Jan Aushadhi Kendra: ಜನೌಷಧಿ ಕೇಂದ್ರಗಳ ಸ್ಥಗಿತ ಮೆಡಿಕಲ್ ಮಾಫಿಯಾದ ಕೈವಾಡ: ಛಲವಾದಿ ನಾರಾಯಣಸ್ವಾಮಿ
Jan Aushadhi Kendra: ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಹೋಗಿರುವಾಗ ಇವರು ಮಾತ್ರ ಸಭೆಯಿಂದ ಹೊರಗೆ ಇರುವುದು ಸರಿಯಲ್ಲ. ಮೇಲಾಗಿ ಇಂತಹ ಸಭೆಗೆ ಯಾರನ್ನೋ ಕಳಿಸಿದರೆ ಅನ್ಯಾಯ ಆಗದೆ ಏನಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.


ಚಿಕ್ಕಬಳ್ಳಾಪುರ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರಕಾರದಿಂದ ತೆರೆಯಲಾಗಿದ್ದ ಜನೌಷಧಿ ಕೇಂದ್ರಗಳನ್ನು (Jan Aushadhi Kendra) ಮುಚ್ಚುವಂತೆ ಆರೋಗ್ಯ ಸಚಿವರು ಆದೇಶಹೊರಡಿಸಿರುವುದು ಸರಿಯಲ್ಲ. ಈ ಆದೇಶವು ಬಹುಶಃ ಡ್ರಗ್ಸ್ ಮಾಫಿಯಾದ ಚಿತಾವಣೆಯಿಂದ ನಡೆದಿರಬಹುದು. ಇಲ್ಲವೇ ಕಮಿಷನ್ ತಪ್ಪಿಹೋಗಿದೆ ಎಂಬ ಹತಾಶೆಯಿಂದ ಹೀಗೆ ಮಾಡಿರಬಹುದು ಎಂದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಗಂಭೀರ ಆರೋಪ ಮಾಡಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನೌಷಧಿ ಕೇಂದ್ರಗಳನ್ನು ಮುಚ್ಚುವ ಉದ್ದೇಶ ಏನಾಗಿದ್ದರೂ ಕೂಡ ಬಡವರಿಗೆ ಅತ್ಯಂತ ಕಡಿಮೆ ಹಣದಲ್ಲಿ ಗುಣಮಟ್ಟದ ಔಷಧ ಪೂರೈಕೆ ಆಗುತ್ತಿತ್ತು. ನಾವು ಜನಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಜನವಿರೋಧಿಯಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ ಎಂದರು.
ಇನ್ನು ಪ್ರತಿಯೊಂದಕ್ಕೂ ಕೇಂದ್ರದ ವಿರುದ್ಧ ಬೊಟ್ಟು ಮಾಡಿ ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಹೋಗಿ ರಾಜ್ಯಕ್ಕೆ ಏನೇನು ಬೇಕು ಎಂಬುದರ ಬಗ್ಗೆ ಅನುದಾನದ ಬೇಡಿಕೆಯಿಡದೆ ಕೇಂದ್ರದಿಂದ ಅನುದಾನ ಬಂದಿಲ್ಲ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಆಪಾದಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಅನ್ಯೋನ್ಯತೆ ಇರಬೇಕಾದ್ದು ಸಹಜ. ಹೀಗಿದ್ದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿಗಳು ಕರೆದ ಯಾವೊಂದು ಸಭೆಗೂ ಹೋಗದ ಸಿದ್ದರಾಮಯ್ಯ ಅವರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಡದ ಇವರಿಗೆ ಮುಖ್ಯಮಂತ್ರಿ ಸ್ಥಾನ ಏಕೆ ಬೇಕು? ಎಂದು ಪ್ರಶ್ನಿಸಿದರು.
ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಹೋಗಿರುವಾಗ ಇವರು ಮಾತ್ರ ಸಭೆಯಿಂದ ಹೊರಗೆ ಇರುವುದು ಸರಿಯಲ್ಲ. ಮೇಲಾಗಿ ಇಂತಹ ಸಭೆಗೆ ಯಾರನ್ನೋ ಕಳಿಸಿದರೆ ಅನ್ಯಾಯ ಆಗದೆ ಏನಾಗುತ್ತದೆ. ಜನತೆ ಒಂದು ಅರ್ಥ ಮಾಡಿಕೊಳ್ಳಬೇಕು ರಾಜ್ಯಕ್ಕೆ ಅನ್ಯಾಯ ಆಗುತ್ತಿರುವುದು ಕೇಂದ್ರ ಸರಕಾರದಿಂದ ಅಲ್ಲ, ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಜವಾಬ್ದಾರಿತನದ ವರ್ತನೆಯಿಂದ ಎಂದು ಹರಿಹಾಯ್ದರು.
