Insult to Wadiyar: ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಅವಮಾನ; ಮೂರ್ತಿಯ ಮೇಲೆ ಕುಳಿತು ಬೀಡಿ ಸೇದಿದ ವ್ಯಕ್ತಿ!
Insult to Wadiyar: ಉದ್ದಟತನದಿಂದ ವರ್ತಿಸಿದ ಈ ಪುಂಡ, ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ಸಂಜೆ ಸುಮಾರು 6 ಗಂಟೆಗೆ ಹತ್ತಿ ಕುಳಿತಿದ್ದಾನೆ. ಪ್ರತಿಮೆಯ ಬಾಯಿಗೆ ಬೀಡಿ ಇಟ್ಟು, ಪ್ರತಿಮೆಯ ತಲೆಯ ಮೇಲೆ ಕುಳಿತು ಅದನ್ನು ಒಡೆದು ಹಾಕುವ ಯತ್ನ ಮಾಡಿದ್ದಾನೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಅವಮಾನ

ಮೈಸೂರು: ಮೈಸೂರಿನ (Mysuru news) ಕೆ.ಆರ್. ವೃತ್ತದಲ್ಲಿ ವ್ಯಕ್ತಿಯೊಬ್ಬ ನಾಲ್ವಡಿ ಕೃಷ್ಣರಾಜ ಒಡೆಯರ್ (Nalwadi Krishnaraja Wadiyar) ಅವರ ಪ್ರತಿಮೆಯ ಮೇಲೆ ಕುಳಿತು, ಪ್ರತಿಮೆಯ ಬಾಯಿಗೆ ಬೀಡಿ ಇಟ್ಟು- ಹೀಗೆಲ್ಲ ಪುಂಡಾಟ ಮೆರೆದಿದ್ದಾನೆ. ಮೈಸೂರಿನ ಜನತೆ ಗೌರವಿಸುವ ಮಹಾರಾಜರ ಪ್ರತಿಮೆಯನ್ನು (Insult to Wadiyar) ಅವಮಾನಿಸಿದ್ದಾನೆ. ಈ ಘಟನೆಗೆ ಮೈಸೂರಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈತ ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾನೆಯೇ, ಮಾನಸಿಕ ಅಸ್ವಸ್ಥನೇ ಅಥವಾ ಉದ್ದೇಶಪೂರ್ವಕ ಈ ಕೃತ್ಯ ಎಸಗಿದ್ದಾನೆಯೇ ಎಂದು ತಿಳಿದುಬರಬೇಕಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಸೂಕ್ತ ರಕ್ಷಣೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ನಾಲ್ವಡಿಯವರ ಬಾಯಿಗೆ ಬೀಡಿ ಇಟ್ಟು, ಅವರ ಮೇಲೆ ಕುಳಿತಿದ್ದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದರು. ಆದರೆ, ಪೊಲೀಸರು ಬರುವಷ್ಟರಲ್ಲಿ ಆತ ಅಲ್ಲಿಂದ ಓಡಿಹೋಗಿದ್ದಾನೆ. ಈತನ ಹುಚ್ಚಾಟದ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ವ್ಯವಸ್ಥೆಯ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಹೃದಯ ಭಾಗದಲ್ಲಿ ಈ ಘಟನೆ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ಕುಡುಕ ಕುಳಿತಿದ್ದನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಉದ್ದಟತನದಿಂದ ವರ್ತಿಸಿದ ಈ ಪುಂಡ, ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ಸಂಜೆ ಸುಮಾರು 6 ಗಂಟೆಗೆ ಹತ್ತಿ ಕುಳಿತಿದ್ದಾನೆ. ಪ್ರತಿಮೆಯ ಬಾಯಿಗೆ ಬೀಡಿ ಇಟ್ಟು, ಪ್ರತಿಮೆಯ ತಲೆಯ ಮೇಲೆ ಕುಳಿತು ಅದನ್ನು ಒಡೆದು ಹಾಕುವ ಯತ್ನ ಮಾಡಿದ್ದಾನೆ. ಈ ಘಟನೆಯನ್ನು ಕಂಡ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ಸೂಕ್ತ ರಕ್ಷಣೆಗೆ ಸಾರ್ವಜನಿಕರ ಆಗ್ರಹ
ಈ ಘಟನೆಯಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು, ನಾಲ್ವಡಿಯವರ ಪ್ರತಿಮೆಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು, ಪ್ರತಿಮೆಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ. ಈ ಕಿಡಿಗೇಡಿ ಪ್ರತಿಮೆ ಮೇಲೆ ಬೆಂಕಿ ಕಡ್ಡಿ ಗೀರುವುದು, ಬೀಡಿ ಇಡುವುದನ್ನು ಮಾಡುತ್ತಲೇ ಇದ್ದ. ಎಷ್ಟು ಹೇಳಿದರೂ ಪ್ರತಿಮೆ ಇರುವ ಆವರಣದಿಂದ ಹೊರ ಬರಲಿಲ್ಲ. ಕೊನೆಗೆ ಪೊಲೀಸರು ಬಂದಾಗ ಆತ ಸ್ಥಳದಿಂದ ಕಾಲ್ಕಿತ್ತ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತಿಮೆಗೆ ಸೂಕ್ತ ಭದ್ರತೆ ಕಲ್ಪಿಸುವವರೆಗೆ ಇಲ್ಲಿಂದ ಹೋಗಲ್ಲವೆಂದು ಪಟ್ಟು ಹಿಡಿದು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಘಟನೆಯ ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಮೆಗೆ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದರು. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯನ್ನು ಗುರುತಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ಇದು ಅನ್ನದಾತ, ವಿದ್ಯಾದಾತ ನಾಲ್ವಡಿಯವರಿಗಾದ ಅವಮಾನ ಮಾತ್ರವಲ್ಲ, ಇಡೀ ಮೈಸೂರು ಸಂಸ್ಥಾನದ ಜನರಿಗೆ ಮಾಡಿದ ಅವಹೇಳನ. ಕಿಡಿಗೇಡಿಯ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪಠ್ಯದಲ್ಲಿ ಬೇಕು ನಾಲ್ವಡಿ ಕೃಷ್ಣರಾಜ ಒಡೆಯರ ಕಥೆ!