ʻನಮ್ಮ ಯುದ್ದತಂತ್ರದ ನೈಪುಣ್ಯತೆʼ:ಪುಲ್ವಾಮಾ ದಾಳಿಯಲ್ಲಿ ನಮ್ಮ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ!
Pulwama terror attack: 2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ವರ್ಷಗಳ ನಿರಾಕರಣೆಗಳು ಮತ್ತು ಹೇಳಿಕೆಗಳ ನಡುವೆ ಇದೀಗ ಪಾಕಿಸ್ತಾನ ಸೇನೆಯು ಸ್ವತಃ ಆಘಾತಕಾರಿ ತಪ್ಪೊಪ್ಪಿಗೆಯನ್ನು ನೀಡಿದೆ. ಪುಲ್ವಾಮಾ ದಾಳಿಯನ್ನು 'ಯುದ್ಧತಂತ್ರದ ಪ್ರತಿಭೆ' ಎಂದು ಪಾಕಿಸ್ತಾನದ ಹಿರಿಯ ವಾಯುಪಡೆಯ ಅಧಿಕಾರಿಯೊಬ್ಬರು ಬಣ್ಣಿಸಿದ್ದಾರೆ.


ನವದೆಹಲಿ: 2019ರ ಪುಲ್ವಾಮಾ (Pulwama terror attack) ಭಯೋತ್ಪಾದಕ ದಾಳಿಯಲ್ಲಿ ತನ್ನ ಭಾಗಿಯಾಗುವಿಕೆಯನ್ನು ಪಾಕಿಸ್ತಾನ ಹಲವು ವರ್ಷಗಳಿಂದ ನಿರಾಕರಿಸಿತ್ತು. ಆದರೆ ಇದೀಗ ಪಾಕ್ನ ವಾಯುಪಡೆಯ ಉನ್ನತ ಅಧಿಕಾರಿಯೇ ಈ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ವಾಯುಪಡೆಯ ಏರ್ ವೈಸ್ ಮಾರ್ಷಲ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ (ಡಿಜಿಪಿಆರ್) ಔರಂಗಜೇಬ್ ಅಹ್ಮದ್ (Aurangzeb Ahmed) ಪತ್ರಿಕಾಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯನ್ನು ಪಾಕ್ ಸೇನೆಯ 'ಯುದ್ಧತಂತ್ರದ ಪ್ರತಿಭೆ'ಗೆ ಒಂದು ಉದಾಹರಣೆ ಎಂದು ಬಣ್ಣಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ (IND vs PAK War) ನಡುವೆ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಪುಲ್ವಾಮಾ ದಾಳಿಯಲ್ಲಿ ನಮ್ಮ ಪಾತ್ರವಿದೆ ಎಂದು ಒಪ್ಪಿಕೊಂಡಿರುವುದರಿಂದ ಭಾರತದ ಆಕ್ರೋಶ ಮತ್ತೊಷ್ಟು ಹೆಚ್ಚಾಗಿದೆ.
ಈ ಹೇಳಿಕೆಯು ಪುಲ್ವಾಮಾ ದಾಳಿಯಲ್ಲಿ ಮಾತ್ರವಲ್ಲದೆ ಇತ್ತೀಚಿನ ಪಹಲ್ಗಾಮ್ ದಾಳಿಯಲ್ಲೂ ಪಾಕಿಸ್ತಾನದ ಪಾತ್ರದ ಬಗ್ಗೆ ಅನುಮಾನಗಳನ್ನು ಹೆಚ್ಚಿಸುತ್ತಿದೆ. ಔರಂಗಜೇಬ್ ಅಹ್ಮದ್ ಅವರ ಈ ಹೇಳಿಕೆಯು ಪಾಕಿಸ್ತಾನದ ಹಲವು ವರ್ಷಗಳ ಸಮರ್ಥನೆಯನ್ನು ತಿರಸ್ಕರಿಸಿದೆ. ಪುಲ್ವಾಮಾ ಅಥವಾ ಯಾವುದೇ ಭಯೋತ್ಪಾದಕ ಚಟುವಟಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪಾಕ್ ಹಲವು ವರ್ಷಗಳಿಂದ ಹೇಳುತ್ತಾ ಬಂದಿತ್ತು. ಆದರೆ, ಪಾಕಿಸ್ತಾನದ ವಾಯು ಪಡೆ ಉನ್ನತ ಅಧಿಕಾರಿ ನೀಡಿರುವ ಹೇಳಿಕೆಯಿಂದ ಪಾಕಿಸ್ತಾನದ ಎರಡನೇ ಮುಖ ಬಯಲಾಗಿದೆ.
