ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murudeshwara Temple: ಮುರುಡೇಶ್ವರ ದೇವಾಲಯದಲ್ಲಿ ಹೊಸ ನಿಯಮಾವಳಿ ಜಾರಿ, ಇನ್ನು ಮೊದಲಿನಂತೆ ಹೋಗುವಂತಿಲ್ಲ!

Murudeshwara Temple: ಮುರುಡೇಶ್ವರ ದೇವಾಲಯದ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಕ್ತರಿಗೆ ಸಾಂಪ್ರದಾಯಿಕ ಭಾರತೀಯ ವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದೆ. ದೇವಾಲಯದ ಧಾರ್ಮಿಕ ಪಾವಿತ್ರ್ಯತೆಯನ್ನು ಉಳಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ.

ಮುರುಡೇಶ್ವರ ದೇವಾಲಯದಲ್ಲಿ ಹೊಸ ನಿಯಮಾವಳಿ ಜಾರಿ

ಮುರುಡೇಶ್ವರ ದೇವಾಲಯ ಮ‌ತ್ತು ಬೀಚ್

ಹರೀಶ್‌ ಕೇರ ಹರೀಶ್‌ ಕೇರ Jun 23, 2025 8:17 AM

ಉತ್ತರ ಕನ್ನಡ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿರುವ ಮುರುಡೇಶ್ವರ ದೇವಾಲಯಕ್ಕೆ (Murudeshwara Temple) ಭಕ್ತರು ಭೇಟಿ ಕೊಡುವಾಗ ಇನ್ನು ಮುಂದೆ ಕೆಲವು ನಿಯಮಗಳನ್ನು ಪಾಲಿಸಬೇಕಿದೆ. ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಈ ತಾಣದಲ್ಲಿ ಇನ್ನು ಮುಂದೆ ಕಡ್ಡಾಯ ವಸ್ತ್ರ ಸಂಹಿತೆ (Dress Code) ಜಾರಿಗೆ ಬರಲಿದೆ.

ದೇವಾಲಯದ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಕ್ತರಿಗೆ ಸಾಂಪ್ರದಾಯಿಕ ಭಾರತೀಯ ವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದೆ. ದೇವಾಲಯದ ಧಾರ್ಮಿಕ ಪಾವಿತ್ರ್ಯತೆಯನ್ನು ಉಳಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ.

ಮುರ್ಡೇಶ್ವರ ದೇವಾಲಯಕ್ಕೆ ಇನ್ನು ಮುಂದೆ ಭೇಟಿ ನೀಡುವ ಪುರುಷ ಭಕ್ತರು ಪಂಚೆ, ಧೋತಿ ಅಥವಾ ಸಾಂಪ್ರದಾಯಿಕ ಭಾರತೀಯ ಉಡುಗೆ ಧರಿಸಬೇಕು. ಮಹಿಳಾ ಭಕ್ತರು ಸೀರೆ, ಚೂಡಿದಾರ್ ಅಥವಾ ಇತರ ಸಾಂಪ್ರದಾಯಿಕ ಭಾರತೀಯ ಉಡುಗೆಗಳನ್ನು ಧರಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಪಾಲಿಸುವಂತೆ ದೇವಾಲಯದ ಎದುರುಗಡೆ ಸೂಚನಾ ಫಲಕವನ್ನು ಸಹ ಸ್ಥಾಪಿಸಲಾಗಿದೆ. ಇದರಿಂದ ಭಕ್ತರಿಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ.

ಕಳೆದ ಕೆಲವು ವರ್ಷಗಳಿಂದ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಅನುಚಿತ ಮತ್ತು ಬೇಕಾಬಿಟ್ಟಿ ವಸ್ತ್ರ ಧರಿಸಿ ಪ್ರವೇಶಿಸುತ್ತಿದ್ದರು ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ಪಕ್ಕದಲ್ಲಿಯೇ ಬೀಚ್‌ ಇರುವುದರಿಂದಲೂ ಬಟ್ಟೆಯ ಕುರಿತು ಈ ಅಶಿಸ್ತು ವ್ಯಕ್ತವಾಗುತ್ತಿತ್ತು. ಈ ಕುರಿತು ಸ್ಥಳೀಯ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳಾದ ಕರ್ನಾಟಕ ಮಂದಿರ ಮಹಾಸಂಘ, ಹಿಂದೂ ಜಾಗೃತಿ ಸಂಘಟನೆ ಸೇರಿದಂತೆ ಇತರ ಸಂಘಗಳು ದೇವಾಲಯದ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದವು. ಈ ಮನವಿಗಳನ್ನು ಪರಿಗಣಿಸಿ, ಆಡಳಿತ ಮಂಡಳಿಯು ಈಗ ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.

ಮುರ್ಡೇಶ್ವರ ದೇವಾಲಯ ಭಗವಾನ್ ಶಿವನ ಮಂದಿರವಾಗಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ದೇವಾಲಯದ ಬಳಿ ಇರುವ 123 ಅಡಿ ಎತ್ತರದ ಶಿವನ ಬೃಹತ್ ಪ್ರತಿಮೆ ಮತ್ತು 237 ಅಡಿ ಎತ್ತರದ ರಾಜಗೋಪುರ ಜಗತ್ಪ್ರಸಿದ್ಧವಾಗಿದೆ. ಈ ಗೋಪುರ ಭಾರತದ ಎರಡನೇ ಅತಿ ಎತ್ತರದ ಗೋಪುರ. ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿರ್ಧಾರದಿಂದ ಭಕ್ತರಿಗೆ ಇಲ್ಲಿನ ಆಧ್ಯಾತ್ಮಿಕ ಅನುಭವವನ್ನು ಇನ್ನಷ್ಟು ಸಾತ್ವಿಕವಾಗಿ ಪಡೆಯಲು ಸಹಾಯಕವಾಗಲಿದೆ ಎಂದು ಆಡಳಿತ ಮಂಡಳಿ ಭಾವಿಸಿದೆ.

ಇದನ್ನೂ ಓದಿ: Murdeshwar Beach Tragedy: ಮುರುಡೇಶ್ವರ ಬೀಚ್‌ ದುರಂತ; ಕೋಲಾರ ಶಾಲೆಯ ಪ್ರಿನ್ಸಿಪಾಲ್ ಸಸ್ಪೆಂಡ್‌, ಅತಿಥಿ ಶಿಕ್ಷಕರು ಸೇರಿ 6 ಮಂದಿ ವಜಾ