ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಆಗಮನ : ಜೂನ್ 11 ರಂದು ರೈತರು ಸ್ಥಳಕ್ಕೆ ಆಗಮಿಸಲು ಮನವಿ
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಕೇಂದ್ರ ಸಚಿವರಿಗೆ ಇಲ್ಲಿನ ಸಮಸ್ಯೆ ಹಾಗೂ ಅವೈಜ್ಞಾನಿಕ, ಅಕ್ರಮದ ಬಗ್ಗೆ ಮನದಟ್ಟು ಮಾಡಬೇಕಿದೆ. ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ನೀಡಲು ನಮ್ಮದು ಅಭ್ಯಂತರ ವಿಲ್ಲ. ಮುಖ್ಯ ನಾಲೆ ಮೂಲಕ ನೀರು ಹರಿಸಿಕೊಳ್ಳಲಿ. ಆದರೆ ಮಾಗಡಿ ರಾಮನಗರದತ್ತ ನೀರು ಹರಿಸಿ ಕೊಳ್ಳಲು ಕುಣಿಗಲ್ ರಂಗನಾಥ್ ಅವರು ಸಂಬಂಧ ವ್ಯಾಮೋಹಕ್ಕೆ ನೀರು ಇದೇ ಪೈಪ್ ಲೈನ್ ಮೂಲಕ ಬರಲಿ


ಗುಬ್ಬಿ: ಜಿಲ್ಲೆಯಲ್ಲಿ ಕಿಚ್ಚು ಹಬ್ಬಿಸಿದ ಹೇಮಾವತಿ ಉಳಿವಿನ ರೈತರ ಹೋರಾಟಕ್ಕೆ ಸಂಸದ ಹಾಗೂ ಕೇಂದ್ರ ಸಚಿವರು ಸ್ಥಳಕ್ಕೆ ಬಂದಿಲ್ಲ ಎನ್ನುವ ಟೀಕೆಗೆ ಬ್ರೇಕ್ ಹಾಕಿ ರೈತರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲು ಕೇಂದ್ರ ರೈಲ್ವೆ, ಜಲಶಕ್ತಿ ಸಚಿವ ವಿ.ಸೋಮಣ್ಣ ಇದೇ ತಿಂಗಳ 11 ರಂದು ಬೆಳಿಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಹೇಮಾವತಿ ಹೋರಾಟಗಾರರು, ರೈತರು, ಮುಖಂಡರು ಸ್ಥಳಕ್ಕೆ ಆಗಮಿಸಿ ನಮ್ಮ ನೀರಿನ ಹಕ್ಕು ಪ್ರತಿಪಾದಿಸಬೇಕಿದೆ ಎಂದು ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮುಖಂಡರು, ರೈತರನ್ನು ಕುರಿತು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಕೇಂದ್ರ ಸಚಿವರಿಗೆ ಇಲ್ಲಿನ ಸಮಸ್ಯೆ ಹಾಗೂ ಅವೈಜ್ಞಾನಿಕ, ಅಕ್ರಮದ ಬಗ್ಗೆ ಮನದಟ್ಟು ಮಾಡಬೇಕಿದೆ. ಕುಣಿಗಲ್ ತಾಲ್ಲೂಕಿನ ರೈತರಿಗೆ ನೀರು ನೀಡಲು ನಮ್ಮದು ಅಭ್ಯಂತರವಿಲ್ಲ. ಮುಖ್ಯ ನಾಲೆ ಮೂಲಕ ನೀರು ಹರಿಸಿಕೊಳ್ಳಲಿ. ಆದರೆ ಮಾಗಡಿ ರಾಮನಗರದತ್ತ ನೀರು ಹರಿಸಿಕೊಳ್ಳಲು ಕುಣಿಗಲ್ ರಂಗನಾಥ್ ಅವರು ಸಂಬಂಧ ವ್ಯಾಮೋಹಕ್ಕೆ ನೀರು ಇದೇ ಪೈಪ್ ಲೈನ್ ಮೂಲಕ ಬರಲಿ ಎನ್ನುತ್ತಾರೆ.
ಇದನ್ನೂ ಓದಿ: Tumkur News: ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್ ಕುಟುಂಬಕ್ಕೆ ಮತ್ತೊಂದು ಆಘಾತ; ಮೊಮ್ಮಗನ ಅಗಲಿಕೆ ನೋವಲ್ಲಿ ಅಜ್ಜಿಯೂ ಸಾವು!
