Bandi Devara Utsava: ದಸರಾದಂತೆ ʼಬಂಡಿದೇವರ ಉತ್ಸವʼ ಅತ್ಯಂತ ಸಂಭ್ರಮದಿಂದ ಆಚರಿಸಬೇಕು: ಜಯರಾಮ್ ರಾಯಪುರ
Bandi Devara Utsava: ನಾಡಪ್ರಭು ಕೆಂಪೇಗೌಡರು ತಮ್ಮ ಜನಾಂಗದವರಿಗಾಗಿ ಬಂಡಿದೇವರ ಉತ್ಸವವನ್ನು ಆಚರಿಸುತ್ತಿದ್ದರು. ಹಾಗೆಯೇ ಯಲಹಂಕ ಭಾಗದವರಿಗೆ ಸಂಬಂಧಪಟ್ಟಂತೆ ಉಯ್ಯಾಲೆ ಉತ್ಸವವನ್ನು ಆಚರಿಸುತ್ತಿದ್ದರು. ಆದರೆ ಈ ಆಚರಣೆಗಳು, ವಿಚಾರಗಳು ಇಂದಿನ ಜನರಿಗೆ ಗೊತ್ತಿಲ್ಲ. ಮತ್ತೆ ಆ ಆಚರಣೆಗಳು ನಡೆಯಬೇಕು. ನಮ್ಮ ಬೇರು ಇನ್ನಷ್ಟು ಗಟ್ಟಿಯಾಗಬೇಕು, ಜಾತ್ಯತೀತ, ಸಾಂಸ್ಕೃತಿಕ ಆಚರಣೆಗಳು ಜನರನ್ನು ಬೆಸೆಯಬೇಕು ಎಂದು ಹಿರಿಯ ಐಆರ್ಎಸ್ ಅಧಿಕಾರಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಜಯರಾಮ್ ರಾಯಪುರ ತಿಳಿಸಿದ್ದಾರೆ.


ಬೆಂಗಳೂರು: ಕೆಂಪೇಗೌಡರ ಕಾಲದ ಬಂಡಿದೇವರ ಉತ್ಸವದ ಆಚರಣೆ ಇಂದಿನ ಜನರಿಗೆ ತಿಳಿಯುವಂತಾಗಬೇಕು. ದಸರಾ ಉತ್ಸವದಂತೆ ಬಂಡಿದೇವರ ಉತ್ಸವವು (Bandi Devara Utsava) ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಹಿರಿಯ ಐಆರ್ಎಸ್ ಅಧಿಕಾರಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಜಯರಾಮ್ ರಾಯಪುರ ತಿಳಿಸಿದರು. ಮೂರು ದಿನಗಳ ಕಾಲ ನಡೆಯಲಿರುವ ʼಬೆಂಗಳೂರು ಬಂಡಿದೇವರ ಉತ್ಸವʼ ಕ್ಕೆ ನಗರದ ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ಬುಧವಾರ ಸಿಹಿ ತಯಾರಿಸುವ ಆಚರಣೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಕೆಂಪೇಗೌಡರು ತಮ್ಮ ಜನಾಂಗದವರಿಗಾಗಿ ಬಂಡಿದೇವರ ಉತ್ಸವವನ್ನು ಆಚರಿಸುತ್ತಿದ್ದರು. ಹಾಗೆಯೇ ಯಲಹಂಕ ಭಾಗದವರಿಗೆ ಸಂಬಂಧಪಟ್ಟಂತೆ ಉಯ್ಯಾಲೆ ಉತ್ಸವವನ್ನು ಆಚರಿಸುತ್ತಿದ್ದರು. ಆದರೆ ಈ ಆಚರಣೆಗಳು, ವಿಚಾರಗಳು ಇಂದಿನ ಜನರಿಗೆ ಗೊತ್ತಿಲ್ಲ. ಮತ್ತೆ ಆ ಆಚರಣೆಗಳು ನಡೆಯಬೇಕು. ನಮ್ಮ ಬೇರು ಇನ್ನಷ್ಟು ಗಟ್ಟಿಯಾಗಬೇಕು, ಜಾತ್ಯಾತೀತ, ಸಾಂಸ್ಕೃತಿಕ ಆಚರಣೆಗಳು ಜನರನ್ನು ಬೆಸೆಯಬೇಕು ಎಂದು ಅವರು ತಿಳಿಸಿದರು.

