Ahmedabad Plane Crash: ಲಂಡನ್ನಲ್ಲಿ ಸೆಟಲ್ ಆಗಲು ಹೊರಟಿದ್ದ ಇಡೀ ಕುಟುಂಬವೇ ನಾಶ!
Ahmedabad Plane Crash: ಬನ್ಸ್ವಾರಾ ನಿವಾಸಿ ಪ್ರತೀಕ್ ಜೋಶಿ ತಮ್ಮ ಇಡೀ ಕುಟುಂಬದೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರತೀಕ್ ಜೋಶಿ ಸುಮಾರು ಆರು ವರ್ಷಗಳ ಹಿಂದೆ ಲಂಡನ್ಗೆ ಸ್ಥಳಾಂತರಗೊಂಡಿದ್ದರು. ಇತ್ತೀಚೆಗೆ ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ನೆಲೆಸಲು ಪ್ಲಾನ್ ಮಾಡಿದ್ದರು.

ದುರಂತಕ್ಕೀಡಾದ ಕುಟುಂಬ

ಗುಜರಾತ್: ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ (Air india) ವಿಮಾನ ಗುರುವಾರ (ಜೂನ್ 12) ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿ 12 ಸಿಬ್ಬಂದಿ (ಇಬ್ಬರು ಪೈಲಟ್ಗಳು ಸೇರಿದಂತೆ) ಸೇರಿದಂತೆ ಒಟ್ಟು 242 ಜನರಿದ್ದು, ಒಬ್ಬ ಮಾತ್ರ ಪವಾಡಸದೃಶವಾಗಿ ಬದುಕುಳಿದು ಇತರ ಎಲ್ಲರೂ ಸತ್ತಿದ್ದಾರೆ. ೨ ದಿನದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿದ ವೈದ್ಯೆಯೊಬ್ಬರು ತಮ್ಮ ಇಡೀ ಕುಟುಂಬದ ಜೊತೆಗೆ ಲಂಡನ್ನಲ್ಲಿ ಸೆಟಲ್ ಆಗುವ ಕನಸಿನೊಂದಿಗೆ ಹೊರಟಿದ್ದು, ಕುಟುಂಬದ ಐದೂ ಮಂದಿಯೂ ಮೃತಪಟ್ಟಿದ್ದಾರೆ.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಬನ್ಸ್ವಾರಾ ಜಿಲ್ಲೆಗೆ ಸಂಬಂಧಿಸಿದ ಮತ್ತೊಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಬನ್ಸ್ವಾರಾ ನಿವಾಸಿ ಪ್ರತೀಕ್ ಜೋಶಿ ತಮ್ಮ ಇಡೀ ಕುಟುಂಬದೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರತೀಕ್ ಜೋಶಿ ಸುಮಾರು ಆರು ವರ್ಷಗಳ ಹಿಂದೆ ಲಂಡನ್ಗೆ ಸ್ಥಳಾಂತರಗೊಂಡಿದ್ದರು. ಇತ್ತೀಚೆಗೆ ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ನೆಲೆಸಲು ಪ್ಲಾನ್ ಮಾಡಿದ್ದರು.
ಪ್ರತೀಕ್ ಜೋಶಿ ಅವರ ಪತ್ನಿಯ ಹೆಸರು ಡಾ. ಕೋಮಿ ವ್ಯಾಸ್. ಅವರು ವೈದ್ಯರಾಗಿದ್ದರು ಮತ್ತು ಲಂಡನ್ನಲ್ಲಿ ಹೊಸದಾಗಿ ಜೀವನ ಆರಂಭಿಸಲು ಎರಡು ದಿನಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಕುಟುಂಬಕ್ಕೆ ಇಬ್ಬರು ಅವಳಿ ಹೆಣ್ಣುಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದರು. ವಿಮಾನ ಪತನದಿಂದಾಗಿ ಅಷ್ಟೂ ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಲಂಡನ್ನಲ್ಲಿ ನೆಲೆಸುವ ಉದ್ದೇಶದಿಂದ ಇಡೀ ಕುಟುಂಬ ಏರ್ ಇಂಡಿಯಾ ವಿಮಾನ ಹತ್ತಿತ್ತು. ಪ್ರತೀಕ್ ತನ್ನ ಹೆಂಡತಿ ಮತ್ತು ಮಕ್ಕಳನ್ನು ಲಂಡನ್ಗೆ ಕರೆದುಕೊಂಡು ಹೋಗಲು ಬಹಳ ದಿನಗಳಿಂದ ಯೋಜಿಸುತ್ತಿದ್ದರು. ಲಂಡನ್ನಲ್ಲಿ ಜೀವನ ಕಟ್ಟಿಕೊಳ್ಳೋದು ಅವರ ಕನಸಾಗಿತ್ತು. ವಿಮಾನ ಹತ್ತಿ ಕೆಲವೇ ನಿಮಿಷಗಳಲ್ಲಿ ಖುಷಿ ಖುಷಿಯಿಂದ ಇದ್ದ ಕುಟುಂಬ ದುರಂತವಾಗಿ ಸಾವನ್ನಪ್ಪಿದೆ.
ಮಧ್ಯಾಹ್ನ 1:38ಕ್ಕೆ ಟೇಕ್ ಆಫ್ ಆದ ಈ ವಿಮಾನದಲ್ಲಿ 169 ಭಾರತೀಯರು, 50ಕ್ಕೂ ಹೆಚ್ಚು ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಹಾಗೂ ಒಬ್ಬ ಕೆನಡಾ ಪ್ರಜೆ ಸೇರಿದಂತೆ ಒಟ್ಟು 242 ಜನರು ಪ್ರಯಾಣಿಸುತ್ತಿದ್ದರು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿದೆ. ಇಡೀ ದೇಶವೇ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಕಂಬನಿ ಮಿಡಿಯುತ್ತಿದೆ. ಗುಜರಾತಿನ ಮಾಜಿ ಸಿಎಂ ವಿಜಯ್ ರೂಪಾನಿ ಸಹ ಇದರಲ್ಲಿದ್ದರು.
ಸಹಾಯವಾಣಿ ಸ್ಥಾಪನೆ
ಈ ಘೋರ ದುರಂತದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ದೆಹಲಿ ಮತ್ತು ಅಹಮದಾಬಾದ್ನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಮೃತರ ಮತ್ತು ಪ್ರಯಾಣಿಕರ ವಿವರಗಳಿಗಾಗಿ ಅವರ ಕುಟುಂಬದವರು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಬಹುದು:
ದೆಹಲಿ ನಿಯಂತ್ರಣ ಕೊಠಡಿ: 011-24610843, 9650391859
ಅಹಮದಾಬಾದ್ ನಿಯಂತ್ರಣ ಕೊಠಡಿ: 9978405304 / 079-23251900
ಅಹಮದಾಬಾದ್ ವಿಮಾನ ನಿಲ್ದಾಣ ಸಹಾಯವಾಣಿ: 9974111327
ಏರ್ ಇಂಡಿಯಾ ಪ್ರಯಾಣಿಕರ ಹಾಟ್ಲೈನ್: 1800 5691 444
ಇದನ್ನೂ ಓದಿ: Ahmedabad Plane Crash: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್ ಕ್ಲೈವ್ ಕುಂದರ್ ಸಾವು