Self Harming: ಪ್ರೀತಿಸಿದ ಯುವತಿಯಿಂದ ಕಿರುಕುಳ; ವಿಡಿಯೋ ಮಾಡಿಟ್ಟು ಯುವಕ ಆತ್ಮಹತ್ಯೆ
Self Harming: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಘಟನೆ ನಡೆದಿದೆ. ಯುವತಿಯನ್ನು ತಾನು ಪ್ರೀತಿಸುತ್ತಿದ್ದೆ. ಆದರೆ ಆಕೆಗೆ ಬೇರೊಬ್ಬನ ಜತೆ ಸಂಬಂಧವಿತ್ತು ಎಂದು ಹೇಳಿರುವ ಯುವಕ, ಆಕೆಯ ಕುಟುಂಬಸ್ಥರ ವಿರುದ್ಧ ಕೂಡ ಕಿರುಕುಳ ಆರೋಪ ಮಾಡಿದ್ದು, ನನಗೆ ನ್ಯಾಯ ಕೊಡಿಸುವಂತೆ ಹೇಳಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಬೆಂ.ಗ್ರಾಮಾಂತರ: ಪ್ರೀತಿಸಿದ ಯುವತಿಯ ಕಿರುಕುಳ ತಾಳಲಾರದೆ ಯುವಕನೊಬ್ಬ ಮನನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕೆರೆ ಬಳಿ ನಡೆದಿದೆ. ಜೂ.13ರಂದು ವಿಡಿಯೋ ಮಾಡಿರುವ ಮಂಜುನಾಥ್, ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರೀತಿಸಿದ ಯುವತಿ ಗಗನ ವಿರುದ್ಧ ಕಿರುಕುಳ ಆರೋಪ ಮಾಡಿರುವ ಮಂಜುನಾಥ್, ಆಕೆಗೆ ಬೇರೊಬ್ಬನ ಜತೆ ಸಂಬಂಧವಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ನನ್ನ ವಿರುದ್ಧವೇ ಕುಂಬಳಗೋಡು ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಬೇಲ್ ವಿಚಾರವಾಗಿ ಹಣ ಕೊಟ್ಟಿದ್ದೆವು, ಬಳಿಕ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾಳೆ. ನನ್ನ ಸಾವಿಗೆ ಈ ಯುವತಿ ಹಾಗೂ ಅವರ ಮನೆಯವರೇ ಕಾರಣ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ.
ಮಾತ್ರೆ ಸೇವಿಸಿದ್ದ ಮಂಜುನಾಥ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮೊಬೈಲ್ ಪಾಸ್ವರ್ಡ್ ಸಮೇತ ಯುವಕ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಟೆಕ್ಕಿ ಬಲಿ
ಬೆಂಗಳೂರು: ರಾಜಧಾನಿಯಲ್ಲಿ (Bengaluru news) ಮತ್ತೊಂದು ಹಿಟ್ ಆ್ಯಂಡ್ ರನ್ (hit and run) ಘಟನೆ ನಡೆದಿದ್ದು, ಅಪರಿಚಿತ ವಾಹನ ಡಿಕ್ಕಿಯಾಗಿ (Road Accident) ಟೆಕ್ಕಿಯೊಬ್ಬರು ಮೃತಪಟ್ಟಿದ್ದಾರೆ. ರಿಂಗ್ ರಸ್ತೆಯ ಕಲ್ಯಾಣ ನಗರದ ಶೋ ರೂಮ್ ಒಂದರ ಬಳಿ ಈ ಘಟನೆ ನಡೆದಿದೆ. ಮೃತರನ್ನು ಆಂಧ್ರಪ್ರದೇಶದ ಕರ್ನೂಲ್ ಮೂಲದ ಸಲಗುಣ ಪ್ರದೀಪ್ (25) ಎಂದು ಗುರುತಿಸಲಾಗಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸಲಗುಣ ಪ್ರದೀಪ್, ನಗರದ ಕಲ್ಕೆರೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಶನಿವಾರ ಸಂಜೆ ಬೈಕ್ನಲ್ಲಿ ಕಲ್ಯಾಣನಗರದಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಸಲಗುಣ ಪ್ರದೀಪ್ ಗಾಯಗೊಂಡಿದ್ದರು, ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳದ ಸಿಟಿಟಿವಿ ದೃಶ್ಯಾವಳಿ ಪರಿಶೀಲಿಸಿ ಡಿಕ್ಕಿ ಹೊಡೆದ ವಾಹನ ಸವಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರಿನ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:Gururaj Gantihole: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರು ಅಪಘಾತ, ಮೂರು ವಾಹನ ಜಖಂ
ಇಬ್ಬರು ಅಪ್ರಾಪ್ತರಿಂದಲೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಅಪ್ರಾಪ್ತರು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ದಾವಣಗೆರೆ ತಾಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಟದ ನೆವದಲ್ಲಿ ಕರೆದೊಯ್ದಿರುವ ಇಬ್ಬರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಅವರನ್ನು ಇದೀಗ ವಿಚಾರಣೆಗಾಗಿ ವಶಕ್ಕೆ ಪಡೆಯಾಗಿದೆ.
ನಿನ್ನೆ ಸಂಜೆ ಆರೋಪಿ, ಅಪ್ರಾಪ್ತ ಬಾಲಕನ ಮನೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಮನೆಯಲ್ಲಿ ಮಗಳು ಇಲ್ಲದ್ದನ್ನು ಗಮನಿಸಿದ ತಾಯಿ ಹುಡುಕಿಕೊಂಡು ನೆರೆ ಮನೆಗೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. 15 ವರ್ಷದ ಹಾಗೂ 17 ವರ್ಷದ ಇಬ್ಬರು ಅಪ್ರಾಪ್ತರಿಂದ ಈ ಕೃತ್ಯ ನಡೆದಿದ್ದು, ಇಬ್ಬರನ್ನು ಹದಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ದಾಖಲಿಸಲಾಗಿದೆ.