144 ಸೆಕ್ಷನ್ ಜಾರಿ ಆದೇಶದಲ್ಲಿ ಅಕ್ರಮಕೂಟ ಎಂಬ ಅಸಂಬದ್ಧ ಪದ ಬಳಕೆ : ತಹಶೀಲ್ದಾರ್ ವಿರುದ್ಧ ರೊಚ್ಚಿಗೆದ್ದ ಹೋರಾಟ ಸಮಿತಿ
144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಲ್ಲದೆ ನಿಷೇಧಾಜ್ಞೆ ಆದೇಶದಲ್ಲಿ ನಮ್ಮ ನ್ಯಾಯವಾದ ರೈತರ ಹೋರಾಟ ಸಂಘಟನೆಯನ್ನು ಅಕ್ರಮ ಕೂಟ ಎಂದು ಅಸಂಬದ್ಧ ಪದ ಬರೆದಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದ ರಾಜು ಕಿಡಿಕಾರಿದರು


ಗುಬ್ಬಿ: ನಮ್ಮ ನೀರು ನನ್ನ ಹಕ್ಕು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೇಮಾವತಿ ನೀರು ಉಳಿಸುವ ಬೃಹತ್ ಹೋರಾಟ ನಡೆಸಿದ್ದರೆ, ಮತ್ತೊಂದು ಕಡೆ ಅಕ್ರಮವಾಗಿ ಅವೈಜ್ಞಾನಿಕವಾಗಿ ಕಾನೂನು ನಿಯಮ ಗಾಳಿಗೆ ತೂರಿ ಕಾಮಗಾರಿ ನಡೆಸಿರುವವರ ಪರ ನಿಂತ ತಾಲ್ಲೂಕು ಆಡಳಿತ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಲ್ಲದೆ ನಿಷೇಧಾಜ್ಞೆ ಆದೇಶದಲ್ಲಿ ನಮ್ಮ ನ್ಯಾಯವಾದ ರೈತರ ಹೋರಾಟ ಸಂಘಟನೆಯನ್ನು ಅಕ್ರಮ ಕೂಟ ಎಂದು ಅಸಂಬದ್ಧ ಪದ ಬರೆದಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದ ರಾಜು ಕಿಡಿಕಾರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದ ಹೇಮಾವತಿ ನೀರು ನಮ್ಮಿಂದ ಕಸಿಯುವ ಪ್ರಯತ್ನ ನಡೆಸಿರುವ ಪ್ರಭಾವಿ ಸಚಿವರ ಸೂಚನೆಯಂತೆ ದಲ್ಲಾಳಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ರೈತರನ್ನು ಕಡೆಗಣಿಸಬಾರದು. ನಮ್ಮ ಹೋರಾಟ ನ್ಯಾಯಬದ್ಧವಾಗಿ ಸಾಗಿದೆ. ಸಾಮಾಜಿಕ ಕಳಕಳಿಯಲ್ಲಿ ರಚಿತ ನಮ್ಮ ಒಕ್ಕೂಟವನ್ನು ಅಕ್ರಮ ಕೂಟ ಎಂದು ಹೇಳಿರುವ ತಹಶೀಲ್ದಾರ್ ಅವರು ಕಾನೂನು ಬಾಹಿರವಾಗಿ ನಡೆದ ಅಕ್ರಮ ಕಾಮಗಾರಿಯ ಗುತ್ತಿಗೆದಾರರಿಗೆ ಸಾಥ್ ನೀಡಿದ್ದಾರೆ. ಗುತ್ತಿಗೆದಾರ ಸಹಕಾರಕ್ಕೆ ನಿಂತ ಅಧಿಕಾರಿಗಳ ತಂಡವೇ ಅಕ್ರಮ ಕೂಟವಾಗಿದೆ ಎಂದು ನೇರ ವಾಗ್ದಾಳಿ ಮಾಡಿ ದರು.
