By Polls Result: ಬಿಜೆಪಿ ಭದ್ರಕೋಟೆಯಲ್ಲಿ ಆಪ್ಗೆ ಸ್ಥಾನ; ಕೇರಳದಲ್ಲಿ ಕಾಂಗ್ರೆಸ್.... ಉಪ ಚುನಾವಣೆಯ ಸಂಪೂರ್ಣ ಫಲಿತಾಂಶ ಇಲ್ಲಿದೆ
ದೇಶದ ಹಲವು ಕಡೆ ನಡೆದಿದ್ದ ವಿಧಾನ ಸಭೆ ಉಪಚುನಾವಣೆಯ ಫಲಿತಾಂಶ ಇದೀಗ ಹೊರ ಬಿದ್ದಿದೆ. ಗುಜರಾತ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತಲಾ ಒಂದೊಂದು ಸ್ಥಾನವನ್ನು ಗೆದ್ದಿದ್ದರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದ ನಿಲಂಬೂರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.


ನವದೆಹಲಿ: ದೇಶದ ಹಲವು ಕಡೆ ನಡೆದಿದ್ದ ವಿಧಾನ ಸಭೆ ಉಪಚುನಾವಣೆಯ (By Polls Result) ಫಲಿತಾಂಶ ಇದೀಗ ಹೊರ ಬಿದ್ದಿದೆ. ಗುಜರಾತ್ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತಲಾ ಒಂದೊಂದು ಸ್ಥಾನವನ್ನು ಗೆದ್ದಿದ್ದರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದ ನಿಲಂಬೂರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಜೂನ್ 19 ರಂದು ಗುಜರಾತ್ನ ವಿಸಾವದರ್ ಮತ್ತು ಕಾಡಿಯಲ್ಲಿ ಎರಡು ಸ್ಥಾನಗಳು ಮತ್ತು ನಿಲಂಬೂರ್, ಪಂಜಾಬ್ನ ಲುಧಿಯಾನ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದ ಕಾಳಿಗಂಜ್ನಲ್ಲಿ ತಲಾ ಒಂದು ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಮತ ಎಣಿಕೆ ಸೋಮವಾರ ಬೆಳಿಗ್ಗೆ ಪ್ರಾರಂಭವಾಗಿತ್ತು.
ಕೇರಳದ ಫಲಿತಾಂಶ
ಆರ್ಯಾದನ್ ಶೌಕತ್ ಅವರನ್ನು ಕಣಕ್ಕಿಳಿಸಿದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್), ಕೇರಳದ ನಿಲಂಬೂರ್ ಸ್ಥಾನವನ್ನು 11 ಸಾವಿರ ಕ್ಕೂ ಹೆಚ್ಚು ಮತಗಳಿಂದ ಗೆದ್ದು, ಆಡಳಿತಾರೂಢ ಎಡಪಕ್ಷದ ಎಂ ಸ್ವರಾಜ್ ಅವರನ್ನು ಸೋಲಿಸಿದೆ. ನಿಲಂಬೂರು ಸಾಂಪ್ರದಾಯಿಕವಾಗಿ ಎಡಪಕ್ಷಗಳ ಭದ್ರಕೋಟೆಯಾಗಿತ್ತು. ಈ ಸ್ಪರ್ಧೆಯನ್ನು ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪ್ರತಿಷ್ಠೆಯ ಹೋರಾಟವೆಂದು ಪರಿಗಣಿಸಲಾಗಿತ್ತು. ಈ ಸ್ಥಾನ ಅವರ ವಯನಾಡ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಮತ್ತು ಜೂನ್ 19 ರಂದು ನಡೆದ ಉಪಚುನಾವಣೆಗೆ ಮುಂಚಿತವಾಗಿ ಅವರು ಈ ಪ್ರದೇಶದಲ್ಲಿ ರೋಡ್ಶೋ ನಡೆಸಿದ್ದರು. ಬಿಜೆಪಿ ನಿಲಂಬೂರ್ ಸ್ಥಾನಕ್ಕೆ ವಕೀಲ ಮೋಹನ್ ಜಾರ್ಜ್ ಅವರನ್ನು ಕಣಕ್ಕಿಳಿಸಿತ್ತು.
