ಪರಿಷತ್ ಹೆಸರುಗಳ ಶಿಫಾರಸ್ಸಿಗೆ ಹೈಕಮಾಂಡ್ ಆಕ್ಷೇಪ
ರಾಜ್ಯ ಸರಕಾರ ಮತ್ತು ರಾಜ್ಯ ಕಾಂಗ್ರೆಸ್ ಜತೆಗೂಡಿ ಸಲ್ಲಿಸಿರುವ ಶಿಫಾರಸು ಪಟ್ಟಿಯಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆಗಳಿಂದ ಬಂದವರಿಗೆ, ರಾಜಕಾರಣಿಗಳಿಗೆ ಹಾಗೂ ಸಮಾಜ ಸೇವೆಯಲ್ಲಿ ದವರಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯ ಮಾತ್ರ ಪರಿಗಣಿಸಿ ಕ್ರಿಶ್ಚಿಯನ್ ಸಮುದಾಯ ನಿರ್ಲಕ್ಷ್ಯ ಮಾಡಿರುವ ಆಕ್ಷೇಪವೂ ಇದೆ ಎನ್ನಲಾಗಿದೆ.


ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಂಘಗಳಿಗೆ ಆದ್ಯತೆ ಬೇಡ, ಕ್ರಿಶ್ಚಿಯನ್ನರಿಗೆ ಅವಕಾಶ ನೀಡಿ
ರಾಜ್ಯದ ಪಟ್ಟಿ ದಿಲ್ಲಿಯಲ್ಲಿ ತಿರಸ್ಕಾರ ?
ಬಹು ನಿರೀಕ್ಷಿತ ವಿಧಾನಪರಿಷತ್ ನಾಲ್ಕು ನಾಮನಿರ್ದೇಶನ ಸದಸ್ಯರ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಸಲ್ಲಿಸಿದ್ದ ಶಿಫಾರಸ್ಸುಗಳನ್ನು ಪಕ್ಷದ ಹೈಕಮಾಂಡ್ ಬೇಸರಗೊಂಡು ಪಕ್ಕಕ್ಕೆ ಇರಿಸಿದೆ ಎಂಬುದು ತಿಳಿದುಬಂದಿದೆ. ರಾಜ್ಯದಲ್ಲಿ ತೆರವಾಗಿರುವ ಮೇಲ್ಮನೆಯ 4 ಸ್ಥಾನಗಳಿಗೆ ಮುಖ್ಯಮಂತ್ರಿ ಸಿದ್ದರಾ ಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಶಿಫಾರಸು ಪಟ್ಟಿ ಸಲ್ಲಿಸಿ ತಿಂಗಳೇ ಕಳೆದಿದೆ. ಆದರೂ ಹೈಕಮಾಂಡ್ ನಿಂದ ಇದರ ಬಗ್ಗೆ ಸಣ್ಣ ಸೊಲ್ಲೂ ಕೇಳಿ ಬಂದಿಲ್ಲ.
ಅಂದರೆ ಇದನ್ನು ಹೈಕಮಾಂಡ್ ಸಂಪೂರ್ಣ ತಿರಸ್ಕರಿಸಿದೆಯೇ ಎನ್ನುವ ಗಂಭೀರ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ತೆರವಾಗಿರುವ 4 ಪರಿಷತ್ ಸ್ಥಾನಗಳಿಗೆ ಸುಮಾರು 60ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಇವರಲ್ಲಿ ಕೆಲವರು ತಿಂಗಳಿನಿಂದಲೂ ದಿಲ್ಲಿಯಲ್ಲಿ ನಿರಂತರ ಲಾಬಿ ನಡೆಸುತ್ತಿದ್ದಾರೆ. ಅವರೇ ಈಗ ರಾಜ್ಯದ ಶಿಫಾರಸು ಪಟ್ಟಿ ತಿರಸ್ಕಾರವಾಗಿರುವ ಮಾಹಿತಿ ಬಯಲು ಮಾಡಿದ್ದಾರೆ.
