Bigg Boss: ಬಿಗ್ ಬಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್; ಆಗಸ್ಟ್ 3ರಂದು ಶೋ ಶುರು?
Bigg Boss 19: ಕಿರುತೆರೆ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ದಿನಗನನೆ ಆರಂಭವಾಗಿದೆ. ಹೌದು. ಹಿಂದಿಯ ಬಿಗ್ ಬಾಸ್ ಸೀಸನ್ 19 ಆ. 3ರಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಸೀಸನ್ ಮೂಲಕ ಸಲ್ಮಾನ್ ಖಾನ್ ಮತ್ತೆ ಬಿಗ್ ಬಾಸ್ ನಿರೂಪಣೆಯ ಹೊಣೆ ಹೊರಲಿದ್ದಾರೆ.


ಮುಂಬೈ: ಕಿರುತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಹೌದು, ಕೋಟ್ಯಂತರ ಪ್ರೇಕ್ಷಕರ ಮನಗೆದ್ದ ಹಿಂದಿಯ ಬಿಗ್ ಬಾಸ್ ಸೀಸನ್ 19 (Bigg Boss 19) ಆ. 3ರಂದು ಆರಂಭವಾಗಲಿದೆ. ಈ ಸೀಸನ್ನ ನಿರೂಪಣೆ ಹೊಣೆಯನ್ನು ಮತ್ತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಹೊರಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಬಾರಿಯ ಹಿಂದಿ ಬಿಗ್ ಬಾಸ್ ಮೂರಲ್ಲ ಬದಲಿಗೆ ಐದೂವರೆ ತಿಂಗಳು ನಡೆಯಲಿದೆ ಎನ್ನುವ ಸುದ್ದಿಯೂ ಹಬ್ಬಿದ್ದು, ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬೀಳಬೇಕಿದೆ.
ಸಾಧಾರಣವಾಗಿ ಬಿಗ್ ಬಾಸ್ ಶೋ ಅಕ್ಟೋಬರ್ನಲ್ಲಿ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ 2 ತಿಂಗಳು ಮೊದಲೇ ಶುರುವಾಗುವ ಸಾಧ್ಯತೆ ಎನ್ನಲಾಗಿದೆ. ಈ ಸೀಸನ್ ಮೂಲಕ ವೀಕ್ಷಕರ ನೆಚ್ಚಿನ ಕೆಲವೊಂದು ಟಾಸ್ಕ್ ಮತ್ತೆ ಆರಂಭವಾಗಲಿದೆ. ಸೀಕ್ರೆಟ್ ರೂಂ, ಹೈ ಸ್ಟೇಕ್ ಟಾಸ್ಕ್ ಮತ್ತು ಮನೆಯ ರೂಲ್ಸ್ ಮುರಿದವರಿಗೆ ಶಿಕ್ಷೆ ನೀಡುವ ನಿಯಮ ಮತ್ತೆ ಜಾರಿಗೆ ಬರಲಿದೆ. ಜತೆಗೆ ಈ ಬಾರಿ ಸೋಶಿಯಲ್ ಮೀಡಿಯಾ ಸ್ಟಾರ್ಗಳು ಮತ್ತು ಯುಟ್ಯೂಬರ್ಗಳು ಸ್ಪರ್ಧಿಗಳಾಗಿ ಇರುವುದಿಲ್ಲ. ಕಿರಿತೆರೆ ಮತ್ತು ಚಿತ್ರರಂಗದ ಸ್ಟಾರ್ಗಳಷ್ಟೇ ಭಾಗವಹಿಸುತ್ತಾರೆ ಎನ್ನಲಾಗಿದೆ.