ಪಂಜಾಬ್ ಬೈಪೋಲ್
ಲುಧಿಯಾನ ಪಶ್ಚಿಮ ಸ್ಥಾನವನ್ನು ಆಮ್ ಆದ್ಮಿ ಪಕ್ಷ ಉಳಿಸಿಕೊಂಡಿದೆ. ಮಾಜಿ ರಾಜ್ಯಸಭಾ ಸಂಸದ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಅರೋರಾ 10,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಜನಪ್ರಿಯತೆ ಕಳೆದುಕೊಂಡಿರುವ ಆಪ್ಗೆ ಇದು ಅಗ್ನಿಪರೀಕ್ಷೆ ಎಂದು ಹೇಳಲಾಗಿತ್ತು. ಜನವರಿಯಲ್ಲಿ ಆಪ್ ಶಾಸಕ ಗುರುಪ್ರೀತ್ ಬಸ್ಸಿ ನಿಧನದ ನಂತರ ಈ ಸ್ಥಾನ ತೆರವಿತ್ತು.
ಗುಜರಾತ್ ಬೈಪೋಲ್ಸ್
ಬಿಜೆಪಿಯ ಭದ್ರಕೋಟೆಯಾಗಿರುವ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಎರಡರಲ್ಲಿ ಒಂದು ಸ್ಥಾನವನ್ನು ಗಳಿಸಿದೆ. ಆಪ್ ಮಾಜಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ವಿಸಾವದರ್ನಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಕಿರೀಟ್ ಪಟೇಲ್ ಅವರನ್ನು ಸೋಲಿಸುವ ಮೂಲಕ ಜಯಗಳಿಸಿದ್ದಾರೆ. 75,942 ಮತಗಳನ್ನು ಗಳಿಸಿದ ಇಟಾಲಿಯಾ, ಬಿಜೆಪಿಯ ಭದ್ರಕೋಟೆಯಾಗಿರುವ ರಾಜ್ಯದಲ್ಲಿ 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಕಾಡಿ ಬೈಪೋಲ್
ಕಾಡಿಯಲ್ಲಿ, ಬಿಜೆಪಿಯ ರಾಜೇಂದ್ರ ಚಾವ್ಡಾ 39,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಶಾಸಕ ಕರ್ಸನ್ ಸೋಲಂಕಿ ಅವರ ನಿಧನದ ನಂತರ ಫೆಬ್ರವರಿಯಿಂದ ಈ ಸ್ಥಾನ ಖಾಲಿಯಾಗಿದೆ. ಮೆಹ್ಸಾನಾ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಕ್ಷೇತ್ರವು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ತ್ರಿಕೋನ ಸ್ಪರ್ಧೆಯಲ್ಲಿ, ಕಾಂಗ್ರೆಸ್ ಮತ್ತು ಎಎಪಿ ಕ್ರಮವಾಗಿ ರಮೇಶ್ ಚಾವ್ಡಾ ಮತ್ತು ಜಗದೀಶ್ ಚಾವ್ಡಾ ಅವರನ್ನು ಕಣಕ್ಕಿಳಿಸಿದ್ದವು. ರಮೇಶ್ ಚಾವ್ಡಾ 2012 ರಲ್ಲಿ ಈ ಸ್ಥಾನವನ್ನು ಗೆದ್ದಿದ್ದರು.
ಈ ಸುದ್ದಿಯನ್ನೂ ಓದಿ: Nitish Kumar: ಚುನಾವಣೆಗೂ ಮುನ್ನ ಬಂಪರ್ ಗಿಫ್ಟ್ ಕೊಟ್ಟ ನಿತೀಶ್ ಕುಮಾರ್
ಬಂಗಾಳ ಉಪಚುನಾವಣೆ
ನಾಡಿಯಾ ಜಿಲ್ಲೆಯ ವ್ಯಾಪ್ತಿಗೆ ಬರುವ ಬಂಗಾಳದ ಕಾಳಿಗಂಜ್ ಕ್ಷೇತ್ರದಲ್ಲಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಅಲಿಫಾ ಅಹ್ಮದ್ ಮುನ್ನಡೆ ಸಾಧಿಸಿದ್ದಾರೆ. ಫೆಬ್ರವರಿಯಲ್ಲಿ ಅಲಿಫಾ ಅವರ ತಂದೆ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ನಾಸಿರುದ್ದೀನ್ ಅಹ್ಮದ್ ಅವರ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳೇ ಹೆಚ್ಚಿರುವ ಕಾಳಿಗಂಜ್ನಲ್ಲಿ ಸುಮಾರು ಶೇ.54 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಪಕ್ಷ ಮತ್ತು ಬಿಜೆಪಿ ನಡುವಿನ ಪ್ರಮುಖ ಮುಖಾಮುಖಿಯಾಗಿ ಕಾಳಿಗಂಜ್ ಉಪಚುನಾವಣೆಯನ್ನು ನೋಡಲಾಗುತ್ತಿದೆ.