Roopa Gururaj Column: ಪ್ರಾಮಾಣಿಕವಾಗಿ ಬದುಕುವುದು ದೊಡ್ಡ ಸಂಸ್ಕಾರ
ಒಂದು ದಿನ ಒಬ್ಬ ಹುಡುಗನಿಗೆ ರಾಗಿ ಮುದ್ದೆಯನ್ನು ಮಾಡಿ ಬಡಿಸುವ ಜವಾಬ್ದಾರಿ ಬಿದ್ದಿತ್ತು. ಅವನ ತರಗತಿಯಲ್ಲಿ ಸುಮಾರು ಇಪ್ಪತ್ತೆಂಟು ಜನ ವಿದ್ಯಾರ್ಥಿಗಳಿದ್ದರು. ಆಗ ಆ ಹುಡುಗ ಎಲ್ಲಾ ರಾಗಿ ಹಿಟ್ಟನ್ನು ಸೇರಿಸಿ ಇಪ್ಪತ್ತೆಂಟು ಸಾಧಾರಣ ಗಾತ್ರದ ಉಂಡೆಗಳನ್ನು ಮಾಡಿ ಜೋಡಿಸಿಟ್ಟ. ಅದರಲ್ಲಿ ಒಂದು ಉಂಡೆಯನ್ನು ಮಾತ್ರ ತೆಗೆದುಕೊಂಡು ಅದರಲ್ಲಿ ಎರಡು ಭಾಗ ಮಾಡಿಟ್ಟ, ಅಂದರೆ ಒಟ್ಟು ಇಪ್ಪತ್ತೊಂಬತ್ತು ಮುದ್ದೆಗಳಾಗಿದ್ದವು


ಒಂದೊಳ್ಳೆ ಮಾತು
ಅನೇಕ ಸಾಧಕರು ನಮ್ಮ ನಡುವೆ ತಮ್ಮ ಪಾಡಿಗೆ ತಾವು ಯಾವುದೇ ಸದ್ದಿಲ್ಲದೆ, ಶ್ರದ್ಧೆಯಿಂದ ತಮ್ಮ ವಿವೇಚನೆಗೆ ತಕ್ಕದಾದ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅಂತಹ ಒಬ್ಬ ಸಾಧಕರಲ್ಲಿ ಡಾಕ್ಟರ್ ಬಾಲಸುಬ್ರಹ್ಮಣ್ಯಂರವರೂ ಒಬ್ಬರು. ಎಲ್ಲರೂ ಅವರನ್ನು ಪ್ರೀತಿಯಿಂದ ಬಾಲು ಸರ್ ಎಂದೆ ಕರೆಯುವುದು. ಇವರು ವೃತ್ತಿಯಿಂದ ವೈದ್ಯರಾಗಿದ್ದರೂ, ಪ್ರವೃತ್ತಿಯಿಂದ ಸಮಾಜಸೇವಕರಾಗಿ ಹೆಗ್ಗಡ ದೇವನ ಕೋಟೆಯ ಆಚೆ ಇರುವ ಹೊಸಹಳ್ಳಿಯಲ್ಲಿ ತಮ್ಮ ವೈದ್ಯ ಸ್ನೇಹಿತರನ್ನು ಸೇರಿಸಿಕೊಂಡು ಒಂದು ಆಸ್ಪತ್ರೆಯನ್ನು ಅಲ್ಲಿಯ ಗಿರಿಜನ, ಕಾಡು ಕುರುಬ ಹಾಗೂ ಜೇನು ಕುರುಬರಿಗಾಗಿ ಕಟ್ಟಿದ್ದಾರೆ. ನಂತರ ಅವರಿಗಾಗಿ ಒಂದು ಶಾಲೆಯನ್ನು ಕೂಡ ತೆರೆದರು. ನೂರಾರು ಗಿರಿಜನ ಮಕ್ಕಳು ಈಗ ಆ ಶಾಲೆಯಲ್ಲಿ ಓದುತ್ತಿದ್ದಾರೆ.
ಕಾಡಿನಲ್ಲಿದ್ದ ಈ ಮಕ್ಕಳಿಗೆ ಯಾವ ಸಂಸ್ಕೃತಿಯ ಅರಿವೂ ಇಲ್ಲದೆ ಅನಾಗರಿಕರಾಗಿರುತ್ತಾರೆ ಎಂದು ನಗರದಲ್ಲಿರುವ ನಾವೆಲ್ಲರೂ ಭಾವಿಸಿರುತ್ತೇವೆ, ಆದರೆ ಅದು ಯಾವಾಗಲೂ ನಿಜವಾಗಿರುವುದಿಲ್ಲ. ವಾಸ್ತವ ಬೇರೆಯೇ ಇರುತ್ತದೆ. ಡಾ.ಬಾಲಸುಬ್ರಹ್ಮಣ್ಯಂರವರೇ ಹೇಳಿದ ಒಂದು ಘಟನೆ ಹೀಗಿದೆ.