ಇದನ್ನೂ ಓದಿ: MI IPL Playoffs record: ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್/ನಾಕೌಟ್ ಸಾಧನೆ
ಸರ್ಕಾರಿ ಜಮೀನು ಹುಡುಕಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ಮುಜರಾಯಿ ಇಲಾಖೆ ದೇವಾಲಯದ ಜಮೀನಲ್ಲಿ ಕೆಲಸ ಮಾಡಲು ಖುದ್ದು ತಹಶೀಲ್ದಾರ್ ಮುಂದು ನಿಂತು ಕೆಲಸ ಮಾಡಿಸಿದ್ದು ಸರಿಯಲ್ಲ. ಮುಜರಾಯಿ ಜಾಗವನ್ನು ರಕ್ಷಣೆ ಮಾಡಬೇಕಾದ ಅಧಿಕಾರಿ ಹೇಗೆ ಕೆಲಸ ಮಾಡಲು ಅನುವು ಮಾಡಿದರು. ಪರಿಹಾರ ಹಣ ಇಲಾಖೆಗೆ ಬಂದಿದೆಯೇ, ದೇವಾಲಯ ಸಮಿತಿಗೆ ಬಂದಿದ್ದೆಯೇ ಅಥವಾ ಅರ್ಚಕರಿಗೆ ನೀಡಿದ್ದಾರೆಯೇ, ಯಾವುದೂ ಕಾನೂನು ಪಾಲನೆ ಮಾಡದ, ಭೂಸ್ವಾಧೀನ ಪ್ರಕ್ರಿಯೆ ನಡೆಸದ ಕಾಮಗಾರಿಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಾಥ್ ನೀಡಿದ್ದು ರೈತ ವಿರೋಧಿ ನೀತಿಯಾಗಿದೆ ಎಂದು ಗುಡುಗಿದ ಅವರು ಜಿಲ್ಲೆಯ ಎಲ್ಲಾ ಶಾಸಕರಿಗೆ, ಮಾಜಿ ಶಾಸಕರಿಗೆ ಹಾಗೂ ಸಂಸದರಿಗೆ ರೈತರ ಜೊತೆ ನಿಲ್ಲಲು ಮನವಿ ಮಾಡಿದ್ದೇವೆ.
ಆತ್ಮಸಾಕ್ಷಿ ಇದ್ದವರು ಮುಂದೆ ಬಂದು ನಮ್ಮ ನೀರು ರಕ್ಷಣೆ ಮಾಡಬೇಕಿದೆ. ಸೋಮಣ್ಣ, ಮಾಧು ಸ್ವಾಮಿ, ಬಸವರಾಜು ಸೇರಿದಂತೆ ಗುಬ್ಬಿ ಶಾಸಕರಿಗೂ ಈ ಮೂಲಕ ಮನವಿ ಮಾಡುತ್ತೇವೆ. ಅಧಿಕಾರಿ ಗಳ ಆದೇಶದ ಬೆದರಿಕೆಗೆ ನಾವು ಜಗ್ಗುವುದಿಲ್ಲ. ರೈತರ ಹೋರಾಟಕ್ಕೆ ರೈತರೇ ನಾಯಕತ್ವ ವಹಿಸ ಲಿದ್ದಾರೆ. ಪೊಲೀಸರು ಬಂಧಿಸಿದರೂ ಜಗ್ಗದೆ ನಿಗದದಿತ ಸಂಕಾಪುರ ಬಳಿಯೇ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಖಡಕ್ ಹೇಳಿಕೆ ನೀಡಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಸಾವಿರಾರು ರೈತರು ಭಾಗವಹಿಸಿ ನಮ್ಮ ಹಕ್ಕು ಕೇಳಿದ ಹೋರಾಟದ ತಂಡಕ್ಕೆ ಅಕ್ರಮ ಕೂಟ ಎಂಬ ಪದ ಬಳಕೆ ಮಾಡಿದ ತಹಶೀಲ್ದಾರ್ ಅವರಿಗೆ ರೈತರ ಹೋರಾಟ ತಿಳಿದಿಲ್ಲವೇ, ಇಲ್ಲಿನ ಶಾಸಕರು ತಾಲ್ಲೂಕು ಆಡಳಿತವನ್ನು ಕೈಗೊಂಬೆ ಮಾಡಿಕೊಂಡು 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿರುವುದು ರೈತರನ್ನು ಕೆರಳಿಸಿದೆ. ರೈತರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಬಿಟ್ಟು ಶಾಸಕರು ತಾಲ್ಲೂಕು ಆಡಳಿತಕ್ಕೆ ಹೇಳಿ ನಿಷೇಧಾಜ್ಞೆ ವಾಪಸ್ ತೆಗೆಸಿ ರೈತರ ಹೋರಾಟಕ್ಕೆ ಸಾಥ್ ನೀಡಿ ಎಂದು ಸವಾಲೆಸೆದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಗೊಡ್ಡು ಬೆದರಿಕೆಗೆ ರೈತರು ಸೊಪ್ಪು ಹಾಕುವುದಿಲ್ಲ. ಡಿಕೆಶಿ ಅವರು ವಾಮ ಮಾರ್ಗ ಅನುಸರಿಸಿ ಹೇಮಾವತಿ ನೀರು ಕೊಂಡೊಯ್ಯುವ ಹುನ್ನಾರಕ್ಕೆ ಜಿಲ್ಲೆಯ ರೈತರು ಹೋರಾಟದ ಮೂಲಕ ಉತ್ತರ ನೀಡುತ್ತಾರೆ. ತಾಲ್ಲೂಕಿನ ರೈತರಿಗೆ ಮರಣ ಶಾಸನ ಬರೆಯುವ ಈ ಕೆನಾಲ್ ಕಾಮಗಾರಿ ವಿರೋಧಿಸಿ ನಮ್ಮ ಶಕ್ತಿ ಪ್ರದರ್ಶನ ಮಾಡ ಬೇಕಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ರೈತರ ಸಂಘಟನೆಯನ್ನು ಅಕ್ರಮ ಎಂದು ಪದ ಬಳಕೆ ಮಾಡಿದ ತಹಶೀಲ್ದಾರ್ ಈ ರೀತಿ ಆದೇಶ ಪ್ರತಿಯಲ್ಲಿ ನಮೂದಿಸಬಾರದಿತ್ತು. ಇದು ಅಕ್ಷಮ್ಯ ಎನಿಸಲಿದೆ. ಲಾಭಿ ಮಾಡುತ್ತಿರುವ ಗುತ್ತಿಗೆದಾರರು, ಅಧಿಕಾರಿಗಳ ತಂಡವನ್ನು ಅಕ್ರಮ ಎಂದು ಹೇಳಬಹುದಾಗಿದೆ. ಅಲೋಕೇಶನ್ ಮಾಡಿಕೊಂಡು ಮುಖ್ಯ ನಾಲೆಯಲ್ಲಿ ತೆಗೆದು ಕೊಂಡು ಹೋಗಲಿ. ಕುಣಿಗಲ್ ತಾಲ್ಲೂಕಿನ 3 ಟಿಎಂಸಿ ನೀರು ನಾಲೆಯಲ್ಲಿ ಹೋಗುತ್ತಿದೆ. ಈ ಅವೈಜ್ಞಾನಿಕ ಕಾಮಗಾರಿ ಬೇಕಿಲ್ಲ. ಈ ನಿಟ್ಟಿನಲ್ಲಿ ರೈತರು ಒಗ್ಗೂಡಿ ಪ್ರತಿಭಟನೆಗೆ ಬನ್ನಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಬಿ.ಎಸ್.ಪಂಚಾಕ್ಷರಿ, ಸಿದ್ದರಾಮಯ್ಯ, ವರ್ತಕರ ಸಂಘದ ಅಧ್ಯಕ್ಷ ದಯಾನಂದಮೂರ್ತಿ, ಕಾರ್ಯದರ್ಶಿ ಮಧುಸೂದನ್, ಮುಖಂಡರಾದ ಯತೀಶ್, ಪ್ರಮೋದ್, ಹೊಸಹಳ್ಳಿ ಬಸವರಾಜ್ ಇತರರು ಇದ್ದರು.