ಶಾಲೆಗೆ ಕೊಠಡಿ ಕೇಳಿದ ಶಿಕ್ಷಕನ ಅಮಾನತು
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 142 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಗತ್ಯ ಕೊಠಡಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರು ಧ್ವನಿ ಎತ್ತಿರುವುದೇ ಇದೀಗ ಅವರಿಗೆ ಮುಳುವಾಗಿದೆ.


ವಿನಾಯಕ ಮಠಪತಿ ಬೆಳಗಾವಿ
ಮಕ್ಕಳಿಗಾಗಿ ಬೇಡಿಕೆ ಇಟ್ಟ ಶಿಕ ಕನ ವಿರುದ್ದ ಕ್ರಮ ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರ ಹಿಡಿಶಾಪ
‘ನೂರಾರು ಮಕ್ಕಳಿರುವ ಸರಕಾರಿ ಶಾಲೆಗೆ ಕೊಠಡಿ ಕೊಡಿ, ನೆರಳಲ್ಲಿ ಕುಳಿತು ಮಕ್ಕಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ’ ಎಂದು ಆಗ್ರಹಿಸಿದ್ದ ಶಿಕ್ಷಕನನ್ನೇ ಶಿಕ್ಷಣ ಇಲಾಖೆ ಅಮಾನತು ಗೊಳಿಸಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 142 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಗತ್ಯ ಕೊಠಡಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರು ಧ್ವನಿ ಎತ್ತಿರುವುದೇ ಇದೀಗ ಅವರಿಗೆ ಮುಳುವಾಗಿದೆ.
ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಶಿಕ್ಷಕನ್ನೇ ಅಮಾನತು ಮಾಡಲಾಗಿದೆ. ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಮೂರು ಕೊಠಡಿ ನೀಡುವಂತೆ ಮುಖ್ಯ ಶಿಕ್ಷಕ ವೀರಣ್ಣ ಅವರು ಕಳೆದ ಕೆಲ ವರ್ಷಗಳಿಂದ ಮೇಲಧಿಕಾರಿಗಳ ಗಮನಕ್ಕೆ ತರುತ್ತಿದ್ದರು.
ಇದನ್ನೂ ಓದಿ: IPL 2025: ʻಜಸ್ಪ್ರೀತ್ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್!
2023ರಲ್ಲಿ ಮೂರು ಕೊಠಡಿ ಮಂಜೂರು ಮಾಡಿದ್ದರೂ ಈವರೆಗೂ ಕಾಮಗಾರಿ ಕೈಗೊಂಡಿಲ್ಲ. ಇದೇ ವಿಚಾರವಾಗಿ ಮುಖ್ಯ ಶಿಕ್ಷಣ ವೀರಣ್ಣ ಮಡಿವಾಳರ ಅವರು ನಿಡಗುಂದಿ ಗ್ರಾಮದಿಂದ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದರು. ನಂತರ ಉಪವಾಸ ಸತ್ಯಾಗ್ರಹ ನಡೆಸಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದರು.
1-7ನೇ ತರಗತಿವರೆಗೆ ಏಕೋಪಾಧ್ಯಾಯ: ನಿಡಗುಂದಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಒಟ್ಟು 142 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಣ ವೀರಣ್ಣ ಮಡಿವಾಳರ ಅವರು ಮಾತ್ರ ಕಾಯಂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿzರೆ. ಇನ್ನುಳಿದಂತೆ ನಾಲ್ವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟೇ ಅಲ್ಲದೆ ದಾನಿಗಳಿಂದ 10 ಗುಂಟೆ ಜಮೀನನ್ನು ಶಾಲೆಗೆ ಕೊಡಿಸುವ ಮೂಲಕ ಶಾಲೆ ಅಭಿವೃದ್ಧಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುಸುವಲ್ಲಿ ಶ್ರಮ: ಕಳೆದ ಒಂಬತ್ತು ವರ್ಷಗಳಿಂದ ನಿಡಗುಂದಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೀರಣ್ಣ ಮಡಿವಾಳರ ಅವರು ಕೇವಲ ಸರಕಾರಿ ನೌಕರನಂತೆ ದುಡಿಯದೆ, ಶಾಲಾ ಮಕ್ಕಳ ಭವಿಷ್ಯ ರೂಪಿಸಲು ತಮ್ಮ ಸಮಯವನ್ನು ಮೀಸಲಿಟ್ಟಿzರೆ. ಕಳೆದ ವರ್ಷ 142 ಇದ್ದ ಹಾಜರಾತಿ ಸಂಖ್ಯೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 170 ದಾಟಿದೆ. ಮಕ್ಕಳ ಹಾಜರಾತಿ ನೋಡಿ ಶಾಲಾ ಕೊಠಡಿ ಕೊಡುವಂತೆ ಶಿಕ್ಷಕ ವೀರಣ್ಣ ಹೋರಾಟ ನಡೆಸಿದರೆ ಇಲಾಖೆ ಅವರನೇ ಅಮಾನತು ಮಾಡಿ ಶಿಕ್ಷಿಸಿದೆ.