ತದ ನಂತರದಲ್ಲಿ ಮಾಗಡಿ ಕಡೆ ನೀರು ಹರಿಸಲು ಸಜ್ಜಾಗಿದ್ದಾರೆ. ಸಾವಿರಾರು ರೈತರ ವಿರೋಧದ ನಡುವೆ ಅಕ್ರಮ ಕಾಮಗಾರಿ ನಡೆಸಲು ಅಧಿಕಾರ ದುರ್ಬಳಕೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಜೊತೆಗೆ ಶೇಕಡಾ 40 ರಷ್ಟು ಕಾಮಗಾರಿ ಕೇವಲ ಬಿಲ್ ಮೂಲಕ ಆಗಿದೆ. ಇದನ್ನೇ ಕಿಕ್ ಬ್ಯಾಕ್ ಕಾಮಗಾರಿ ಎಂದು ಚರ್ಚೆ ನಡೆದಿದೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ರೈತರು ತಮ್ಮ ಪಾಲಿನ ನೀರು ಹಕ್ಕು ಕೇಳಿದರೆ ಅಕ್ರಮ ಕೂಟ ಎಂದು ತಾಲ್ಲೂಕು ಆಡಳಿತ ಮೂಲಕ ಜರಿದಿದ್ದಾರೆ. ರೈತರ ಹೋರಾಟ ವನ್ನು ಕಡೆಗಣಿಸಬೇಡಿ. ನಿಷೇಧಾಜ್ಞೆಯನ್ನು ರೈತರನ್ನು ಏನೋ ಮಾಡಲು ಸಾಧ್ಯವಾಗಿಲ್ಲ. ಮಠಾಧೀಶರ ಮೇಲೆ ಕೊಲೆ ಯತ್ನ ಹಾಕುವ ಬೆದರಿಕೆಯಿಂದ ಜನರಿಗೆ ಕಾಂಗ್ರೆಸ್ ದುರಾಡಳಿತ ಬಗ್ಗೆ ಅರಿವಾಗಿದೆ. ನಮ್ಮ ನೀರು ಕೊಡಲು ಹಿಂದೇಟು ಹಾಕಿದರೆ ರೈತರ ಸಂಘಟನೆ ಮತ್ತಷ್ಟು ಬಲ ಗೊಳ್ಳಲಿದೆ. ಈ ಹೋರಾಟಕ್ಕೆ ಕೇಂದ್ರ ಸಚಿವ ಸೋಮಣ್ಣ ಅವರ ಭೇಟಿ ಪುಷ್ಠಿ ನೀಡಲಿದೆ ಎಂದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಒಂದೂ ವರೆ ವರ್ಷದಿಂದ ರೈತರಲ್ಲಿ ವಿರೋಧ ಕಂಡಿದೆ. ಆದರೂ ಅಧಿಕಾರ ಬಳಸಿ ಕಾಮಗಾರಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಕುಣಿಗಲ್ ಶಾಸಕರು ಗಂಟೆಗೊಂದು ಹೇಳಿಕೆ ನೀಡುತ್ತಾರೆ. ಮತ್ತೊಂದು ಕಡೆ ಮಾಗಡಿ ಶಾಸಕರು ಕೆಟ್ಟ ಭಾಷೆಯಲ್ಲಿ ಹೇಳಿಕೆ ನೀಡುತ್ತಾರೆ. ರೈತರ ಬಗ್ಗೆ ಈ ಮಟ್ಟದ ಅಸಡ್ಡೆ ಮಾಡುವ ಕಾಂಗ್ರೆಸ್ ಶಾಸಕರ ನಡವಳಿಕೆ ಬಗ್ಗೆ ರೈತರು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಕಾಲ ಸನ್ನಿಹಿತವಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತರ ಹೋರಾಟದ ಬಗ್ಗೆ ಅರಿತ ಸರ್ಕಾರ ಸಾಧಕ ಬಾಧಕಗಳ ಬಗ್ಗೆ ಚರ್ಚೆಗೆ ಬಂದಿದೆ. 144 ನಿಷೇಧಾಜ್ಞೆ ಹಾಕಿ ರೈತರನ್ನು ಬೆದರಿಸಿದರೆ ಏನಾಗುತ್ತದೆ ಎಂಬುದು ಈಗ ತಿಳಿದಿದೆ. ರೈತನ ಬದುಕಿನ ಪ್ರಶ್ನೆ ಇದಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಸಚಿವರು ರೈತರೊಂದಿಗೆ ಹುಡುಗಾಟ ಆಡಬೇಡಿ. ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಬಹು ದಿನದ ಒತ್ತಾಯಕ್ಕೆ ಕೇಂದ್ರ ಸಚಿವ ಸೋಮಣ್ಣ ಅವರು ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವ ಹಿನ್ನಲೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜೂನ್ 11 ರಂದು ಬೆಳಿಗ್ಗೆ 10 ಗಂಟೆಗೆ ಸಂಕಾಪುರ ಬಳಿ ಬರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಬ್ಯಾಟ ರಂಗೇಗೌಡ, ಜಿ.ಎನ್.ಬೆಟ್ಟ ಸ್ವಾಮಿ, ಪಿ.ಬಿ.ಚಂದ್ರಶೇಖರಬಾಬು, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಎನ್.ಸಿ.ಪ್ರಕಾಶ್, ಸಾಗರನಹಳ್ಳಿ ವಿಜಯಕುಮಾರ್, ಜಿ.ಡಿ.ಸುರೇಶಗೌಡ, ಹಿತೇಶ್, ಕಾರೇಕುರ್ಚಿ ಸತೀಶ್, ರೈತ ಸಂಘದ ಸಿ.ಜಿ.ಲೋಕೇಶ್, ಶಿವಕುಮಾರ್ ಇತರರು ಇದ್ದರು.