ದಿಲ್ಲಿಯಲ್ಲಿ ಬೀಡು ಬಿಟ್ಟಿರುವ ಪ್ರಬಲ ಆಕಾಂಕ್ಷಿಗಳ ಪ್ರಕಾರ, ರಾಜ್ಯ ಕಾಂಗ್ರೆಸ್ ಈಗ ಹೊಸ ಪಟ್ಟಿ ಯನ್ನು ಸಲ್ಲಿಸಬೇಕು ಅಥವಾ ಸಲ್ಲಿಕೆಯಾಗಿರುವ ಪಟ್ಟಿಯನ್ನು ಸಮರ್ಥಿಸುವ ಪ್ರಯತ್ನ ಮಾಡ ಬೇಕು. ಇಲ್ಲವಾದರೆ ಪಕ್ಷದ ವರಿಷ್ಠರೇ ನಾಮನಿರ್ದೇಶನ ಸದಸ್ಯತ್ವದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಸಾಧ್ಯತೆ ಇದೆ.
ರಾಜ್ಯ ಸರಕಾರ ಮತ್ತು ರಾಜ್ಯ ಕಾಂಗ್ರೆಸ್ ಜತೆಗೂಡಿ ಸಲ್ಲಿಸಿರುವ ಶಿಫಾರಸು ಪಟ್ಟಿಯಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆಗಳಿಂದ ಬಂದವರಿಗೆ, ರಾಜಕಾರಣಿಗಳಿಗೆ ಹಾಗೂ ಸಮಾಜ ಸೇವೆಯಲ್ಲಿ ದವರಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯ ಮಾತ್ರ ಪರಿಗಣಿಸಿ ಕ್ರಿಶ್ಚಿಯನ್ ಸಮುದಾಯ ನಿರ್ಲಕ್ಷ್ಯ ಮಾಡಿರುವ ಆಕ್ಷೇಪವೂ ಇದೆ ಎನ್ನಲಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯಪಾಲರು ಈಗಾಗಲೇ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲು ಕಲ್ಪಿಸುವ ವಿಧೇಯಕ ಸೇರಿದಂತೆ ಅನೇಕ ಮಸೂದೆಗಳನ್ನು ಒಂದರ ಹಿಂದೆ ಒಂದರಂತೆ ತಿರಸ್ಕರಿಸುತ್ತಿರುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಪರಿಣಿತರು ಹಾಗೂ ವಿದ್ವಾಂಸರ ಬದಲು ರಾಜಕಾರಣಿಗಳನ್ನು ನಾಮಕರಣ ಮಾಡಿ ಕಳುಹಿಸಿದರೆ ರಾಜ್ಯಪಾಲರಿಂದ ತಿರಸ್ಕಾರ ವಾಗಬಹುದು.
ಆದ್ದರಿಂದ ಕಾಂಗ್ರೆಸ್ಗೆ ಮುಖಭಂಗವಾಗಬಹುದು ಎನ್ನುವ ಬಗ್ಗೆಯೂ ಪಕ್ಷದ ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ಗೆ ಸಲ್ಲಿಕೆಯಾಗಿರುವ ಪಟ್ಟಿಯನ್ನು ಈಗ ರಾಜ್ಯ ನಾಯಕರು ಮರುಪರಿಶೀಲಿಸಬೇಕು. ಇಲ್ಲವೇ ಹೊಸ ಹೆಸರುಗಳು ಸಹಿತ ಹೈಕಮಾಂಡ್ ಭೇಟಿ ಮಾಡಿ ನಾಮನಿರ್ದೇಶನ ಸದಸ್ಯರ ನೇಮಕದ ಕರಸತ್ತು ಅಂತ್ಯಗೊಳಿಸಬೇಕಿದೆ ಎಂದು ಪಕ್ಷದ ದಿಲ್ಲಿ ಮೂಲಗಳು ತಿಳಿಸಿವೆ.
ಏನಿದು ಗೊಂದಲ, ಏಕೆ ತಿರಸ್ಕಾರ ?
ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರಾಗಿದ್ದ ಯು.ಬಿ.ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್, ಜೆಡಿಎಸ್ ನಿಂದ ನಾಮಕರಣಗೊಂಡಿದ್ದ ತಿಪ್ಪೇಸ್ವಾಮಿ, ಬಿಜೆಪಿಯಿಂದ ನಾಮಕರಣಗೊಂಡಿದ್ದ ಸಿ.ಪಿ. ಯೋಗೇಶ್ವರ್ ಅವರ ಸ್ಥಾನಗಳು ತೆರವಾಗಲಿದ್ದು, ಈ ಎಲ್ಲಾ ಸ್ಥಾನಗಳಿಗೂ ಕಾಂಗ್ರೆಸ್ ಸದಸ್ಯರು ನಾಮಕರಣಗೊಂಡರೆ, ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಬಲ 37ಕ್ಕೆ ಏರಿಕೆಯಾಗಲಿದೆ. ಬಿಜೆಪಿಯ ಬಲ 29ಕ್ಕೆ ಇಳಿಯಲಿದ್ದು, ಜೆಡಿಎಸ್ ಸದಸ್ಯರ ಸಂಖ್ಯೆ 9ರಲ್ಲಿ ಮುಂದುವರಿಯಲಿದೆ. ಬಿಜೆಪಿ-ಜೆಡಿಎಸ್ ಸೇರಿದಂತೆ ಪರಿಷತ್ ನಲ್ಲಿ ಪ್ರತಿಪಕ್ಷಗಳ ಸದಸ್ಯ ಬಲ ಕೂಡ 37 ಆಗಲಿದೆ.
ಹೀಗಾಗಿ ಕಾಂಗ್ರೆಸ್ ನಲ್ಲಿ ನಾಲ್ಕು ಸದಸ್ಯತ್ವಕ್ಕೆ ವಿವಿಧ ಕ್ಷೇತ್ರಗಳ ಸಾಧಕರು, ಅನುಭವಿಗಳನ್ನು ಆಯ್ಕೆ ಮಾಡಿ ಮೇಲ್ಮನೆಗೆ ಕಳುಹಬೇಕಿದೆ. ಆದರೆ ರಾಜ್ಯದಿಂದ ಸಲ್ಲಿಸಿರುವ ಶಿಫಾರಸು ಪಟ್ಟಿಯಲ್ಲಿ ಅಂಥವರು ವಿರಳ ಎನ್ನುವ ಆಕ್ಷೇಪ ಹೈಕಮಾಂಡ್ ನದ್ದಾಗಿದೆ ಎಂದು ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವೇಣು ಗೋಪಾಲ ಸೇರಿದಂತೆ ಅನೇಕ ಹಿರಿಯ ಆಪ್ತರಿದ್ದು, ವಿಯನ ಕಾರ್ತಿಕ್, ಬಿ.ಎಲ್.ಶಂಕರ್, ರಘುನಂದನ್ ರಾಮಣ್ಣ, ಡಿ.ಜಿ.ಸಾಗರ್, ಕೆ.ಶಿವಕುಮಾರ್, ದಿನೇಶ್ ಅಮೀನ್ ಮಟ್ಟು, ಅಗಾ ಖಾನ್ ಹಾಗೂ ಕೆಲವು ಉದ್ಯಮಿಗಳು ಹಾಗೂ ರಾಜಕಾರಣಿಗಳೇ ಹೆಚ್ಚಾಗಿ ದ್ದಾರೆ ಎನ್ನಲಾಗಿದೆ.
