಿ ತೋತಾಪುರಿ ಮಾವುಗಳನ್ನು ವ್ಯಾಪಕವಾಗಿ ಬೆಳೆಯುವ ಕರ್ನಾಟಕದ ಹಾಲಿ ರೈತರಿಗೆ ಬಹಳಷ್ಟು ತೊಂದರೆ ಮತ್ತು ನಷ್ಟವನ್ನು ಉಂಟು ಮಾಡುತ್ತಿದೆ. ಈ ರೈತರು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳು ಮತ್ತು ಪಲ್ಪ್ ಘಟಕಗಳೊಂದಿಗೆ ಸ್ಥಾಪಿತವಾಗಿರುವ ಸರಪಳಿಯ ಮೇಲೆ ಅವಲಂಬಿತರಾಗಿದ್ದಾರೆ. ನಿಮ್ಮ ಇತ್ತೀಚಿನ ನಿಷೇಧದಿಂದ ಈ ಸರಪಳಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ವ್ಯಾಪಕವಾಗಿ ಬೆಳೆದ ಮೌಲ್ಯಯುತ ಉತ್ಪನ್ನಗಳಿಗೆ ಭರಿಸಲಾಗದ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ. ಇದು ಸಾವಿರಾರು ರೈತ ಕುಟುಂಬಗಳ ಆದಾಯದ ಮೂಲವನ್ನೇ ತೀವ್ರವಾಗಿ ಹಾನಿಗೊಳಿಸುತ್ತದೆ.’
‘ಇದಕ್ಕಿಂತ ಹೆಚ್ಚಾಗಿ, ಪೂರ್ವಭಾವಿ ಚರ್ಚೆಯಿಲ್ಲದೆ ಅಥವಾ ಸಹಕಾರದಿಂದ ಹೊರತಾಗಿ ತೆಗೆದುಕೊಳ್ಳಲಾದ ಇಂತಹ ಕ್ರಮಗಳು ಸಹಕಾರಾತ್ಮಕ ಸಂವಿಧಾನಾತ್ಮಕ ಚಟುವಟಿಕೆಗೆ ವಿರುದ್ಧವಾಗಿ ಇರುತ್ತವೆ. ಇದರಿಂದ ಅನಾವಶ್ಯಕ ಅಸಮಾಧಾನ, ಪರಿಸ್ಥಿತಿಗಳ ಗಂಭೀರತೆ ಹೆಚ್ಚುವುದು, ಮತ್ತು ಇತರ ಕೃಷಿ ಉತ್ಪನ್ನಗಳ ಉಭಯರಾಜ್ಯ ಹಸ್ತಾಂತರಕ್ಕೂ ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ ಎಂಬ ಭೀತಿಯಿದೆ. ಈ ಹಿನ್ನೆಲೆಯಲ್ಲಿ, ಈ ವಿಷಯದಲ್ಲಿ ತಕ್ಷಣದ ಹಸ್ತಕ್ಷೇಪ ಮಾಡುವಂತೆ ನಿಮ್ಮನ್ನು ವಿನಂತಿಸುತ್ತೇನೆ. ಚಿತ್ತೂರು ಜಿಲ್ಲೆಯ ಸಂಬಂಧಿತ ಅಧಿಕಾರಿಗಳಿಗೆ ಈ ನಿಷೇಧ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ನಿರ್ದೇಶನ ನೀಡುವಂತೆ ವಿನಂತಿಸುತ್ತೇನೆ. ಕೃಷಿಕರ ಹಿತದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಸಿದ್ದರಾಮಯ್ಯ ಅವರು ಆಂಧ್ರ ಪ್ರದೇಶ ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: CM Siddaramaiah: ಬಿಜೆಪಿ ಎಲ್ಲದರಲ್ಲಿಯೂ ರಾಜಕೀಯ ಮಾಡುತ್ತದೆ : ಸಿಎಂ ಸಿದ್ದರಾಮಯ್ಯ