ಜನತೆ ಸಂಕಷ್ಟದಲ್ಲಿರುವಾಗ ಸಾಧನಾ ಸಮಾವೇಶ ಮಾಡಿರುವುದು ತಪ್ಪು. 2 ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಹೊಸಪೇಟೆ ಹಂಪಿಯಲ್ಲಿ ಸಾಧನಾ ಸಮಾವೇಶ ನಡೆಯುತ್ತಿದ್ದರೆ ಬೆಂಗಳೂರು ನೀರಿನಲ್ಲಿ ಮುಳುಗಿತ್ತು. ಗ್ಯಾರಂಟಿಗಳಿಂದೇನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಸಮಾವೇಶ ಮಾಡುತ್ತಿರುವುದು ಕಾಂಗ್ರೆಸ್ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಗುಡುಗಿದರು.
ಕೇಂದ್ರ ಸರಕಾರ ಅನೇಕ ಕಾರ್ಯಕ್ರಮಗಳನ್ನು ಕೊಡುತ್ತದೆ. ಅದನ್ನೆಲ್ಲಾ ನೀವು ಕಸದ ಬಿಟ್ಟಿಗೆ ಹಾಕುತ್ತೀರಿ. ಇವತ್ತು ಕಾಯಿಲೆ ಬಂದರೆ ಶ್ರೀಮಂತರು ತೋರಿಸಿಕೊಳ್ಳುತ್ತಾರೆ. ಬಡವರು ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಇಂತಹ ಕಡೆ ಇದ್ದ ಜನೌಷಧಿ ಕೇಂದ್ರಗಳನ್ನು ರದ್ದು ಮಾಡಲು ಹೊರಟಿರುವುದು ಎಷ್ಟು ಸರಿ ಎಂದರು.
ಜಿಎಸ್ಟಿಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿಲ್ಲ. ಅಗುವುದೂ ಇಲ್ಲ. ಜಿಎಸ್ಟಿ ಆಯೋಗ ಹಿಂದೆ ಎಲ್ಲಾ ರಾಜ್ಯ ಸರಕಾರಗಳ ಒಪ್ಪಿಗೆ ಪಡೆದ ಮೇಲೆ ಎಷ್ಟೆಷ್ಟು ಕೊಡಬೇಕು ಎಂದು ತೀರ್ಮಾನ ಆಗಿದೆಯೋ ಅಷ್ಟು ಬಂದೇ ಬರುತ್ತದೆ. ಈ ವಿಚಾರದಲ್ಲಿ ಯಾರೂ ತಾರತಮ್ಯ ಮಾಡಲಾಗಲಿ, ಮಲತಾಯಿ ಧೋರಣೆ ಅನುಸರಣೆ ಮಾಡುವುದಾಗಲಿ ಆಗುವುದಿಲ್ಲ. ಬೆಳಗ್ಗೆ ಹಾಲು ಕರೆದರೆ ಹಸು ಹಾಲು ಕೊಡುತ್ತದೆ. ಆದರೆ ಮಧ್ಯಾಹ್ನವೇ ಹಾಲು ಕೊಡಿ ಎಂದರೆ ಕೊಡುತ್ತದೆಯೇ, ಹಾಗೆ ರಾಜ್ಯಗಳು ಇದರಲ್ಲಿ ರಾಜಕೀಯ ಮಾಡುತ್ತಿವೆ ಅಷ್ಟೇ ಎನ್ನುವ ಮೂಲಕ ಸಿದ್ದರಾಮಯ್ಯ ಸರಕಾರದ ಆರೋಪ ನಿರಾಧಾರ ಎಂದು ಅಲ್ಲಗಳೆದರು.
ಎತ್ತಿನಹೊಳೆ ಕಾಲಮಿತಿಯಲ್ಲಿ ಪೈಲಟ್ ಯೋಜನೆಯಂತೆ ಮುಗಿಸಬೇಕಿತ್ತು. ಸಿದ್ದರಾಮಯ್ಯ ಸರಕಾರ ಯೋಜನೆ ಘೋಷಣೆ ಮಾಡಿತೇ ವಿನಃ ಅನುದಾನ ನೀಡಲಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ವೇಗ ನೀಡಲಾಯಿತು. ಇದು ಜಾರಿಯಾದರೆ ಮಾತ್ರ ಬಯಲು ಸೀಮೆ ಜಿಲ್ಲೆಗಳಿಗೆ ಶುದ್ಧಕುಡಿಯುವ ನೀರು ದೊರೆಯಲು ಸಾಧ್ಯ ಎಂದರು.
ನನ್ನ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ಇದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಬಿಜೆಪಿಯಲ್ಲಿ ನಾನು ಈ ಎತ್ತರಕ್ಕೆ ಬೆಳೆದ ಅಸೂಯೆಯಿಂದ ಹೀಗೆ ಆರೋಪ ಮಾಡುತ್ತಾರೆ ಅಷ್ಟೇ. ನಾನು ಕಾಂಗ್ರೆಸ್ನಲ್ಲಿ 40 ವರ್ಷ ಇದ್ದೆ. ನಾನು ಯಾರನ್ನು ನಂಬಿದ್ದೆನೋ ಅವರಿಂದ ನನಗೆ ಮೋಸ ಆಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು 7 ಬಾರಿ ಎಂಎಲ್ಎ ಟಿಕೆಟ್ ಕೇಳಿದ್ದೆ ಕೊಡದೆ ಮೋಸ ಮಾಡಿದರು. ಇದೇ ಕಾರಣಕ್ಕೆ ಕಾಂಗ್ರೆಸ್ ತೊರೆದು ನಾನು ಬಿಜೆಪಿಗೆ ಬಂದೆ. ಇವರು ನನ್ನನ್ನು ಗೌರವದಿಂದ ನಡೆಸಿಕೊಂಡರಲ್ಲದೆ ಎಂಎಲ್ಸಿ ಮಾಡಿ ಅಧಿಕಾರ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಅಸೂಯೆ ಎಂದರು.