ಇವರಲ್ಲಿ ಕೆಲವರು ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಹಿನ್ನೆಲೆಯವರು ಇರುವುದು ಸರಿ. ಆದರೆ ಸಂಘಟನೆಯಿಂದ ಬಂದವರಿದ್ದಾರೆ. ಜತೆಗೆ ಕ್ರಿಶ್ಚಿಯನ್ ಸಮುದಾಯಕ್ಕೆ ಆದ್ಯತೆ ಸಿಕ್ಕಿಲ್ಲ. ಹಿಂದುಳಿದವರಲ್ಲೇ ಅತಿ ಸಣ್ಣ ಜನಾಂಗಕ್ಕೆ ಅವಕಾಶ ನೀಡಿಲ್ಲ. ಹಾಗೆಯೇ ಮಾದಿಗ ಸಂಘಟನೆಗಳು ಆಕ್ಷೇಪಿಸುತ್ತಿರುವಂತೆ ದಲಿತರಲ್ಲೇ ಮಾದಿಗ ಸಮುದಾಯಕ್ಕೆ ಅವಕಾಶ ನೀಡಿಲ್ಲ ಎನ್ನುವ ಆಕ್ಷೇಪ ಗಳಿವೆ, ಇಂಥ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿದರೆ ಅವರು ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುವ ಆತಂಕ ಕಾಂಗ್ರೆಸ್ ನದಾಗಿದೆ ಎಂದು ಮೂಲಗಳು ವಿವರಿಸಿವೆ.
ಅಂತಿಮ ಆಯ್ಕೆ ಯಾರದು, ಹೇಗೆ ?
ಇರುವ ನಾಲ್ಕು ಸ್ಥಾನಗಳಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಐಎಸಿಸಿ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು ಸಮ್ಮತಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈಗಿರುವ ಪಟ್ಟಿಯನ್ನು ಈ ನಾಲ್ವರೂ ನಾಯಕರ ಜತೆಗೆ ಗೂಡಿ ಸಮಾಲೋಚಿಸಿ ಸರಿಪಡಿಸಲಿದ್ದಾರೆ.
ಪಕ್ಷದ ಮೂಲಗಳು ಪ್ರಕಾರ, ಜೂನ್ 5ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಹೈಕಮಾಂಡ್ ಜತೆ ಚರ್ಚಿಸ ಲಿದ್ದಾರೆ. ಅಂದರೆ ಈಗಾಗಲೇ ನೀಡಿರುವ ಹೆಸರುಗಳಲ್ಲಿ ಕೊಂಚ ಬದಲಾವಣೆ ಮಾಡಿ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಿಕೊಂಡು ಬರಲಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಕೆಲವು ಹೊಸ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದು, ಹಿಂದುಲಿದ ವರ್ಗದಿಂದ ವೇಣುಗೋಪಾಲ್, ದಲಿತ ಸಾಹಿತಿ ಯೂ, ಕಾಂಗ್ರೆಸ್ ಹಿರಿಯರೂ ಆದ ಎಲ್, ಹನುಮಂತಯ್ಯ, ಮಾಜಿ ಸಚಿವ ಆಂಜನೇಯ ಹಾಗೂ ತೇಜಸ್ವಿನಿ ಗೌಡ ಮತ್ತು ರಮೇಶ್ ಬಾಬು ಮಂಚೂಣಿಯಲ್ಲಿದ್ದಾರೆ.
ಶಿಫಾರಸ್ಸು ಪಟ್ಟಿಯಲ್ಲಿ ಯಾರಿಗೆ ಮಣೆ?
ತೆರವಾದ ಪರಿಷತ್ನ 4 ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು
ರಾಜಕಾರಣಿಗಳಿಗೆ ಹಾಗೂ ಸಮಾಜ ಸೇವೆಯಲ್ಲಿದ್ದವರಿಗೆ ಆದ್ಯತೆ
ಅಲ್ಪಸಂಖ್ಯಾತರ ಕೋಟಾದಲ್ಲಿ ಮುಸ್ಲಿಂ ಸಮುದಾಯಕ್ಕೆ ಮಣೆ
ಕ್ರಿಶ್ಚಿಯನ್ ಸಮುದಾಯ ನಿರ್ಲಕ್ಷಿಸಿ ಆಕಾಂಕ್ಷಿಗಳ ಪಟ್ಟಿ ರವಾನೆ