ನಾಡಪ್ರಭು ಕೆಂಪೇಗೌಡರ ಪೂರ್ವಿಕ ದೇವರಾದ ಶ್ರೀ ಕೆಂಪಣ್ಣಸ್ವಾಮಿ ಹಾಗೂ ಶ್ರೀ ವೀರಣ್ಣಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಬಳಿಕ ಒಕ್ಕಲಿಗ ಸಮುದಾಯದ 200ಕ್ಕೂ ಹೆಚ್ಚು ಮಹಿಳೆಯರೆಲ್ಲರೂ ಸೇರಿ ಸಿಹಿ ತಯಾರಿಸಿ ರಾಶಿ ಹಾಕಿದರು. ಇದನ್ನು ರಾಶಿ ಪೂಜೆ ಎಂದೂ ಕೂಡ ಕರೆಯಲಾಗುತ್ತದೆ. ನಂತರ ಅದನ್ನು ಪೊಟ್ಟಣದಲ್ಲಿ ತುಂಬಿಸಿ ದೇವರಿಗೆ ನೈವೇದ್ಯ ಸಲ್ಲಿಸಲಾಗಿದೆ. ಈ ಸಿಹಿಯನ್ನು ನಾಳಿನ ಮೆರವಣಿಗೆಯಲ್ಲಿ ಎಲ್ಲರಿಗೂ ಹಂಚಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬಂಡಿದೇವರ ಆಚರಣೆಯ ಕುರಿತು ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಅಧ್ಯಕ್ಷ ಡಾ. ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಇದೊಂದು ನಮ್ಮ ಸಂಸ್ಕೃತಿಯ ಆಚರಣೆ. ಈ ಮೂಲಕ ಎಲ್ಲರೊಂದಿಗೆ ಬೆರೆಯುವುದು ಜತೆಗೆ ನಮ್ಮ ಆಚರಣೆಗಳು, ವಿಚಾರಗಳನ್ನು ಹಂಚಿಕೊಳ್ಳುವುದೇ ನಮ್ಮ ಆಶಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿದೆ. ಆ ಸಂಭ್ರಮವು ಇಡೀ ನಾಡಿಗೆ ಸಾರಲಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ ಮಾತನಾಡಿ, ಇದೊಂದು ನಮ್ಮ ಸಂಸ್ಕೃತಿಯ ಆಚರಣೆ. ಈ ಆಚರಣೆಯು ಇನ್ನು ಮುಂದುವರೆಸಬೇಕು. ಮತ್ತೆ ಎಲ್ಲರೂ ಕೂಡಿ ಬಂಡಿದೇವರ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವಂತಾಗಬೇಕು. ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ಕೈಗೊಂಡ ಆಚರಣೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಸರು ಮಾಡಲಿದೆ ಎಂದರು.
ಈ ಸುದ್ದಿಯನ್ನೂ ಓದಿ | CBSE: 2 ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಸಿಬಿಎಸ್ಇ ಅನುಮೋದನೆ; ಮುಂದಿನ ವರ್ಷದಿಂದಲೇ ಹೊಸ ನಿಯಮ ಜಾರಿ
ಕಾರ್ಯಕ್ರಮದಲ್ಲಿ ಬೆಂಗಳೂರು ಬಂಡಿದೇವರ ಉತ್ಸವ ಸಮಿತಿಯ ಕಾರ್ಯದರ್ಶಿ ಎಂ. ಅಮರೇಶ್, ಸಮಿತಿಯ ಉಪಾಧ್ಯಕ್ಷ ನಾಗರಾಜ್, ಹಿರಿಯ ಉಪಾಧ್ಯಕ್ಷ ಗೋವಿಂದೇಗೌಡ, ಕೆಂಪೇಗೌಡ ಸಂಶೋಧನಾ ಪರಿಷತ್ನ ಪ್ರಧಾನ ಕಾರ್ಯದರ್ಶಿ ಜೆ. ನಾಗರಾಜ್, ಮುಖೇಶ್, ಪಾಂಡು ಕುಮಾರ್, ಉಮಾ ಬಸವರಾಜ್, ಭಾರತಿ ಜಯರಾಮ ಹಾಗೂ ಫಸ್ಟ್ ಸರ್ಕಲ್ ಸಂಘಟನೆಯವರು ಉಪಸ್ಥಿತರಿದ್ದರು.