Bengaluru Rain: ರಾಜಧಾನಿಯಲ್ಲಿ ಮುಂದುವರಿದ ಮಳೆಯಾರ್ಭಟ; ರಸ್ತೆಗಳು ಜಲಾವೃತ, ವಾಹನ ಸವಾರರು ಹೈರಾಣ
Bengaluru Rain: ರಾಜ್ಯದ ಹಲವೆಡೆ ಬುಧವಾರ ಮಳೆ ಅಬ್ಬರಿಸಿದ್ದು, ಮುಂದಿನ ಎರಡು ದಿನಗಳ ಕಾಲ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಮಳೆಯ ನಡುವೆ ವಾಹನ ಸವಾರರು ಸಾಗುತ್ತಿರುವುದು. (ಫೋಟೊ: ಸುಧಾಕರ್ ದೇವರಾಜ್)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆ ಮಳೆಯ (Bengaluru Rain) ಅಬ್ಬರ ಮುಂದುವರಿದಿದೆ. ರಾಜಧಾನಿ ಹಲವೆಡೆ ಬುಧವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಗಿದೆ. ಎಚ್ಎಸ್ಆರ್ ಲೇಔಟ್, ವೈಟ್ ಫೀಲ್ಡ್, ಜಯನಗರ, ಕೆಂಗೇರಿ, ಟೌನ್ ಹಾಲ್, ಮಾರತಹಳ್ಳಿ, ಮಹದೇವಪುರ ಸೇರಿ ಹಲವೆಡೆ ಭರ್ಜರಿ ಮಳೆಯಾಗಿದ್ದು (Heavy Rain), ಹಲವೆಡೆ ಸಂಚಾರ ದಟ್ಟಣೆಯಿಂದ ಬೈಕ್ ಸವಾರರು ಪರದಾಡಿದ್ದಾರೆ.

ಭಾರಿ ಮಳೆ ಹಿನ್ನೆಲೆ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಬೆಳ್ಳಂದೂರು- ಕಾರ್ತಿಕ್ನಗರ ಮಾರ್ಗ, ಮಾರತ್ತಹಳ್ಳಿ ಪೊಲೀಸ್ ಠಾಣೆಯಿಂದ ಕಲಾಮಂದಿರ ಮಾರ್ಗ, ಕಸ್ತೂರಿನಗರ- ಹೆಬ್ಬಾಳ ರಸ್ತೆ, ರಾಮಮೂರ್ತಿನಗರದ ಅಂಡರ್ಪಾಸ್ನಿಂದ ಟಿನ್ ಫ್ಯಾಕ್ಟರಿ ರಸ್ತೆ,
ರೈನ್ಬೋ ಆಸ್ಪತ್ರೆಯಿಂದ ಕಾರ್ತಿಕ್ನಗರ ಕಡೆಗೆ, ಗುಂಜೂರಿನಿಂದ ವರ್ತೂರು ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ವಾಹನ ಸವಾರರ ಪರದಾಡಿದರು.
ಎಚ್ಎಸ್ಆರ್ ಲೇಔಟ್ನಲ್ಲಿ ಸುರಿದ ಮಳೆಯ ವಿಡಿಯೋ
ಸಂಜೆ ಆರಂಭವಾದ ಮಳೆಯಿಂದ ಕಚೇರಿ ಕೆಲಸ ಮುಗಿಸಿ ಹೊರಟವರಿಗೆ ಮಳೆ ಶಾಕ್ ನೀಡಿದೆ. ಏಕಾಏಕಿ ಜೋರು ಮಳೆಯಾಗಿದ್ದರಿಂದ ಹಲವರು ಮಳೆಯಲ್ಲಿಯೇ ನೆನೆದು ಪರದಾಡಿದರು. ರಸ್ತೆಗಳು ಜಲಾವೃತವಾಗಿ ವಾಹನ ದಟ್ಟಣೆ ಹೆಚ್ಚಾಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಇನ್ನು ಗುರುವಾರ ಹಾಗೂ ಶುಕ್ರವಾರ ಕೂಡ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆ!

ಬೆಂಗಳೂರು: ಬೇಸಿಗೆಯಲ್ಲಿ ರಾಜ್ಯದ ಹಲವೆಡೆ ಮಳೆ (Karnataka Rain) ಅಬ್ಬರಿಸುತ್ತಿರುವ ನಡುವೆ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ನೈರುತ್ಯ ಮುಂಗಾರಿನ (ಜೂನ್ – ಸೆಪ್ಟೆಂಬರ್ 2025 ರ) ದೀರ್ಘ ಶ್ರೇಣಿಯ ಮಳೆ ಮುನ್ಸೂಚನೆಯನ್ನು (Monsoon Season Forecast 2025) ಹವಾಮಾನ ಇಲಾಖೆ ನೀಡಿದ್ದು, ಈ ಬಾರಿ ಕರಾವಳಿ, ಉತ್ತರ ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?
ಕರ್ನಾಟಕ ಸೇರಿ ದೇಶದಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗಿನ ನಾಲ್ಕು ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ. ದೀರ್ಘಾವಧಿಯ ಸರಾಸರಿ ಮಳೆಯ ಪ್ರಮಾಣ 87 ಸೆಂ.ಮೀ. ಇದ್ದು, ಈ ಬಾರಿ ಶೇ. 105ರಷ್ಟು ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಬಿಸಿಗಾಳಿ ಬೀಸುತ್ತಿದೆ. ಏಪ್ರಿಲ್ನಿಂದ ಜೂನ್ವರೆಗೆ ಬಿಸಿಗಾಳಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.