ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ಭೈರಪ್ಪನವರದು ಶ್ರೀಮಂತ ಬದುಕು ಹಾಗೂ ಬರಹ: ಬಸವರಾಜ ಬೊಮ್ಮಾಯಿ

SL Bhyrappa: ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ ನಡೆಯಿತು. ಅದರಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು ಭೈರಪ್ಪನವರ ಸಾಹಿತ್ಯಿಕ ಕೊಡುಗೆಯನ್ನು ಕೊಂಡಾಡಿದರು.

ಭೈರಪ್ಪನವರದು ಶ್ರೀಮಂತ ಬದುಕು ಹಾಗೂ ಬರಹ: ಬಸವರಾಜ ಬೊಮ್ಮಾಯಿ

ಹರೀಶ್‌ ಕೇರ ಹರೀಶ್‌ ಕೇರ Jun 14, 2025 10:04 PM

ಬೆಂಗಳೂರು: ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (SL Bhyrappa) ಅವರ ಬದುಕು ಹಾಗೂ ಬರಹ ಎರಡೂ ಶ್ರೀಮಂತವಾದುದು. ಅವರ ಜೀವನ ಮತ್ತು ಸಾಹಿತ್ಯಕ್ಕೆ ವಿಶ್ಲೇಷಣೆ ಅಗತ್ಯವಿಲ್ಲ. ಅವರ ಜೀವನ ಮತ್ತು ಬದುಕು ಎರಡೂ ಒಂದೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ, ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಸ್.ಎಲ್.ಭೈರಪ್ಪನವರ ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ನಾನು ಪರ್ವ ಕಾದಂಬರಿಯನ್ನು ಕಾಲೇಜು ಜೀವನದಲ್ಲಿಯೇ ಓದಲು ಪ್ರಯತ್ನ ಮಾಡಿದ್ದೆ, ಅಷ್ಟು ಸುಲಭವಾಗಿ ಅರ್ಥವಾಗಿರಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ಓದಿದೆ. ಭೈರಪ್ಪ ಅವರ ಸಾಹಿತ್ಯಗಳು ಎಲ್ಲಾ ಕಾಲಕ್ಕೂ ಹೊಂದುವಂತಹ ಸಾಹಿತ್ಯವಾಗಿದೆ. ಪ್ರತಿ ಸಾರಿ ಓದಿದಾಗ ಹೊಸ ಆಯಾಮ ಸಿಗುತ್ತದೆ. ನನಗೆ ಕಾಡಿರುವ ಎರಡು ಪುಸ್ತಕಗಳು ಒಂದು ಭೈರಪ್ಪ ಅವರ ಕಾದಂಬರಿ ಹಾಗೂ ಸ್ವಾಮಿ ವಿವೇಕಾನಂದರ ಲೈಫ್ ಆಫ್ಟರ್ ಡೆತ್ ಎಂದರು.

ಸ್ವಾಮಿ ವಿವೇಕಾನಂದರ ಲೈಫ್ ಆಪ್ಟರ್ ಡೆತ್ ಪುಸ್ತಕದಲ್ಲಿ ವಿವೇಕಾನಂದರು ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನು ಸಾಧಕ. ಅಂತಹ ಒಬ್ಬ ಸಾಧಕರು ಎಸ್.ಎಲ್.ಭೈರಪ್ಪ, ಅವರ ಜೀವನ ಮತ್ತು ಸಾಹಿತ್ಯಕ್ಕೆ ವಿಶ್ಲೇಷಣೆ ಅಗತ್ಯವಿಲ್ಲ. ಜೀವನ ಮತ್ತು ಬದುಕು ಎರಡೂ ಒಂದೇ ಆಗಿದೆ. ಕೆಲವರು ದೊಡ್ಡ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಅವರ ಬದುಕು ಮತ್ತು ಬರಹಕ್ಕೆ ತದ್ವಿರುದ್ದವಾಗಿರುತ್ತದೆ ಎಂದರು.