ಪ್ರಶಸ್ತಿ ಹಣವನ್ನೂ ಶಾಲೆ ಅಭಿವೃದ್ಧಿಗೆ ಬಳಕೆ: ನಿಡಗುಂದಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಣ ವೀರಣ್ಣ ಮಡಿವಾಳರ ಅವರ ಸೇವೆ ಗುರುತಿಸಿ ಶಿಕ್ಷಣ ಇಲಾಖೆ ಜಿಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಇವರಿಗೆ ಬಂದ ಗೌರವದ ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ.
ಶಿಕ್ಷಣ ಇಲಾಖೆ ಕೊಟ್ಟ ಕಾರಣವೇನು?
ತರಗತಿ ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಿರುವ ಮುಖ್ಯ ಶಿಕ್ಷಣ ವೀರಣ್ಣ ಮಡಿವಾಳರ ಸರಕಾರಿ ನೌಕರನಾಗಿ, ಅದರಲ್ಲೂ ಮುಖ್ಯ ಶಿಕ್ಷಕನಾಗಿ ಇಲಾಖೆ ಮತ್ತು ಸರಕಾರಕ್ಕೆ ಮುಜುಗರ ಉಂಟುಮಾಡಿದ್ದಾರೆ. ಇದರಿಂದ ಅಮಾನತು ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಬಸವರಾಜಪ್ಪ ಆರ್. ಕಾರಣ ನೀಡಿದ್ದಾರೆ. ಕಳೆದ 9 ವರ್ಷಗಳಿಂದ ಶಾಲೆಯ ಅಭಿವೃದ್ಧಿಗೆ ಹಗಲಿ ರುಳು ಶ್ರಮಿಸಿದ ಶಿಕ್ಷಕನ್ನು ಈ ರೀತಿಯಲ್ಲಿ ಅಮಾನತು ಮಾಡುವ ಮೂಲಕ ಶಿಕ್ಷಣ ಇಲಾಖೆಯು ಪ್ರಾಮಾಣಿಕ ಶಿಕ್ಷಕರೊಬ್ಬರಿಗೆ ಅವಮಾನ ಮಾಡಿದೆ ಎಂದು ಗ್ರಾಮಸ್ಥರು ಇಲಾಖೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ನಾನು ನಮ್ಮ ಘನ ಸರಕಾರದ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇನೆಯೇ ಹೊರತು, ಇಲಾಖೆಗೆ ಅಥವಾ ಸರಕಾರಕ್ಕೆ ಮುಜುಗರ ತರುವಂತಹ ಕೆಲಸ ಮಾಡಿಲ್ಲ. ದಯಮಾಡಿ ಶೀಘ್ರವೇ ನಮ್ಮ ಶಾಲಾ ಮಕ್ಕಳು ಮಳೆಯಲ್ಲಿ ನೆನೆಯದಂತೆ, ಬಿಸಿಲಲ್ಲಿ ಬೇಯದಂತೆ ಶಾಲೆಯಲ್ಲಿ ಕಲಿತು ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ, ನಿಮಗೆ ಅಧಿಕಾರವಿದೆ ನಮ್ಮ ಶಾಲಾ ಮಕ್ಕಳಿಗೆ ನಾಲ್ಕು ಸುಸಜ್ಜಿತ ತರಗತಿ ಕೊಠಡಿಗಳನ್ನು ಕಟ್ಟಿಕೊಡಿ. ಅಂಬೇಡ್ಕರ್ ಅವರ ತತ್ವದ ಅಡಿಯಲ್ಲಿ ಕೆಲಸ ಮಾಡುವುದೇ ನನ್ನ ಮೂಲ ಉದ್ದೇಶ.
- ವೀರಣ್ಣ ಮಡಿವಾಳರ, ಮುಖ್ಯ ಶಿಕ್ಷಕ, ನಿಡಗುಂದಿ