Theft case: ಕಲಬುರಗಿಯಲ್ಲಿ ಹಾಡಹಗಲೇ ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕದ್ದ ಕಳ್ಳರು!
Theft case: ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆ ಬಳಿಯ ನಾಗಾರ್ಜುನ ಬಾರ್ ಬಳಿ ಕಳ್ಳತನ ನಡೆದಿದೆ. ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ. ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಲಬುರಗಿ: ಹಾಡಹಗಲೇ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಲ್ಯಾಪ್ಟಾಪ್ ಕಳ್ಳತನ ಮಾಡಿರುವುದು ನಗರದ ಹಳೆ ಜೇವರ್ಗಿ ರಸ್ತೆ ಬಳಿಯ ನಾಗಾರ್ಜುನ ಬಾರ್ ಬಳಿ ನಡೆದಿದೆ. ವೃದ್ದ ಸೇರಿ ನಾಲ್ವರು ಕಳ್ಳರಿಂದ ಕೃತ್ಯ (Theft case) ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಬಲೆನೋ ಕಾರಿನಲ್ಲಿ ಇಟ್ಟಿದ್ದ ಲ್ಯಾಪ್ಟಾಪ್ ಅನ್ನು ಪಕ್ಕಾ ಪ್ಲ್ಯಾನ್ ಮಾಡಿ ಚಾಲಾಕಿ ಕಳ್ಳರು ಎಗರಿಸಿದ್ದಾರೆ.
ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲಾಗಿದೆ. ಕಳ್ಳರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡನನ್ನು ನದಿಗೆ ತಳ್ಳಿದ ಆರೋಪ ಪ್ರಕರಣ; ಮೂರೇ ತಿಂಗಳಿಗೆ ಮುರಿದುಬಿತ್ತು ದಾಂಪತ್ಯ!

ಯಾದಗಿರಿ: ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಗಂಡನನ್ನು ಪತ್ನಿಯೇ ನದಿಗೆ ತಳ್ಳಿದ ಆರೋಪ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ದಂಪತಿಯ ವೈವಾಹಿಕ ಸಂಬಂಧ ಮುರಿದುಬಿದ್ದಿದೆ. ನದಿಗೆ ತಳ್ಳಿ ಸಾಯಿಸಲು ಯತ್ನಿಸಿದ್ದಾಳೆಂದು ಪತ್ನಿ ಗದ್ದೆಮ್ಮ ಮೇಲೆ ಪತಿ ತಾತಪ್ಪ ಆರೋಪ ಮಾಡಿದ್ದರು. ಈ ಪ್ರಕರಣದ ಬೆನ್ನಲ್ಲೇ ದಂಪತಿಯ ಮೂರು ತಿಂಗಳ ವೈವಾಹಿಕ ಸಂಬಂಧ ಅಂತ್ಯವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಪತಿ ತಾತಪ್ಪ, ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ವಿಚ್ಛೇದನದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದ ಗದ್ದೆಮ್ಮ ಹಾಗೂ ಆಕೆ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ಬಗ್ಗೆ ಗದ್ದೆಮ್ಮ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಲ್ಲಾ ಮುಗಿದು ಹೋಗಿದೆ. ನೆನ್ನೆ ನ್ಯಾಯ ಪಂಚಾಯಿತಿ ಮಾಡಿ, ತಾಳಿ ಹಾಗೂ ಕಾಲುಂಗುರ ತೆಗೆದುಕೊಂಡು ಹೋಗಿದ್ದಾರೆ. ಊರಿನ ಹಿರಿಯರ ಸಮ್ಮುಖದಲ್ಲಿ ಕುಳಿತು ನ್ಯಾಯ ಪಂಚಾಯಿತಿ ಮಾಡಿದ್ದಾರೆ. ನನಗೆ ಇಷ್ಟ ಇದೆ ಅಂತಾನೆ ಮದುವೆ ಆಗಿದ್ದೆ. ಆದರೆ ನಾನೇ ನದಿಗೆ ತಳ್ಳಿದ್ದೇನೆಂದು ಹೇಳಿದ್ದಾರೆ. ನಾನ್ಯಾಕೆ ಹಂಗೆ ಮಾಡಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ತಾತಪ್ಪನ ಸಹೋದರ ಅಶೋಕ್, ನದಿಗೆ ತಳ್ಳಿದ ಬಳಿಕ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ದಳು. ಘಟನೆ ಬಳಿಕ ತಾತಪ್ಪ ಸಾಕಷ್ಟು ನೊಂದಿದ್ದು, ಮನೆಯಿಂದ ಆಚೆ ಬರುತ್ತಿಲ್ಲ. ಹಾಗಾಗಿ ನಾವು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದೇವೆ. ಗದ್ದೆಮ್ಮ ಕಡು ಬಡವರಾಗಿದ್ದರೂ ನಾವು ನಮ್ಮ ಹುಡುಗನಿಗೆ ಮದುವೆ ಮಾಡಿದೆವು. ನಮ್ಮ ಬಂಗಾರದ ಸೂಜಿ ನಮ್ಮ ಕಣ್ಣಿಗೆ ಚುಚ್ಚಿದೆ. ಗಂಡ ನದಿಗೆ ಬಿದ್ದ ತಕ್ಷಣ ಪತ್ನಿ ಅವನಿಗೆ ಚಪ್ಪಲಿ ತೋರಿಸಿದ್ದಾಳೆ. ಅವಳಿಗೆ ಅವನು ಇಷ್ಟವಿಲ್ಲದ ಕಾರಣ ಚಪ್ಪಲಿ ತೋರಿಸಿದ್ದಾಳೆ. ನದಿಗೆ ಬಿದ್ದ ತಕ್ಷಣ ಅವಳ ಚಿಕ್ಕಮ್ಮಳಿಗೆ ಕರೆ ಮಾಡಿದ್ದಾಳೆ. ಗಂಡ ನದಿಗೆ ಬಿದ್ದಾಗ ಸಹಾಯ ಮಾಡಿ ಎಂದು ಜನರ ಕರೆಯಬೇಕು. ಆದರೆ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ದರಿಂದ ತಾತಪ್ಪಗೆ ಸಿಟ್ಟು ಬಂದಿದೆ. ಹಾಗಾಗಿ ಅವಳಿಗೆ ವಿಚ್ಛೇದನ ನೀಡಲು ಎರಡು ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Raichur News: ಫೋಟೋ ತೆಗೆಯುವ ನೆವದಲ್ಲಿ ಪತಿಯನ್ನು ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ?
ಫೋಟೋ ತೆಗೆಯುವ ನೆಪದಲ್ಲಿ ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪನನ್ನು ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ಗೆ ತಳ್ಳಿ ಕೊಲೆಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ಪತ್ನಿ ಗದ್ದೆಮ್ಮ,ಗಂಡನೇ ಕಾಲು ಜಾರಿ ಬಿದ್ದಿದ್ದಾನೆ ಎಂದು ಹೇಳಿದ್ದಳು.