Puppy Movie: 'ಪಪ್ಪಿ'ಗೆ ಧ್ರುವ ಸರ್ಜಾ ಸಾಥ್; ಮೇ 1ರಂದು ಉತ್ತರ ಕರ್ನಾಟದವರ ಚಿತ್ರ ತೆರೆಗೆ
ಕನ್ನಡ ಚಿತ್ರರಂಗದಲ್ಲಿ ಹೊಸಬರು ವಿಭಿನ್ನ ಪ್ರಯೋಗಳನ್ನು ಮಾಡುತ್ತಲೇ ಇರುತ್ತಾರೆ. ಆ ಪ್ರಯೋಗಳು ಸಕ್ಸಸ್ ಆಗಲಿ ಬಿಡಲಿ ತಮ್ಮ ಪ್ರಯತ್ನಗಳನ್ನು ಯಾವತ್ತೂ ಕೈ ಬಿಡೋದಿಲ್ಲ. ಈಗ ಹೊಸಬರೇ ಸೇರಿಕೊಂಡು ಉತ್ತರ ಕರ್ನಾಟದ ಜವಾರಿ ಭಾಷೆಯಲ್ಲೊಂದು ʼಪಪ್ಪಿʼ ಎಂಬ ಸಿನಿಮಾ ಮಾಡಿದ್ದು, ಇದರ ಟ್ರೈಲರ್ ಈಗಾಗಲೇ ದಾಖಲೆ ಬರೆದಿದೆ. ಟ್ರೈಲರ್ ನೋಡಿದವವರೆಲ್ಲರೂ ನಗುವ ಜತೆಗೆ ಭಾವುಕರಾಗಿದ್ದಾರೆ. ಒಂದೊಳ್ಳೆ ಕಥೆ ಹೇಳೋದಿಕ್ಕೆ ಹೊರಟಿರುವ ಯುವ ಪ್ರತಿಭೆಗಳಿಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.



ಈ ಹಿಂದೆ ʼಫಸ್ಟ್ ಲವ್ʼ ಸಿನಿಮಾ ಮಾಡಿದ್ದ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರ ʼಪಪ್ಪಿʼ. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ʼಪಪ್ಪಿʼ ಸಿನಿಮಾವನ್ನು ಧ್ರುವ ಸರ್ಜಾ ಅರ್ಪಿಸುತ್ತಿದ್ದು, ಮೇ 1ಕ್ಕೆ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಅದರ ಭಾಗವಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ʼಪಪ್ಪಿʼ ಪ್ರತಿಕಾಗೋಷ್ಠಿ ಹಮ್ಮಿಕೊಳ್ಳಲಾಗತ್ತು. ಧ್ರುವ ಸರ್ಜಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

ಧ್ರುವ ಸರ್ಜಾ ಮಾತನಾಡಿ, ʼʼಪಪ್ಪಿʼ ಸಿನಿಮಾವನ್ನು ನಾನು ನೋಡಿದ್ದೇನೆ. ಜಗದೀಶ್ ಹಾಗೂ ಆದಿತ್ಯ ತುಂಬಾ ಓಳ್ಳೆ ನಟರು. ರೇಣುಕಾ, ದುರ್ಗಪ್ಪ ಎಲ್ಲರೂ ರಿಯಲಿಸ್ಟಿಕ್ ಆಗಿ ನಟಿಸಿದ್ದಾರೆ. ಇವರೆಲ್ಲರೂ ಇಷ್ಟು ಚೆನ್ನಾಗಿ ನಟಿಸಿದ್ದಾರೆ ಕಾರಣ ನಿರ್ದೇಶಕರು. ʼತಿಥಿʼ ಸಿನಿಮಾ ನೋಡಿ ಆಮೇಲೆ ಇದ್ದ ವೈಬ್ಸ್ ಈ ಚಿತ್ರಕ್ಕಿದೆ. ಎಮೋಷನ್ಗೆ ಎಲ್ಲರೂ ಕನೆಕ್ಟ್ ಆಗುತ್ತಾರೆ. ಎಲ್ಲರೂ ಈ ಚಿತ್ರವನ್ನು ಚಿತ್ರ ಮಂದಿರದಲ್ಲಿಯೇ ನೋಡಿ. ಎಲ್ಲ ಹೊಸ ಪ್ರತಿಭೆಗಳನ್ನು ಕನ್ನಡಾಭಿಮಾನಿಗಳು ಕೈಬಿಡಬೇಡಿ. ಇಡೀ ಪಪ್ಪಿ ತಂಡಕ್ಕೆ ಒಳ್ಳೆಯದಾಗಲಿʼʼ ಎಂದು ತಿಳಿಸಿದರು.

