ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hemavathi Express Link Canal: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಸಿಡಿದೆದ್ದ ರೈತರು; ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತ

Hemavathi Express Link Canal: ತುಮಕೂರು ಜಿಲ್ಲೆಯಲ್ಲಿ ಒಂದೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಯೋಜನೆ ಕಾಮಗಾರಿಯನ್ನು ನಿಲ್ಲಿಸುವ ಪ್ರಮೇಯವೇ ಬರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ರೈತರ ಪ್ರತಿಭಟನೆ; ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಸ್ಥಗಿತ

Profile Prabhakara R May 31, 2025 10:41 PM

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ (Hemavathi Express Link Canal) ಕಾಮಗಾರಿ ಮರು ಆರಂಭಗೊಂಡಿರುವುದಕ್ಕೆ ಜಿಲ್ಲೆಯ ರೈತರು ಸಿಡಿದೆದ್ದಿದ್ದು, ಯೋಜನೆ ಸ್ಥಗಿತಗೊಳಿಸುವಂತೆ ನಿಷೇಧಾಜ್ಞೆ ನಡುವೆಯೂ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದಾಗಿ ತಾತ್ಕಾಲಿಕವಾಗಿ ಕಾಮಗಾರಿಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಗುಬ್ಬಿ ತಾಲೂಕಿನ ಸುಂಕಾಪುರ ಮತ್ತು ಡಿ.ರಾಂಪುರದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದನ್ನು ಲೆಕ್ಕಿಸದೆ ಸ್ವಾಮೀಜಿಗಳು, ರೈತರು, ಜನಪ್ರತಿನಿಧಿಗಳು ಸೇರಿ ಅಪಾರ ಸಂಖ್ಯೆಯಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುಂಕಾಪುರ ನಾಲೆ ಬಳಿಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೂ ಲೆಕ್ಕಿಸದೇ ರೈತರು ಹಾಗೂ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು 144 ಸೆಕ್ಷನ್ ವ್ಯಾಪ್ತಿಯ ಒಳಗೆ ಹಾಗೂ ಹೊರಗೆ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗಳಿಗೆ ಮುಚ್ಚಲು ಸಾವಿರಾರು ರೈತರು ಮುಂದಾಗಿದ್ದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಎಂ.ಟಿ ಕೃಷ್ಣಪ್ಪ, ಮಸಾಲೆ ಜಯರಾಮ್ ಮುಂತಾದವರ ನೇತೃತ್ವದಲ್ಲಿ ತುಮಕೂರು ಮುಖ್ಯ ರಸ್ತೆ ಮಧ್ಯೆ ಟ್ರ್ಯಾಕ್ಟರ್‌ನಲ್ಲಿ ಮಣ್ಣು ತಂದು ಹಾಕಿ ಸರ್ಕಾರದ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಬಳಿಕ ರೈತರು, ಬಿಜೆಪಿ, ಜೆಡಿಎಸ್ ನಾಯಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಅಲ್ಲದೇ ತಾತ್ಕಾಲಿಕ ಮಾತ್ರವಲ್ಲ ಸಂಪೂರ್ಣವಾಗಿ ಇದು ನಿಲ್ಲಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Hemavathi Express Link Canal: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲ್ಲ: ಡಿಸಿಎಂ ಡಿಕೆಶಿ

ರಾಜಕೀಯ ದುರುದ್ದೇಶದಿಂದ ಕಾಮಗಾರಿಗೆ ವಿರೋಧ: ಸಚಿವ ಪರಮೇಶ್ವರ್‌

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ವಿಚಾರವಾಗಿ ಸಚಿವ ಪರಮೇಶ್ವರ್ ಮಾತನಾಡಿ, ಕೆನಾಲ್ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಮಾಡಿದ್ದಾರೆ. ಕಾಮಗಾರಿ ವಿಚಾರವಾಗಿ ಟೆಕ್ನಿಕಲ್ ಕಮಿಟಿ ವರದಿಯಲ್ಲಿ ಕಾಮಗಾರಿ ಮಾಡಬಹುದು ಎಂದು ಅನುಮತಿ ನೀಡಲಾಗಿದೆ. ವರದಿ ಆಧರಿಸಿ ಕೆಲಸ ಶುರು ಮಾಡಲಾಗಿದೆ.

ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲಸ ಶುರುವಾಗುತ್ತಿದ್ದಂತೆ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಕಾಮಗಾರಿಗೆ ವಿರೋಧ ಮಾಡ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಕಂಪ್ಲೀಟ್ ಆಗುತ್ತೆ. ನಮ್ಮದು ಒಣ ಪ್ರದೇಶ, ನೀರು ಬಂದರೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ನೀರಾವರಿ ಹೋರಾಟಕ್ಕೆ ಕಾರಣವೇನು?

ತುಮಕೂರು ಜಿಲ್ಲೆಗೆ ಗೊರೂರು ಡ್ಯಾಂನಿಂದ ವರ್ಷಕ್ಕೆ 24 ಟಿಎಂಸಿ ನೀರನ್ನು ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ಜಿಲ್ಲೆಯ ರಾಜಕಾರಣಿಗಳು ಹಾಗೂ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್‌ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲೂಕಿಗೆ ನೀರು ಸಿಗದಂತಾಗುತ್ತದೆ. ಜಿಲ್ಲೆಯ ಉಳಿದ ತಾಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ಜಿಲ್ಲೆಯ ರೈತರನ್ನು ಕಾಡುತ್ತಿದೆ.

24 ಟಿಎಂಸಿ ನೀರು ಜಿಲ್ಲೆಗೆ ಹರಿದಿಲ್ಲ

ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದರೂ, ಇದುವರೆಗೂ ಯಾವ ವರ್ಷವೂ ಕೂಡ 24 ಟಿಎಂಸಿ ಹೇಮಾವತಿ ನೀರು ಜಿಲ್ಲೆಗೆ ಹರಿದಿಲ್ಲ. ಜಿಲ್ಲೆಯ ಕೆರೆಕಟ್ಟೆಗಳಿಗೆ, ಕುಡಿಯುವ ಉದ್ದೇಶಕ್ಕೆ ಕೃಷಿ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತದೆ.

ಹೇಮಾವತಿ ನೀರು ಜಿಲ್ಲೆಯ ಜೀವನಾಡಿ

ತುಮಕೂರು ನಗರ, ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತದೆ. ಗೊರೂರು ಡ್ಯಾಂ ನೀರನ್ನು ಬುಗುಡನಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೈಪ್ ಮೂಲಕ ನಗರಕ್ಕೆ ಪೂರೈಸಲಾಗುತ್ತಿದೆ. ಇದೇ ರೀತಿ ಮಧುಗಿರಿ, ಶಿರಾ ಪಟ್ಟಣಗಳಿಗೂ ಕೆರೆಗಳಿಗೆ ನೀರು ತುಂಬಿಸಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲೂಕುಗಳು ಕೂಡ ಹೇಮಾವತಿ ನೀರನ್ನು ಕುಡಿಯುವ ನೀರು, ಕೃಷಿ ಉದ್ದೇಶಕ್ಕೆ ಅವಲಂಬಿಸಿವೆ.

ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರಿನ ಮೂಲ ಬಿಟ್ಟರೇ, ಬೇರೆ ನದಿ ನೀರಿನ ಮೂಲಗಳಿಲ್ಲ. ಜಿಲ್ಲೆಗೆ ಹೇಮಾವತಿ ಜೀವ ನದಿ. ಹೀಗಾಗಿ ಜಿಲ್ಲೆಯ ಜನರು, ರಾಜಕಾರಣಿಗಳು ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡಲ್ಲ ಎಂದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

(ವರದಿ: ರಂಗನಾಥ ಕೆ. ಹೊನ್ನಮರಡಿ)