ಭಾಷಾ ವಿವಾದದ ಕಿಡಿ ಹೊತ್ತಿಸಿದ ಕಮಲ್ ಹಾಸನ್ ಕಥೆ ಹೇಳುತ್ತಾ ಕನ್ನಡದ ʼಕಮಲ್ ಶ್ರೀದೇವಿʼ ಚಿತ್ರ? ಸಿನಿತಂಡದ ಸ್ಪಷ್ಟನೆ ಏನು?
ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದ ಚಿತ್ರಗಳಲ್ಲಿ ಸ್ಯಾಂಡಲ್ವುಡ್ನ 'ಕಮಲ್ ಶ್ರೀದೇವಿʼ ಕೂಡ ಒಂದು. ವಿ.ಎ.ಸುನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಚಲುವರಾಯ ಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.


ಬೆಂಗಳೂರು: ಸದ್ಯ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿರುವ ಚಿತ್ರಗಳಲ್ಲಿ ʼಕಮಲ್ ಶ್ರೀದೇವಿʼ (Kamal Sridevi) ಕೂಡ ಒಂದು. ವಿಭಿನ್ನ ಶೀರ್ಷಿಕೆಯಿಂದಲೇ ಚರ್ಚೆಗೆ ಗ್ರಾಸವಾಗಿರುವ ಈ ಚಿತ್ರತಂಡ ಇತ್ತೀಚೆಗೆ ಹೊಸ ಪೋಸ್ಟರ್ ರಿಲೀಸ್ ಮಾಡಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ವಿ.ಎ.ಸುನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಚಲುವರಾಯ ಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯವನ್ನೂ ಆರಂಭಿಸಲಾಗಿದೆ.
ಶೀರ್ಷಿಕೆ ಕೇಳುತ್ತಿದ್ದಂತೆ ಥಟ್ಟಂತ ನೆನಪಾಗುವುದು ತಮಿಳಿನ ಜನಪ್ರಿಯ ತಾರಾ ಜೋಡಿ ಕಮಲ್ ಹಾಸನ್ ಮತ್ತು ಶ್ರೀದೇವಿ. ಇವರಿಬ್ಬರ ಜೋಡಿ ತಮಿಳುನಾಡಿನಲ್ಲಿ ಭಾರೀ ಹೆಸರು ಮಾಡಿತ್ತು. ಅಲ್ಲದೆ ಇತ್ತೀಚೆಗೆ ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಇದು ಅವರ ಕುರಿತಾದ ಚಿತ್ರವಾ? ಎನ್ನುವ ಪ್ರಶ್ನೆ ಮೂಡಿತ್ತು. ಇದನ್ನು ಸಿನಿಮಾತಂಡ ಸ್ಪಷ್ಟವಾಗಿ ನಿರಾಕರಿಸಿದ್ದು, ಕಮಲ್ ಹಾಸನ್ಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದೆ.
ʼಕಮಲ್ ಶ್ರೀದೇವಿʼ ಚಿತ್ರದ ಪೋಸ್ಟರ್:
ಈ ಸುದ್ದಿಯನ್ನೂ ಓದಿ: Kantara: Chapter 1: ಊಹೆಗೂ ಮೀರಿ ತಯಾರಾಗ್ತಿದೆ ʼಕಾಂತಾರ ಚಾಪ್ಟರ್ 1ʼ; ಹೊಸ ಪೋಸ್ಟರ್ ಮೂಲಕ ಕುತೂಹಲ ಕೆರಳಿಸಿದ ರಿಷಬ್ ಚಿತ್ರ
ಸತ್ಯ ಘಟನೆ ಆಧಾರಿತ ಚಿತ್ರ?
ಇನ್ನು ಚಿತ್ರ ಟ್ಯಾಗ್ ಲೈನ್ನಲ್ಲಿರುವ ಕೇಸ್ ನಂಬರ್, ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾನಾ? ಎಂಬು ಅನುಮಾನ ಹುಟ್ಟು ಹಾಕಿದೆ. ಅಲ್ಲದೆ ಪೋಸ್ಟರ್ನಲ್ಲಿ ಬಿಭಿನ್ನವಾಗಿದ್ದು, ಹಲವರನ್ನು ಆಕರ್ಷಿಸಿದೆ. ಇದರಲ್ಲಿ ಯುವತಿಯೊಬ್ಬಳ ಮುಖವನ್ನು ಆವರಿಸಿ ಪಾರಾವಾಳಗಳು ಹಾರಾಡುತ್ತಿರುವುದು ಕಂಡು ಬಂದಿದೆ. ಜತೆಗೆ ಆಕೆಯ ಮೈಗೆ ಹಾವು, ಗೂಬೆ, ಕಾಗೆ, ಊಸರವಳ್ಳಿ,ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವುದು ಕಂಡು ಬಂದಿದೆ. ಹೀಗಾಗಿ ಈ ಪೋಸ್ಟರ್ ಈಗಾಗಲೇ ಚರ್ಚೆ ಹುಟ್ಟು ಹಾಕಿದೆ.
ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ ಧನಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ದಿಲ್ಲದೇ ಸೆಟ್ಟೇರಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಗೆಲುವಿನ ಭರವಸೆ ನೀಡಿದೆ. ಕನ್ನಡದ ಜತೆಗೆ ತೆಲುಗು,ತಮಿಳಿನಲ್ಲಿಯೂ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಿದ್ದ ಚಿತ್ರತಂಡ ಶೀಘ್ರದಲ್ಲೇ ರಿಲೀಸ್ ಮಾಡುವುದಾಗಿ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಚಿನ್ ಚಲುವರಾಯ ಸ್ವಾಮಿ , ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ಮಾಪಕ ರಾಜವರ್ಧನ್, ಹಿರಿಯ ನಟ ಉಮೇಶ್,ಮಿತ್ರ, ರಾಘು ಶಿವಮೊಗ್ಗ,ಅಕ್ಷಿತಾ ಬೋಪಯ್ಯ ನಿರ್ದೇಶಕ ಸುನೀಲ್ , ಛಾಯಾಗ್ರಹಕ ನಾಗೇಶ್ ಆಚಾರ್ಯ, ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಮತ್ತೊಂದು ವಿಶೇಷ ಎಂದರೆ ಈ ಚಿತ್ರ ಪ್ರತಿಭಾವಂತರ ಸಂಗಮ ಎನಿಸಿಕೊಂಡಿದೆ. ʼಮಮ್ಮಿʼ ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ, ʼಗೊಂಬೆಗಳ ಲವ್ʼ ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್,ʼʼ ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲ ಕೆಲಸಗಳನ್ನ ಮುಗಿಸಿಕೊಂಡಿದೆ. ಇದೇ ವರ್ಷ ತೆರೆಗೆ ಬರಲಿದೆʼʼ ಎಂದು ತಿಳಿಸಿದ್ದಾರೆ.