Pune Bridge Collapse: ಇಬ್ಬರ ಮೃತ ದೇಹ ಪತ್ತೆ; ಕೊಚ್ಚಿ ಹೋದವರಿಗಾಗಿ ಮುಂದುವರಿದ ಶೋಧ ಕಾರ್ಯ
ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಯಾಣಿ ನದಿಗೆ ಅಡ್ಡಲಾಗಿ (Pune Bridge Collapse) ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ. ಹಲವರು ಮುಳುಗಿರಬಹುದು ಎಂದು ಊಹಿಸಲಾಗಿದೆ.


ಮುಂಬೈ: ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದು ಬಿದ್ದ (Pune Bridge Collapse) ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ. ಹಲವರು ಮುಳುಗಿರಬಹುದು ಎಂದು ಊಹಿಸಲಾಗಿದೆ. ಪೊಲೀಸರ ಪ್ರಕಾರ, 10 ರಿಂದ 15 ಜನರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ತುರ್ತು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ರಕ್ಷಣಾ ದೋಣಿಗಳು ಮತ್ತು ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ 38 ಜನರನ್ನು ರಕ್ಷಿಸಲಾಗಿದೆ
ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಕಮಿಷನರೇಟ್ನ ತಲೆಗಾಂವ್ ದಭಾಡೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಇನ್ನು ಈ ಸೇತುವೆ ಏಕಾಏಕಿ ಕುಸಿದು ಬೀಳಲು ಕಾರಣ ಏನೆಂಬುದು ತಿಳಿದಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರಿದಿದೆ. ಈ ಸೇತುವೆ ಎರಡು ವರ್ಷಗಳ ಹಿಂದೆ ಅಷ್ಟೇ ಲೋಕಾರ್ಪಣೆಗೊಂಡಿತ್ತು. ಸೇತುವೆ ಮೇಲೆ ಅತೀ ಹೆಚ್ಚು ಜನ ಸೇರಿದ್ದರಿಂದ ಕುಸಿದಿದೆ ಎಂದು ಹೇಳಲಾಗುತ್ತಿದೆ.
ಭಾರೀ ಮಳೆಯಿಂದಾಗಿ ಇಂದ್ರಯಾಣಿ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿದೆ ಮತ್ತು ಪ್ರವಾಹ ಗಮನಾರ್ಹವಾಗಿ ಬಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಪುಣೆ ಜಿಲ್ಲಾಧಿಕಾರಿ ಜಿತೇಂದ್ರ ದುಡಿ, ತೀವ್ರಗೊಂಡ ಮಾನ್ಸೂನ್ ಕಾರಣದಿಂದಾಗಿ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ಪ್ರವಾಸಿಗರು ಜಲಮೂಲಗಳು ಮತ್ತು ಕೆಲವು ನೈಸರ್ಗಿಕ ಸ್ಥಳಗಳನ್ನು ಸಮೀಪಿಸುವುದನ್ನು ನಿರ್ಬಂಧಿಸಿ ನಿಷೇಧಿತ ಆದೇಶಗಳನ್ನು ಹೊರಡಿಸಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಟ್ವೀಟ್ ಮಾಡಿ ಇಬ್ಬರು ಮೃತ ಪಟ್ಟಿರುವುದನ್ನು ಧೃಡಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pune Bridge Collapse: ದೇಶದಲ್ಲಿ ಮತ್ತೊಂದು ಘನಘೋರ ದುರಂತ! ಸೇತುವೆ ಕುಸಿದು ನದಿಯಲ್ಲಿ ಕೊಚ್ಚಿ ಹೋದ 25ಕ್ಕೂ ಹೆಚ್ಚು ಪ್ರವಾಸಿಗರು!
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಯಲ್ಲಿ 2 ಜನರು ಸಾವನ್ನಪ್ಪಿದ್ದಾರೆ ... ಅವರ ಕುಟುಂಬಗಳ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಕೆಲವು ಜನರು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ, ಹುಡುಕಾಟ ನಡೆಸಲಾಗುತ್ತಿದೆ. ಸ್ಥಳದಲ್ಲಿ ಎನ್ಡಿಆರ್ಎಫ್ ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಆರು ಜನರನ್ನು ರಕ್ಷಿಸಲಾಗಿದೆ ... 32 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಆರು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಫಡ್ನವೀಸ್ ಎಂದು ಅವರು ಟ್ವೀಟ್ ಮಾಡಿದ್ದಾರೆ.