ನಿರ್ದೇಶಕ ಆಯುಷ್ ಮಲ್ಲಿ ಮಾತನಾಡಿ, ʼʼಪಪ್ಪಿʼ ಟ್ರೈಲರ್ ಅರ್ಗನಿಕ್ ಆಗಿ ರೀಚ್ ಆಗಿದೆ. ನಾವು ಯಾವುದೇ ರೀತಿ ಬೂಸ್ಟ್ ಮಾಡಿಲ್ಲ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಟ್ರೈಲರ್ ರಿಲೀಸ್ ಆದ ಬಳಿಕ ಧ್ರುವ ಕಡೆಯಿಂದ ಕಾಲ್ ಬಂತು.ನಿನಗೆ ಏನ್ ಸಾಥ್ ಬೇಕೋ ನಾನು ಕೊಡುತ್ತೇನೆ. ಈ ರೀತಿಯ ಟ್ಯಾಲೆಂಟ್ ಇಂಡಸ್ಟ್ರಿಗೆ ಬೇಕು. ಉತ್ತರ ಕರ್ನಾಟಕದವರು ಚಿತ್ರರಂಗಕ್ಕೆ ಬರಬೇಕು ಎಂದು ಎನರ್ಜಿ ತುಂಬಿದರು. ವಿನಯ್ ರಾಜ್ಕುಮಾರ್, ರಮ್ಯಾ, ರಾಣಾ ದಗ್ಗುಭಾಟಿ ಎಲ್ಲರೂ ಟ್ರೈಲರ್ ಮೆಚ್ಚಿಕೊಂಡಿದ್ದಾರೆ. ರಾಜ್ ಬಿ. ಶೆಟ್ಟಿ ಕೂಡ ಟ್ರೈಲರ್ ನೋಡಿ ಉತ್ತರ ಕರ್ನಾಟಕದವರು ಇಂಡಸ್ಟ್ರಿಗೆ ಬರಬೇಕು ಎಂದು ಹೇಳಿದ್ದಾರೆʼʼ ಎಂಬುದಾಗಿ ವಿವರಿಸಿದರು.

ಉತ್ತರ ಕರ್ನಾಟಕ ಭಾಷೆಯಲ್ಲಿರುವ ಈ ಚಿತ್ರದಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ. ಸುರೇಶ್ ಬಾಬು ಕ್ಯಾಮೆರಾ ಹಿಡಿದಿದ್ದು, ವಿಶ್ವ ಎನ್.ಎಂ. ಸಂಕಲನ ʼಪಪ್ಪಿʼ ಚಿತ್ರಕ್ಕಿದೆ. ಹಾಸ್ಯದ ಜತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ʼಪಪ್ಪಿʼಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ಕೆಆರ್ಜಿ ಬ್ಯಾನರ್ ʼಪಪ್ಪಿʼ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ.

ʼಪಪ್ಪಿʼ ಚಿತ್ರದ ಟ್ರೈಲರ್ ಪಕ್ಕದ ಟಾಲಿವುಡ್ ಇಂಡಸ್ಟ್ರಿಯ ರಾಣಾ ದಗ್ಗುಭಾಟಿ ಅವರನ್ನು ತಲುಪಿದೆ. ಅವರು ಟ್ರೈಲರ್ ಇಷ್ಟಪಟ್ಟಿದ್ದು, ಅವರ ಆಫೀಸ್ ಕಡೆಯಿಂದ ಕಾಲ್ ಬಂದಿದೆಯಂತೆ. ʼಪಪ್ಪಿʼ ಟ್ರೈಲರ್ ನೋಡಿ ರಾಣಾ ತೆಲುಗು ರೈಟ್ಸ್ ಖರೀದಿಸುವ ಬಗ್ಗೆ ಆಸಕ್ತಿ ತೋರಿದ್ದಾರಂತೆ. ಸದ್ಯ ಈ ಬಗ್ಗೆ ಮಾತುಕಥೆ ನಡೆಯುತ್ತಿದೆ.