Chikkaballapur News: ಬಾನು ಮುಷ್ತಾಕ್ ಎಲ್ಲರಿಗೂ ಸ್ಪೂರ್ತಿಯಾಗಬೇಕು : ಹಿರಿಯ ಸಾಹಿತಿ ಚಾಂದ್ ಪಾಷ ಅಭಿಮತ
ಶಿವಮೊಗ್ಗದ ಮಿಷನರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ದಾಖಲಾತಿ ಪಡೆಯಲು ತಿರಸ್ಕೃತರಾಗಿ ಷರತ್ತಿನ ಮೇಲೆ ದಾಖಲಾಗಿ ಆರೇ ತಿಂಗಳಲ್ಲಿ ಮುಂದಿನ ತರಗತಿಗೆ ಬಡ್ತಿ ಪಡೆದ ಹುಡುಗಿ ಯೇ ಇಂದಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಬಾನು ಮುಷ್ತಾಕ್


ಚಿಕ್ಕಬಳ್ಳಾಪುರ: ಹಿರಿಯ ಸಾಹಿತಿ, ಬೂಕರ್ ಪ್ರಶಸ್ತಿ ಪುರಸ್ಕತೆ ಬಾನು ಮುಷ್ತಾಕ್ ಯುವ ಜನತೆಗೆ ಸ್ಪೂರ್ತಿ ಆಗಬೇಕೆಂದು ಸಾಹಿತಿ ಚಾಂದ್ ಪಾಷಾ ಅಭಿಪ್ರಾಯಪಟ್ಟರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ವಿಚಾರ ವೇದಿಕೆ ಚಿಕ್ಕಬಳ್ಳಾಪುರ ಮತ್ತು ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸಂಯುಕ್ತಾಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರ 'ಹೃದಯ ಹಣತೆ' ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಬಾನು ಮುಷ್ತಾಕ್ ಎಂಬ ಕಥೆಗಾರ್ತಿ ಇಂದಿನ ಯುವ ಜನತೆಗೆ ಸ್ಪೂರ್ತಿಯಾಗ ಬೇಕೆಂದು ಸಾಹಿತಿ ಚಾಂದ್ ಪಾಷಾ ತಿಳಿಸಿದರು.
ಶಿವಮೊಗ್ಗದ ಮಿಷನರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಒಂದನೇ ತರಗತಿಗೆ ದಾಖಲಾತಿ ಪಡೆಯಲು ತಿರಸ್ಕೃತರಾಗಿ ಷರತ್ತಿನ ಮೇಲೆ ದಾಖಲಾಗಿ ಆರೇ ತಿಂಗಳಲ್ಲಿ ಮುಂದಿನ ತರಗತಿಗೆ ಬಡ್ತಿ ಪಡೆದ ಹುಡುಗಿಯೇ ಇಂದಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಬಾನು ಮುಷ್ತಾಕ್.
ಇದನ್ನೂ ಓದಿ: IPL 2025: ʻದಿಗ್ವೇಶ್ ರಾಠಿಯನ್ನು ಬ್ಯಾನ್ ಮಾಡಬಾರದಿತ್ತುʼ-ಎಲ್ಎಸ್ಜಿ ಬೌಲರ್ಗೆ ಸೆಹ್ವಾಗ್ ಬೆಂಬಲ!
ಅವರ ಕಥೆಗಳ ಹಿನ್ನಲೆಯನ್ನು ಗಮನಿಸಿದರೆ ಸ್ವತಃ ತಾನು ಮತ್ತು ಸಮಾಜದಲ್ಲಿ ಹೆಣ್ಣು ಮಕ್ಕಳು ಮಹಿಳೆಯರು ಅನುಭವಿಸುತ್ತಿರವ ಶೋಷಣೆ, ದೌರ್ಜನ್ಯ,ಅನ್ಯಾಯ,ನೋವಿನ ವಿಷಯವನ್ನು ಕಥಾವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ಹಾಗೂ ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಮೇಲಿನ ಮೌಢ್ಯತೆ ಅಂದಾಚಾರಗಳು,ಕಟ್ಟುಪಾಡುಗಳನ್ನು ಪ್ರಶ್ನಿಸುತ್ತ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕೆಂದು ಹೋರಾಟ ಮಾಡಿದ ದಿಟ್ಟ ಮಹಿಳೆ ಶ್ರೀಮತಿ ಬಾನು ಮುಷ್ತಾಕ್ ಆಗಿದ್ದಾರೆ.

