ʼಕುಬೇರʼ ಸಕ್ಸಸ್ ಮೀಟ್; ಮೆಗಾಸ್ಟಾರ್ ಚಿರಂಜೀವಿ ಕಾಲಿಗೆ ಬಿದ್ದ ನಟ ಧನುಷ್
ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ಜೂನ್ 20ರಂದು ಬಿಡುಗಡೆ ಆಗಿದೆ. ಈಗಾಗಲೇ ʼಕುಬೇರ’ ಸಿನಿಮಾ ನೋಡಿ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸಿದೆ. ಈ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರತಂಡ ಮುಂಬೈಯಲ್ಲಿ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

Kuberaa Success Meet


ಸಿನಿಪ್ರಿಯರ ಕುತೂಹಲ ಕೆರಳಿಸಿದ್ದ ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ಕುಬೇರʼ ತೆರೆ ಕಂಡಿದೆ. ಮೂವರು ಸೂಪರ್ ಸ್ಟಾರ್ಗಳು ಮೊದಲ ಬಾರಿಗೆ ಜತೆಯಾಗಿ ತೆರೆ ಹಂಚಿಕೊಂಡ ಕಾರಣ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಧನುಷ್ ನಾಯಕನಾಗಿ ನಟಿಸಿದರೆ, ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಸಾಥ್ ಕೊಟ್ಟಿದ್ದಾರೆ. ಜೂನ್ 20ರಂದು ವಿಶ್ವದಾದ್ಯಂತ ರಿಲೀಸ್ ಆದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮುಂಬೈಯಲ್ಲಿ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿದ್ದರಿ. ಅವರು ಚಿತ್ರತಂಡ ಹಾಗೂ ನಿರ್ದೇಶಕ ಶೇಖರ್ ಕಮ್ಮುಲಾ ಅವರನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಧನುಷ್ ಹಿರಿಯ ನಟ ಚಿರಂಜೀವಿ ಅವರ ಪಾದಸ್ಪರ್ಶ ಮಾಡಿ ಗೌರವ ಸಲ್ಲಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಿರಂಜೀವಿ ಕೂಡ ಧನುಷ್ ಅವರನ್ನು ಆಲಿಂಗಿಸಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.

ಅಲ್ಲದೆ ಧನುಷ್ ತಮ್ಮ ಸಹ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಲಿಂಗಿಸಿ, ಸ್ನೇಹಪೂರ್ಣವಾಗಿ ಮಾತನಾಡಿದ ದೃಶ್ಯಗಳು ಅಭಿಮಾನಿಗಳ ಹೃದಯ ಗೆದ್ದಿದೆ. ನಟಿ ರಶ್ಮಿಕಾ ಈ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಸೀರೆಯುಟ್ಟು ಆಕರ್ಷಕವಾಗಿ ಕಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಚಿರಂಜೀವಿ ನಿರ್ದೆಶಕ ಶೇಖರ್ ಕಮ್ಮುಲ ಬಗ್ಗೆ ಮಾತನಾಡಿ, 25 ವರ್ಷಗಳಲ್ಲಿ ಕೇವಲ 10 ಸಿನಿಮಾ ಮಾಡಿದ್ದರೂ, ಪ್ರತಿ ಚಿತ್ರವೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ʼಕುಬೇರ’ ಚಿತ್ರವೂ ಅಪರೂಪದ ಪಾತ್ರಗಳೊಂದಿಗೆ ಭಿನ್ನವಾಗಿ ಮೂಡಿ ಬಂದಿದೆ. ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿರುವ ದೃಶ್ಯ ನೋಡಿ ನನಗೆ ಅವರು ಎಂದು ಗುರುತಿಸಲೂ ಕೂಡ ಸಾಧ್ಯವಾಗಲಿಲ್ಲ ಎಂದರು.

ಧನುಷ್, ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಕುಬೇರ'ಕ್ಕೆ ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರುವ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.