ಬದುಕನ್ನು ತಿಳಿದುಕೊಳ್ಳುವುದೇ ಕಷ್ಟ. ಅಂತಹ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾಹಿತ್ಯ ಬರೆಯುವುದು ದೊಡ್ಡ ಸವಾಲು. ಅವರು ಬರೆಯುವ ಪ್ರತಿಯೊಂದು ಶಬ್ದವೂ ಪರೀಕ್ಷೆ. ಒಂದೊಂದು ಕೃತಿಯೂ ಮರು ಜನ್ಮ ಪಡೆಯುತ್ತ ಬಂದಿದೆ. ಅವರು ಯಾವುದೇ ಪ್ರಶಸ್ತಿಗೂ ಲಾಬಿ ಮಾಡಿಲ್ಲ. ಕೆಲವರು ನೊಬೆಲ್ ಪ್ರಶಸ್ತಿಗೂ ಲಾಬಿ ಮಾಡಿದವರು ಇದ್ದಾರೆ. ಎಲ್ಲರೂ ಒಂದೇ ಥರ ವಿಚಾರ ಮಾಡಲು ಸಾಧ್ಯವಿಲ್ಲ. ವಿಭಿನ್ನತೆ ಬಹಳ ಮುಖ್ಯ. ಭೈರಪ್ಪನವರು ಪಾತ್ರಗಳಲ್ಲಿ ವಿಭಿನ್ನತೆ ತಂದಿದ್ದಾರೆ. ಪುಸ್ತಕದ ಮೊದಲ ಪುಟ ಓದಿದರೆ ಮುಂದಿನ ಪುಟ ತಿರುವಬೇಕು ಎನಿಸಬೇಕು. ಅವರು ಪೌರಾಣಿಕ ಮತ್ತು ಆಧುನಿಕ ವಿಷಯಗಳನ್ನೊಳಗೊಂಡ ಕಾದಂಬರಿ ಬರೆದಿದ್ದಾರೆ. ಮುಂದಿನ ತೊಂಬತ್ತೈದು ವರ್ಷಗಳ ನಂತರ ಓದಿದರೂ ಆಗಲೂ ಪ್ರಸ್ತುತವಾದ ವಿಷಯ ಅವರು ಬರೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಗೌರವಧನ ಬರುವುದು ಭೈರಪ್ಪ ಅವರಿಗೆ. ಭೈರಪ್ಪ ಅವರು ಬಡವರಾಗಲು ಓದುಗರು ಬಿಟ್ಟಿಲ್ಲ. ನಾವು ದುಡ್ಡು ಕೊಟ್ಟು ಪುಸ್ತಕ ಓದಬೇಕು ಎಂದರು.

ಭೈರಪ್ಪ ಅವರದು ಸಿಂ ಸಿದ್ದರಾಮಯ್ಯ ಅವರ ಬಜೆಟ್ ಇದ್ದ ಹಾಗೆ. ತೆರಿಗೆ ಸಂಗ್ರಹ ಹೆಚ್ಚಾಗಿದೆ ಎನ್ನುತ್ತಾರೆ. ಆದರೆ ಸಾಲ ಇರುತ್ತದೆ ಹಾಗೆಯೇ ಭೈರಪ್ಪನವರು ಕೃತಿ ಮಾರಾಟದಿಂದ ಬಂದ ಹಣವನ್ನು ದಾನ ಧರ್ಮ ಮಾಡಿ ಕಡೆಗೂ ಬ್ಯಾಲೆನ್ಸ್‌ ಶೀಟ್‌ ಹಾಗೇ ಇರುತ್ತದೆ ಎಂದರು ಚಟಾಕಿ ಹಾರಿಸಿದರು.

ಭೈರಪ್ಪ ಅವರು ತಮ್ಮ ಊರಿಗೆ ಕುಡಿಯುವ ನೀರಿನ ಯೋಜನೆ ಮಾಡಲು ನನ್ನ ಬಳಿ ಬಂದರು. ಅವರಿಗೆ ಹುಟ್ಟೂರಿನ ಬಗ್ಗೆ ಇದ್ದ ಅಭಿಮಾನ ಮೆಚ್ಚುವಂಥದ್ದು. ಬಹಳ ಜನ ಹುಟ್ಟೂರು ಮರೆಯುತ್ತಾರೆ. ಭೈರಪ್ಪ ಅವರ ಕಳಕಳಿಯ ಮುಂದೆ ನಮ್ಮದೇನೂ ಅಲ್ಲ. ಅವರ ಊರಿಗೆ ನೀರು ಕೊಡಿಸಿರುವ ಗೌರವ ಅವರಿಗೆ ಸಲ್ಲಬೇಕು. ಅವರು ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದ್ದು, ಅವರ ಹೆಸರಿನಲ್ಲಿ ಟ್ರಸ್ಟ್‌ ಮಾಡಿದ್ದಾರೆ. ನಮಗೆ ಸಮಾಜ ಏನು ಕೊಟ್ಟಿದೆಯೋ ಅದನ್ನು ನಾವು ಸಮಾಜಕ್ಕೆ ವಾಪಸ್ ಕೊಟ್ಟಾಗ ನಮ್ಮ ಬದುಕಿನ ಬ್ಯಾಲೆನ್ಸ್‌ ಶೀಟ್ ಪೂರ್ತಿಯಾಗುತ್ತದೆ. ಭೈರಪ್ಪನವರು ತಮಗೆ ಸಮಾಜ ಕೊಟ್ಟಿರುವುದನ್ನು ಸಮಾಜಕ್ಕೆ ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ, ಶತಾವಧಾನಿ ಆರ್.ಗಣೇಶ್, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಹನಾ ವಿಜಯಕುಮಾರ್, ಅರುಣ್, ಕೃಷ್ಣಪ್ರಸಾದ್ ಹಾಜರಿದ್ದರು.

ಇದನ್ನೂ ಓದಿ: B K Meenakshi Column: ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !