Vastu Tips: ಧಾರ್ಮಿಕ ವಿಧಿವಿಧಾನಗಳಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಮಹತ್ವ ಏಕೆ ಗೊತ್ತೆ?
ಪ್ರಕೃತಿಯಲ್ಲಿ ನೂರಾರು ಬಗೆಯ ಹಣ್ಣು ಕಾಯಿಗಳಿದ್ದರೂ ಪೂಜಾ ವಿಧಿ ವಿಧಾನ, ಶುಭ ಸಮಾರಂಭಗಳಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಅದರಲ್ಲೂ ಕೆಲವೊಂದು ತೆಂಗಿನ ಕಾಯಿಗಳನ್ನು ಕೆಲವು ಸಂದರ್ಭಗಳಲ್ಲಿ ವರ್ಜ್ಯ ಎನ್ನಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಒಡೆಯುವುದರ ಮಹತ್ವವೇನು? ತೆಂಗಿನ ಕಾಯಿಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ ನೀಡಲಾಗುತ್ತದೆ ಮೊದಲಾದ ಪ್ರಶ್ನೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಉತ್ತರವಿದೆ.


ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಮರಗಳನ್ನು(Vastu for tree) ಅವುಗಳ ಗುಣ ಮತ್ತು ಧರ್ಮವನ್ನು ನೋಡಿ ಪೂಜಿಸಲಾಗುತ್ತದೆ. ಮರಗಿಡಗಳ ಮಹತ್ವಕ್ಕೆ ಅನುಗುಣವಾಗಿ ಅವುಗಳಿಗೆ ಧರ್ಮದ ನಂಟು ನೀಡಲಾಗಿದೆ. ಅವುಗಳಲ್ಲಿ ಒಂದು ತೆಂಗಿನಮರ (Vastu About coconut). ಭಾರತೀಯ ಧರ್ಮ ಮತ್ತು ಸಂಸ್ಕೃತಿಯಲ್ಲಿ ತೆಂಗಿನಕಾಯಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರಕೃತಿಯಲ್ಲಿ ನೂರಾರು ಬಗೆಯ ಹಣ್ಣು ಕಾಯಿಗಳಿದ್ದರೂ ಪೂಜಾ ವಿಧಿ ವಿಧಾನ, ಶುಭ ಸಮಾರಂಭಗಳಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಇದಕ್ಕೆ ಕಾರಣವೂ ಇದೆ ಎನ್ನುತ್ತದೆ ವಾಸ್ತು (Vastu tips) ಶಾಸ್ತ್ರ.
ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ದೇವಾಲಯದಲ್ಲಿ ಒಡೆಯುವ ಅಥವಾ ದೇವರಿಗೆ ಅರ್ಪಿಸುವ ಪದ್ಧತಿ ಅನುಸರಣೆಯಲ್ಲಿದೆ. ತೆಂಗಿನಕಾಯಿಯನ್ನು 'ಶ್ರೀಫಲ' ಎಂದೂ ಕರೆಯುತ್ತಾರೆ. ಇದರ ಧಾರ್ಮಿಕ ಪ್ರಾಮುಖ್ಯತೆ ಮತ್ತು ಅದರ ಔಷಧೀಯ ಗುಣಗಳಿಂದಾಗಿ ಇದನ್ನು ಈ ರೀತಿ ಕರೆಯಲಾಗುತ್ತದೆ.
ವಾಸ್ತು ತತ್ತ್ವಗಳು, ಧಾರ್ಮಿಕ ನಂಬಿಕೆಗಳ ಪ್ರಕಾರ ತೆಂಗಿನಕಾಯಿಯನ್ನು ಪ್ರತಿ ಶುಭ ಸಂದರ್ಭದಲ್ಲಿ ದೇವರಿಗೆ ಅರ್ಪಿಸಬೇಕು. ಅದರಲ್ಲೂ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಪೂಜಾ ವಿಧಿವಿಧಾನಗಳಲ್ಲಿ ತೆಂಗಿನಕಾಯಿಯನ್ನು ಬಳಸಲಾಗುತ್ತದೆ.
ತೆಂಗಿನಕಾಯಿ ಪೂಜಾ ಸಾಮಗ್ರಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ತೆಂಗಿನಕಾಯಿ ಇಲ್ಲದೆ ಮಾಡುವ ಯಾವುದೇ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಪೂರ್ಣ ಭಕ್ತಿಯಿಂದ ಅರ್ಪಿಸಿದರೆ ದುಃಖ ಮತ್ತು ನೋವುಗಳು ನಿವಾರಣೆಯಾಗುತ್ತದೆ. ಮನೆ ಮಂದಿಯ ಅಭಿವೃದ್ಧಿಗೂ ಇದು ಕಾರಣವಾಗುತ್ತದೆ. ಇದರಿಂದ ಮನೆಗೆ ಸಿರಿ ಸಂಪತ್ತು ಸಿಗುತ್ತದೆ. ತೆಂಗಿನಕಾಯಿಯನ್ನು ಪ್ರಸಾದವಾಗಿ ಸೇವಿಸಿದರೆ ಅದು ದೇಹದ ದೌರ್ಬಲ್ಯವನ್ನು ನಿವಾರಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಹಿನ್ನೆಲೆ ಏನು?