ದೇಶದ ಪ್ರಧಾನಿಯನ್ನು ಯಾರು ಬೇಕಾದರೂ ಪ್ರಶ್ನೆ ಮಾಡಲಿ ಸ್ವಾಗತಿಸುತ್ತೇನೆ. ಆದರೆ ವೈಯಕ್ತಿಕವಾಗಿ ತೇಜೋವಧೆ ಮಾಡಿದರೆ ಸುಮ್ಮನಿರಲಾಗದು. ಖರ್ಗೆ ಅವರು ಕಾಳಿಂಗ ಸರ್ಪಕ್ಕೆ ಹೋಲಿಸುತ್ತಾರೆ. ಇದು ಸರಿಯಾ? ನಾನು ಪ್ರಧಾನಿಗಳನ್ನು ಆನೆಗೆ ಹೋಲಿಸಿ ಜನಸಮಾನ್ಯರು ಹೇಳುವ ಮಾತು ನಾಯಿಗಳು ಬೊಗಳುತ್ತವೆ ಎಂದು ಹೇಳಿದ್ದೇನೆ ಅಷ್ಟೇ. ಕಾಂಗ್ರೆಸ್ನವರನ್ನು ನಾನು ಕೇಳುತ್ತೇನೆ ರಾಜೀವ್ಗಾಂಧಿ ಪ್ರಧಾನಿ ಆಗಿದ್ದಾಗ ಅವರು ರಾಮ್ ಜೇಠ್ಮಲಾನಿ ಅವರನ್ನು ಬೊಗಳುವ ನಾಯಿ ಎನ್ನಲಿಲ್ಲವೆ? ನಾವು ಹಾಗೆ ಹೇಳಿದ್ದೇವಾ? ಎಂದರು.
ಈವರೆಗೆ ನಾನು ಎಂದೂ ಒಳಮೀಸಲಾತಿ ವಿಚಾರದಲ್ಲಿ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಛಲವಾದಿ ನಾರಾಯಣಸ್ವಾಮಿ ಒಳಮೀಸಲಾತಿ ಜಾರಿ ವಿರುದ್ಧ ಇದ್ದಾರೆ ಎಂಬ ವಿಚಾರವೇ ಹಾಸ್ಯಾಸ್ಪದವಾಗಿದೆ. ನಾನೇ ಅಲ್ಲ ಬಿಜೆಪಿ ಪಕ್ಷವೂ ಕೂಡ ಇದರ ವಿರುದ್ಧ ಇಲ್ಲವೇ ಇಲ್ಲ. ಹಾಗಿದ್ದಿದ್ದರೆ ನಾವೇಕೆ ಕೇಂದ್ರಕ್ಕೆ ಜಾರಿ ಮಾಡಲು ಬಿಲ್ ಕಳಿಸಬೇಕಿತ್ತು ಎಂದರು.
ರಾಜ್ಯ ಸರಕಾರ ಒಳಮೀಸಲಾತಿ ಜಾರಿ ಸಂಬಂಧ ನಡೆಸುತ್ತಿರುವ ಗಣತಿ ಅನೇಕ ಲೋಪಗಳಿಂದ ಕೂಡಿದೆ. ಇದರಿಂದಾಗಿ ಅಂಚಿನ ವರ್ಗಗಳಿಗೆ ಅನ್ಯಾಯವಾಗಲಿದೆ. ಸರಕಾರ ಈ ವಿಚಾರದಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ತುರ್ತುಕ್ರಮವಹಿಸಿ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಬಿಜೆಪಿ-ಆರ್ಎಸ್ಎಸ್ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗಲ್ಲ-ಬಗ್ಗಲ್ಲ- ಸಿದ್ದರಾಮಯ್ಯ
ಈ ವೇಳೆ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶೀ ಮುರಳೀಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೇನಹಳ್ಳಿ ಮುರಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣಗುಪ್ತ, ನಗರ ಪ್ರಧಾನ ಕಾರ್ಯದರ್ಶಿ ನರೇಂದ್ರಬಾಬು, ಗ್ರಾಮಾಂತರ ಮಂಡಳದ ಪ್ರಧಾನ ಕಾರ್ಯದರ್ಶಿ ಸೊಪ್ಪಹಳ್ಳಿ ರಾಮಕೃಷ್ಣಪ್ಪ,ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಬಾಲು, ಮಾಧ್ಯಮ ವಕ್ತಾರ ಮಧುಚಂದ್ರ, ಬಿಜೆಪಿ ಮುಖಂಡ ಎ.ಟಿ.ಶಂಕರ್ ಇದ್ದರು.