India Pak Ceasefire: ಕದನ ವಿರಾಮಕ್ಕೆ ಅಂಗಲಾಚಿದ ಪಾಕ್ ; ಭಾರತ ವಿಧಿಸಿದ ಆ 5 ಷರತ್ತುಗಳೇನು ಗೊತ್ತೇ?
ಪುಲ್ವಾಮಾ ದಾಳಿ ನಮ್ಮ ಯುದ್ದತಂತ್ರದ ನೈಪುಣ್ಯತೆ
ಪುಲ್ವಾಮಾ ಭಯೋತ್ಪಾದಕ ದಾಳಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್, "ನಮ್ಮ ಯುದ್ಧತಂತ್ರದ ನೈಪುಣ್ಯತೆಯ ಮೂಲಕ ನಾವು ಇದನ್ನು ಭಾರತಕ್ಕೆ ಹೇಳಲು ಪ್ರಯತ್ನಿಸಿದ್ದೇವೆ," ಎಂದು ಹೇಳಿದ್ದಾರೆ. ಈ ಸಮಯದಲ್ಲಿ, ಪಾಕಿಸ್ತಾನ ಸೇನೆಯ ಡಿಜಿ ಐಎಸ್ಪಿಆರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಮತ್ತು ನೌಕಾಪಡೆಯ ವಕ್ತಾರರು ಕೂಡ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯಲ್ಲಿನ ಈ ಹೇಳಿಕೆಯು ಪಾಕಿಸ್ತಾನದ ವರ್ಚಸ್ಸಿಗೆ ದೊಡ್ಡ ಕಳಂಕವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನದ ನೀತಿಯನ್ನು ಮುನ್ನೆಲೆಗೆ ತರುತ್ತದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು, ಇದರಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮೂವರು ಅಧಿಕಾರಿಗಳು ಸೇರಿದ್ದಾರೆ. ಇದರ ನಂತರ, ಭಾರತ, 'ಆಪರೇಷನ್ ಸಿಂದೂರ್' ಅಡಿಯಲ್ಲಿ ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಸೀಮಿತ ವಾಯುದಾಳಿಯನ್ನು ನಡೆಸಿತು. ಪಾಕಿಸ್ತಾನ ಸರ್ಕಾರ ಎಂದಿನಂತೆ ಇದರ ಬಗ್ಗೆ ನಕಾರಾತ್ಮಕ ನಿಲುವು ತಳೆದು ಪುರಾವೆ ಕೇಳಿತ್ತು. ಆದರೆ ಈಗ ಪಾಕಿಸ್ತಾನ ವಾಯುಪಡೆಯ ಹಿರಿಯ ಅಧಿಕಾರಿಯ ಈ ತಪ್ಪೊಪ್ಪಿಗೆಯು ಪುಲ್ವಾಮಾ ದಾಳಿಯಲ್ಲಿ ಮಾತ್ರವಲ್ಲದೆ ಪಹಲ್ಗಾಮ್ ದಾಳಿಯಲ್ಲಿ ಅದರ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏನಿದು 2019ರ ಪುಲ್ವಾಮಾ ಭಯೋತ್ಪಾದಕ ದಾಳಿ?
ಫೆಬ್ರವರಿ 14, 2019 ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಹೊತ್ತುಕೊಂಡಿತ್ತು. ಭಾರತವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕೈವಾಡ ಎಂದು ಆರೋಪ ಮಾಡಿತ್ತು ಹಾಗೂ ಹಲವು ಬಾರಿ ದೃಢವಾದ ಪುರಾವೆಗಳನ್ನು ಸಹ ಒದಗಿಸಿತ್ತು. ಆದರೆ, ಪಾಕಿಸ್ತಾನ ಇದನ್ನು ಸದಾ ನಿರಾಕರಿಸುತ್ತಾ ಬಂದಿತ್ತು.
ಆದರೆ ಈಗ ಅವರ ಸ್ವಂತ ಸೇನಾ ಅಧಿಕಾರಿಯೇ ಪುಲ್ವಾಮಾ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ತಮ್ಮ ಸೇನೆ ಎಂದು ಒಪ್ಪಿಕೊಂಡಿದ್ದಾರೆ. ಈ ದಾಳಿಯ ನಂತರ, ಫೆಬ್ರವರಿ 26 ರಂದು, ಭಾರತವು 'ಆಪರೇಷನ್ ಬಾಲಕೋಟ್' ಅಡಿಯಲ್ಲಿ ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಶ್ನ ಅತಿದೊಡ್ಡ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು.