Assault Case: ಮಹಿಳೆಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಪ್ರಶ್ನಿಸಿದವರ ಮೇಲೆ ಮಾರಕ ಹಲ್ಲೆ ಎಸಗಿ ಕಾಮುಕ ಪರಾರಿ
ಮಹಿಳೆ ಮುಂದೆ ಅನುಚಿತ ವರ್ತನೆ ತೋರಿದ್ದಲ್ಲದೆ, ಪ್ರಶ್ನಿಸಿದವರ ಮೇಲೆ ಸಿಕ್ಕಸಿಕ್ಕಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿ ಈ ಹಿಂದೆ ಕೂಡ ಹಲವು ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ.

ಆರೋಪಿ ಕಾರ್ತಿಕ್

ಬೆಂಗಳೂರು: ಬೆಂಗಳೂರಿನ (Bengaluru) ಸುದ್ದಗುಂಟೆಪಾಳ್ಯದಲ್ಲಿ ಬೀದಿಹೋಕ ಮಹಿಳೆಗೆ ಧೂರ್ತನೊಬ್ಬ ದೈಹಿಕ ಕಿರುಕುಳ (Physical Abuse) ನೀಡಿದ ಘಟನೆ ನೆನಪಿನಿಂದ ಮಾಸುವ ಮುನ್ನವೇ ಅಂಥದೇ ಮತ್ತೊಂದು ಘಟನೆ ನಡೆದಿದೆ. ಕ್ವೀನ್ಸ್ ರಸ್ತೆಯ (Queens Road) ರಾಜೀವ್ ಗಾಂಧಿ ಕಾಲೋನಿಯಲ್ಲಿ ಕಾಮುಕನೊಬ್ಬ ಮಹಿಳೆಯೊಬ್ಬರ ಮುಂದೆ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದಲ್ಲದೆ, ಅವರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆಯ ಪತಿ ಹಾಗೂ ಸ್ಥಳೀಯರ ಮೇಲೆ ಬೇಕಾಬಿಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಈತನ ಹಲ್ಲೆಯಿಂದ ಒಟ್ಟಾರೆ 7 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 13 ರಂದು ರಾತ್ರಿ 10.30ಕ್ಕೆ ಈತ ದುಷ್ಕೃತ್ಯ ನಡೆಸಿದ್ದಾನೆ. ಮಹಿಳೆ ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ತೆರಳುತ್ತಿದ್ದಾಗ ಎದುರು ಮನೆಯ ಕಾರ್ತಿಕ್ ಎಂಬಾತ ಎದುರು ಬಂದಿದ್ದಾನೆ. ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದಲ್ಲದೆ, ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಕರೆದಿದ್ದಾನೆ. ಕೂಡಲೇ ಮಹಿಳೆ ಆಕೆಯ ಪತಿಯನ್ನು ಕರೆದಿದ್ದಾರೆ. ಅಷ್ಟರಲ್ಲಿ ರೊಚ್ಚಿಗೆದ್ದ ಕಾಮುಕ ಹಲ್ಲೆ ನಡೆಸಿದ್ದಾನೆ.
ಗಲಾಟೆ ಜೋರಾಗುತ್ತಿದ್ದಂತೆಯೇ ಸುತ್ತಲಿನ ಜನ ಆಗಮಿಸಿದ್ದಾರೆ. ಜಗಳ ಬಿಡಿಸಲು ಬಂದವರ ಮೇಲೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಬಳಸಿ ಕಾಮುಕ ಹಲ್ಲೆ ಮಾಡಿದ್ದಾನೆ. ಹಾಲೋಬ್ಲಾಕ್, ಹೂವಿನ ಪಾಟ್, ಕಿಟಕಿ ಗ್ಲಾಸ್ನಿಂದ ಹೊಡೆದು ಅಟ್ಟಹಾಸ ಮೆರೆದಿದ್ದಾನೆ. ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಏಳು ಜನರಿಗೆ ಗಾಯಗಳಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ತಿಕ್ ತಾಯಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿ ಈ ಹಿಂದೆ ಕೂಡ ಹಲವು ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಕಿರುಕುಳ ನೀಡಿ ಪರಾರಿಯಾದ ಘಟನೆಯ ಆರೋಪಿಯನ್ನು ಬಂಧಿಸಲಾಗಿದೆ. ಅದಾದ ಕೂಡಲೇ ಕ್ವೀನ್ಸ್ ರಸ್ತೆಯ ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ, ಬೆಂಗಳೂರಿನಲ್ಲಿ ಮಹಿಳೆಯರ ವಿರುದ್ಧದ ವಿಕೃತಿ ಹೆಚ್ಚಾಗುತ್ತಿರುವ ಬಗ್ಗೆ ಆತಂಕವೂ ವ್ಯಕ್ತವಾಗಿದೆ. ಸದ್ದುಗುಂಟೆಪಾಳ್ಯ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ ಕಾಮುಕ ಕಾರ್ತಿಕ್ನನ್ನು ಪತ್ತೆ ಮಾಡಿ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Viral Video: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಿಯತಮೆ; ವಿಡಿಯೊ ವೈರಲ್