ತೆಂಗಿನಕಾಯಿಯನ್ನು ಶ್ರೀಫಲ ಎಂದೂ ಕರೆಯುತ್ತಾರೆ. ವಿಷ್ಣು ಭೂಮಿಯ ಮೇಲೆ ಅವತರಿಸಿದಾಗ, ಅವನು ಲಕ್ಷ್ಮೀ, ತೆಂಗಿನ ಮರ ಮತ್ತು ಕಾಮಧೇನುವನ್ನು ತನ್ನೊಂದಿಗೆ ತಂದನು ಎಂದು ನಂಬಲಾಗಿದೆ. ತೆಂಗಿನಕಾಯಿ ಮರವನ್ನು ಕಲ್ಪವೃಕ್ಷ ಎಂದೂ ಕರೆಯಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ ಎಂಬ ಮೂವರು ದೇವರು ಅದರಲ್ಲಿ ವಾಸಿಸುತ್ತಾರೆ ಎನ್ನುವ ನಂಬಿಕೆ ಇದೆ.
ತೆಂಗಿನಕಾಯಿ ಶಿವನಿಗೆ ಅತ್ಯಂತ ಪ್ರಿಯವಾದದ್ದು. ಅದರ ಮೇಲಿನ ಮೂರು ಕಣ್ಣುಗಳನ್ನು ಶಿವನ ತ್ರಿನೇತ್ರಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿ ಸಮೃದ್ಧಿ, ಶುಭ, ಪ್ರಗತಿ ಮತ್ತು ಗೌರವದ ಸೂಚಕವಾಗಿದೆ ಎನ್ನುತ್ತಾರೆ ವಾಸ್ತು ತಜ್ಞರು.
ತೆಂಗಿನಕಾಯಿ ಏಕೆ ಒಡೆಯಬೇಕು?
ಪುರಾಣಗಳ ಪ್ರಕಾರ ಋಷಿ ವಿಶ್ವಾಮಿತ್ರರು ಒಮ್ಮೆ ಇಂದ್ರನ ಮೇಲೆ ಕೋಪಗೊಂಡು ಮತ್ತೊಂದು ಸ್ವರ್ಗವನ್ನು ಸೃಷ್ಟಿಸಲು ನಿರ್ಧರಿಸಿದರು. ಆದರೆ ಅವರು ಮತ್ತೊಂದು ಸ್ವರ್ಗದ ಸೃಷ್ಟಿಯಿಂದ ಅತೃಪ್ತರಾಗಿದ್ದರು. ಆದ್ದರಿಂದ ಅವರು ಇಡೀ ಪ್ರಪಂಚವನ್ನು ಸೃಷ್ಟಿಸಲು ಪ್ರಾರಂಭಿಸಿದರು. ಎರಡನೇ ಲೋಕವನ್ನು ಸೃಷ್ಟಿಸುವಾಗ ಅವರು ತೆಂಗಿನಕಾಯಿಯನ್ನು ಮಾನವನ ಸಂಕೇತವಾಗಿ ಸೃಷ್ಟಿಸಿದರು. ಈ ಕಾರಣಕ್ಕಾಗಿ, ತೆಂಗಿನಕಾಯಿಯ ಚಿಪ್ಪಿನ ಮೇಲೆ ಎರಡು ಕಣ್ಣು ಮತ್ತು ಬಾಯಿಯಂತಹ ರಚನೆಯು ಹೊರಗಿನಿಂದ ಗೋಚರಿಸುತ್ತದೆ. ಪೂಜೆಯಲ್ಲಿ ತೆಂಗಿನಕಾಯಿ ಒಡೆಯುವುದು ಎಂದರೆ ಆ ವ್ಯಕ್ತಿಯು ತನ್ನ ಇಷ್ಟ ದೇವತೆಯ ಪಾದಗಳಿಗೆ ಶರಣಾಗಿದ್ದಾನೆ ಎಂದರ್ಥ.
ಇದನ್ನೂ ಓದಿ: Vastu Tips: ಹೊಸ ಮನೆ ಖರೀದಿಸುವಾಗ ವಾಸ್ತು ನಿಯಮಗಳ ಬಗ್ಗೆ ತಿಳಿದಿರಲಿ
ತೆಂಗಿನಕಾಯಿ ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಮುಖ್ಯವಲ್ಲ. ಅದರಲ್ಲಿರುವ ಅನೇಕ ಅಂಶಗಳು ನಮ್ಮ ದೇಹಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲೋರಿಗಳು ಸಮೃದ್ಧವಾಗಿದ್ದು, ದೇಹವನ್ನು ತಂಪಾಗಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.