ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮತ್ತೆ ಬಾಲ ಬಿಚ್ಚಿದ ಬಿಲಾವಲ್

ಸಿಂಧೂ ನದಿ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ನೀರಿನ ಪಾಲನ್ನು ಭಾರತವು ಇನ್ನು ಮುಂದೆಯೂ ನಿರಾಕರಿಸಿದರೆ, ಪಾಕಿಸ್ತಾನವು ಯುದ್ಧಕ್ಕೆ ಸಿದ್ಧವಾಗ ಬೇಕಾಗುತ್ತದೆ ಎಂದು ಅಬ್ಬರಿಸಿದ್ದಾರೆ ಅಲ್ಲಿನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ.

ಮತ್ತೆ ಬಾಲ ಬಿಚ್ಚಿದ ಬಿಲಾವಲ್

Profile Ashok Nayak Jun 25, 2025 5:00 AM

ಸಿಂಧೂ ನದಿ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ನೀರಿನ ಪಾಲನ್ನು ಭಾರತವು ಇನ್ನು ಮುಂದೆಯೂ ನಿರಾಕರಿಸಿದರೆ, ಪಾಕಿಸ್ತಾನವು ಯುದ್ಧಕ್ಕೆ ಸಿದ್ಧವಾಗ ಬೇಕಾಗುತ್ತದೆ ಎಂದು ಅಬ್ಬರಿಸಿದ್ದಾರೆ ಅಲ್ಲಿನ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ. ಸದರಿ ಜಲ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಭಾರತವು ನೀರನ್ನು ಬಿಡುಗಡೆ ಮಾಡುವುದು ಅಥವಾ ಮಾಡದೇ ಇರುವುದು ಬೇರೆಯದೇ ವಿಚಾರ.

ಆದರೆ ನಾವಿಲ್ಲಿ ಗಮನಿಸಬೇಕಾದ್ದು, ಈ ಚರ್ಚಾವಿಷಯವನ್ನಿಟ್ಟುಕೊಂಡು ಬಿಲಾವಲ್ ಅವರು ಮತ್ತೊಮ್ಮೆ ಬಾಲ ಅಲ್ಲಾಡಿಸಿರುವ ಪರಿ! ಮಾತೆತ್ತಿದರೆ ‘ಭಾರತದ ಮೇಲೆ ಯುದ್ಧ ಸಾರುತ್ತೇವೆ’ ಎಂಬ ‘ಸುರ್ ಸುರ್’ ಬತ್ತಿಯನ್ನು ಸುಡುವ ಇಂಥವರಿಗೆ, ಕನಿಷ್ಠಪಕ್ಷ ತಮ್ಮದೇ ದೇಶದ ಆರ್ಥಿಕ ಪರಿಸ್ಥಿತಿ, ಸೇನಾ ಸಾಮರ್ಥ್ಯ ಮತ್ತು ಯುದ್ಧೋಪಕರಣಗಳ ಪ್ರಸಕ್ತ ಸ್ಥಿತಿಗತಿಯ ಅರಿವಿದೆಯೇ? ಅಥವಾ ಅಲ್ಲಿನ ರಾಜಕೀಯ ನಾಯಕರಿಗೆ ಭಾರತದ ಮೇಲೆ ಯುದ್ಧಕ್ಕೆ ಮುಂದಾಗಿ ಅದನ್ನು ದಕ್ಕಿಸಿಕೊಳ್ಳುವ ಇಚ್ಛಾಶಕ್ತಿ ಇದೆಯೇ? ವಿನಾಕಾರಣ ಕಾರ್ಗಿಲ್ ಯುದ್ಧಕ್ಕೆ ಕಾರಣರಾದ ಪಾಕಿಗಳು, ಅದರ ಪರಿಣಾಮವಾಗಿ ಭಾರತದಿಂದ ಹಾಕಿಸಿಕೊಂಡ ಬರೆಯನ್ನು ನೆಕ್ಕಿ ಗುಣಪಡಿಸಿಕೊಳ್ಳಲಿಕ್ಕೇ ವರ್ಷಗಳು ಹಿಡಿದವು.

ಇದನ್ನೂ ಓದಿ: Vishwavani Editorial : ಅಸಮಾಧಾನವೋ ಎಚ್ಚರಿಕೆಯೋ?

ಉಗ್ರರಿಗೆ ಚಿತಾವಣೆ ನೀಡಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ‘ಸರ್ಜಿಕಲ್ ಸ್ಟ್ರೈಕ್’ನಿಂದಾಗಿ ಪಾಕಿ ಉಗ್ರರ ತರಬೇತಿ ಶಿಬಿರಗಳೇ ಪುಡಿಗಟ್ಟಿದವು. ಇನ್ನು ಪಹಲ್ಗಾಮ್‌ನಲ್ಲಿ ಉಗ್ರರು ಮೆರೆದ ಪೈಶಾಚಿಕ ಕೃತ್ಯಕ್ಕೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಭಾರತವು ನೀಡಿದ ತಪರಾಕಿಯನ್ನು ತಡೆಯಲಾರದೆ ದಮ್ಮಯ್ಯ ಗುಡ್ಡೆ ಹಾಕಿ ಕದನ ವಿರಾಮವಾಗುವಂತೆ ನೋಡಿಕೊಂಡಿದ್ದೂ ಇದೇ ಪಾಕಿಸ್ತಾನವೇ.

ಇಷ್ಟೆಲ್ಲಾ ಕಹಿ ವಾಸ್ತವಗಳ ಅನಾವರಣವಾಗಿದ್ದರೂ ಬಿಲಾವಲ್ ಭುಟ್ಟೋ ಮಹಾಶಯರು ಅದ್ಯಾವ ಭಂಡಧೈರ್ಯದಲ್ಲಿ ಭಾರತದ ಮೇಲೆ ಯುದ್ಧಕ್ಕೆ ಸನ್ನದ್ಧರಾಗುವ ಮಾತಾಡಿದರೋ ಗೊತ್ತಾಗುತ್ತಿಲ್ಲ. ಕಪಿಚೇಷ್ಟೆಗೂ ಒಂದು ಮಿತಿಯಿದೆ ಎಂಬುದನ್ನು ಬಿಲಾವಲ್‌ರಿಗೆ ತಿಳಿ ಹೇಳುವವರು ಯಾರು?!