ವೈರಲ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Salman Khan: ಜೀವ ಬೆದರಿಕೆ ಬೆನ್ನಲ್ಲೇ ಸ್ನೇಹಿತನ ಮದ್ವೆಯಲ್ಲಿ ಸಲ್ಮಾನ್ ಖಾನ್ ಭಾಗಿ- ವಿಡಿಯೊ ಫುಲ್ ವೈರಲ್
ಸಲ್ಮಾನ್ ಖಾನ್ಗೆ ಮತ್ತೆ ನಿರೂಪಣೆಯ ಹೊಣೆ
ಸಲ್ಮಾನ್ ಖಾನ್ ಮತ್ತೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದು, ಇದನ್ನು ಅವರೇ ದೃಢಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇನ್ನು, ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ ಒಟಿಟಿ ಆವೃತ್ತಿ ಕೂಡ ಪ್ರಸಾರವಾಗುತ್ತಿತ್ತು. ಆದರೆ ಈ ವರ್ಷ ಬಿಗ್ ಬಾಸ್ ಒಟಿಟಿಯನ್ನು ಕ್ಯಾನ್ಸಲ್ ಮಾಡಲಾಗಿದ್ದು ಕಿರುತೆರೆಯಲ್ಲಿಯೇ ಐದೂವರೆ ತಿಂಗಳು ಶೋ ನಡೆಯಲಿದೆಯಂತೆ. ಇದೇ ಕಾರಣಕ್ಕೆ ಶೋವನ್ನು ಮೊದಲೇ ಆರಂಭಿಸಲಾಗುತ್ತದೆ ಎನ್ನಲಾಗಿದೆ.
ಸಂಭಾವ್ಯ ಸ್ಪರ್ಧಿಗಳ ಪಟ್ಟಿ
ಇದರ ಜತೆಗೆ ಇದೀಗ ಬಿಗ್ ಬಾಸ್ ಸೀಸನ್ 19ರ ಮನೆಗೆ ತೆರಳುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವರದಿಯ ಪ್ರಕಾರ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಫೈಸಲ್ ಶೇಖ್ (ಮಿ. ಫೈಸು), ಡೈಸಿ ಶಾ, ತನುಶ್ರೀ ದತ್ತ, ಖುಷಿ ದುಬೆ, ವಿಕ್ರಮ್ ಸಿಂಗ್ ಚೌಹಾಣ್, ರಾಮ್ ಕಪೂರ್, ಶರದ್ ಮಲ್ಹೋತ್ರಾ, ರಾಜ್ ಕುಂದ್ರಾ, ಗೌರವ್ ತನೇಜಾ, ಪರಾಸ್ ಕಲ್ನಾವತ್, ಶಶಾಂಕ್ ವ್ಯಾಸ್, ರಾಮ್ ಕಪೂರ್, ಗೌತಮಿ ಕಪೂರ್, ಕನಿಕಾ ಮನ್, ಕೃಷ್ಣ ಶ್ರಾಫ್, ಧೀರಜ್ ಮುಂತಾದವರನ್ನು ಸಂಪರ್ಕಿಸಲಾಗಿದೆಯಂತೆ.
ಸದ್ಯ ಸಲ್ಮಾನ್ ಖಾನ್ ʼಸಿಕಂದರ್ʼ ಸೋಲಿನ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದು, ಬಿಗ್ ಬಾಸ್ ನಿರೂಪಣೆ ಮೂಲಕ ಮತ್ತೆ ಫ್ಯಾನ್ಸ್ ಮುಂದೆ ಬರಲಿದ್ದಾರೆ. ಇದರ ಜತೆಗೆ ಸಲ್ಮಾನ್ ಖಾನ್ ಅಪೂರ್ವ ಲಾಖಿಯಾ ನಿರ್ದೇಶನದ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಗಲ್ವಾನ್ ಕಣಿವೆ ಸಂಘರ್ಷದ ಕಥೆಯನ್ನು ಒಳಗೊಂಡಿದೆ. ಸಲ್ಮಾನ್ ಖಾನ್ ಇದರಲ್ಲಿ ಕರ್ನಲ್ ಬಿಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.