Operation Sindoor: ಆಪರೇಷನ್ ಸಿಂದೂರ್ ಮೂಲಕ ಕಂದಹಾರ್ ಹೈಜಾಕ್ ಮಾಸ್ಟರ್ಮೈಂಡ್ ಅಬ್ದುಲ್ ರಾವುಫ್ ಅಜರ್ನನ್ನು ಹೊಡೆದುರುಳಿಸಿದ ಸೇನೆ
Abdul Rauf Azhar: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ನ ಮುಖಂಡ ಮತ್ತು ಐಸಿ-814 (IC-814) ಕಂದಹಾರ್ ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಅಬ್ದುಲ್ ರಾವುಫ್ ಅಜರ್ ಕೂಡ ಸಾವನ್ನಪ್ಪಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದ ಆತನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಅಬ್ದುಲ್ ರೌಫ್ ಅಜರ್.

ಹೊಸದಿಲ್ಲಿ: ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆ ಸಮರ ಸಾರಿದ್ದು, ಮೇ 7ರಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆಗಳಲ್ಲಿ ದಾಳಿ ನಡೆಸಿದೆ. ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ನ ಮುಖಂಡ ಮತ್ತು ಕಂದಹಾರ್ ಐಸಿ-814 (IC-814) ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಅಬ್ದುಲ್ ರಾವುಫ್ ಅಜರ್ (Abdul Rauf Azhar) ಕೂಡ ಸಾವನ್ನಪ್ಪಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದ ಆತನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಮೂಲಗಳು ದೃಢಪಡಿಸಿವೆ.
ಪಾಕ್ನ ಪಂಜಾಬ್ ಪ್ರಾಂತ್ಯದ ಬಹವಾಲ್ಪುರ್ ಮತ್ತು ಮುರ್ಡಿಕೆಯಲ್ಲಿದ್ದ ಜೈಷೆ ಮತ್ತು ಲಷ್ಕರ್ ಉಗ್ರ ಸಂಘಟನೆಗಳ ತಾಣಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಧ್ವಂಸಗೊಳಿಸಿವೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಈ ದಾಳಿಯಲ್ಲಿ ಒಟ್ಟು 100 ಉಗ್ರರು ಹತರಾಗಿದ್ದಾರೆ.
Big news : It is confirmed that Abdul Rauf Azhar was killed in #OperationSindoor.
— Mr Sinha (@MrSinha_) May 8, 2025
He's the brother of Masood Azhar and was mastermind of Kandhar IC-814 (Indian) hijack & many other terrorist attacks in India. pic.twitter.com/UgFu7vrvjT
ಈ ಸುದ್ದಿಯನ್ನೂ ಓದಿ: Operation Sindoor: 70 ಅಲ್ಲ... 100 ಉಗ್ರರನ್ನು ಹೊಡೆದುರುಳಿಸಿದ್ದೇವೆ ; ಸರ್ವ ಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ
ʼʼಹತ್ಯೆಗೀಡಾದವರಲ್ಲಿ ಜೈಶ್-ಮೊಹಮ್ಮದ್ನ ಮುಖ್ಯಸ್ಥ, ಕಂದಹಾರ್ ಐಸಿ -814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಮತ್ತು ಅಂತಾರಾಷ್ಟ್ರೀಯ ಜಿಹಾದಿ ಜಾಲದ ಮುಖಂಡ ಅಬ್ದುಲ್ ರವೂಫ್ ಅಜರ್ ಕೂಡ ಸೇರಿದ್ದಾನೆʼʼ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಂದಹಾರ್ ವಿಮಾನ ಹೈಜಾಕ್ ಮಾತ್ರವಲ್ಲದೆ, ಉರಿ, ಪುಲ್ವಾಮಾ, ಪಠಾಣ್ಕೋಟ್ ಭಯೋತ್ಪಾದಕ ದಾಳಿ, 2001ರ ಸಂಸತ್ ದಾಳಿ, ಅಕ್ಷರಧಾಮ ದಾಳಿಯಲ್ಲೂ ರವೂಫ್ ಭಾಗಿಯಾಗಿದ್ದ. ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಭಾರತಕ್ಕೆ ಅತ್ಯಂತ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬ ಎನಿಸಿಕೊಂಡಿದ್ದ. ಈತ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ನ ಸಹೋದರನೂ ಹೌದು.
1999: ಐಸಿ-814 ಹೈಜಾಕ್: ರವೂಫ್ 1999ರಲ್ಲಿ ನಡೆದ ಕಾಠ್ಮಂಡು-ಕಂದಹಾರ್ ನಡುವಿನ ಇಂಡಿಯನ್ ಏರ್ಲೈನ್ಸ್ನ ಐಸಿ-814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದ. ಈ ಘಟನೆಯ ಬಳಿಕ ಭಾರತ ಜೈಷೆ-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮಸೂದ್ ಅಜರ್ನನ್ನು ಬಿಡುಗಡೆ ಮಾಡಬೇಕಾಯಿತು. ಇದಾದ ಬಳಿಕ ರವೂಫ್ ಉಗ್ರ ಸಂಘಟನೆಯಲ್ಲಿ ಪ್ರಮುಖ ನಾಯಕನಾಗಿ ಬೆಳೆದ.
2001: ಭಾರತದ ಸಂಸತ್ ಮೇಲೆ ದಾಳಿ: 2001ರಲ್ಲಿ ಭಾರತದ ಸಂಸತ್ ಮೇಲೆ ನಡೆದ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಭೀತಿ ಎದುರಾಗಿತ್ತು. ರವೂಫ್ ಅಜರ್ ತನ್ನ ಲಷ್ಕರ್-ಎ-ತೈಬಾ ಕಾರ್ಯಕರ್ತರೊಂದಿಗೆ ಸೇರಿ ಈ ದಾಳಿಯನ್ನು ನಡೆಸಿದ್ದ.
2005: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ: ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನದ ಭಾಗವಾಗಿ 2005ರಲ್ಲಿ ಅಯೋಧ್ಯೆಯ ತಾತ್ಕಾಲಿಕ ರಾಮ ಮಂದಿರ ಮೇಲೆ ದಾಳಿ ನಡೆಸಲಾಗಿತ್ತು. ಇದರ ಹಿಂದೆಯೂ ರವೂಫ್ನ ಕೈವಾಡವಿತ್ತು.
2016: ಪಠಾಣ್ಕೋಟ್ ವಾಯುನೆಲೆ ದಾಳಿ: ಪಠಾಣ್ಕೋಟ್ ದಾಳಿಯ ಹಿಂದಿನ ಒಳನುಸುಳುವಿಕೆ ಮತ್ತು ಯೋಜನೆಯ ಮೇಲ್ವಿಚಾರಣೆಯನ್ನು ರವೂಫ್ ವಹಿಸಿಕೊಂಡಿದ್ದ. ಸದ್ಯ ಈತನನ್ನು ಭಾರತೀಯ ಸೇನೆ ಹೊಸಕಿ ಹಾಕಿದೆ.