ಇದನ್ನೂ ಓದಿ: Roopa Gururaj Column: ಎಲ್ಲರನ್ನೂ ಯಾವಾಗಲೂ ವಂಚಿಸಲು ಸಾಧ್ಯವಿಲ್ಲ
ಅಲ್ಲಿಯ ಗಿರಿಜನ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಪ್ರತಿದಿನ ರಾಗಿ ಮುದ್ದೆಯನ್ನು ಕೊಡು ತ್ತಾರೆ. ಊಟ ಬಡಿಸುವುದು ಅಲ್ಲಿನ ವಿದ್ಯಾರ್ಥಿಗಳೇ. ಒಬ್ಬೊಬ್ಬ ವಿದ್ಯಾರ್ಥಿಗೂ ಒಂದೊಂದು ಕೆಲಸದ ಜವಾಬ್ದಾರಿ ಕೊಟ್ಟಿರುತ್ತಾರೆ. ಆ ಜವಾಬ್ದಾರಿಯನ್ನು ಮಕ್ಕಳು ನಿಭಾಯಿಸುವುದನ್ನು ನೋಡುವುದೇ ಒಂದು ಅನುಭವ.
ಒಂದು ದಿನ ಒಬ್ಬ ಹುಡುಗನಿಗೆ ರಾಗಿ ಮುದ್ದೆಯನ್ನು ಮಾಡಿ ಬಡಿಸುವ ಜವಾಬ್ದಾರಿ ಬಿದ್ದಿತ್ತು. ಅವನ ತರಗತಿಯಲ್ಲಿ ಸುಮಾರು ಇಪ್ಪತ್ತೆಂಟು ಜನ ವಿದ್ಯಾರ್ಥಿಗಳಿದ್ದರು. ಆಗ ಆ ಹುಡುಗ ಎಲ್ಲಾ ರಾಗಿಹಿಟ್ಟನ್ನು ಸೇರಿಸಿ ಇಪ್ಪತ್ತೆಂಟು ಸಾಧಾರಣ ಗಾತ್ರದ ಉಂಡೆಗಳನ್ನು ಮಾಡಿ ಜೋಡಿಸಿಟ್ಟ. ಅದರಲ್ಲಿ ಒಂದು ಉಂಡೆಯನ್ನು ಮಾತ್ರ ತೆಗೆದುಕೊಂಡು ಅದರಲ್ಲಿ ಎರಡು ಭಾಗ ಮಾಡಿಟ್ಟ, ಅಂದರೆ ಒಟ್ಟು ಇಪ್ಪತ್ತೊಂಬತ್ತು ಮುದ್ದೆಗಳಾಗಿದ್ದವು. ಇಪ್ಪತ್ತೇಳು ಮುದ್ದೆಗಳು ಒಂದೇ ಗಾತ್ರದವು, ಇನ್ನೆರಡು ಮುದ್ದೆಗಳು ಮಾತ್ರ ಚಿಕ್ಕವುಗಳಾಗಿದ್ದವು.
ಯಾವುದೋ ಕಾರಣಕ್ಕಾಗಿ ಡಾಕ್ಟರ್ ಬಾಲು ಅವರು ಅಡುಗೆಮನೆಯೊಳಗೆ ಬಂದರು. ಅಲ್ಲಿ ಆ ಹುಡುಗ ತಟ್ಟೆಯಲ್ಲಿ ರಾಗಿ ಮುದ್ದೆಯನ್ನು ಜೋಡಿಸಿಟ್ಟುಕೊಂಡು ನಿಂತಿದ್ದನ್ನು ನೋಡಿದರು. ಎರಡು ಮುದ್ದೆಗಳು ಮಾತ್ರ ಸಣ್ಣಗಿದ್ದುದ್ದನ್ನು ಅವರು ಗಮನಿಸಿ, ‘ಯಾಕಪ್ಪಾ, ಎಷ್ಟು ಹುಡುಗರಿ ದ್ದಾರೆ? ಎಷ್ಟು ಮುದ್ದೆ ಮಾಡಿದ್ದೀಯಾ?’ ಎಂದು ಕೇಳಿದರು. ಹುಡುಗ ಹೇಳಿದ, ‘ಇಪ್ಪತ್ತೆಂಟು ಜನ ಇದ್ದಾರೆ ಸರ್’ ‘ಹಾಗಾದರೆ ಇಪ್ಪತ್ತೊಂಬತ್ತು ಮುದ್ದೆ ಇದೆಯಲ್ಲಾ’ ಎಂದು ಕೇಳಿದರು ಡಾ. ಬಾಲು. ಆಗ ಆ ಹುಡುಗ, ‘ಅದೂ ಸರ್, ಊಟದ ಹೊತ್ತಿಗೆ ನನ್ನ ತಂಗಿ ಇಲ್ಲಿಗೆ ಬರ್ತಾಳೆ, ಅವಳಿಗಾಗಿ ನನ್ನ ಮುದ್ದೆಯಲ್ಲಿ ಅರ್ಧ ಮಾಡಿ ಇನ್ನೊಂದು ಮುದ್ದೆ ಮಾಡಿದ್ದೀನಿ’ ಎಂದು ಹೇಳಿದ.