ಅವರ ಕೃತಿಗಳಲ್ಲಿನ ಆಯ್ದ ಕಥೆಗಳನ್ನು ಸಂಗ್ರಹಿಸಿ ಸಂಕಲಿಸಿದ ಕೃತಿಯೇ 'ಹೃದಯ ಹಣತೆ' ಇದನ್ನು ದೀಪ ಬಸ್ತಿ ರವರು ಆಂಗ್ಲ ಭಾಷೆಗೆ 'ಹಾರ್ಟ್ ಲ್ಯಾಂಪ್' ಎಂಬ ಹೆಸರಿನಲ್ಲಿ ಅನುವಾದ ಮಾಡಿದರು. ಈ ಕೃತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಕನ್ನಡ ಭಾಷೆಗೆ, ಕನ್ನಡ ಜನತೆಗೆ ಹೆಚ್ಚು ಗರಿಮೆಯನ್ನು ತಂದು ಕೊಟ್ಟಿದೆ. ಇದರಿಂದ ಎಲ್ಲರೂ ಹೆಮ್ಮೆಪಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ವಿಚಾರ ವೇದಿಕೆಯ ಚಿಕ್ಕ ಬಳ್ಳಾಪುರ ಜಿಲ್ಲಾ ಸಂಚಾಲಕರಾದ ಪಾತಮುತ್ತಕಹಳ್ಳಿ ಮು.ಚಲಪತಿಗೌಡ ಮಾತನಾಡುತ್ತಾ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳೆದು ಬಂದ ಹಿನ್ನೆಲೆಯನ್ನು ತಿಳಿಸಿ ಅಕಾಡೆಮಿಯು ಹಳೆಗನ್ನಡದ, ನಡುಗನ್ನಡದ ತಾಳೆಗರಿಗಳಲ್ಲಿದ್ದ ಸಾಹಿತ್ಯವನ್ನು ಮುದ್ರಣ ಮಾಡಿಸಿ ಸಾಹಿತ್ಯ ಪ್ರಿಯರಿಗೆ ಹಂಚುವ ಕೆಲಸ ಮಾಡಿದೆ. ಅಷ್ಟೇ ಅಲ್ಲದೆ ಆಧುನಿಕ ಕನ್ನಡ ಸಾಹಿತಿಗಳ ಕೃತಿಗಳನ್ನು ಪರಿಚಯಿಸುತ್ತಾ ಸಾಹಿತಿಗಳನ್ನು ಪ್ರೋತ್ಸಾಹಿಸುವ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ ಮತ್ತು ಯುವ ಪ್ರತಿಭೆಗಳಿಗೆ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಅವರ ಹಸ್ತ ಪ್ರತಿಗಳನ್ನು ಪಡೆದು ಮುದ್ರಣ ಮಾಡಿ ಪ್ರಕಟಿಸುವ ಕಾರ್ಯವನ್ನು ಸಹ ಕೈಗೊಳ್ಳುತ್ತಿದೆ.
ಡಾ. ಅರವಿಂದ ಮಾಲಗತ್ತಿ ಅವರ ಅವಧಿಯಲ್ಲಿ ಅಕಾಡೆಮಿಯು ರಾಜ್ಯ ಮಟ್ಟದಲ್ಲಿ ಚಟುವಟಿಕೆ ಗಳನ್ನು ಮಾಡುವುದಲ್ಲದೆ ಜಿಲ್ಲಾ ಮಟ್ಟದಲ್ಲಿಯೂ ಸಹ ಅದರ ಕಾರ್ಯಕ್ರಮಗಳು ವಿಸ್ತರಿಸ ಬೇಕೆಂಬ ನಿಟ್ಟಿನಲ್ಲಿ ಚಕೋರ ಸಾಹಿತ್ಯ ಬಳಗ ಸ್ಥಾಪಿಸಿ ನಾಡಿನಾದ್ಯಂತ ಅಕಾಡೆಮಿಯ ಕಾರ್ಯಕ್ರಮಗಳು ನಡೆಯಲು ಕಾರಣಿ ಭೂತರಾದರು.
ಅದೇ ರೀತಿ ಈಗಿನ ಅಧ್ಯಕ್ಷರಾದ ಡಾ. ಎಲ್ ಎನ್ ಮುಕುಂದ ರಾಜ್ ರವರು ಈ ಕಾರ್ಯವನ್ನು ಮುಂದುವರಿಸುತ್ತಾ ಮತ್ತೆ ಚಕೋರ ಸಾಹಿತ್ಯ ವಿಚಾರ ವೇದಿಕೆಯನ್ನು ಪ್ರಾರಂಭಿಸಿ ಆಮೂಲಕ ಅಕಾಡೆಮಿಯ ಕಾರ್ಯಕ್ರಮಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯಲು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯ ಅಕಾಡೆಮಿ ಸದಸ್ಯರಾದ ಅಕ್ಕೈ ಪದ್ಮಶಾಲಿ ಅವರ ಮಾರ್ಗದರ್ಶನದಲ್ಲಿ ಇಲ್ಲಿಯೂ ಸಹ ನಾವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆಂದು ತಿಳಿಸಿದರು.
ಮತ್ತೊರ್ವ ಜಿಲ್ಲಾ ಸಂಚಾಲಕರಾದ ಈಧರೆ ಪ್ರಕಾಶ್ ರವರು ಜನಪದ ಗೀತೆಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ. ಆನಂದಮ್ಮ ರವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದಲ್ಲದೆ ಕನ್ನಡ ಸಾಹಿತ್ಯದ ಅಧ್ಯಯನ ಮಾಡಲು ಪ್ರೇರಣೆಯನ್ನು ನೀಡುತ್ತದೆಂದರು ಹೆಣ್ಣುಮಕ್ಕಳು ಎಂತಹ ಪರಿಸ್ಥಿತಿಯ ಬರಲಿ ದಿಟ್ಟ ಮನೋಭಾವವನ್ನು ಬಿಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಅಷ್ಟೇ ಅಲ್ಲದೆ ಇಂತಹ ಕಾರ್ಯಕ್ರಮಗಳಿಗೆ ನಾವು ಸದಾ ಪ್ರೋತ್ಸಾಹವನ್ನು ನೀಡಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ,ಭಾಷೆಯ ಬಗ್ಗೆ ಅಭಿಮಾನ ಬೆಳೆಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸಮಾಜ ಸೇವಕ ಸದಾಶಿವ ಎಂ. ಈ ಧರೆ ಸಮತಾ ಸೇನೆ ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ವೆಂಕಟರಾಮಪ್ಪ, ನಾಗಾರ್ಜುನ ಕಾಲೇಜು ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನ ಪ್ರಾಧ್ಯಾಪಕರಾದ ಲಕ್ಷ್ಮಿದೇವಮ್ಮ, ಶೋಭಾ, ಕನ್ನಡ ವಿಭಾಗದ ಮುಖ್ಯಸ್ಥ ಅಂಬರೀಶ್ ಉಪಸ್ಥಿತರಿದ್ದರು.