‘ಅಯ್ಯೋ ದಡ್ಡ.. ಒಟ್ಟು ಹಿಟ್ಟಿನಲ್ಲೇ ಇಪ್ಪತ್ತೊಂಬತ್ತು ಮುದ್ದೆ ಮಾಡಿದ್ದರೆ ಆಗುತ್ತಿರಲಿಲ್ಲವೇ? ಅದರಲ್ಲೇಕೆ ಅರ್ಧ ಮಾಡಿದೆ?’ ಎಂದರು ಬಾಲು. ಆಗ ಹುಡುಗ, ‘ಹಾಗೆ ಮಾಡಿದರೆ ಬೇರೆ ಎಲ್ಲರಿಗೂ ಸ್ವಲ್ಪ ಕಡಿಮೆಯಾಗುತ್ತಿತ್ತಲ್ಲಾ ಸರ್. ಅವಳು ನನ್ನ ತಂಗಿ, ನನ್ನ ಪಾಲಿನಲ್ಲಿ ಮಾತ್ರ ಅವಳಿಗೆ ಕೊಡುವುದು ಸರಿಯಲ್ಲವೇ ಸರ್?’ ಎಂದ. ಆ ಹುಡುಗನ ಮಾತನ್ನು ಕೇಳಿ, ಡಾಕ್ಟರ್ ಬಾಲುರವರ ಕಣ್ಣುಗಳಲ್ಲಿ ನೀರು ಹರಿಯಿತು. ಅವನ ಪ್ರಾಮಾಣಿಕತೆಗೆ ಭೇಷ್ ಎಂದು ಅವನ ಬೆನ್ನು ತಟ್ಟಿದರು.
ಅನೇಕ ಕಛೇರಿಗಳಲ್ಲಿ ಕೆಲಸ ಮಾಡುವ ನಾವು ಎಲ್ಲಾದರೂ ಏನಾದರೂ ಉಚಿತವಾಗಿ ಸಿಕ್ಕರೆ ಸಾಕು ಎಂದು ಕಾಯುತ್ತಿರುತ್ತೇವೆ ಪೆನ್ಸಿಲಿನಿಂದ ಹಿಡಿದು ಪೇಪರ್, ಪೆನ್ನು ಅದೇನೇ ಇದ್ದರೂ ಮನೆಗೆ ತೆಗೆದುಕೊಂಡು ಹೋಗುವ ಅದನ್ನು ಮನೆಯಲ್ಲಿ ಉಪಯೋಗಿಸುವ ಹಪಹಪಿ. ಆಫೀಸಿನಲ್ಲಿ ಅಷ್ಟೆಲ್ಲ ಸೌಲಭ್ಯಗಳಿದ್ದರೂ, ಮನೆಯಲ್ಲಿ ಒಂದಷ್ಟು ಕಾಸು ಉಳಿಸಲು ದುರಾಸೆ ಪಡುತ್ತೇವೆ. ಬರುವ ಅಷ್ಟೊಂದು ಸಂಬಳ ಕೂಡ ನಮ್ಮ ದುರಾಸೆಯನ್ನು ನೀಗಿಸುವುದಿಲ್ಲ. ಪ್ರಾಮಾಣಿಕತೆ ಮನಸ್ಸಿನಲ್ಲಿ ಹುಟ್ಟಬೇಕು, ಅದಕ್ಕೂ ದುಡ್ಡಿಗೂ ಸಂಬಂಧವಿರುವುದಿಲ್ಲ.